
ಜಗದೀಶ್ ಕೊಪ್ಪ
ಕಳೆದ ರಾತ್ರಿ ಪೂರ್ತಿ ಓದದೆ ಅರ್ಧಕ್ಕೆ ಬಿಟ್ಟಿದ್ದ ಖುಶ್ವಂತ್ ಸಿಂಗ್ ರವರ “ಡೆತ್ ಅಟ್ ಮೈ ಡೋರ್ ಸ್ಟೆಪ್ “ಎನ್ನುವ ಶ್ರದ್ಧಾಂಜಲಿ ಲೇಖನಗಳ ಕೃತಿಯನ್ನು ಓದಿ ಮುಗಿಸಿದೆ.
ಪತ್ರಕರ್ತರ ಪಾಲಿಗೆ ಈ ಕೃತಿ ನಿಜಕ್ಕೂ ಮಾಸ್ಟರ್ ಫೀಸ್. .
ಯಾವುದೇ ರಾಗ ದ್ವೇಷವಿಲ್ಲದೆ ಅವರು ಕಟ್ಟಿಕೊಡುವ ವ್ಯೆಕ್ತಿ ಚಿತ್ರಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ನೀರಜ್ ಚೌದುರಿ, ಆರ್.ಕೆ. ನಾರಾಯಣ್, ಫೈಜ್ ಅಹಮದ್ ಫೈಜ್. ಪ್ರೊತಿಮಾ ಬೇಡಿ. ಭೀಷ್ಮಾ ಸಹಾನಿ ಹೀಗೆ ಅನೇಕರ ಸಾಮರ್ಥ್ಯಗಳನ್ನು ಹೇಳುತ್ತಲೇ ಅವರ ದೌರ್ಬಲ್ಯಗಳನ್ನು ತೆರದಿಡುತ್ತಾರೆ.
ಖುಶ್ವಂತ್ ಅಜ್ಜನ ದಿಲ್ಲಿ, ಉಮ್ರಾವೊ ಜಾನ್, ಟ್ರೈನ್ ಟು ಪಾಕಿಸ್ತಾನ್ ಕಾದಂಬರಿಗಳಂತೆ ಈ ಕೃತಿಯೂ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ.
ಸಾವು ಮತ್ತು ಅದರಿಂದ ಉಂಟಾಗುವ ನೋವು ಇವುಗಳು ಖಾಸಗಿ ಸಂಗತಿಗಳು ಎಂದು ಪ್ರತಿಪಾದಿಸುವ ಈ ಅಜ್ಜ ತನ್ನ ಪತ್ನಿ ತೀರಿಕೊಂಡ ದಿನ ಇಡೀ ರಾತ್ರಿ ಕತ್ತಲೆಯಲ್ಲಿ ಕುಳಿತು ಕಣ್ಣೀರು ಹಾಕಿದ ಕ್ಷಣವನ್ನು ಬರೆದು, ಆಕೆಯಿಲ್ಲದೆ ಒಬ್ಬಂಟಿಯಾಗಿ ಇಡೀ ಬದುಕನ್ನು ಕಳೆಯಬೇಕಾದ ಮಾನಸಿಕ ಸ್ಥಿತಿಗೆ ಸಿದ್ಧನಾದೆ ಎನ್ನುತ್ತಾರೆ.
ಪತ್ರಕರ್ತ ಅಥವಾ ಲೇಖಕ ಅನಿಸಿಕೊಂಡವನು ಈ ಅಜ್ಜನ ಹಾಗೆ ಒಂದು ಲೇಖನ ಅಥವಾ ಕೃತಿ ಬರೆದರೆ ಸಾಕು ಜೀವನ ಸಾರ್ಥಕ ಅನಿಸುವಷ್ಟು ಚೆಂದದ ಬರೆವಣಿಗೆ ಖುಶ್ವಂತ್ ಸಿಂಗ್ ಅವರದು.




0 Comments