ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಶಿಷ್ಟ ಮದುವೆಗೆ ಜೊತೆಯಾಗಿ…

ಹಸಿರು ಮದುವೆ

ಮದುವೆಯ ಸಂಕಲ್ಪ :
ವಧುವಾದ ಅನು ಎಂಬ ನಾನು ಮತ್ತು ವರನಾದ ನಂದಿಜೆ ಹೂವಿನ ಹೊಳೆಎಂಬ ನಾನು ಮದುವೆಯಾಗಲು ಪರಸ್ಪರ ಪ್ರಕೃತಿ ಮತ್ತು ಪುರುಷನಂತೆ ಸಹಮತ, ಸಹಬಾಳ್ವೆ, ಪರಸ್ಪರ ಗೌರವಗಳಿಂದ ಜೀವನ ನಡೆಸುವುದಾಗಿ ನಿರ್ಧರಿಸಿದ್ದೇವೆ.

ನಾವಿಬ್ಬರೂ ನಮ್ಮ ನಮ್ಮ ಕುಟುಂಬಗಳ ಸಂಪೂರ್ಣಒಪ್ಪಿಗೆ ಮತ್ತು ವಿಶ್ವಾಸಗಳನ್ನು ಪಡೆದುಕೊಂಡಿದ್ದೇವೆ. ನಾವು ಮದುವೆಯನ್ನು ಗುರು ಹಿರಿಯರ, ಬಂಧುಗಳ, ಸ್ನೇಹಿತರ ಮತ್ತೆಲ್ಲರ ಸಮ್ಮುಖದಲ್ಲಿ ವಿವಾಹ ಸಾಂಗತ್ಯದಲ್ಲಿ ಜೊತೆಯಾಗಲು ಹರ್ಷಿಸುತ್ತೇವೆ.

ನಾವಿಬ್ಬರೂ ಮಾನಸಿಕವಾಗಿ, ದೈಹಿಕವಾಗಿ ಒಬ್ಬರನ್ನೊಬ್ಬರು ಒಪ್ಪಿಕೊಂಡು ನಮ್ಮನ್ನು ಪೊರೆಯುತ್ತಿರುವ ಪ್ರಕೃತಿಯ ಸಾಕ್ಷಿಯಾಗಿ ವಿವಾಹವಾಗುತ್ತಿದ್ದೇವೆ.

ಮದುವೆ ಮತ್ತು ಮಾಂಗಲ್ಯ

ವಧು – ವರರಿಬ್ಬರು ಮಾಂಗಲ್ಯಧಾರಣೆಗೂ ಮೊದಲು ಈ ಮೇಲಿನ ಮಾತುಗಳನ್ನು ಆಡಿಇಬ್ಬರೂ ಸೇರಿ ಗಿಡವೊಂದನ್ನು ನೆಟ್ಟು ನೀರೆರೆಯಬೇಕು. ನಂತರಇಬ್ಬರೂ ಪರಸ್ಪರ ಹೂವಿನ ಹಾರಗಳನ್ನು ಬದಲಿಸಿಕೊಂಡ ಮೇಲೆ ತಾಳಿಯನ್ನು ಕಟ್ಟುವುದು. ಹುಡುಗಿಯೂ ತನ್ನ ಶಕ್ತ್ಯಾನುಸಾರ ಹುಡುಗನ ಕೊರಳಿಗೆ ಯಾವುದೇ ಲೋಹದ ಸರವೊಂದನ್ನು ಹಾಕುವುದು. ಅತಿಥಿಗಳೆಲ್ಲರು ಚಪ್ಪಾಳೆ ತಟ್ಟಿ ಶುಭಕೋರುವುದು. ಹೂವು, ಅಕ್ಷತೆ ಇತ್ಯಾದಿ ಯಾವುದೇ ಪದಾರ್ಥಗಳನ್ನು ಪೋಲು ಮಾಡುವಂತಿಲ್ಲ.

ವಿವಾಹದ ನಂತರ ಈ ಕೆಳಗಿನ ಪ್ರತಿಜ್ಞಾ ವಿಧಿಗಳನ್ನು ದಂಪತಿಗಳಿಬ್ಬರು ಸೇರಿ ವಾಚಿಸುವುದು. ಅಗತ್ಯವಿದ್ದಲ್ಲಿ ಮಾತ್ರ ಪ್ರತಿಜ್ಞಾ ವಿಧಿಗಳನ್ನು ಹೇಳಿಕೊಡಲು ಹಿರಿಯರ, ಸ್ನೇಹಿತರ ಸಹಾಯವನ್ನು ಪಡೆದುಕೊಳ್ಳುವುದು.

ಸಂಕಲ್ಪ ಮುಂದುವರೆಯುವುದು :

• ಗಂಡು ಅಥವಾ ಹೆಣ್ಣು ಎಂಬ ಯಾವುದೇ ಶ್ರೇಷ್ಠತೆ ಮತ್ತು ಕನಿಷ್ಠತೆಗಳಿಲ್ಲದೇ ನಾವಿಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ.
• ನಮ್ಮಿಬ್ಬರ ಕೌಟುಂಬಿಕ ಸಂಬಂಧಗಳು ಮತ್ತು ಸ್ನೇಹ ಸಂಬಂಧಗಳನ್ನು ಗೌರವಿಸುವ ಪ್ರೀತಿಯಿಂದ ಕಾಣಲು ಬೇಕಾದ ಮನಸ್ಥಿತಿಗೆ ಇಬ್ಬರೂ ಬದ್ಧರಾಗಿದ್ದೇವೆ.
• ನಮ್ಮಿಬ್ಬರ ತಂದೆ-ತಾಯಿಯರನ್ನು ಮತ್ತು ಕೌಟುಂಬಿಕವಾಗಿ ನಮ್ಮೊಡನಿರುವ ಅವಲಂಬಿತರನ್ನು ನಮ್ಮ ನಮ್ಮ ಶಕ್ತ್ಯಾನುಸಾರ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತೇವೆ.
• ನಮ್ಮಿಬ್ಬರ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಆಸಕ್ತಿಗೆ ಪೂರಕವಾಗಿ ಪ್ರೋತ್ಸಾಹಿಸುತ್ತೇವೆ ಮತ್ತು ಗೌರವಿಸುತ್ತೇವೆ.
• ಜೀವನ ನಿರ್ವಹಣೆಯಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಆರ್ಥಿಕ ಸುಸ್ಥಿರತೆಯನ್ನು ಎದುರಿಸುವಾಗ ಇಬ್ಬರೂ ಸಮಾನವಾಗಿ ಪಾಲುದಾರರಾಗುತ್ತೇವೆ.
• ಕುಟುಂಬ ನಿರ್ವಹಣೆ, ಮನೆಯ ಹಿರೀಕರು ಹಾಗೂ ಮಕ್ಕಳ ಲಾಲನೆ ಪಾಲನೆಯಲ್ಲಿ ಇಬ್ಬರೂ ಸಮಾನ ಜವಾಬ್ದಾರರಾಗಿರುತ್ತೇವೆ.
• ಸಂಸಾರದಲ್ಲಿ ಅನುಮಾನ, ಅವಮಾನ, ಮಾನಸಿಕ ಹಿಂಸೆ, ವ್ಯಕ್ತಿನಿಷ್ಟ ಅಹಂಕಾರ ಅಥವಾ ಇತ್ಯಾದಿ ಯಾವುದೇ ರೀತಿಯ ಸಂಘರ್ಷಗಳು, ಭಿನ್ನತೆಗಳು ಎದುರಾದರೂ ತಾಳ್ಮೆಯಿಂದ ಮಾತನಾಡಿಕೊಂಡು ಸರಿಪಡಿಸಿಕೊಳ್ಳುತ್ತೇವೆ.
• ಅಗತ್ಯ ಮತ್ತು ಇಷ್ಟಗಳಿಗೆ ಅನುಸಾರ ನಾವಿಬ್ಬರೂ ಹುಟ್ಟಿ ಬೆಳೆದ ನಮ್ಮ ನಮ್ಮ ಮನೆಗಳಿಗೆ ಹೋಗಿ ಬರುವುದಕ್ಕೆಯಾವುದೇ ಅಡ್ಡಿ ಮತ್ತು ತೊಂದರೆಗಳನ್ನು ಉಂಟು ಮಾಡುವುದಿಲ್ಲ. ಎರಡೂ ಮನೆ ಮತ್ತು ಮನಗಳನ್ನು ಗೌರವಿಸುವುದು ಮತ್ತು ಪ್ರೀತಿಸುವುದು ನಮ್ಮಿಬ್ಬರ ಆದ್ಯ ಕರ್ತವ್ಯವೆಂದು ಭಾವಿಸುತ್ತೇವೆ.
• ಯಾರು ಯಾರನ್ನೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಶೋಷಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುತ್ತೇವೆ.
• ಯಾವುದೇ ಧರ್ಮ, ಜಾತಿ ಮತ್ತು ಸಂಪ್ರದಾಯಗಳಿಗೆ ಕಟ್ಟುಬೀಳದ ಪ್ರಕೃತಿಯಂತೆ ಸಾಂಗತ್ಯ ಸಂಬಂಧವನ್ನು ಏರ್ಪಡಿಸಿಕೊಳ್ಳುತ್ತೇವೆ. ಪ್ರಕೃತಿಯಂತೆ ಸಹಜ ಸಮಾನತೆಯನ್ನು ಅಳವಡಿಸಿಕೊಳ್ಳುತ್ತೇವೆ.
• ಲಿಂಗ, ವರ್ಣ ಮತ್ತು ಸಂಪತ್ತಿನ ಶ್ರೇಷ್ಠತೆ ಇವೆಲ್ಲವುಗಳನ್ನು ಮೀರಿದ ಹಸಿರು ತತ್ವ ಮತ್ತು ಭೂಮಿ ತತ್ವದಂತೆ ಜೀವನ ಮಾಡುತ್ತೇವೆ ಎಂದು ಸಂಕಲ್ಪ ಮಾಡುತ್ತೇವೆ.
• ಮದುವೆಯಿಂದ ಯಾರಲ್ಲಿಯೂ ಮಾನಸಿಕ ಕ್ಷೋಭೆ, ಸಂಕಟ, ನೋವು, ತಲ್ಲಣ, ಹಿಂಸೆ ಮತ್ತು ಆತಂಕಗಳು ಉಂಟಾಗದಂತೆ ವಿವಾಹ ಸಂಬಂಧವನ್ನು ಏರ್ಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ.
• ನಮ್ಮಿಬ್ಬರ ಕುಟುಂಬಗಳ ಆಚಾರ, ವಿಚಾರ ಮತ್ತು ಸಕಾರಾತ್ಮಕ ನಂಬಿಕೆಗಳಿಗೆ ನಮ್ಮಿಂದ ತೊಡಕುಂಟಾಗದಂತೆ ಎಚ್ಚರ ವಹಿಸುತ್ತೇವೆ. ಹಾಗೆಯೇ ಕುಟುಂಬದಲ್ಲಿ ತಲೆಮಾರುಗಳಿಂದ ಬಂದಿರುವ ಮೌಢ್ಯ, ವಿಚಾರಹೀನತೆ ಮತ್ತು ಅಜ್ಞಾನವನ್ನು ತೊಡೆದು ಹಾಕಿ ಸಂಸಾರವನ್ನು ಸುಜ್ಞಾನ ಮಾರ್ಗದೆಡೆಗೆ ಕೊಂಡೊಯ್ಯುವ ಕಡೆ ಹೆಜ್ಜೆ ಹಾಕುತ್ತೇವೆ.
• ನಮ್ಮ ನಮ್ಮ ಮನೋದೈಹಿಕ ಆಸಕ್ತಿಗಳನ್ನು ಪರಸ್ಪರ ಇಬ್ಬರೂ ಗೌರವಿಸುತ್ತೇವೆ. ಯಾರು ಯಾರನ್ನೂ ನಿಯಂತ್ರಿಸಿ, ಹಕ್ಕು ಸಾಧಿಸುವುದಿಲ್ಲವೆಂದು ಒಪ್ಪಿರುತ್ತೇವೆ.
• ಏಕಮುಖವಾದ ಆಯ್ಕೆ, ಆಸಕ್ತಿಗಳಿಗೆ ಮಾತ್ರ ಒಪ್ಪುವಂತೆ ಅಥವಾ ನಿರಾಕರಿಸುವಂತೆ ಯಾವುದೇ ಹೇರಿಕೆಗಳನ್ನು ನಾವಿಬ್ಬರೂ ಉಂಟು ಮಾಡುವುದಿಲ್ಲ. ಆಯ್ಕೆ ಮತ್ತು ಆಸಕ್ತಿಯ ವಿಚಾರದಲ್ಲಿ ಪ್ರಕೃತಿಯಂತೆ ಇಬ್ಬರೂ ಸಮಾನರೆಂದು ನಿಮ್ಮೆಲ್ಲರ ಮುಂದೆ ಒಪ್ಪುತ್ತೇವೆ.
• ನಮ್ಮ ವಿವಾಹದಿಂದ ಪ್ರಕೃತಿಗೆ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಹಾನಿಯಾಗದಂತೆ ಸದಾಎಚ್ಚರ ವಹಿಸುತ್ತೇವೆ.

‍ಲೇಖಕರು Admin

21 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading