ಸಂಕ್ರನ್ನ ಕದ್ದರು
ವಿನತೆ ಶರ್ಮ
“ಬೇಡ ಕಣವ್ವೋ…”
ನಿದ್ದೆ ಸುಂದರಿಯೆದೆ
ಸೀಳಿದಾ ದನಿ.
ಎಲ್ಲಿಯದು? ಯಾರಿಗೇನಾಯಿತು?
ಮೃದು ನಿದ್ದೆಗೆ ಅಸಮಾಧಾನ.
ಕನಸಿನ ಪಯಣಕ್ಕೆ ಕೊಕ್ಕೆ.
ಗಾಯಗಳ ಮೈ.
ಕೈಗಳ ಬೊಬ್ಬೆ, ಕೀವು.
ಒಡೆದ ರಕ್ತ ಹೆಪ್ಪುಗಟ್ಟಿದ ಹಿಮ್ಮಡಿ.
ಆಗಾಗ ಬಿಕ್ಕಿದ ಮುಖ.
ಶಂಕ್ರನಿಗೇನಾಯಿತು?
ಬೇಡಕಣವ್ವೋ…
“ತುಂಬಾ ಒಡೀತಾರೆ.”
ಆತ್ಮವನ್ನು ತಿವಿದಾ ದನಿ
ದೇಹದ ಪದರಗಳ
ಸುತ್ತಿದ ವಿಷ. ಸುಳಿಗಾಳಿ.
“ಮಲಿಕ್ಕಳಕ್ಕೆ ಬಿಡಲ್ಲಾ ಕಣವ್ವೋ
ಏನೇನೋ ಮಾಡ್ತಾರೆ, ನೋವಾಗ್ತೈತೆ.”
ಎಂದನಾ ಶಂಕ್ರ.
ಬೇಡ ಕಣವ್ವೋ…
ರಾತ್ರಿ ಕೇಳಿದ ಪಿಸುಗುಟ್ಟಿನ
ಆಕ್ರಂದನ. ಬೇರಿನ ಜೀವವ
ಹೊಸಕಿದಂತೆ.
“ಪಾತ್ರೆ ಉಜ್ಜಾಕ್ಕಾಗಲ್ಲ, ಕೈಯಲ್ರಕ್ತ ಬರ್ತೈತೆ.
ಆಗಲ್ಲಕನವ್ವೋ. ಬ್ಯಾಡ ಕಳಿಸ್ಬೇಡ.”
ಆ ಮಾತು.
ಏನಾಯಿತು?
ಜೀವ ಸುಟ್ಟಿದ ಬೆಂಕಿ.
ಬೆರಳ ಉಗುರ ಕಿತ್ತಂತೆ.
ರಕ್ತನೋವು ಬೊಬ್ಬೆ
ಮುಚ್ಚಿದ ತುಟಿಗಳ ಚೀರು.
ಮಾತೇ ಆ ದನಿ?
ಕಿವಿಕಿಚ್ಚಿಡುವ ಡಮರುಗ.
ಶಿವ ತಾಂಡವ.
ಬರೀ ಪದಗಳು ಹೇಗಾದವು ಅವು?
“ಸಂಕ್ರ ಒಟೆಲ್ಗೆ ಒಗಲ್ಲ ಅಂತಾನ, ಒಸಿ ಏಳಿ.
ಅಳ್ಳೀಕಡೆ ನಮ್ಕೇನ್ಕೆಲ್ಸ ಕಾಸು ಗಿಟ್ತೈತೆ.”
ವಾಸ್ತವ್ಯ ಕುಣಿಯಿತು.
ಕಳ್ಳು ಕುಡಿದಂತೆ.
ಅದರ ಮುಖ ಗಹಗಹಿಕೆ.
ಏನದರ ದನಿ?
ಆವ್ಯವಸ್ಥೆ. ಈ ಜಾತಿ. ಆ ಹಣ. ಆ ತಂದೆ.
ಈ ತಾಯಿ, ತಂಗಿ, ತಮ್ಮ, ಶಾಲೆ.
ಆ ಹೋಟೆಲ್, ದುಷ್ಟರು …
ನಾನು.
ಎಲ್ಲಾರೂ ಪೋರ ಸಂಕ್ರನ ಕದ್ದರೇ.
ಅಮ್ಮನೀ ಯಶೋದೆ
ನಮ್ಮೊಳಗಿನ ಗುಮ್ಮನ್ನ
ಬಡಿದೋಡಿಸೆ ತಾಯಿ.
ವಿನತೆ ಶರ್ಮಾ ಜಿ, ತುಂಬ ಸಶಕ್ತ ಕವನ. ಮೆಚ್ಚುಗೆಯಾಯಿತು.
chennaagide..!