ರಶ್ಮಿ ಕಾಸರಗೋಡು
ನಿನ್ನೆ ಬುಕ್ ಸ್ಟಾಲ್ ಗೆ ಹೋಗಿದ್ದೆ. ಅಲ್ಲಿ ಅಪ್ಪ ಮಗಳು ಪುಸ್ತಕ ಖರೀದಿಸುತ್ತಿದ್ದರು. ಮಗಳ ಪಟ್ಟಿ ದೊಡ್ಡದೇ ಇತ್ತು. ಇನ್ನೇನು ಬೇಕು, ಇನ್ನೇನು ಬೇಕು ಎಂದು ಅಪ್ಪ ಮಗಳಲ್ಲಿ ಕೇಳುತ್ತಿದ್ದರು.
ಅದಾದ ಮೇಲೆ ಇನ್ನೊಬ್ಬ ವ್ಯಕ್ತಿ ಬಂದು ಒಂದೆರಡು ನೋಟ್ ಬುಕ್ ತೆಗೆದುಕೊಂಡು, ಆಮೇಲೆ….ಇನ್ನೊಂದು ಪೆನ್ಸಿಲ್ …ಮತ್ತೆ ಸ್ವಲ್ಪ ಹೊತ್ತು ಕಳೆದು ಇನ್ನೊಂದು…ಅಂಗಡಿಯವನು ಬೇಗ ಬೇಗ ಹೇಳಿ ಸರ್..ಬೇರೆಯವರು ಕಾಯ್ತಾ ಇದ್ದಾರೆ ಅಂದ. ಮಗಳು ಹೇಳಿದ್ದು ಏನು ನೆನಪಿಗೆ ಬರ್ತಿಲ್ಲ ಅಂದ್ರು ಆ ಅಪ್ಪ..
ಆಮೇಲೆ ಒಂದಷ್ಟು ಪುಸ್ತಕ, ಬೈಂಡ್ ಪೇಪರ್ ಎಲ್ಲ ತೆಗೆದುಕೊಂಡು ಹೋದರು.
ಸರದಿಯಲ್ಲಿ ನಿಂತಿದ್ದ ಪುಟ್ಟ ಹುಡುಗ, ಅಪ್ಪ ಅದು ಬೇಕು, ಇದು ಬೇಕು ಎಂದು ಹಠ ಹಿಡಿಯುತ್ತಿದ್ದ. ಇವತ್ತು ಇಷ್ಟು ಸಾಕು, ನಾಳೆ ತೆಗೆದುಕೊಳ್ಳೋಣ ಅಂದ್ರೆ ಹುಡುಗ ಮುಖ ಸಪ್ಪೆ ಮಾಡಿಕೊಂಡ. ಒಂದೇ ದಿನದಲ್ಲಿ ಎಲ್ಲರೂ ನೋಟ್ಸ್ ಬರೆಯೋಕೆ ಕೊಡಲ್ಲ, ಇವತ್ತಿಗೆ ಇಷ್ಟು ಸಾಕು ಎಂದು ಆ ಅಪ್ಪ ಮಗನಿಗೆ ಹೇಳ್ತಿದ್ರು…
ಅಪ್ಪನ ಮುಖದಲ್ಲಿ ಅಸಹಾಯಕತೆ…ಅವರು ತೆಗೆದುಕೊಂಡ ವಸ್ತುಗಳ ಬೆಲೆ ನೋಡ್ಕೊಂಡು, ಇದಕ್ಕಿಂತ ಕಡಿಮೆಯದ್ದು ಇಲ್ವಾ ..ತುಂಬಾ ಜಾಸ್ತಿಯಾಯ್ತು ಬಿಡಿ ಎಂದು ಕೆಲವೊಂದನ್ನು ಬೇಡ ಎಂದು ಹೇಳಿದ ಅಪ್ಪ. ಮಗ ಪೆಚ್ಚುಮೋರೆ ಹಾಕಿ ನಿಂತಿದ್ದ. ಆ ಅಪ್ಪನ ಕಣ್ಣುಗಳು ಮಾತಾಡುತ್ತಿದ್ದವು.
ನನ್ನ ಶಾಲಾದಿನಗಳು, ಅಪ್ಪನೂ, ತಾಪತ್ರಾಯಗಳೂ ಎಲ್ಲವೂ ನೆನಪಾಯ್ತು
ಬಯಸಿದ್ದು ಸಿಗದ ಮಗನ ನೋವು,
ಮಗ ಬಯಸಿದ್ದು ಕೊಡಿಸಲಾಗದ ತಂದೆಯ ಅಸಹಾಯಕತೆ..
ಇದ ನೋಡಿ ನೋಯುವ ನಮ್ಮ ಮನ… ನಮ್ಮದು ಕೂಡ ಒಂದು ರೀತಿಯ ಅಸಹಾಯಕತೆಯೇ..
ಅಲ್ಲಿ ನಡಿಯುವ ಇಂತಹ ಪ್ರಸಂಗಗಳನ್ನು ನೋಡುತ್ತಿದ್ದರೆ, “ಪುಸ್ತಕದ ಅಂಗಡಿ” ಎಂಬ ಪುಸ್ತಕವನ್ನೇ ಬರೆಯಬಹುದು…