ಇಂದಿರಾ ಹೆಗ್ಡೆ ಅವರ ಲೇಖನ ‘ತುಳುವರು ವೇದಾಧಾರಿತ ಸಮಾಜದವರು ಅಲ್ಲ..’ ಲೇಖನ ಸಾಕಷ್ಟು ಗಮನ ಸೆಳೆದಿದೆ. ಅದು ಇಲ್ಲಿದೆ
ಇದಕ್ಕೆ ಹೇಮಾ ಸದಾನಂದ್ ಅಮೀನ್ ಅವರು ನೀಡಿದ ಪ್ರತಿಕ್ರಿಯೆ ಇಲ್ಲಿದೆ –
ನಮ್ಮ ದೇಶದಲ್ಲಿ ಹೆಣ್ಣಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟ ಏಕೈಕ ನಾಡು ಅಂದರೆ ಅದು ತುಳುನಾಡು.
ಮೊದಲು ಮದುವೆ ಸಮಾರಂಭಗಳಲ್ಲಿ ಹೆಣ್ಣಿಗೆ ತಾಳಿ ಗಂಡ ಕಟ್ಟದೆ, ಹೆಣ್ಣಿನ ತಾಯಿ ಅಥವಾ ಹೆಣ್ಣಿನ ಮಾವನ ಹೆಂಡತಿ ಕಟ್ಟುತ್ತಿದ್ದರು. ಇಲ್ಲಿ ತಾಳಿ ಗುರುತಿನ ಸಂಕೇತವಾಗುತ್ತಿತ್ತೆ ವಿನಹ ಗುಲಾಮಗಿರಿಯಲ್ಲ ಎಂದು ಭಾವಿಸುತ್ತಿದ್ದರು. ಈಗಿನ ಸ್ತ್ರೀ ಧನ ಅದು ಮೊದಲಿನಂದಲೂ ಇತ್ತು. ಪ್ರಕೃತಿಯನ್ನು ನಂಬುತ್ತಾ ಬಂದ ತುಳುವರು ಪ್ರಕೃತಿಯ ಕಣ ಕಣವನ್ನು ಪೂಜಿಸುತ್ತಾ ಬಂದವರು. ಅದರಲ್ಲೂ ಜಲತತ್ವವನ್ನು ವಿಶೇಷವಾಗಿ ಪೂಜಿಸುವುದರಿಂದ ಆಗ ಕನ್ಯಾದಾನ ಅಷ್ಟೇ ತುಳುವರ ಸಂಪ್ರದಾಯವಾಗಿತ್ತು.
“ಶುದ್ದ ಜಲವನಿಟ್ಟ ಕಲಶವನ್ನು ಹೆಣ್ಣು ಗಂಡಿನ ಕಡೆಯವರು ಒಮ್ಮೆ ಆಕಾಶ: ಮತ್ತೊಮ್ಮೆ ಭೂಮಿಗೆ ತೋರಿಸಿ ಕನ್ಯಾದಾನ ಮಾಡುತ್ತಿದ್ದರು. ಸಪ್ತಪದಿ ತುಳುನಾಡಿನ ಸಂಪ್ರದಾಯದಲ್ಲಿ ಇರಲಿಲ್ಲ ಎಂದು ಹಿರಿಯ ಸಾಹಿತಿ ಡಾ. ಸುನೀತಾ ಶೆಟ್ಟಿ ಅವರೂ ಹೇಳುತ್ತಾರೆ.
ಕೆಲಸ, ಹಾಗೂ ಶಿಕ್ಷಣಕ್ಕೆಂದು ಮುಂಬಯಿ , ದುಬಾಯಿಯಂತಹ ಸ್ಥಳಕ್ಕೆ ವಲಸೆ ಹೋದ್ದರಿಂದ ಊರಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಲೂ ಯಾರು ಇಲ್ಲದೇ, ವೈಭವೀಕರಣದ ಭರಾಟೆಯಲ್ಲಿ ತುಳುನಾಡಿನ ಸಂಪ್ರದಾಯಗಳಿಗೆ ವೈದಿಕ ಸ್ಪರ್ಶದ ಅಗ್ಯವೆನಿಸಿತು. ಆ ಬಳಿಕ ತುಳುನಾಡಿನ ಕಟ್ಟುಕಟ್ಟಳೆಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಾ ಬಂದವು.
ಅದೇ ರೀತಿ ತುಳುವರು ಪುನರ್ಜನ್ಮವನ್ನೂ ನಂಬುತ್ತಿರಲಿಲ್ಲ. ನಮ್ಮ ಮನೆಯ ಹಿರಿಯರಿಗೆ ಬದುಕಿದ್ದಾಗ ಇದ್ದ ಪ್ರಾಧ್ಯಾನ್ಯತೆ ಸತ್ತ ಬಳಿಕವೂ ಇತ್ತು. ಮನೆಯಲ್ಲಿ ಆಗುವ ಪ್ರತಿಯೊಂದು ವಿಶೇಷ ಕಾರ್ಯಗಳಲ್ಲಿ ಅವರನ್ನು ನೆನೆಸಿಕೊಳ್ಳುತ್ತಿದ್ದರು. ಇದರಿಂದಾಗಿ ಹೊಸ ಪೀಳಿಗೆಗೂ ತಮ್ಮ ಹಿರಿಯರ ಬಗ್ಗೆ ತಿಳಿಯುತ್ತಿತ್ತು.
ಮೊದಲು ತುಳುನಾಡಿನ ಧಾರ್ಮಿಕ ಸಂಪ್ರದಾಯ ದುಂದುವೆಚ್ಚದ ಆಚರಣೆ ಇರಲಿಲ್ಲ. ಈಗ ಎಲ್ಲವೂ ಬದಲಾಗಿದೆ . ಎಲ್ಲಿ ಮನೆಯ ಹಿರಿಯರಿಗೇ ಆದ್ಯ ಸ್ಥಾನವಿತ್ತೋ ಆ ಸ್ಥಾನವನ್ನು ಈಗ ರಾಜಕೀಯ ಪೂಡಾರಿಗಳಿಗೆ, ಸೆಲೆಬ್ರಿಟಿಗಳಿಗೆ, ಕೊಡುತ್ತಿದ್ದಾರೆ.
ಈಗಲೂ… ಬಹಳಷ್ಟು ಸಂಪ್ರದಾಯದಲ್ಲಿ ಸಪ್ತಪದಿ ಇಲ್ಲ..
ಅಗ್ನಿಸಾಕ್ಷಿ ಮದುವೆಯೂ ಇಲ್ಲ..
ತುಳುನಾಡಲ್ಲಿ
ಕನ್ಯಾದಾನ ಮಾಡಿದ ಹೆಣ್ಣಿನ ಮನೆಯವರಿಗೆ 5ರಿಂದ ಪ್ರಾರಂಭಿಸಿ ಬೆಸ ಸಂಖ್ಯೆಯಲ್ಲಿ ಗೋದಾನ ಮಾಡುವ ಪದ್ಧತಿಯೂ ಇತ್ತು..
ಕನ್ಯಾದಾನ ಮಾಡಿದ ಮನೆಯಲ್ಲಿ ಕ್ಷೀರ ಉಕ್ಕಿ ಹರಿಯಲಿ ( ಸಮೃದ್ಧಿಯಾಗಿರಲಿ) ಎಂದು ಹಾರೈಸಿ ತಮ್ಮ ಶಕ್ತ್ಯಾನುಸಾರ ಗೋಧಾನ ಮಾಡುವ ಪದ್ಧತಿ ಇತ್ತು..
ಈ ಪದ್ಧತಿಯೇ ಹೆಣ್ಣಿನ ಮೇಲಿನ ಪ್ರಾಧಾನ್ಯತೆ ತೋರಿಸುತ್ತಿತ್ತು..