‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ ಹೊಸಬರ ಬರಹ. ಹೊಸ ಲೇಖಕರನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದ್ದು ಹೊಸಬರಿಗೆ ಅವಕಾಶ ನೀಡುತ್ತಿದೆ. ಮೈಸೂರು ಮೂಲದ ರಮೇಶ್ ಪ್ರಜ್ವಲ್ ಅವರು ಕವನ ಕಳುಹಿಸಿದ್ದಾರೆ,
ರಮೇಶ್ ಪ್ರಜ್ವಲ್
ಬುದ್ಧ
ಇರದ ದಾರಿಯ ತುಳಿದು
ನಡೆದ ಕುರುಹ
ಹಿಡಿದು
ಹೊರಟವನ ಹೆಜ್ಜೆಯನು
ನಿಂತು ನೋಡುತಿತ್ತು,
ಅಂದಿನ ಕತ್ತಲೆಯ ಒಟ್ಟು
ಬೆತ್ತಲೆಯ ಮೊತ್ತ…!
ಇದ್ದ ಇರುವುಗಳ ಹೊದ್ದು
ಮಲಗಿದ್ದವನು ಎದ್ದು
ಹೊರಟ ದಾರಿಯ ತುಂಬ
ನೀರವ ಮೌನದ ಗದ್ದಲದ ಸದ್ದು
ಬಾನ ಕಣ್ಣು ಎವೆಯ ತೆರೆಯೆ
ಬಯಲನುಟ್ಟವರ ಬೊಬ್ಬೆ,
ಮೊಳಗುತಿತ್ತು ಹಚ್ಚ ಹಸಿರ ಪಚ್ಚೆ ಕಾಡ
ಒಳ ಹೊಕ್ಕವನ ಹೆಕ್ಕಿ
ತೋರುವಂತೆ…!
ಕೇಳುತಿದೆ ಇಂದಿಗೂ
ಅರಿವಿನ ಅರಿವಿಗೆ ಇರುವಿನ
ಅರವಿಯ
ತೊರದವನ ಎರವನು ತೀರಿಸುವಂತೆ..!
ತನ್ನೂರ ತೊರೆದು ತನ್ನವರ
ಮರೆತಂತೆ;
ಇನ್ನೆಲ್ಲೊ, ಮತ್ತೆಲ್ಲೊ ತುತ್ತಿಗಲೆಯುತ್ತ,
ಬದುಕನಾನಿಸಿ
ನುಡಿಮುತ್ತಿನ ಮಳೆ ಮೇಘದಂತೆ
ನಡೆದ ಯುಗದ ಯೋಗಿಯು ಅವನಂತೆ
ಜಗದ ಅಕ್ಕರೆಗೆ ತೆರೆದ ಎದೆಯ
ಮರೆಯಲಿ ನಿಂತು
ಅತ್ತು ಕರೆದ ತನ್ನ ಕಂದನೊಲವ
ತಾ ಅರಿಯದಾದ
ಆಸೆಯೇ ಪಡದ ಬದುಕಿನ ಆಸೆಯ
ಹೊತ್ತವ ಬುದ್ದನಾಗಿ ನಿಂತ….!
ಸಾಸಿವೆ ತರಲಾಗದ ಸಾವಿರದ
ಮನೆಗಳಲಿ;
ಹುಟ್ಟಿಲ್ಲ ಯಾವ
ಹೊಸ ಕೂಸು ಇಂದಿಗೂ…!
0 ಪ್ರತಿಕ್ರಿಯೆಗಳು