ಸದಾಶಿವ ಸೊರಟೂರು ಅವರ ಅಪ್ರಕಟಿತ ಕಥಾಸಂಕಲನ ‘ಧ್ಯಾನಕ್ಕೆ ಕೂತ ನದಿ’, 2024ರ ಸಾಲಿನ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಹಾಗೂ ಮಂಗಳೂರು ಜಿಲ್ಲೆಯ ಸಜೀಪನಡು ಊರಿನವರಾದ ನಿಝಾಮ್ ಗೋಳಿಪಡ್ಪು ಅವರ ‘ಅನಾಮಧೇಯ ಗೀರುಗಳು’ ಅಪ್ರಕಟಿತ ಕವನ ಸಂಕಲನ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ಪಡೆದುಕೊಂಡಿವೆ.
ಎರಡೂ ಪ್ರಶಸ್ತಿಗಳು ತಲಾ 10 ಸಾವಿರ ರೂ ನಗದು ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿವೆ ಎಂದು ‘ಈ ಹೊತ್ತಿಗೆ’ ಟ್ರಸ್ಟ್ ನ ಅಧ್ಯಕ್ಷರಾದ ಜಯಲಕ್ಷ್ಮಿ ಪಾಟೀಲ್ ಅವರು ತಿಳಿಸಿದ್ದಾರೆ.
‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಜೇತರಾದ ಶ್ರೀ. ಸದಾಶಿವ ಸೊರಟೂರು ಅವರು ಪ್ರಸ್ತುತ ಹೊನ್ನಾಳಿಯಲ್ಲಿ ವಾಸವಾಗಿದ್ದು, ಹರಿಹರ ತಾಲೂಕಿನ ಮಲೆಬೆನ್ನೂರಿನಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ‘ಅರ್ಧ ಮಳೆ ಅರ್ಧ ಬಿಸಿಲು’ ಇವರ ಮೊದಲ ಕಥಾ ಸಂಕಲನ. ‘ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ’, ‘ಗಾಯಗೊಂಡ ಸಾಲುಗಳು’ ಇವರ ಕವನ ಸಂಕಲನಗಳು.

‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ವಿಜೇತರಾದ ನಿಝಾಮ್ ಗೋಳಿಪಡ್ಪು ಅವರು ಮಂಗಳೂರು ಜಿಲ್ಲೆಯ ಸಜೀಪನಡು ಗ್ರಾಮದವರು. ಅವಿಜ್ಞಾನಿ ಹೆಸರಲ್ಲಿ ಕವನಗಳನ್ನು ರಚಿಸಿರುವ ನಿಝಾಮ್ ಗೋಳಿಪಡ್ಪು ಅವರು ಪದವಿಪೂರ್ವದವರೆಗೆ ಅಭ್ಯಾಸ ಮಾಡಿ, ತಮ್ಮ ಊರಿನಲ್ಲಿ ಕೂಲಿ ಕಾರ್ಮಿಕರಾಗಿದ್ದಾರೆ. ‘ಅನಾಮಧೇಯ ಗೀರುಗಳು’ ಇವರ ಪ್ರಥಮ ಕೃತಿಯಾಗಿದೆ.
ಕತೆಗಾರ, ಹಿರಿಯ ಪತ್ರಕರ್ತ ದೇವು ಪತ್ತಾರ್ ಅವರು ಕಥಾ ಪ್ರಶಸ್ತಿ ತೀರ್ಪುಗಾರರಾಗಿದ್ದರು. ಸಾಹಿತಿ ಪ್ರತಿಭಾ ನಂದಕುಮಾರ್ ಅವರು ಕಾವ್ಯ ಪ್ರಶಸ್ತಿಯ ತೀರ್ಪುಗಾರರಾಗಿದ್ದರು.
ಪೂರ್ವ ಆಯ್ಕೆ ಸಮಿತಿ: ಕಾವ್ಯ ವಿಭಾಗದಲ್ಲಿ, ಸಿಂಧು ರಾವ್ ಮತ್ತು ರೇಣುಕಾ ಕೊಡಗುಂಟಿ ಹಾಗೂ ಕಥಾ ವಿಭಾಗದಲ್ಲಿ, ಆನಂದ ಕುಂಚನೂರ್ ಮತ್ತು ಮಧು ವೈ ಎನ್ ಅವರು ಮೊದಲ ಸುತ್ತಿನಲ್ಲಿ ತಲಾ ೧೧ ಮತ್ತು ೧೦ ಉತ್ತಮ ಸಂಕಲನಗಳು ಆಯ್ಕೆ ಮಾಡಿದ್ದರು.
ಇದೇ ಮಾರ್ಚ್ ತಿಂಗಳಲ್ಲಿ, ಬೆಂಗಳೂರಿನಲ್ಲಿ ನಡೆಯಲಿರುವ, ಈ ಹೊತ್ತಿಗೆಯ ಹೊನಲು ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.






0 Comments