ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮ್ಮೇಳನಾಧ್ಯಕ್ಷತೆಯ ತಳಮಳದ ಸುಳಿಯಲ್ಲಿ..

 ಬರಗೂರು ರಾಮಚಂದ್ರಪ್ಪ

ಡಿಸೆಂಬರ್‌ ೨ ರಿಂದ ರಾಯಚೂರಿನಲ್ಲಿ ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗಿ ನಿಯೋಜಿತನಾದ ದಿನದಿಂದ ನಾನು ಸಂತೋಷ ಮತ್ತು ಸಂಕೋಚಗಳನ್ನು ಒಟ್ಟಿಗೇ ಅನುಭವಿಸಿದ್ದೇನೆ.

ಔಪಚಾರಿಕ ಶುಭಾಶಯಗಳ ಜತೆಗೆ ನಾಡಿನ ಬಹುಪಾಲು ಜನರ ಭಾವನಾತ್ಮಕ ಸ್ಪಂದನ ಕಂಡು ಮೂಕ ವಿಸ್ಮಿತನೂ ಆಗಿದ್ದೇನೆ. ಇಷ್ಟೆಲ್ಲ ಪ್ರೀತಿ ವಿಶ್ವಾಸ ತೋರುವ ಜನರ ನಡುವೆ ನಾನು ನನ್ನ ನೈತಿಕತೆಯನ್ನು ಎಂದಿನಂತೆ ಉಳಿಸಿಕೊಳ್ಳಬೇಕೆಂಬ ಬದ್ಧತೆಯ ಪಾಠವನ್ನು ಬುದ್ಧಿ ಪೂರ್ವಕವಾಗಿಯೇ ನನಗೆ ನಾನೇ ಹೇಳಿಕೊಂಡಿದ್ದೇನೆ.

baraguru1

ಸಂತೋಷ, ಸಂಕೋಚಗಳ ನಡುವೆ ತಳಮಳಿಸುತ್ತಲೂ ಇದ್ದೇನೆ. ನನ್ನಂಥವರು ಎಂದೂ ನಿರೀಕ್ಷಿಸದ ಇಂಥ ಗೌರವ ಸಿಕ್ಕಿದಾಗ ನಾವು ಸೊಕ್ಕಬಾರದೆಂಬ ವಿವೇಕವನ್ನು ನನಗೆ ಕನ್ನಡ ಸಾಹಿತ್ಯವು ಕಲಿಸಿದೆ. ಕನ್ನಡ ಸಾಹಿತ್ಯವನ್ನು ಓದುವುದಷ್ಟೇ ಅಲ್ಲ ಬದುಕಬೇಕೆಂಬ ಒಳದನಿಗೆ ಸದಾ ಸ್ಪಂದಿಸುವುದರಲ್ಲಿ ನಿಜವಾದ ಸಾಕ್ಷಿ ಪ್ರಜ್ಞೆಯಿದೆ.

ನಾವು ಯಾವುದನ್ನು ಈಗ ಕನ್ನಡ ಸಾಹಿತ್ಯದ ಸಾರ್ಥಕ ಆಶಯಗಳೆಂದು ಬಿಂಬಿಸುತ್ತಿದ್ದೇವೆಯೊ ಅವೆಲ್ಲವೂ ವಿರೋಧ, ವೈರುಧ್ಯ, ವಿಷಾದಗಳ ಕುಲುಮೆಯಲ್ಲಿ ಬೆಂದು ಬಂದ ರೂಪಕಗಳಾಗಿವೆ. ಹೀಗಾಗಿ ಸಮ್ಮೇಳನಾಧ್ಯಕ್ಷತೆಯ ಕ್ಷಣಗಳು ಹತ್ತಿರ ಬಂದಂತೆ ನನ್ನೊಳಗೊಂದು ತಳಮಳದ ಕುಲುಮೆ ಸುಡುತ್ತಿದೆ. ಸುಡು ಕುಲುಮೆಯಲ್ಲಿ ನಾನು ನಾನೇ ಆಗಿ ನಿಜದ ನೆಲೆಯಲ್ಲಿ ಆಕಾರ ಪಡೆಯುವ ಪರೀಕ್ಷೆಯನ್ನು ಎದುರಿಸುತ್ತಿರುವ ಅನುಭವವಾಗುತ್ತಿದೆ. ನನ್ನ ಈ ತಳಮಳವು ಮನಸ್ಸುಳ್ಳ ಮನುಷ್ಯರಿಗೆ ಅರ್ಥವಾಗುತ್ತದೆ; ಸಿನಿಕ ಸಾಮ್ರಾಜ್ಯಾಧಿಕಾರಿಗಳಿಗೆ ಅರ್ಥವಾಗುವುದಿಲ್ಲ. ನೇರ ನೋಟದವರಿಗೆ ನಿಲುಕುತ್ತದೆ. ವಕ್ರ ನೋಟದವರಿಗೆ ಕಾಣಿಸುವುದಿಲ್ಲ.

ಅದೆಲ್ಲಕ್ಕಿಂತ ನನ್ನೊಳಗೆ ನನಗೆ ಕಾಣಿಸಬೇಕಾಗಿದೆ. ಹೀಗಾಗಿ ಹೊರಗಿನ ಕೆಲವು ಪ್ರಶ್ನೆಗಳು ನನ್ನೊಳಗಿನ ಪ್ರಶ್ನೆಗಳಾಗಿ ಎದುರಾಗುತ್ತವೆ. ಬಂಡಾಯ ಸಾಹಿತ್ಯ ಚಳವಳಿಯ ಮುಂಚೂಣಿಯಲ್ಲಿದ್ದ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಾಧ್ಯಕ್ಷನಾಗುವುದು ಎಷ್ಟು ಸರಿ? ಬಂಡಾಯದವರು ಸಾಹಿತ್ಯ ಪರಿಷತ್ತನ್ನು ಬಹಿಷ್ಕರಿಸಿರಲಿಲ್ಲವೆ? ಈಗ ಪರಿಷತ್ತು ಬದಲಾಯಿತೆ? ಅಥವಾ ಬರಗೂರೇ ಬದಲಾದರೆ?- ಇಂಥ ಪ್ರಶ್ನೆಗಳನ್ನು ಮುಗ್ಧ ಸಹಜ ನೆಲೆಯಲ್ಲಿ ಕೇಳಿದರೆ ಅಲ್ಲಿ ಪ್ರಾಮಾಣಿಕತೆಯಿರುತ್ತದೆ. ಕೆಣಕಬೇಕೆಂದು ಕೇಳಿದರೆ ಅಲ್ಲಿ ಉದ್ದೇಶಪೂರ್ವಕ ಹೊಟ್ಟೆಕಿಚ್ಚೂ ಇರುತ್ತದೆ.

ಅದೇನೇ ಇರಲಿ, ಈ ಪ್ರಶ್ನೆ ನನ್ನೊಳಗೂ ಎದುರಾದಾಗ ಇತಿಹಾಸ ತೆರೆದುಕೊಳ್ಳುತ್ತದೆ. ೧೯೭೯ರಲ್ಲಿ ಧರ್ಮಸ್ಥಳದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಅದೇ ದಿನ ಬೆಂಗಳೂರಲ್ಲಿ ಮೊದಲನೇ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು. ಅಲ್ಲಿ ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರು. ಇಲ್ಲಿ ಅಧ್ಯಕ್ಷರಿಲ್ಲದ ಬಂಡಾಯ ಸಾಹಿತ್ಯ ಸಮ್ಮೇಳನವನ್ನು ತೆಲುಗಿನ ಕ್ರಾಂತಿಕಾರಿ ಕವಿ ‘ಶ್ರೀ ಶ್ರೀ’ ಉದ್ಘಾಟಿಸಿದರು. ನಾವು ಒಂದಷ್ಟು ಕಾಲ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದೆಂದು ನಿರ್ಧರಿಸಿದೆವು. ಸಾಹಿತ್ಯ ಪರಿಷತ್ತನ್ನು ಜಡವಾಗಿದೆ ಎಂದು ಟೀಕಿಸಿದ್ದೆವು. ಒಟ್ಟು ಪರಿಸರದಲ್ಲಿ -ಸಾಹಿತ್ಯ ಪರಿಷತ್ತಿನಲ್ಲಿ ಮಾತ್ರ ಅಲ್ಲ ಯಜಮಾನ ಸಂಸ್ಕೃತಿ ಅಳುತ್ತಿದೆ ಎಂದು ವಿಶ್ಲೇಷಿಸಿದ್ದೆವು.

ಒಂದು ಮಾತನ್ನು ನಮ್ಮ ಮೊದಲನೇ ಕರಪತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದೆವು: ” ನಮ್ಮ ಚಳವಳಿಯು ಒಬ್ಬ ವ್ಯಕ್ತಿ ಮತ್ತು ಒಂದು ಸಂಸ್ಥೆಯ ವಿರುದ್ಧವಲ್ಲ”. ಬಂಡಾಯ ಸಾಹಿತ್ಯ ಸಂಘಟನೆಯು ಸಾಹಿತ್ಯ ಪರಿಷತ್ತನ್ನು ಬಹಿಷ್ಕರಿಸಬಾರದೆಂಬ ನಿಲುವನ್ನು ನಮ್ಮೊಳಗೇ ಇದ್ದ ಕೆಲವರು ಬಲವಾಗಿ ಪ್ರತಿಪಾದಿಸಿದ್ದರು. ಯಾವುದೇ ಪ್ರಜಾಸತ್ತಾತ್ಮಕ ಸಂಸ್ಥೆ ಮತ್ತು ವೇದಿಕೆಯನ್ನು ನಿರಾಕರಿಸಬಾರದು ಮತ್ತು ಅಲ್ಲಿಯೂ ನಮ್ಮ ವಿಚಾರಗಳನ್ನು ಸಾದರಪಡಿಸಬೇಕೆಂಬ ಈ ಪ್ರತಿಪಾದನೆ ಸರಿ ಎನ್ನಿಸಿದರೂ ನಮ್ಮ ಸಂಘಟನೆಯ ಜತೆ ನಿಜವಾಗಿ ಯಾರು ಗುರುತಿಸಿಕೊಂಡು ಗಟ್ಟಿಯಾಗಿ ನಿಲ್ಲುತ್ತಾರೆಂಬ ಕಾರಣಕ್ಕಾಗಿ ಪರಿಷತ್ತಿನಿಂದ ದೂರ ಉಳಿಯುವ ‘ಕಾರ್ಯತಂತ್ರ’ವನ್ನು ಅನುಸರಿಸಲಾಯಿತು.

ಸಂಘಟನೆಯ ಒಳಗಿನವರಿಗೆ ಇದು ಗೊತ್ತಿತ್ತು. ಈ ಕಾರ್ಯತಂತ್ರ ಫಲ ನೀಡುತ್ತ ಬಂದಾಗ ಸಡಿಲಗೊಳಿಸಲಾಯಿತು. ಅಷ್ಟೇಕೆ, ಜಿ.ಎಸ್‌. ಸಿದ್ದಲಿಂಗಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಬಂಡಾಯ ಸಾಹಿತ್ಯ ಸಮಾವೇಶವನ್ನು ಸ್ವಯಂ ಪ್ರೇರಿತರಾಗಿ ಏರ್ಪಡಿಸಿ ನಮ್ಮನ್ನೆಲ್ಲ ಆಹ್ವಾನಿಸಿದರು. ಅಂದಿನಿಂದ ನಾವೆಲ್ಲ ಗುರುತಿಸಿಕೊಳ್ಳತೊಡಗಿದೆವು.

ಇದರಲ್ಲಿ ವಿರೋಧಾಭಾಸ ಯಾವುದೂ ಇಲ್ಲ. ಆದರೆ ನಾವು ಎಲ್ಲಿ ಹೋದರೂ ಅಲ್ಲಿ ಕಳೆದುಹೋಗಬಾರದೆಂಬ ಎಚ್ಚರ ಇರಬೇಕು. ಸ್ವಯಂ ಸ್ಥಾನಮಾನಗಳ ಬಗ್ಗೆ ಹಪಾಹಪಿಸುವವರೇ -ಪ್ರಗತಿಪರರಿಗೆ ಯಾವುದಾದರೂ ಸ್ಥಾನ ಸಿಕ್ಕಾಗ ಸಿನಿಕತನ ತೋರುವುದು ನಮ್ಮಲ್ಲಿನ ಒಂದು ಜಾಯಮಾನವಾಗಿದೆ. ಹಾಗೆಂದು ನಾವೂ ಸಿನಿಕರಾಗಿ ಪ್ರತಿಕ್ರಿಯಿಸುವುದು ಸರಿಯಾಗದು. ಹೀಗಾಗಿಯೇ ನಾನು ಸರಕಾರ ನೀಡಿದ ಸ್ಥಾನಗಳನ್ನು ಒಪ್ಪಿಕೊಂಡಾಗ ತಳಮಳವನ್ನು ಅನುಭವಿಸಿದ್ದೇನೆ. ಅಹಂಕಾರವಿಲ್ಲದ ಆತ್ಮ ನಿವೇದನೆಯನ್ನು ಈಗ ಮಾಡಿಕೊಳ್ಳುತ್ತಿದ್ದೇನೆ.

ಪ್ರಜಾಸತ್ತಾತ್ಮಕ ಸಮಾಜದಲ್ಲಿ, ನಮ್ಮ ಸೈದ್ಧಾಂತಿಕ ನಂಬಿಕೆಗಳಿಗೆ ಮೂಲಭೂತವಾಗಿ ವಿರೋಧಿಯಾದ ಸರಕಾರವಿಲ್ಲದೆ ಇದ್ದಾಗ ಅದು ಕೊಡುವ ಸ್ಥಾನಗಳನ್ನು ಒಪ್ಪಿಕೊಳ್ಳುವುದು ತಪ್ಪಲ್ಲ. ಆದರೆ ಸರಕಾರಗಳಿಗೆ ಶರಣಾಗಿ ಸ್ಥಾನದಲ್ಲಿರುವುದು ತಪ್ಪು. ಇಂಥ ಸನ್ನಿವೇಶದಲ್ಲಿ ಪಂಪಮಹಾಕವಿ ನನಗೆ ಆದರ್ಶ. ರಾಜನ ಆಸ್ಥಾನದಲ್ಲಿದ್ದು ‘ಪೆರರೀವುದೇಂ ಪೆರರಿಂದಮಪ್ಪುದೇಂ’ ಎಂಬ ಗಟ್ಟಿ ನಿಲುವು ತಾಳಿದ ಪಂಪಕವಿ, ಪ್ರಭುತ್ವದ ಸಮೀಪವಿದ್ದೂ ಸೆಡ್ಡು ಹೊಡೆಯುವುದನ್ನು ನನಗೆ ಕಲಿಸಿದ್ದಾನೆ. ಹೀಗಾಗಿಯೇ ನಾನು ಒಟ್ಟು ವ್ಯವಸ್ಥೆಯ ವಿಮರ್ಶೆ ಮಾಡುತ್ತಲೇ ಇದ್ದೇನೆ.

ಒಂದು ಮಾತು: ವ್ಯವಸ್ಥೆಯೆಂದರೆ ಕೇವಲ ಸರಕಾರವೊಂದೇ ಅಲ್ಲ. ಇಲ್ಲಿ ಜಾತಿ, ವರ್ಣ, ವರ್ಗ, ಲಿಂಗತ್ವಗಳ ಅಸಮಾನತೆಯುಳ್ಳ ವ್ಯವಸ್ಥೆಯಿದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರಗಳು ಇಂಥ ಅಸಮಾನತೆಯನ್ನು ಪೋಷಿಸುತ್ತಿದ್ದರೆ ನಾವು ಗುರುತಿಸಿಕೊಳ್ಳಲೇ ಬಾರದು. ಆದರೆ ತೋರಿಕೆಗಾದರೂ ಅಸಮಾನತೆಯನ್ನು ವಿರೋಧಿಸುವ ಅನಿವಾರ್ಯತೆಯನ್ನು ನಮ್ಮ ಸಂವಿಧಾನ ಸೃಷ್ಟಿಸಿದೆ. ಆದ್ದರಿಂದ ಸರಕಾರಗಳ ರಹಸ್ಯ ಕಾರ್ಯಸೂಚಿಗಳನ್ನೂ ನಾವು ಗಮನಿಸಿ ತೀರ್ಮಾನಕ್ಕೆ ಬರಬೇಕಾಗುತ್ತದೆ. ಎಲ್ಲೋ ಹುಟ್ಟಿ ಹೇಗೊ ಬೆಳೆದು ವಿರೋಧ ಮತ್ತು ವೈರುಧ್ಯಗಳ ವಿಷ ವರ್ತುಲದಲ್ಲಿ ಬದುಕಿ ಉಳಿದ ನಮ್ಮಂಥವರಿಗೆ ಸ್ಥಾನ ಮಾನಗಳು ಸಿಕ್ಕಿದಾಗಲೇ ಯಾಕೆ ಕೆಲವು ಪ್ರಶ್ನೆಗಳು ಏಳುತ್ತವೆ? ಪ್ರಾಮಾಣಿಕ ಪ್ರಶ್ನೆಗಳಿಗೆ ಖಂಡಿತ ನಾವು ಉತ್ತರದಾಯಿಗಳಾಗಬೇಕು. ಆದರೆ ಎಲ್ಲ ಪ್ರಶ್ನೆಗಳಿಗೂ ಪ್ರಾಮಾಣಿಕತೆ ಯಿರುವುದಿಲ್ಲ. ಅದೇನೇ ಇದ್ದರೂ ನನ್ನನ್ನು ನಾನೊಮ್ಮೆ ಪರೀಕ್ಷೆಗೊಡ್ಡಿಕೊಳ್ಳಬೇಕು.

ನಾನು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗಿ ನಿಯೋಜಿತನಾದ ದಿನದಿಂದ ಎಂದೂ ಕಾಣದ ಸಂಭ್ರಮವನ್ನು ಬಹುಪಾಲು ಕನ್ನಡ ಮನಸ್ಸುಗಳು ತೋರಿಸಿವೆ. ಪಕ್ಷಾತೀತವಾಗಿ ರಾಜಕೀಯ ನಾಯಕರೂ ಕರೆ ಮಾಡಿ, ಮನೆಗೆ ಬಂದು ಅಭಿನಂದಿಸಿದ್ದಾರೆ. ಸ್ನೇಹಿತರು ಅನೇಕ ಸಮಾರಂಭಗಳನ್ನು ಏರ್ಪಡಿಸಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಸಂಭ್ರಮದಲ್ಲಿ ನಾನು ಉಬ್ಬಿಹೋಗಿ ಒಳಗನ್ನು ಕಳೆದುಕೊಳ್ಳಬಾರದೆಂಬ ಎಚ್ಚರ ನನ್ನನ್ನು ಸದಾ ಕಾಡುತ್ತಿದೆ. ಹೀಗಾಗಿ ಮನಸ್ಸು ತಳಮಳದ ತಾಣವೂ ಆಗುತ್ತಿದೆ. ಹಿಂದಿನ ಕೆಲವು ಕ್ಷಣಗಳನ್ನು ನೆನಪಿಸುತ್ತಿದೆ. ರಾಮಕೃಷ್ಣ ಹೆಗಡೆಯವರ ನೇತೃತ್ವದ ಜನತಾಪಕ್ಷದ ಸರಕಾರವಿದ್ದಾಗ ನನ್ನನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡುವುದಾಗಿ ಸಚಿವ ಜೀವರಾಜ ಆಳ್ವ ಖುದ್ದು ಬಂದು ಕೇಳಿದರು. ವಿಧಾನ ಪರಿಷತ್ತು ಹಿರಿಯರ ಮನೆ, ನಾನಿನ್ನೂ ಕಿರಿಯ ಎಂದು ಹಿಂಜರಿದೆ; ನಯವಾಗಿ ನಿರಾಕರಿಸಿದೆ; ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ನಾನು ಸಾಹಿತ್ಯ ಅಕಾಡೆಮಿ ಅಧ್ಯಕ್ಷ. ಅವರೂ ವಿಧಾನಪರಿಷತ್ತಿಗೆ ನಾಮಕರಣ ಮಾಡುತ್ತೇನೆಂದಾಗ ಅಕಾಡೆಮಿಯ ಅಧ್ಯಕ್ಷನಾಗಿರುವುದೇ ನನ್ನ ಆದ್ಯತೆ ಎಂದು ಹೇಳಿ ಒಪ್ಪಲಿಲ್ಲ.

ಎಸ್‌.ಎಂ. ಕೃಷ್ಣ ಅವರು ನನ್ನನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ನೇಮಿಸಿದ್ದರು. ಅವಧಿ ಮುಗಿದಾಗ ಎರಡನೇ ಅವಧಿಗೆ ಮುಂದುವರಿಯಲು ಒತ್ತಾಯ ತಂದರು. ‘ನಾವು ಸಾಂಸ್ಕೃತಿಕ ಕ್ಷೇತ್ರದವರು ಮತ್ತೆ ಮತ್ತೆ ಇಂಥ ಸ್ಥಾನಗಳಿಗೆ ಜೋತು ಬೀಳಬಾರದು’ ಎಂದು ಹೇಳಿ ನಾನು ನಿರಾಕರಿಸಿದೆ. ಡಾ. ಜಿ. ಪರಮೇಶ್ವರ್‌ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಲು ಕೇಳಿದರು. ಮುಂದೆ, ಮುಖ್ಯಮಂತ್ರಿ ಧರ್ಮಸಿಂಗ್‌ ಅವರೂ ಕುಲಪತಿಯಾಗಲು ಆಹ್ವಾನಿಸಿದರು. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹೊರ ಬಂದ ಕೂಡಲೇ ಇನ್ನೊಂದು ಸ್ಥಾನಕ್ಕೆ ಹೋಗುವುದು ಸರಿಯಲ್ಲವೆಂದು ನಿರ್ಧರಿಸಿ ಇಬ್ಬರಿಗೂ ನಿರಾಕರಿಸಿದೆ.baraguru3

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ ಸರಕಾರವು ಕಾರು ಖರೀದಿಸಲು ಎರಡು ಲಕ್ಷ ಮಂಜೂರು ಮಾಡಿದಾಗ, ಕಾರು ಕೊಳ್ಳದೆ ಪುಸ್ತಕ ಪ್ರಕಟಣೆಗೆ ಬಳಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ವಾಹನ ಭತ್ಯೆ ಹೊರತಾಗಿ ಬೇರೆ ಯಾವುದೇ ಭತ್ಯೆ ಪಡೆಯುವುದಿಲ್ಲವೆಂದು ಬರೆದುಕೊಟ್ಟು ಅಧಿಕಾರ ವಹಿಸಿಕೊಂಡೆ. ಹೀಗೆ ಕಳೆದುಕೊಳ್ಳುತ್ತಲೇ ನೈತಿಕವಾಗಿ ಬದುಕಿದ್ದನ್ನು ಯಾರಿಗೆ ನಿವೇದಿಸಲಿ? ಪ್ರಜಾಸತ್ತಾತ್ಮಕ ಸರಕಾರದ ಸ್ಥಾನಗಳಿಗೆ ಹೋಗುವುದು ತಪ್ಪಲ್ಲ ಎಂಬ ನಿಲುವಿದ್ದರೂ ಆಯಾ ಸಂದರ್ಭದಲ್ಲಿ ತಾಳಿದ ನೈತಿಕ ನಿಲುವಿಗೆ ಬೆಲೆಯೇ ಇಲ್ಲವೆ?

ಸದಾ ನೋವೆಂಬ ಹಾವಿನ ಜತೆಯೇ ನಮ್ಮಂಥವರು ಬದುಕಬೇಕೆ? ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಕೆಂಪು ದೀಪದ ಕಾಂಟೆಸಾ ಕಾರಿನಲ್ಲಿ ಕುಳಿತುಕೊಳ್ಳುವುದೇ ಕಷ್ಟವೆನಿಸುತ್ತಿತ್ತು. ತಳಮಳ ಕಾಡುತ್ತಿತ್ತು. ಆಗ ‘ಕಾಂಟೆಸಾದಲ್ಲಿ ಕಾವ್ಯ’ ಎಂಬ ಕವಿತೆ ಬರೆದೆ. ಅದೇ ಹೆಸರಿನ ಸಂಕಲನ ತಂದೆ. ಅದರ ಒಂದು ಸಾಲನ್ನೂ ಓದದ ಹುಸಿ ಕ್ರಾಂತಿಕಾರಿಯೊಬ್ಬರು ‘ವಿಧಾನ ಸೌಧದ ಮೆಟ್ಟಿಲ ಮೇಲೆ ಕಾಂಟೆಸಾ ಕಾವ್ಯ ಬರೀತಾರೆ’ ಎಂದು ಟೀಕಿಸಿದರು. ನಾನು ಕಾಂಟೆಸಾದಲ್ಲಿ ಕೂತಾಗ ಅನುಭವಿಸುವ ತಳಮಳವನ್ನು ನಿವೇದಿಸಿದ್ದೆ.

ಕಾಂಟೆಸಾ ಕಾರು ಅಧಿಕಾರದ ಸಂಕೇತವಾದರೆ, ಕಾವ್ಯ ಆತ್ಮಸಾಕ್ಷಿಯ ಸಂಕೇತವಾಗಿತ್ತು. ಆ ಮಹಾನ್‌ ಕ್ರಾಂತಿಕಾರಿಗೆ ಮತ್ತು ಅಂಥದೇ ಸಿನಿಕ ಸಾಮ್ರಾಜ್ಯಾಧಿಪತಿಗಳಿಗೆ ನನ್ನ ತಳಮಳವೇ ಅರ್ಥವಾಗಲಿಲ್ಲ. ಕಾಂಟೆಸಾದಲ್ಲಿದ್ದಾಗಲೂ ನಾನು ನಾನೇ ಆಗಿ ಮಾನವೀಯ ಕಾವ್ಯದಂತೆ ಬದುಕಬೇಕೆಂಬ ಆಶಯವನ್ನು ನಾನು ಅಭಿವ್ಯಕ್ತಿಸಿದ್ದು ಆ ಮಹಾನುಭಾವರಿಗೆ ತಿಳಿಯಲೇ ಇಲ್ಲ. ಯಾಕೆಂದರೆ ಅವರು ಓದಿಯೇ ಇರಲಿಲ್ಲ. ಎಷ್ಟಾದರೂ (ಹುಸಿ) ಕ್ರಾಂತಿಕಾರಿ ತಾನೆ!

ಆ ಕವಿತೆಯ ಕೊನೆಯ ಸಾಲು ಈಗ ಮತ್ತೆ ಕಾಡುತ್ತಿದೆ: ‘ಕಾವ್ಯ ತುಂಬಿಕೊಳ್ಳಬೇಕು ಕಾಂಟೆಸಾದ ಒಳಗೆ | ನೆನಪಾಗುತ್ತಲೇ ಇರಬೇಕು ಬರಿಗಾಲ ನಡಿಗೆ|”

ಸಮ್ಮೇಳನಾಧ್ಯಕ್ಷತೆ ವಹಿಸುತ್ತಿರುವ ಸಂದರ್ಭದಲ್ಲಿ ಇದು ಸಮರ್ಥನೆಯಲ್ಲ; ಆತ್ಮವಿವೇದನೆ; ತಳಮಳದ ಸಂವೇದನೆ, ಹೇಳಿಕೊಳ್ಳಲೇ ಬೇಕೆನ್ನಿಸಿದ ಸ್ವವಿವರಗಳಿಗಾಗಿ ಕನ್ನಡಿಗರ ಕ್ಷಮೆಯಿರಲಿ. ನಾನು ನಾನೇ ಆಗಿ ಉಳಿಯಲು ಎಲ್ಲರ ಹಾರೈಕೆಯಿರಲಿ.

‘ವಿಜಯ ಕರ್ನಾಟಕ’ದಿಂದ

‍ಲೇಖಕರು Admin

2 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading