ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿ ರಾಮಮೂರ್ತಿಗೆ ಬಿ ವಿ ಕಾರಂತ ಪ್ರಶಸ್ತಿ

ರಂಗಕರ್ಮಿಗಳಿಗೆಲ್ಲ ಮುಂಜಾವದಲ್ಲೊಂದು ಮುದ ನೀಡುವ ಮಜಕೂರು

ಗೋಪಾಲ ವಾಜಪೇಯಿ

ಕರ್ನಾಟಕ ಸರಕಾರ ರಂಗ ಜಂಗಮ ಬಿ. ವಿ. ಕಾರಂತರ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿದ್ದು 2014ನೇ ವರ್ಷದ ಪ್ರಶಸ್ತಿಗೆ ಹಿರಿಯ ಪ್ರಕಾಶ ಸಂಯೋಜಕ, ರಂಗ ನಿರ್ದೇಶಕ ವಿ. ರಾಮಮೂರ್ತಿಯವರು ಭಾಜನರಾಗಿದ್ದಾರೆ. ವೃತ್ತಿ ರಂಗಭೂಮಿಯ ಸಾಧನೆಗಾಗಿ ಗುಬ್ಬಿ ವೀರಣ್ಣ ಪ್ರಶಸ್ತಿ ಹೇಗೋ, ಹಾಗೆ ಹವ್ಯಾಸಿ ರಂಗಭೂಮಿಯಲ್ಲಿಯ ಅನನ್ಯ ಸಾಧನೆಗಾಗಿ ಪ್ರತಿವರ್ಷ ನೀಡಲ್ಪಡುವ ಪ್ರಶಸ್ತಿ ಇದು.

ವಿ. ರಾಮಮೂರ್ತಿ ಅವರು (ಜನನ : 1935) ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವರು. 1952ರಿಂದಲೂ (ತಮ್ಮ ಹದಿನೇಳನೆಯ ವಯಸ್ಸಿನಲ್ಲಿಯೇ) ಬೆಂಗಳೂರಿನ ಹವ್ಯಾಸಿ ರಂಗಭೂಮಿಯ ಎಲ್ಲ ಅಂಗಗಳಲ್ಲೂ ದುಡಿಯುತ್ತ ಆ ಬಗ್ಗೆ ಹೆಚ್ಚಿನ ಒಲವು ಮೂಡಿಸಿಕೊಂಡವರು ರಾಮಮೂರ್ತಿ. ಐಟಿಐ ಯಲ್ಲಿ ಕೆಲಸಕ್ಕೆ ಸೇರಿಕೊಂಡ ಅವರು, ಇದ್ದ ಕೆಲಸವನ್ನು ಬಿಟ್ಟು, 1959ರಲ್ಲಿ ಸ್ಥಾಪನೆಯಾದ National School of Drama (ರಾಷ್ಟ್ರೀಯ ನಾಟಕ ಶಾಲೆ) ಮೊದಲ ವರ್ಷದ ವಿದ್ಯಾರ್ಥಿಯಾಗಿ ಸೇರಿಕೊಂಡರು. ರಾಮಮೂರ್ತಿಯವರೊಂದಿಗೆ ಆ ಸ್ಕೂಲಿನ ಮೊದಲ ಬ್ಯಾಚಿನಲ್ಲಿ ಇದ್ದ ಕನ್ನಡಿಗರೆಂದರೆ ಬಿ.ವಿ. ಕಾರಂತ, ಜಿ. ವಿ. ಶಿವಾನಂದ ಹಾಗೂ ಹುಬ್ಬಳ್ಳಿಯ ಸ್ವಾದಿ ಎನ್ನುವವರು. ಅಬ್ರಾಹಂ ಅಲ್ಕಾಜಿ ನಿರ್ದೇಶಕರಾಗಿದ್ದ ಆ ಸಂಸ್ಥೆಯ ಹೆಸರು ಆಗ ‘ಏಶಿಯನ್ ಸ್ಕೂಲ್ ಆಫ್ ಥಿಯೇಟರ್’ ಎಂದು.
ಅಲ್ಲಿರುವಾಗಲೇ ನಿರ್ದೇಶನ ಮತ್ತು ಪ್ರಕಾಶ ಸಂಯೋಜನೆಯನ್ನು ತಮ್ಮ ಪ್ರಮುಖ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡ ರಾಮಮೂರ್ತಿ, ಉತ್ತೀರ್ಣರಾಗಿ NSDಯಿಂದ ಹೊರಬಂದ ಮೇಲೆ ಹವಾಯಿ ವಿಶ್ವವಿದ್ಯಾಲಯ ಹಾಗೂ ನ್ಯೂಯಾರ್ಕಿನ ಇನ್ಸ್ಟಿಟ್ಯೂಟ್ ಆಫ್ ಬ್ರಾಡ್ವೇ ಥಿಯೇಟರ್ ಟೆಕ್ನಾಲಜಿಯಲ್ಲಿ ವಿಶೇಷ ಅಧ್ಯನ ನಡೆಸಿ, ಪರಿಣತಿ ಪಡೆದರು.ಆಗೆಲ್ಲ ಅಲ್ಲಿಯ ಸುಪ್ರಸಿದ್ಧ ನಾಟಕ ಪ್ರದರ್ಶನಗಳಿಗೆ ರಾಮಮೂರ್ತಿ ರಂಗ ಸಜ್ಜಿಕೆ ಸಂಯೋಜನೆ ಮತ್ತು ಪ್ರಕಾಶ ಸಂಯೋಜನೆಯ ಕಾರ್ಯವನ್ನು ನಿರ್ವಹಿಸಿದರು. ಅಲ್ಲಿಂದ ಮರಳಿದ ಮೇಲೆ, ಇಲ್ಲಿ, ತಮ್ಮ ತಾಯ್ನಾಡಿನಲ್ಲಿ ರಾಮಮೂರ್ತಿ ತೆರಪಿಲ್ಲದೆ ರಂಗಭೂಮಿಯ ಎಲ್ಲ ಅಂಗಗಳಲ್ಲೂ ದುಡಿಯತೊಡಗಿದರು. ಅಲ್ಲದೆ ಅನೇಕ ರಾಷ್ಟ್ರೀಯ ಅಂತಾರಾಷ್ಟ್ರೀಯ ರಂಗಸಂಬಂಧಿ ಸಂಸ್ಥೆಗಳಿಗೆ ಪ್ರಕಾಶ ಸಂಯೋಜನೆಯ ಪರಿಣತರಾಗಿ, ವಿಸಿಟಿಂಗ್ ಪ್ರೊಫೆಸರ್ ಆಗಿ ಸುತ್ತತೊಡಗಿದರು.
ರಾಮಮೂರ್ತಿ ರಾಜ್ಯದ ಒಳ ಹೊರಗೆ ನಡೆಸಿದ ರಂಗ ಶಿಬಿರಗಳು ಅನೇಕ. ಅವೆಲ್ಲ ಕೇವಲ ‘ರಂಗ ತಂತ್ರ’ಕ್ಕೆ ಸಂಬಂಧಿಸಿದಂಥವು. ಅಂತ ಎರಡು ಶಿಬಿರಗಳ (‘ನೇಪಥ್ಯ ಶಿಲ್ಪ’ ಹುಬ್ಬಳ್ಳಿ- 1987, ಮತ್ತು ‘ವಿನ್ಯಾಸ’ ಹುಬ್ಬಳ್ಳಿ- 1988) ಸಂಯೋಜಕನಾಗಿ ಕೆಲಸ ಮಾಡಿದ ನನ್ನದು.

ಈಗ ಎಂಬತ್ತರ ಇಳಿವಯದಲ್ಲಿರುವ ರಾಮಮೂರ್ತಿ ಅದೇ ಉತ್ಸಾಹ, ಸ್ನೇಹಭಾವ ಮತ್ತು ರಂಗಪ್ರೇಮವನ್ನು ಉಳಿಸಿಕೊಂಡ ಮಹನೀಯ. ಅಂದಿನ ಶಿಸ್ತು, ಸಮಯಪಾಲನೆಯನ್ನು ಇಂದಿಗೂ ಮುಂದುವರಿಸ್ಕೊಂದು ಬಂದವರು.
ರಂಗಭೂಮಿಯ ಕೆಲಸ ಎಂದರೆ ಹುರುಪಿನಿಂದ ತೋಳೇರಿಸಿ ನಿಲ್ಲುವ ಈ ಅನನ್ಯ ರಂಗಕರ್ಮಿಗೆ ಮೊಟ್ಟಮೊದಲ ‘ಬಿ. ವಿ. ಕಾರಂತ ಪ್ರಶಸ್ತಿ’ ಸಂದಿರುವುದು ಖುಷಿಯ ವಿಚಾರ.
(ಎರಡನೆಯ ಚಿತ್ರ ಹುಬ್ಬಳ್ಳಿಯಲ್ಲಿ 1987ರಲ್ಲಿ ನಡೆದ ‘ನೇಪಥ್ಯ ಶಿಲ್ಪ’ ಶಿಬಿರದ ಸಂದರ್ಭದ್ದು.)
 

‍ಲೇಖಕರು G

3 May, 2015

3 Comments

  1. nsd bengaluru

    V rammurthy modala bvk award bandiruvudu adhunika rangakarmigalige hemmeya sangati,

  2. prathibha nandakumar

    congrats ramamurthy

  3. narayan raichur

    Belakina bheesshmanige BeeVeeKarantha Prashasti bandaddu balu santasada sangati ;
    Rangakarmugalella sambhramisabekada sangati .
    Narayan Raichur

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading