ಸಂಪು ಕಾಲಂ : ಜಾರ್ಜ್ ಆರ್ವೆಲ್ ಕಂಡ ಗಾಂಧಿ

ಜಾರ್ಜ್ ಆರ್ವೆಲ್ ಕಂಡ ಗಾಂಧಿ

ಅಕ್ಟೋಬರ್ ೨ ಮುಂಜಾನೆ ಎಚ್ಚರಿಕೆಯಾದಾಕ್ಷಣ ನೆನಪಾದದ್ದು, “ಅಕೋ ಕೈ, ಇಕೋ ಕೈ, ತಟ್ಟು ಚಪ್ಪಾಳೆ ಪುಟ್ಟ ಮಗು, ಗಾಂಧಿಗಿಂದು ಜನುಮದಿನ….” ಎಂಬ ನನ್ನ ಹಳೆಯ ಹರಿದ ಪುಸ್ತಕದಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಓದಿದ, ಹಾಡಿದ ಹಾಡು! ಎದ್ದ ನಂತರ ಯೋಚಿಸುತ್ತಿದ್ದೆ, ನಮ್ಮ ಕೈಲಾದ ಗಾಂಧಿ ಜಯಂತಿ ಅಂದರೆ; ರಜೆಯೆಂದು ನಿಧಾನಕ್ಕೆ ಎದ್ದು, ಹೆಚ್ಚೆಂದರೆ ಒಂದು ಖಾದಿ ಬಟ್ಟೆ ಧರಿಸಿ ಒಂದಷ್ಟು ಓಡಾಡಿ, ’ಲಗೆ ರಹೋ ಮುನ್ನಾಭಾಯಿ’ ಸಿನೆಮಾ ನೋಡಿ ಮಲಗುವುದು! ಸಧ್ಯ ಇಷ್ಟಾದರೂ ಆದರೆ ಎಷ್ಟೋ ಸಮಾಧಾನ ಅಂದುಕೊಂಡರೆ ಮಧ್ಯದಲ್ಲಿ ಒಂದಷ್ಟು “ಬರೀ ಗಾಂಧೀಗೇ ಪ್ರಾಮುಖ್ಯತೆ ಕೊಡ್ತಾರೆ, ಮತ್ಯಾರೂ ಫ಼್ರೀಡಮ್ ಸ್ಟ್ರಗಲ್ ಮಾಡಲೇ ಇಲ್ಲವಾ” ಅನ್ನೋ ಧೋರಣೆಗಳು, ಮತ್ತಷ್ಟು ಕಲಹ, ಕೋಮುಗಲಭೆಗಳ ಆರ್ಭಟಗಳು!

ಈ ರೀತಿ “ಅನರ್ಘ್ಯ” ವಿಚಾರಗಳು ಸಿಕ್ಕಾವು ಎಂದು, ದಿನ ಪತ್ರಿಕೆಯತ್ತ ಕಣ್ಣಾಡಿಸಿದೆ. ಕಂಡದ್ದು ಇವೆಲ್ಲಕ್ಕಿಂತ ತಮಾಷೆ ನ್ಯೂಸ್ ಐಟಮ್ಮು! ನಗರದ ಒರಾಯನ್ ಮಾಲ್ ನಲ್ಲಿ “ಗಾಂಧಿ ಮತ್ತು ಗಾಂಧಿ ಚಿಂತನೆ” ಎಂಬ ಚಿತ್ರ ಬಿಡಿಸುವ ಕಮ್ಮಟ ಏರ್ಪಡಿಸಿದ್ದರಂತೆ. ಇದರ ಬಗೆಗಿನ ರೋಹಿಣಿ ಮುಂಡಾಜೆ ಅವರ “ಕುಂಚದಲ್ಲಿ ಕೊಂಚ ಗಾಂಧಿ” ಎಂಬ ಲೇಖನ ಓದಿ ಅವರ ಬರವಣಿಗೆಯ ಜಾಣ್ಮೆಗೆ ಮನ ಮೆಚ್ಚಿತ್ತು. ನಿಜಕ್ಕೂ ಇಂದು ಗಾಂಧಿಯೇ ಇದ್ದಿದ್ದರೆ ಒರಾಯನ್ ಮಾಲ್ ಕಂಡು ಏನೆನ್ನುತ್ತಿದ್ದರು! ಆ ಮಹಾತ್ಮನ ದೃಷ್ಟಿಗೆ ಪೂರ್ಣ ಹೊರತಾದ ಜೀವನ ಇಂದು ನಮ್ಮದಾಗಿಬಿಟ್ಟಿದೆ ಎಂದು ಯೋಚಿಸಿದಾಗ ಕಳೆದ ವಾರ ಕೆಫ಼ೆ ಕಾಫ಼ೀಡೇನಲ್ಲಿ ದಿನಕಳೆದ ನೆನಪು!

ಇರಲಿ. ಹೀಗೇ, ಎಂದಿನಂತೇ, ತುಮುಲಗಳ ಸ್ಟೇಟ್ನಲ್ಲಿ ಮುಳುಗಿದ್ದ ನನಗೆ ಅದ್ಯಾಕೋ ತಟ್ಟನೆ ನೆನಪಾದದ್ದು, ತುಂಬ ಹಿಂದೆ ಓದಿದ ಜಾರ್ಜ್ ಆರ್ವೆಲ್ (ಇಂಗ್ಲ್ಯಾಂಡಿನ ಪ್ರಖ್ಯಾತ ಲೇಖಕ ಹಾಗೂ ಕಾದಂಬರಿಕಾರ) ಬರೆದಿರುವ “ರಿಫ಼್ಲೆಕ್ಷನ್ಸ್ ಆನ್ ಗಾಂಧಿ” ಎಂಬ ಪ್ರಬಂಧ. ವಿದೇಶೀಯರಿಗೇ, ಅದರಲ್ಲೂ ವಸಾಹತುಷಾಹೀ ಸಮಯದಲ್ಲೇ, ಗಾಂಧೀಜಿಯವರ ಬಗೆಗೆ ಇದ್ದ ಅಭಿಮಾನ ಅಥವಾ ಪ್ರೀತಿ ಎಂಥದು ಎಂದು ತಿಳಿಯಲು ಇದು ಬೆಸ್ಟ್ ಉದಾಹರಣೆ! ಇದರ ಕೆಲ ತುಣುಕುಗಳು ಹೀಗಿವೆ:

• ಗಾಂಧಿಯ ಬಗ್ಗೆ ನಿಖರವಾಗಿ ತಿಳಿಯಲು, ಅವರ ಸಂಪೂರ್ಣ ಜೀವನವನ್ನು ಒಳಗಣ್ಣಿನಿಂದ ಅರಿಯಬೇಕು. ಏಕೆಂದರೆ, ಪ್ರತಿ ಮೈಲಿಗಲ್ಲೂ ಪವಿತ್ರವಾಗಿರುವ ಅವರ ಜೀವನವೇ ಒಂದು ತೀರ್ಥಯಾತ್ರೆಯಂತೆ.

• ಅವರ ಸಾಧು ಮನಸಿನ ಒಳಗೆ ಒಬ್ಬ ಕಠೋರ ವ್ಯಕ್ತಿಯು ಅವರಲ್ಲಿನ ಸಾಧನೆಯ ಹಾದಿಗೆ ಅನುವಾದ.

• ಮೊಟ್ಟಮೊದಲಿಗೆ, ಪ್ರಾದೇಶಿಕ ಪತ್ರಿಕೆಗಳಲ್ಲಿ ಗಾಂಧಿಯ ವಿರುಧ್ಧ ಪ್ರಕಟಗೊಂಡ ವಿಚಾರಗಳೇ ನನ್ನನ್ನು ಹೆಚ್ಚು ಸೆಳೆದಿದ್ದವು, ಏಕೆಂದರೆ, ಹೊರನೋಟಕ್ಕೆ, ಈತ (ಗಾಂಧಿ) ಒಬ್ಬ ಅತ್ಯಂತ ಸಾಧಾರಣ, ನಾಚಿಕೆ ಸ್ವಭಾವದ ಹಟವಾದಿ, ತನ್ನಷ್ಟಕ್ಕೆ ತಾನೇ ಅರೆಬೆತ್ತಲೆಯಲ್ಲಿ ರಾಟೆ ಹಿಡಿದು ಮೂಲೆಯಲ್ಲಿ ಕೂತು ಸ್ವರಾಜ್ಯದ ಕನಸು ಕಂಡವ. ಇದು ನಾನಾಗಲೇ ಹೇಳಿದಂತೆ ಬಾಹ್ಯದಲ್ಲಿ ಕಾಣಿಸಿಕೊಳ್ಳುವ ಭ್ರಮೆ.

• ….ಆದರೆ, ನನಗೆ ಚೆನ್ನಾಗಿ ನೆನಪಿರುವ ಹಾಗೆ, ಆತನನ್ನು ಖಂಡಿಸುವ, ಅಲ್ಲಗಳೆಯುವ ಅನೇಕ ಬ್ರಿಟಿಷ್ ಅಧಿಕಾರಿಗಳು, ಒಳಗೊಳಗೇ ಈತನನ್ನು ಪ್ರೀತಿಸುತ್ತಿದ್ದರು, ಆದರಿಸುತ್ತಿದ್ದರು.

• ಅವರ ಹಿರಿಮೆ, ಸಾಮರ್ಥ್ಯಗಳು ಅಡಗಿದ್ದುದು ಅವರ ಮುಗ್ಧತೆಯಲ್ಲಿ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ, ಅವರು, ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದುಕೊಂಡ ತಪ್ಪೊಪ್ಪಿಗೆಗಳೆಲ್ಲಾ ಒಂದೆರಡು ಬಾರಿ ಧೂಮಪಾನ, ಮಧ್ಯಪಾನ ಮಾಡಿದ್ದು, ಒಂದೆರಡು ಬಾರಿ ಚಿಲ್ಲರೆ ಕದ್ದಿದ್ದು, ಒಂದು ಬಾರಿ ವೇಶ್ಯೆಯ ಮನೆಗೆ ಹೋಗಿ ’ಏನೂ ಮಾಡದೇ’ ಮರಳಿ ಬಂದದ್ದು.

• ಈತ ಯಾವತ್ತೂ ಸತ್ಯದ ಪರ ಹೋರಾಡಿದ್ದರೇ ಹೊರತು, ಯಾವುದೇ ಪಂಥ ಅಥವಾ ಜನಾಂಗದ ವಿರುಧ್ಧ ಅಲ್ಲ. ಅವರು ದಕ್ಷಿಣ ಆಫ಼್ರಿಕಾದಲ್ಲಿ ಕಪ್ಪು ಜನಾಂಗಕ್ಕಾಗಿ ಹೋರಾಡಿದ್ದ ಸಂಧರ್ಭದಲ್ಲೂ ಎಂದೂ ಯುರೂಪೀಯರನ್ನು ದ್ವೇಷಿಸಿಲ್ಲ. ಇದಕ್ಕೆ ಅವರ ಅತ್ಯುತ್ತಮ ಬ್ರಿಟಿಷ್ ಸ್ನೇಹಿತರೇ ಸಾಕ್ಷಿ.

• ಅವರ ಆತ್ಮ ಚರಿತ್ರೆ ಒಂದು ದೊಡ್ಡ ಸಾಹಿತ್ಯ ಕೃತಿಯಲ್ಲದಿದ್ದರೂ, ಅದಕ್ಕಿಂತ ಅಮೂಲ್ಯವಾದ ಸ್ಥಾನವನ್ನು ಸೇರುತ್ತದೆ, ಕಾರಣ, ಇದರ ಸತ್ಯ ಮತ್ತು ಸತ್ವಗಳು.

• ಈತನ ಅತ್ಯಂತ ಸೂಕ್ಷ್ಮ ದ್ವೇಷಿಗಳೂ ಸಹ, ಈತನನ್ನು ಒಬ್ಬ ಅಪರೂಪದ, ಸ್ವಾರಸ್ಯಕರವಾದ ವ್ಯಕ್ತಿ ಎಂದು ಒಪ್ಪಿಕೊಳ್ಳುವುದರಲ್ಲಿ ಸಂಶಯವಿಲ್ಲ.

• ತನ್ನ ಕೆಲವೇ, ಸುಲಭವೆಂದು ಕಾಣುವ ದೃಢ ನಿರ್ಧಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅದನ್ನು ಕಾಯಾ-ವಾಚಾ-ಮನಸಾ ಅನುಸರಿಸ ಹೊರಟರೆ, ಆಗ ತಿಳಿಯುತ್ತದೆ ಈ ಮನುಷ್ಯನ ನಿಜವಾದ ಅದಮ್ಯ ಶಕ್ತಿ ಎಂಥದ್ದು ಎಂದು.

ಹೀಗೆ, ಹೇಳುತ್ತಾ ಜಾರ್ಜ್ ಆರ್ವೆಲ್ ಕೊನೆಯದಾಗಿ ಒಂದು ಮಾತನ್ನು ಹೇಳುತ್ತಾನೆ: “ಆಶ್ಚರ್ಯಕರವಾಗಿ, ಕೆಲವರು ಹೇಳುತ್ತಾರೆ, ಈತನ ಸಾವು ಸಂತೃಪ್ತಿಯಾದದ್ದಲ್ಲ, ಇದು ವಿನಾಶ, ಅಧಃಪತನ ಎಂದು. ಆದರೆ, ಇಡೀ ಭೂಮಿಯನ್ನಾಳುವ ಬ್ರಿಟಿಷರನ್ನು, ಯಾವ ದ್ವೇಷವೂ ಸಾಧಿಸದೇ, ಸ್ನೇಹಪೂರ್ವಕವಾಗಿಯೇ ಹೊರಗೆಡಹಿದ್ದುದಕ್ಕಿಂತ ಸಾರ್ಥಕ್ಯ ಯಾರ ಜೀವನದಲ್ಲೂ ಬರಲಾರದು ಎಂದು ನಾನು ನಂಬಿದ್ದೇನೆ” ಎಂದು.

ಈ ಕೆಲವು ಸಾಲುಗಳು ಸಾಕು, ನಮ್ಮಲ್ಲಿ ಮಹಾತ್ಮ ಗಾಂಧಿಯವರ ಬಗ್ಗೆ ಧನ್ಯತಾ ಭಾವ ಹುಟ್ಟಿಸಲು. ಅಲ್ಲವೇ! ಇವರ ಆ ಪವರ್ಫ಼ುಲ್ ದಿವ್ಯ ಶಕ್ತಿಯ ಮಂತ್ರವೆಂದರೆ, ಅವರ ಜೀವನ ಮೌಲ್ಯಗಳು ಮತ್ತು ಅದನ್ನು ತನ್ನ ಜೀವನ ಪರ್ಯಂತ ಅನುಸರಿಸಲೇ ಬೇಕೆಂಬ ಛಲ ಅದಕ್ಕಾಗಿ ಅವಿರತ ಶ್ರಮ, ನಿರಂತರ ಹುಡುಕಾಟ.

ಇತ್ತೀಚೆಗೆ, ನನ್ನ ತಂಗಿ ತಾನು ಎಲ್ಲೋ ಓದಿದ ಒಂದು ಇನ್ಟೆರೆಸ್ಟಿಂಗ್ ವಿಷಯ ತಿಳಿಸಿದಳು ಗೆಳೆಯರೇ! ಅದೇನೆಂದರೆ, ಗಾಂಧಿ ಮತ್ತು ಹಿಟ್ಲರ್ ಇಬ್ಬರದೂ ಹೆಚ್ಚೂ ಕಡಿಮೆ ಒಂದೇ ಸ್ವಭಾವವಂತೆ! ಹೌದು, ಇದು ನಿಜ! ಅವರಿಬ್ಬರೂ ಒಂದೇ. ಇಬ್ಬರೂ ಹಠವಾದಿಗಳು, ಶ್ರಮಿಕರು, ದೃಢ ನಿರ್ಧಾರ ಮಾಡಿ ಅದನ್ನು ಪಾಲಿಸುವವರು, ಅನಿಸಿದ್ದನ್ನು ಸಾಧಿಸಿ ತೋರಿಸುವವರು, ಖಡಾಖಂಡಿತವಾದಿಗಳು. ಆದರೆ ಇಬ್ಬರಲ್ಲೂ ಎಷ್ಟು ಅಂತರ!!

ಇಬ್ಬರೂ ತಮ್ಮ ಶಕ್ತಿ ಸಾಮರ್ಥಗಳನ್ನು ಬಳಸಿಕೊಳ್ಳುವುದರಲ್ಲಿ ಅತ್ಯಂತ ವಿಭಿನ್ನತೆ ಇತ್ತು. ಗಾಂಧಿಜಿಯವರು ತಮ್ಮ ಈ ಸ್ವಭಾವವನ್ನು ರಚನಾತ್ಮಕವಾಗಿ ಬೆಳೆಸಿಕೊಂಡರು, ಆದರೆ ಹಿಟ್ಲರ್ ತನ್ನ ಸಾಮರ್ಥ್ಯಗಳನ್ನು ವಿನಾಶಕಾರಕವಾಗಿ ಬೆಳೆಸಿಕೊಂಡ. ಪ್ರತಿಯೊಬ್ಬರಲ್ಲೂ ಈ ರೀತಿಯಾದ ಒಬ್ಬ ವ್ಯಕ್ತಿ ಇದ್ದೇ ಇರುತ್ತಾನೆ. ಅವನನ್ನು ಪತ್ತೆ ಹಚ್ಚಿ, ಎಚ್ಚರಿಕೆಯಿಂದ ಹಿಟ್ಲರ್ ಆಗದಂತೆ ಗಾಂಧಿಯಾಗಿಸುವುದು ಸಾಧ್ಯವಾದರೆ ಅದರ ಪರಿಣಾಮ ಊಹಿಸಿ!

 

‍ಲೇಖಕರು G

October 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

8 ಪ್ರತಿಕ್ರಿಯೆಗಳು

  1. v.n.laxminarayana

    ಗಾಂಧೀಜಿಯವರ ಬಗ್ಗೆ ಆರಾಧನೆಯ ದೃಷ್ಟಿಯಿಂದ ನೋಡುವವರಿಗೆ ಇದೆಲ್ಲವೂ ನಿಜ. ಅವರ ಮಿತಿಗಳನ್ನು ಗಮನಿಸಿ ಅರ್ಥಮಾಡಿಕೊಳ್ಳಲು ಅವರ ಸಾಧನೆಗಳನ್ನು ಅಲ್ಲಗೆಳೆಯಬೇಕಿಲ್ಲ. ಅಥವಾ ಸಂಘಪರಿವಾರದ ನೆಲೆಯಿಂದಲೇ ವಿಮಶರ್ಿಸಬೇಕಿಲ್ಲ. ಗಾಂಧೀಜಿ, ಸುಭಾಸ್ಚಂದ್ರಬೋಸ್ ಮತ್ತು ಅಂಬೇಡ್ಕರ್ ಮುಖೇನದ ಭಿನ್ನಮತವನ್ನು ಹತ್ತಿಕ್ಕಿದ ರೀತಿ, ಅವರ ರಾಜಕೀಯ ಚಾಣಾಕ್ಷ,ತನ, ಆತ್ಮಸಾಕ್ಷಿಯ ಅಸ್ತ್ರ ಬಳಸಿ ಭಿನ್ನ ದೃಷ್ಟಿಕೋನವನ್ನು ಅಲ್ಲಗೆಳೆಯತ್ತಿದ್ದ ಅವರ ನಿಲುವು ನಾವೆಲ್ಲರೂ ಅತ್ಯುತ್ಸಾಹದಿಂದ ಕೊಂಡಾಡುವ ಅವರ ಸತ್ಯಸಂಧತೆಯನ್ನೇ ಶಂಕಿಸುವಂತೆ ಮಾಡುತ್ತವೆ.

    ಗಾಂಧೀಜಿಗಿಂತಲೂ 50-60 ವರ್ಷಗಳ ಮೊದಲೇ ಪ್ರಕಟಗೊಂಡಿದ್ದ ಕಾಲರ್್ ಮಾಕ್ಸರ್್ನ ಸಾಮ್ಯವಾದಿ ಪ್ರಣಾಳಿಕೆಯನ್ನು ಎಲ್ಲೂ ಪ್ರಸ್ತಾಪಿಸದೆ ತಮ್ಮ ಪ್ರಸಿದ್ಧ ರಾಜಕೀಯ ಪ್ರಣಾಳಿಕೆಯಾದ ಹಿಂದ್ ಸ್ವರಾಜ್ ಅನ್ನು ಪ್ರಕಟಿಸಿದ್ದು ಮತ್ತೆ ಅವರ ರಾಜಕೀಯ ಜಾಣ್ಮೆಯನ್ನೇ ಮುನ್ನೆಲೆಗೆ ತರುತ್ತದೆ. ರಸ್ಕಿನ್, ಟಾಲ್ಸ್ತಾಯ್ ಮೂಲದ ಆದರ್ಶ ಸಮಾಜ ಸಾಕಾರಗೊಳ್ಳಲು ರಾಜಕೀಯ ವ್ಯವಸ್ಥೆಯಾಗಿ ಸಾಮ್ಯವಾದ ಅನಿವಾರ್ಯ ಎಂಬುದರ ಬಗ್ಗೆ ಗಾಂಧೀಜಿ ಅಡ್ಡಗೋಡೆಯಮೇಲೆ ದೀಪವಿಟ್ಟಂತೆ ಮಾತನಾಡುತ್ತಾರೆ. ಪ್ರಭುತ್ವದ, ಆಳುವವರ್ಗದ ಬಲಪ್ರಯೋಗವನ್ನು ಎದುರಿಸುವಾಗ ಫಲಿತವಾಗುವ ಹಿಂಸೆಯ ಬಗ್ಗೆ ಗಾಂಧೀಜಿ ತೋರುವ ಸಂವೇದನೆ ಏಕಮುಖವಾದುದು. ಆಳುವವರ ಅಧಿಕಾರಯುತ-ಕಾನೂನುಬದ್ಧ ಹಿಂಸೆಯನ್ನು ಮರೆಮಾಚುವಂಥದು.

    ಗಾಂಧೀಜಿಯ ಬಗ್ಗೆ ಬರೆಯುತ್ತಾ ಆರ್ವೆಲ್ ದೇವರು ಮತ್ತು ಮನುಷ್ಯರಲ್ಲಿ ಯಾವುದಾದರೂ ಒಂದನ್ನು ಮಾತ್ರ ಆರಿಸಿಕೊಳ್ಳಬಹುದು. ಗಾಂಧೀಜಿ ದೇವರನ್ನು ಆರಿಸಿಕೊಂಡಿದ್ದರು. ಅವರ ಕಠೋರತೆಯ ಮೂಲ ಅಲ್ಲಿದೆ ಎಂಬರ್ಥದ ಮಾತುಗಳನ್ನು ಆಡುತ್ತಾನೆ.
    ಈ ಕಾಲಘಟ್ಟದಲ್ಲಿ ಗಾಂಧೀಜಿಯ ಬಗ್ಗೆ ಆರಾಧನಾ ವೃತ್ತಿಯಿಂದ ಮಾತನಾಡುವ ಯಾರೇ ಆದರೂ ಏಕಮುಖವಾಗಿ ನೋಡುತ್ತಾರೆ. ಅಥವಾ ತಮಗೆ ಪ್ರಿಯವಾದ (ತಮ್ಮ ವರ್ಗಹಿತಕ್ಕೆ ಹೊಂದುವಂಥ) ಆಶಯದ ಗಾಂಧಿಯ ಬಗ್ಗೆ ಮಾತನಾಡುತ್ತಾರೆ ಎಂದು ನನ್ನ ಅಭಿಪ್ರಾಯ.
    -ವಿ.ಎನ್.ಲಕ್ಷ್ಮೀನಾರಾಯ

    ಪ್ರತಿಕ್ರಿಯೆ
  2. Gopaal Wajapeyi

    ಸಂಯುಕ್ತಾ.. . ನಿಮ್ಮ ಶೈಲಿಗೆ ನಮೋ… ಒಂದು ಪುಸ್ತಕದ ಪರಿಚಯ ಹೇಗಿರಬೇಕು, ಅದರ ಮಹತ್ವ ಏನು ಎಂಬುದನ್ನು ಓದುಗರಿಗೆ ತಿಳಿಸಿಕೊಡುವುದು ಹೇಗೆ ಎಂಬುದಕ್ಕೆ ನಿಮ್ಮ ಈ ಲೇಖನ ಒಳ್ಳೆಯ ಉದಾಹರಣೆ. ಅಂದ ಹಾಗೆ ನಾನೀಗ ಆ ಪುಸ್ತಕವನ್ನು ಓದಬೇಕಲ್ಲ… ಎಲ್ಲಿ ದೊರೆಯುತ್ತದೆ?

    ಪ್ರತಿಕ್ರಿಯೆ
  3. nempe devaraj

    arvel gandeejiyannu knda reeti arthapuurnavadudu mattu relevent aadudu.marks madari, europe madari, koomuvadigala madari, heege halavu jana httaru reetiylli gandiyannu vimarshisidaruu gandhi avarellariguu antimavagi buddana reetiylli ishtavagutta hooguvudee aatana relevency

    ಪ್ರತಿಕ್ರಿಯೆ
  4. D.RAVI VARMA

    • ಅವರ ಆತ್ಮ ಚರಿತ್ರೆ ಒಂದು ದೊಡ್ಡ ಸಾಹಿತ್ಯ ಕೃತಿಯಲ್ಲದಿದ್ದರೂ, ಅದಕ್ಕಿಂತ ಅಮೂಲ್ಯವಾದ ಸ್ಥಾನವನ್ನು ಸೇರುತ್ತದೆ, ಕಾರಣ, ಇದರ ಸತ್ಯ ಮತ್ತು ಸತ್ವಗಳು.
    • ಈತನ ಅತ್ಯಂತ ಸೂಕ್ಷ್ಮ ದ್ವೇಷಿಗಳೂ ಸಹ, ಈತನನ್ನು ಒಬ್ಬ ಅಪರೂಪದ, ಸ್ವಾರಸ್ಯಕರವಾದ ವ್ಯಕ್ತಿ ಎಂದು ಒಪ್ಪಿಕೊಳ್ಳುವುದರಲ್ಲಿ ಸಂಶಯವಿಲ್ಲ.
    • ತನ್ನ ಕೆಲವೇ, ಸುಲಭವೆಂದು ಕಾಣುವ ದೃಢ ನಿರ್ಧಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅದನ್ನು ಕಾಯಾ-ವಾಚಾ-ಮನಸಾ ಅನುಸರಿಸ ಹೊರಟರೆ, ಆಗ ತಿಳಿಯುತ್ತದೆ ಈ ಮನುಷ್ಯನ ನಿಜವಾದ ಅದಮ್ಯ ಶಕ್ತಿ ಎಂಥದ್ದು ಎಂದು.
    ಹೀಗೆ, ಹೇಳುತ್ತಾ ಜಾರ್ಜ್ ಆರ್ವೆಲ್ ಕೊನೆಯದಾಗಿ ಒಂದು ಮಾತನ್ನು ಹೇಳುತ್ತಾನೆ: “ಆಶ್ಚರ್ಯಕರವಾಗಿ, ಕೆಲವರು ಹೇಳುತ್ತಾರೆ, ಈತನ ಸಾವು ಸಂತೃಪ್ತಿಯಾದದ್ದಲ್ಲ, ಇದು ವಿನಾಶ, ಅಧಃಪತನ ಎಂದು. ಆದರೆ, ಇಡೀ ಭೂಮಿಯನ್ನಾಳುವ ಬ್ರಿಟಿಷರನ್ನು, ಯಾವ ದ್ವೇಷವೂ ಸಾಧಿಸದೇ, ಸ್ನೇಹಪೂರ್ವಕವಾಗಿಯೇ ಹೊರಗೆಡಹಿದ್ದುದಕ್ಕಿಂತ ಸಾರ್ಥಕ್ಯ ಯಾರ ಜೀವನದಲ್ಲೂ ಬರಲಾರದು ಎಂದು ನಾನು ನಂಬಿದ್ದೇನೆ” ಎಂದು.
    ಈ ಕೆಲವು ಸಾಲುಗಳು ಸಾಕು, ನಮ್ಮಲ್ಲಿ ಮಹಾತ್ಮ ಗಾಂಧಿಯವರ ಬಗ್ಗೆ ಧನ್ಯತಾ ಭಾವ ಹುಟ್ಟಿಸಲು. ಅಲ್ಲವೇ! ಇವರ ಆ ಪವರ್ಫ಼ುಲ್ ದಿವ್ಯ ಶಕ್ತಿಯ ಮಂತ್ರವೆಂದರೆ, ಅವರ ಜೀವನ ಮೌಲ್ಯಗಳು ಮತ್ತು ಅದನ್ನು ತನ್ನ ಜೀವನ ಪರ್ಯಂತ ಅನುಸರಿಸಲೇ ಬೇಕೆಂಬ ಛಲ ಅದಕ್ಕಾಗಿ ಅವಿರತ ಶ್ರಮ, ನಿರಂತರ ಹುಡುಕಾಟ.

    tumbaa tumbaa arthapurnavaada chintane…. ii pustike naanu odiralilla… nimagu avadhigu vandanegalu…..

    ಪ್ರತಿಕ್ರಿಯೆ
  5. Badarinath Palavalli

    ಜಾರ್ಜ್ ಅರ್ವೆಲ್ ಅವರ ಪುಸ್ತಕದ ಬಗೆಗೆ ತುಂಬಾ ಚೆನ್ನಾಗಿ ಪರಿಚಯ ಮಾಡಿಕೊಟ್ಟಿದ್ದೀರ.

    ನಿಮ್ಮ ನಿರೂಪಣಾ ಶೈಲಿ ನನಗೆ ಮಾದರಿಯಾಗಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: