ವಿಶ್ವೇಶ್ವರ ಭಟ್
ಪತ್ರಕರ್ತ ವೆಂಕಟ್ರಮಣ ಗೌಡ ಮೊದಲ ಸಂಚಿಕೆಯಲ್ಲೇ ಅಚ್ಚರಿ, ಭರವಸೆ ಹಾಗೂ ನಿರೀಕ್ಷೆಗಳನ್ನು ಮೂಡಿಸಿದ್ದಾರೆ.
ವೆಂಕಟ್ರಮಣ ಗೌಡ ಹಂಗಾಮ ಎಂಬ ಪತ್ರಿಕೆ ಆರಂಭಿಸಲಿದ್ದಾರೆಂದು ಈ ಅಂಕಣದಲ್ಲಿ ಕೆಲ ದಿನಗಳ ಹಿಂದೆ ಪ್ರಸ್ತಾಪಿಸಲಾಗಿತ್ತು. ಈಗ ಗೌಡರು ಮೊದಲ ಸಂಚಿಕೆಯನ್ನು ಹಿಡಿದು ನಿಂತಿದ್ದಾರೆ. ನಮ್ಮ ಮಯೂರ, ಕಸ್ತೂರಿ, ತುಷಾರಕ್ಕಿಂತ ಗಾತ್ರದಲ್ಲಿ ತುಸು ಪುಟ್ಟದಾಗಿರುವ, ಆಕಾರದಲ್ಲೂ ಸ್ವಲ್ಪ ಚಿಕ್ಕದಾಗಿರುವ ಹಂಗಾಮ, ವಿಚಾರ, ಭಾವನೆ, ಆನಂದ, ವಿಸ್ಮಯದಲ್ಲಿ ಮಾತ್ರ ಸಮೃದ್ಧವಾಗಿದೆ. ಪತ್ರಿಕೆಯ ಶೀರ್ಷಿಕೆಯ ಮೇಲೆ ಭಾವ ತೀರದ ಬೆರಗು ಎಂಬ ಘೋಷವಾಕ್ಯ ಪತ್ರಿಕೆಯ ಆಶಯದ ರಂಗೋಲಿ. ಪುಟ ತೆರೆಯುತ್ತಿದ್ದಂತೆ ವೆಂಕಟ್ರಮಣ ಗೌಡರ ಆಸ್ಥೆ, ಕಳಕಳಿ, ಮನಸ್ಸು, ಕಲಾತ್ಮಕ ದೃಷ್ಟಿ, ಶ್ರದ್ಧೆ, ಪರಿಶ್ರಮ ಅನಾವರಣಗೊಳ್ಳುತ್ತಾ ಹೋಗುತ್ತದೆ.
ಅಲ್ಲಲ್ಲಿ ಕಾಣುವಾಗ ಜಯಂತ್ ಕಾಯ್ಕಿಣಿ ಸಂಪಾದಕತ್ವದಲ್ಲಿ ಮೂಡಿಬಂದ ಭಾವನಾ ಮಾಸಿಕದ ನೆನಪಾದರೂ, ಗೌಡರು ಭಾವನಾದ ಪ್ರಭಾವದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆಂದು ಅನಿಸುತ್ತದೆ. ಅಷ್ಟರ ಮಟ್ಟಿಗೆ ಕೊಂಚ ಯಶಸ್ವಿಯೂ ಆಗಿದ್ದಾರೆ. ಅರವತ್ನಾಲ್ಕು ಪುಟಗಳಲ್ಲಿ ಮೈದಾಳಿರುವ ಹಂಗಾಮದ ಬಹುತೇಕ ಅಂಕಣಗಳಲ್ಲಿ ಹೊಸತನವಿದೆ. ಎಲ್ಲೂ ಓದಿರದ, ಕೇಳಿರದ ಶೀರ್ಷಿಕೆಗಳು ಪತ್ರಿಕೆಗೊಂದು ನಾವಿನ್ಯವನ್ನು ತಂದುಕೊಟ್ಟಿವೆ.
ಕನ್ನಡ ಮಾಸ ಪತ್ರಿಕೆಗಳಲ್ಲಿ ಹೊಸತನ, ಹುರುಪು, ಕಚಗುಳಿ ಇಲ್ಲದ ಸಮಯದಲ್ಲಿ ಜಯಂತ್ ಭಾವನಾದಲ್ಲಿ ಮಾಡಿದ ಪ್ರಯೋಗಗಳು ಸರ್ವತ್ರ ಪ್ರಶಂಸೆಗೆ ಪಾತ್ರವಾದವು. ಮಾಸಿಕ ಪತ್ರಿಕೆಗಳಲ್ಲಿ ಯಾರೂ ಮಾಡದ ಹಿಕಮತ್ತುಗಳನ್ನು ಅವರು ಮಾಡಿದರು. ಪ್ರತಿ ಪುಟಗಳಲ್ಲಿ ಲವಲವಿಕೆಯನ್ನು ತುಂಬಿದರು. ಪತ್ರಿಕೆಯೊಂದನ್ನು ಹೀಗೂ ಮಾಡಲು ಸಾಧ್ಯವಾ ಎಂಬ ಕಲ್ಪನೆಯ ವಿಸ್ತಾರವನ್ನು ಜಯಂತ್ ತೆರೆದಿಟ್ಟರು. ವೆಂಕಟ್ರಮಣ ಗೌಡರು ಹಂಗಾಮದಲ್ಲಿ ಈ ಹುಡುಕಾಟವನ್ನು ಮುಂದುವರೆಸಿಕೊಂಡು ಹೋಗುವ ಲಕ್ಷಣಗಳನ್ನು ತೋರುತ್ತಿದ್ದಾರೆ. ಜಡ್ಡುಗಟ್ಟಿದೆಯೇನೋ ಎಂಬ ಅನುಮಾನ ಮೂಡಿಸುತ್ತಿರುವ ಕನ್ನಡ ಮಾಸಿಕ ಪತ್ರಿಕೋದ್ಯಮದಲ್ಲಿ ಹಂಗಾಮ ನಿಜಕ್ಕೂ ಬೆರಗನ್ನು ಮೂಡಿಸಿದೆ.
“ಹೊಸ ಪತ್ರಿಕೆಗಳು ಬಂದಾಗ ನಾವು ಅನುಮಾನದಿಂದ ನೋಡುವುದೇ ಹೆಚ್ಚು. ಅನುಮಾನದ ಜಾಗದಲ್ಲಿ ಸ್ವಲ್ಪ ಪ್ರೋತ್ಸಾಹ, ಅಕ್ಕರೆ ಬೆಳೆಸಿಕೊಂಡರೆ ಅಂದರೆ ಪತ್ರಿಕೆಯನ್ನು ಕೊಂಡು ಓದಿದರೆ ಯಾವ ಪತ್ರಿಕೆಯೂ ಬದುಕುತ್ತದೆ. ಹಾಗೆಯೇ ಬದುಕಿಸಿಕೊಳ್ಳುವಂತೆ ಪತ್ರಿಕೆಗಳೂ ಇರಬೇಕು” ಎಂದ ಪತ್ರಕರ್ತ ಡಾ. ಡಿವಿಜಿ ಮಾತು ಇಂದಿಗೂ ಪ್ರಸ್ತುತ. ಹಂಗಾಮವನ್ನು ನೋಡಿದರೆ ಅನುಮಾನವಂತೂ ಮೂಡುವುದಿಲ್ಲ.
ವೆಂಕಟ್ರಮಣ ಗೌಡರ ಪ್ರಯತ್ನವನ್ನು ಮೆಚ್ಚಿಕೊಂಡರೆ ಕನ್ನಡಕ್ಕೆ ಮತ್ತೊಂದು ಒಳ್ಳೆಯ ಪತ್ರಿಕೆ ಸಿಕ್ಕಂತಾಗುತ್ತದೆ.





0 Comments