ಆರ್ ದೊಡ್ಡೇಗೌಡ
ಸಪ್ನಾ
ನನಗೆ ನಿಸಾರ್ ಅವರ ಸಂಪರ್ಕ ಬಂದದ್ದು ಒಂದು ರೀತಿ ಪೂರ್ವಜನ್ಮದ ಪುಣ್ಯ ಅನ್ನಬೇಕು.
ನನ್ನ ಮತ್ತು ಅವರ ಒಡನಾಟ ಸುಮಾರು 30 ವರ್ಷಗಳದ್ದು. ಅವರು ಬಹುತೇಕ ಪ್ರತೀ ದಿನ ನನಗೆ ಫೋನ್ ಮಾಡುತ್ತಿದ್ದರು. ಒಂದೆರಡು ದಿನ ಪೋನ್ ಮಾಡೋದು ಮಿಸ್ ಮಾಡಿದ್ರೂ ಆದ್ರೆ ಬೇಸಾರ ಆಗುತ್ತಿತ್ತು. ನಮ್ಮ ಮಧ್ಯೆ ಅಷ್ಟು ಪ್ರೀತಿ ಮತ್ತು ಅನ್ಯೋನ್ಯತೆ ಇತ್ತು. ಅಷ್ಟು ದೊಡ್ಡ ಮಹಾನ್ ಕವಿ ಸಾಮಾನ್ಯರಲ್ಲಿ ಸಾಮಾನ್ಯರಾಗಿರುತ್ತಿದ್ದರು.
ಅವರ ವಿದ್ವತ್ತು, ಪಾಂಡಿತ್ಯ, ಸಾಹಿತ್ಯದ ವೈಖರಿ, ಪ್ರೀತಿ, ಶಕ್ತಿ, ಆ ಭಾಷಾ ಸಂಪತ್ತು ಇಡೀ ನಾಡಿಗೆ ಅಲ್ಲ ಹೊರದೇಶಕ್ಕೂ ಪರಿಚಯ. ಅವರನ್ನ ನಾವು ಶಬ್ದ ಸಂಪತ್ತು ಎಂದು ಕರೆಯುತ್ತಿದ್ದೆವು. ಅಷ್ಟು ಹೊಸ ಹೊಸ ಪದಗಳನ್ನು ಬಳಸುತ್ತಿದ್ದರು. ಅವರ ನಿರಂತರ ಓದಿನಿಂದಲೇ ಶಬ್ದಗಳ ಪ್ರಯೋಗವಾಗುತ್ತಿತ್ತು. ಅವರಿಗೆ ಹೋಲಿಕೆ ಇಲ್ಲ, ಅಷ್ಟು ದೊಡ್ಡ ವ್ಯಕ್ತಿತ್ವ.
ಅವರು ಇಲ್ಲವಾದದ್ದು ನನ್ನ ಮನೆಯಲ್ಲಿಯೇ ಯಾರೋ ಇಲ್ಲವಾದರೂ ಅನ್ನುವಷ್ಟು ದುಃಖ ತಂದಿದೆ. ನಮ್ಮ ಮನೆಯವರಿಗಿಂತ ಒಂದು ಕೈ ಹೆಚ್ಚೇ ಅವರನ್ನು ಪ್ರೀತಿಸುತ್ತಿದೆ.
ಹದಿನೈದು ದಿನಕ್ಕೊಮ್ಮೆ ‘ಸಪ್ನಾ’ದಲ್ಲಿ ನಮ್ಮ ಭೇಟಿ ಹರಟೆ ಗ್ಯಾರಂಟಿ.
ನಿಸಾರ್, ಸಪ್ನಾ, ನಿತಿನ್ ಶಾ, ಹಾಗೂ ನನ್ನ ನಡುವಿನದ್ದು ಬಣ್ಣಿಸಲಾಗದ ಸಂಬಂಧ.
ಅಷ್ಟೇ ಅಲ್ಲ ಅವರು ಎಷ್ಟು ಜನಪ್ರೀತಿಯುಳ್ಳವರು ಎಂದರೆ ಸಪ್ನಾದ ಪ್ರತಿಯೊಬ್ಬರ ಜೊತೆ ಅವರ ನಂಟಿದೆ. ಸಪ್ನಾದ ಪ್ರತಿಯೊಬ್ಬರನ್ನೂ ಅವರು ಮಾತನಾಡಿಸಿಕೊಂಡು ಕೀಟಲೆ ಮಾಡಿಕೊಂಡು ಹೋಗ್ತಾ ಇದ್ರು. ಮಗಳು ಹೇಗಿದ್ದಾಳೆ, ಮೊಮ್ಮಗಳು ಹೇಗಿದ್ದಾಳೆ ಎಂದು ಮಾತನಾಡಿಸುತ್ತಿದ್ದರು. ಒಂದು ಗಾದೆ ಮಾತು ಇದೆಯಲ್ಲ ಬಲವರೇ ಬಲ್ಲರು ಬೆಲ್ಲದ ಸವಿಯ ಹಾಗೆ..
ಸಪ್ನಾದಿಂದ ಅವರ ಎಲ್ಲಾ ಪುಸ್ತಕಗಳನ್ನು ಪ್ರಕಟ ಮಾಡಿದೆ. ನಮ್ಮ ಎಲ್ಲಾ ಕಾರ್ಯಕ್ರಮಗಳಲ್ಲೂ ಅವರು ಇರುತ್ತಿದ್ದರು. ಅವರ ಜನಸಂಪರ್ಕ ಊಹೆಗೆ ನಿಲುಕದ್ದು. ಸ್ಟಾರ್ ಗಳ ಜೊತೆ ಫೋಟೋ ತೆಗೆಸಿಕೊಳ್ಳುವಂತೆ, ಅವರ ಜೊತೆ ಫೋಟೋ ತೆಗೆಸಿಕೊಳ್ಳೋಕೆ ಮುಗಿಬೀಳ್ತಾ ಇದ್ದರು. ಅವರು ಇಲ್ಲ ಅನ್ನೋದು ಕೇವಲ ಸಪ್ನಾಗಲ್ಲ, ಇಡೀ ನಾಡಿಗೆ ತುಂಬಲಾರದ ನಷ್ಟವಾಗಿದೆ.
ನಮ್ಮ ನಿತಿನ್ ಶಾ ಅವರ ಜೊತೆ ಮಾತನಾಡುವಾಗ ‘ಏನಪ್ಪ ಇಷ್ಟು ದೊಡ್ಡ ಸಂಸ್ಥೆ, ಕೆಲಸದ ರೀತಿ, ಇದು ದೊಡ್ಡ ಸಾಧನೆ ಅಂತ ಬಣ್ಣಿಸುತ್ತಿದ್ದರು. ಸಪ್ನಾದ ಎಲ್ಲಾ ಶಾಖೆಗಳಲ್ಲಿ ಅವರ ಸ್ಮರಣಾರ್ಥ ಅವರ ಎಲ್ಲಾ ಪುಸ್ತಕಗಳನ್ನು ಪ್ರದರ್ಶನಕ್ಕಿರಿಸಿದ್ದೇವೆ. ಅವರ ಪುಸ್ತಕಗಳಿಗೆ ಶೇ.20% ರಿಯಾಯಿತಿ ನೀಡುತ್ತಿದ್ದೇವೆ. ಅವರ ಮೇಲಿನ ಪ್ರೀತಿಗೆ ಎಷ್ಟು ದಿನ ಮಾಡಿದರು ಕಡಿಮೆಯೇ. ಅವರು ಕನ್ನಡ ನಾಡಿನ ಜನಪ್ರಿಯ ಕವಿ. ಅವರಿಗೆ ಎಷ್ಟು ಪ್ರಶಸ್ತಿಗಳು ಬಂದರೂ ‘ಜನಪ್ರಶಸ್ತಿ’ ಇತ್ತಲ್ಲ ಅದೇ ಹೆಚ್ಚು. ರಾಷ್ಟ್ರ ಕವಿ ಗೌರವ ಕೊಡಲಿಲ್ಲ ಅನ್ನೋದು ಎಲ್ಲೋ ಒಂದು ಕಡೆ ಇದೆ. ಆದರೆ ಜನಪ್ರಶಸ್ತಿಯೇ ದೊಡ್ಡದು.
ನಾವಿಬ್ಬರು ‘ಫಿಶ್ ಲ್ಯಾಂಡ್’ಗೆ ಹೋಗ್ತಾ ಇದ್ದದ್ದು, ನಾನು ಅವರನ್ನು ಗೋಳುಯುಕ್ಕೋಳೋದು, ಅವರಿಗೆ ಕ್ಯಾಬ್ ಮಾಡಿ ಮನೆಗೆ ಕಳಿಸೋದು, ಎಲ್ಲವೂ ನನ್ನನ್ನ ಕಾಡ್ತಾ ಇದೆ.
ಭೇಟಿ ಮಾಡಿ ಒಂದು ತಿಂಗಳು ಆಗಿದೆ, ಆದ್ರೆ ಅವರಿಗೆ ಮೂರು ದಿನ ಮುಂಚೆ ಕಾಲ್ ಮಾಡಿ ಮಾತನಾಡಿದ್ದೆ. ಅವರು ಇಲ್ಲ ಎನ್ನುವ ಸುದ್ದಿಯನ್ನು ಅವರ ಡ್ರೈವರ್ ಕಾಲ್ ಮಾಡಿ ಹೇಳಿದಾಗ ಊಟ ಬಿಟ್ಟು ಓಡಿ ಹೋದೆ.
ಅವರ ನೆನಪಲ್ಲಿ ಒಂದು ಕಾರ್ಯಕ್ರಮವನ್ನೂ ಮಾಡುತ್ತೇನೆ. ಒಂದು ಪುಸ್ತಕವನ್ನೂ ಖಂಡಿತಾ ತರುತ್ತೇನೆ. ಇದರಲ್ಲಿ ಅವರಿಗೆ ತುಂಬಾ ಆಸಕ್ತಿ ಇತ್ತು. ಈ ಲಾಕ್ ಡೌನ್ ಮುಗಿದ ನಂತರ ಜನ ಸಂಪರ್ಕ ಪ್ರಾರಂಭವಾದಾಗ ಖಂಡಿತಾ ತರುತ್ತೇನೆ.
ನೆನಪುಗಳ ಮಾತು ಮಧುರ