ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಧಿಯೊಂದಿಗೆ ನನ್ನ ಸಮಾಗಮ

ಅನುಭವಾಮೃತದ ರಸಗಟ್ಟಿಯಂತಿರುವ ಆತ್ಮಕಥೆ

“ವಿಧಿಯೊಂದಿಗೆ ನನ್ನ ಸಮಾಗಮ”

k r umadevi ural

 ಕೆ ಆರ್ ಉಮಾದೇವಿ ಉರಾಳ್

ಸಾರ್ಥಕವಾದ ಸಾಧನೆಯ ಬದುಕು ಬಾಳಿದವರ ಆತ್ಮಕಥೆಗಳು ಓದುಗರಿಗೆ ಬಾಳ ಪಯಣದ ದಾರಿದೀಪಗಳಂತಿರುತ್ತವೆ. ಸಾಧಕರು ತಮ್ಮ ಬದುಕಿನ ವಾಸ್ತವಿಕ ಸಂಗತಿಗಳನ್ನು, ಕಂಡುಂಡ ಅನುಭವಗಳನ್ನು ತಮ್ಮ ಇಳಿ ವಯಸ್ಸಿನ ಮಾಗಿದ ಪಕ್ವತೆಯ ಸಮಚಿತ್ತದಿಂದ ನಿರುಕಿಸಿ, ದಾಖಲಿಸುವ ಸಂಗತಿಗಳು ಸಹೃದಯರಿಗೆ ಅನುಭವಾಮೃತದ ರಸಗಟ್ಟಿಗಳಂತಿರುತ್ತವೆ.

ಡಾ. ವಿ. ಪರಮೇಶ್ವರ ಅವರ ಆತ್ಮಕಥೆ ಇಂಗ್ಲೀಷ್ ನ ‘ಮೈ ಟ್ರಿಸ್ಟ್ ವಿಥ್ ಡೆಸ್ಟಿನಿ’ – ಇದರ ಕನ್ನಡಾನುವಾದದ ‘ವಿಧಿಯೊಂದಿಗೆ ನನ್ನ ಸಮಾಗಮ’ ಸ್ವತಃ ವಿದ್ವಾಂಸ, ಲೇಖಕ, ಕವಿಯಾದ ಅವರ ಸಹೋದರ  ಪ್ರೊ. ವಿ. ನರಹರಿಯವರು ಇದನ್ನು ಕನ್ನಡಿಸಿದ್ದಾರೆ.

1456792_695913027086426_877543966_nಇವರು ತಮ್ಮ ಅಣ್ಣನ ಕುರಿತು ’ಪರಮ ಹೃದಯಿ’ ಎಂಬ ಜೀವನ ಚರಿತ್ರೆಯ ಕೃತಿಯನ್ನು ರಚಿಸಿರುವವರು. ಈ ಕೃತಿಯು ಮೂರು ಮರು ಮುದ್ರಣಗಳನ್ನು ಕಂಡಿದೆ. ವೈದ್ಯಕೀಯ ಕ್ಷ್ರೇತ್ರದಲ್ಲಿ ಜಗತ್ತಿನ ಪ್ರಸಿದ್ಧ ಹೃದ್ರೋಗ ತಜ್ಞರಲ್ಲಿ ಡಾ. ವಿ. ಪರಮೇಶ್ವರ ಒಬ್ಬರು. ಹನ್ನೆರಡು ವೃತ್ತಿ ಸಂಬಂಧಿ, ಪದವಿಗಳು, ದೇಶ ವಿದೇಶಗಳಲ್ಲಿ ಅವರ ಸಾಧನೆಗಾಗಿ ವಿಶೇಷ ಮನ್ನಣೆ ಹೊಂದಿರುವ ಈ ಸಾಧಕನ ಬದುಕಿನ ಯಥಾವತ್ ಚಿತ್ರಣವು ಕೌತುಕದಿಂದ ಓದಿಸಿಗೊಂಡು ಹೋಗುತ್ತದೆ.

ತನ್ನ ಏಳ್ಗೆಗೆ ತಾನೇ ಶಿಲ್ಪಿಯಾದ ಸಾಧಕನನ್ನು ನಾವಿಲ್ಲಿ ನೋಡುತ್ತೇವೆ. ಅವರ ನಿಷ್ಠಾವಂತ, ಪ್ರಾಮಾಣಿಕ ವ್ಯಕ್ತಿತ್ವ, ಸರಳತೆಯ ಪ್ರಾಂಜಲ ಮನೋಭಾವವು ಮಹತ್ವಪೂರ್ಣವಾದ ಸಾಧನೆಗಳನ್ನು ಕೂಡ ವೈಭವೀಕರಿಸದೆ ವಸ್ತುನಿಷ್ಠವಾಗಿ ಯಥಾವತ್ ಚಿತ್ರಣದಂತೆ ಹೇಳಿರುವಲ್ಲಿ ವ್ಯಕ್ತವಾಗಿದೆ. ಒಂದು ಆದರ್ಶ ವ್ಯಕ್ತಿತ್ವವನ್ನು, ಮಾದರಿಯಾದ ಜೀವನ ವಿಧಾನವನ್ನು ಕೃತಿಯು ಅನಾವರಣಗೊಳಿಸುತ್ತಾ ಓದಿನ ಸಂತೃಪ್ತಿ ನೀಡುತ್ತದೆ.

ಸ್ವತಃ ಲೇಖಕರೇ ಹೇಳಿರುವಂತೆ “ ಈ ಪುಸ್ತಕವು ಕೇವಲ ಬರದವರ ವಿಚಾರವಾಗಿಯಷ್ಟೇ ಅಲ್ಲದೆ… ಆತನ ಜೀವಿತದ ಕಾಲ ಮತ್ತು ಮೌಲ್ಯಗಳ ಕುರಿತಾಗಿಯೂ ಇರುತ್ತದೆ”ಎಂಬುದಿಲ್ಲೆ ಸಾಬೀತಾಗಿದೆ. ಈ ಕೃತಿಗೆ ಭಾರತ ಮಾಜಿ ಮುಖ್ಯ ನ್ಯಾಯಾಧೀಶರಾದ ಎಂ.ಎನ್ ವೆಂಕಟಾಚಲಯ್ಯ ಮುನ್ನುಡಿ ಬರೆದಿದ್ದಾರೆ. ಖ್ಯಾತ ವಿಮರ್ಶಕ ಎಲ್. ಎಸ್. ಶೇಷಗಿರಿರಾವ್ ಬೆನ್ನುಡಿ ಬರೆದಿದ್ದಾರೆ. ಮೈಸೂರಿನ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಈ ಕೃತಿಯ ಪ್ರಕಾಶಕರು.

೧೯೩೦ಮೇ ೧೮ ರಂದು ತಂದೆ ತಾಯಿಯರ ಹನ್ನೊಂದು ಮಕ್ಕಳಲ್ಲಿ ಐದನೆಯವರಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ವಿಶ್ವನಾಥಪುರ ಅಗ್ರಹಾರದಲ್ಲಿ ಜನಿಸಿದ ಪರಮೇಶ್ವರರು ಬೆಳೆದದ್ದು ಶೃಂಗೇರಿಯ ತಮ್ಮ ಚಿಕ್ಕಪ್ಪ ಗುರುಮೂರ್ತಿಯವರು ಚಿಕ್ಕಮ್ಮ ಸೀತಮ್ಮನವರ ಮನೆಯಲ್ಲಿ. ಆ ಕಾಲದ ಕುಟುಂಬಗಳಲ್ಲಿ ಪುರುಷ ಪ್ರಾಧಾನ್ಯತೆ ವಿಜೃಂಭಿಸುತ್ತಿದ್ದು ಹೆಂಗಸರ ಸಂವೇದನೆಗಳಿಗೆ ಕುರುಡಾಗಿದ್ದ, ಕಠಿಣವಾದ ಪುರುಷರ ಧೋರಣೆ, ಮನೆಯಲ್ಲಿ ಶಾಲೆಯಲ್ಲಿ ಬೆಳೆವ ಎಳೆಯ ಮನಗಳನ್ನು ಕಟ್ಟಪ್ಪಣೆ, ಕಠಿಣ ಶಿಸ್ತಿನ ನೆಪದಲ್ಲಿ ಬಗ್ಗು ಬಡಿಯುತ್ತಿದ್ದುದರಿಂದಾಗಿ ಅರಳಬೇಕಾಗಿದ್ದೆ ಮಕ್ಕಳ ಮನಸ್ಸು ಮುದುಡಿ ಹೋಗುತ್ತಿದ್ದುದನ್ನು ಈ ಸೂಕ್ಷ್ಮ ಸಂವೇದಿ ಬಾಲಕನ ಮನಸ್ಸು ಗ್ರಹಿಸಿತ್ತು. ಗುಣಾತ್ಮಕ ಬೋಧನೆಯ ಕೇವಲ ಕೆಲವೇ ಶಿಕ್ಷಕರನ್ನು ಕೂಡ ಇವರು ಸ್ಮರಿಸಿದ್ದಾರೆ.

‘ಸಂದು ಹೋದ ದಿನಗಳ ಮಲೆನಾಡು’ ಎಂಬ ಅಧ್ಯಾಯದಲ್ಲಿ ಅಂದಿನ ಮಲೆನಾಡು ಮಲೇರಿಯಾ ಗೂಡಾಗಿದ್ದುದು, ಸಾರಿಗೆ ಸಂಪರ್ಕದ ಕೊರತೆ, ಹಗಲು ರಾತ್ರಿಯೆನ್ನದೆ ಸುರಿವ ನೈರುತ್ಯ ಮುಂಗಾರು, ಸೇತುವೆಗಳೇ ಇರದಾಗ ಹೊಳೆ ಹಳ್ಳಗಳನ್ನು ದೋಣಿಗಳಿಂದ , ಬಾಳೆಮರದ ದಿಂಡುಗಳಿಂದ ದಾಟುತ್ತಿದ್ದುದು; ದೊಡ್ದ ಬೆಳೆಗಾರರು ಶಿವಮೊಗ್ಗದ ಮಂಡಿಗಳಲ್ಲಿ ಅಡಿಕೆ ಸಂಗ್ರಹಿಸಿಟ್ಟರೆ ಚಿಕ್ಕ ಬೆಳೆಗಾರರು ದಲ್ಲಾಳಿಗಳಿಗೇ ಮಾರಿಬಿಡುತ್ತಿದುದು, ಅಪೌಷ್ಟಿಕ ಆಹಾರ ಸೇವನೆಯಿಂದಾಗಿ ಬರುತ್ತಿದ್ದ ಮಲೇರಿಯಾ, ಥೈರಾಯಿಡ್, ಗಾಯ್ಟರ್, ಬಾಲಗ್ರಹ, ಸಿರೋಸಿಸ್ ಮುಂತಾದ ರೋಗಗಳ ಕುರಿತು ಹೇಳುತ್ತಾರೆ.

ಇವರು ಮಾಧ್ಯಮಿಕ ಶಾಲೆಯ ಕೊನೆಯ ವರ್ಷದಲ್ಲಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಇವರ ಶಾಲೆಯ ಮುಂದೆಯೂ ಧರಣಿ ನಡೆದು ಎಲ್ಲ ವಿದ್ಯಾರ್ಥಿಗಳಂತೆ ಇವರೂ ಭಾಗವಹಿಸಿ ತೊಡಲು ಬದಲಿ ಬಟ್ಟೆಗಳಿಲ್ಲದಾಗಲೂ ತೊಟ್ಟ ಬಟ್ಟೆಗಳನ್ನು ಸುಡಲು ಸಿದ್ಧವಿದ್ದ ಸಂದರ್ಭವನ್ನು ನೆನೆದಿದ್ದಾರೆ. ಮೊದಲ ಸ್ವಾತಂತ್ರೋತ್ಸವವು ತಂದ ಭರವಸೆಯ ಮಹಾಪೂರದಲ್ಲಿ ಸಂಘಸಂಸ್ಥೆ ವಿದ್ಯಾಲಯಗಳಲ್ಲದೆ ಮನೆಮನೆಯೂ ಸ್ವಾತಂತ್ರೋತ್ಸವ ಆಚರಿಸಿದುದನ್ನು, ಶಿವಮೊಗ್ಗಾದ ಹೋಟೆಲುಗಳು ಮೈಸೂರುಪಾಕನ್ನು ಶಾಲೆಗಳಿಗೆ ಸಾರ್ವಜನಿಕರಿಗೆ ಹಂಚಿದುದನ್ನು ಅಂದಿನ ತಮ್ಮ ಶಾಲಾ ಮುಖ್ಯೋಪಾಧ್ಯಾಯರ ಭಾಷಣವನ್ನು ನೆನಪಿಸಿಕೊಂಡಿದ್ದಾರೆ.

ತಮ್ಮ ಮಾಧ್ಯಮಿಕ ಶಾಲಾ ಶಿಕ್ಷಣ ಮುಗಿದ ನಂತರ ಪ್ರೌಢ ಶಾಲಾ ಓದಿನ ಕನಸನ್ನು ಕೂಡ ಕಾಣಲಾರದ ಪರಮೇಶ್ವರರು ತಮ್ಮ ತಂದೆಯವರ ಅರ್ಚಕ ವೃತ್ತಿ ನಿರ್ವಹಿಸಲು ವಿಶ್ವನಾಥಪುರದಲ್ಲಿ ವೇದಗಳ ವ್ಯಾಸಂಗ ಪ್ರಾರಂಭಿಸುತ್ತಾರೆ. ಮಂತ್ರಭಾಗ ತಂತ್ರಭಾಗಗಳನ್ನು ಕಲಿತು ಪೌರೋಹಿತ್ಯಕ್ಕೆ ಸಿದ್ಧರಾಗುತ್ತಾರೆ. ಇದೇ ಸಂದರ್ಭದಲ್ಲಿ ಕೊಪ್ಪಾದಲ್ಲಿ ಸರ್ಕಾರಿ ಹೈಸ್ಕೂಲು ಪ್ರಾರಂಭವಾಗಿ ಇವರು ಅಲ್ಲಿಗೆ ಸೇರಿ ಎರಡು ವರ್ಷಗಳು ಅಲ್ಲಿ ವ್ಯಾಸಂಗ ಮಾಡುತ್ತಾರೆ. ಅಷ್ಟರಲ್ಲಿ ಶಿವಮೊಗ್ಗಾದ ಐಪಿಎಸ್ ನಾಗಪ್ಪಯ್ಯ ಎಂಬ ಉದಾರ ಮನೋಭಾವದ ಸಹೃದಯರೊಬ್ಬರ ದೃಷ್ಟಿಗೆ ಬಿದ್ದು, ಅವರ ನೆರವಿನಿಂದ ತಮ್ಮ ಮೂರನೆಯ ವರ್ಷದ ಓದನ್ನು ಶಿವಮೊಗ್ಗದಲ್ಲಿ ಪ್ರಾರಂಭಿಸುತ್ತಾರೆ. ಶಿವಮೊಗ್ಗ ಶಾಲೆಯ ಮೇಲ್ಮಟ್ಟದ ಉತ್ತಮ ಬೋಧನೆಯನ್ನು, ಅಲ್ಲಿನ ತಮ್ಮ ಗುರುಗಳನ್ನು ನೆನೆದಿದ್ದಾರೆ. ಗಾಂಧಿ ತತ್ವಾನುಯಾಯಿ, ಸಾಮಾಜಿಕ ಚಿಂತನೆಯ ಕಾಸರವಳ್ಳಿ ರಾಮಕೃಷ್ಣರಾಯರ ಮಾರ್ಗದರ್ಶನ ತಮಗೆ ದೊರೆತುದನ್ನು ಸ್ಮರಿಸಿದ್ದಾರೆ.

ನುರಿತ ರಾಜಕಾರಿಣಿ, ತಿಲಕರ ಅಭಿಮಾನಿಯಾಗಿದ್ದು ಗಾಂಧಿ ಅನುಯಾಯಿಯಾಗಿದ್ದ ವೀರಕೇಸರಿ ಸೀತಾರಾಮ ಶಾಸ್ತ್ರಿಯವರು ಸಂಸ್ಕೃತದ ವಿದ್ವಾಂಸರು ಲೇಖಕರು ಆಗಿದ್ದವರು. ಐತಿಹಾಸಿಕ ಹಾಗೂ ಸಾಮಾಜಿಕ ಕಾದಂಬರಿಗಳನ್ನು ಬರೆದವರು. ಇವರ ಲೇಖನಗಳು ಪಠ್ಯಪುಸ್ತಕವಾಗಿಯೂ ನಿಗದಿಯಾಗಿದ್ದರೆ, ಕೆಲವು ಕಾದಂಬರಿಗಳು ಚಲನಚಿತ್ರವಾಗಿದ್ದವು. ಅನ್ಯಾಯಕ್ಕೆ ಪ್ರತಿಭಟಿಸುತ್ತಿದ್ದ ಇವರ ಬಳಿ ಸಹಾಯ ಯಾಚಿಸಿ ಬರುವ ಯಾರಿಗೇ ಆದರೂ ನಿಃಸ್ವಾರ್ಥತೆಯಿಂದ  ಪ್ರತಿಕ್ರಯಿಸಿ ಪರರಿಗೆ ಹೋರಾಟಕ್ಕೆ ಕೂಡ ಸಿದ್ಧವಾಗುತ್ತಿದ್ದ ಮಹಾನ್ ಚೇತನ ಅವರು. ಕೊನೆಯಲ್ಲಿ ತಾವು ದೃಷ್ಟಿಹೀನರಾದಾಗ ಕೂಡ ಕಿಂಚಿತ್ತೂ ಎದೆಗುಂದದೆ ಪರರಿಗೆ ಸಹಾಯ ಮಾಡುವುದು, ಬರೆಯುವುದನ್ನು ಎಂದಿನಂತೆಯೇ ಮುಂದುವರೆಸಿಕೊಂಡು ಬಂದವರು.

10649861_893433864001007_7022949424221994846_nಪರಮೇಶ್ವರ್ ರವರು  ಮೆಡಿಕಲ್ ವಿದ್ಯಾಭ್ಯಾಸಕ್ಕಾಗಿ ಸೇರಿಕೊಳ್ಳಲು  ವೀರಕೇಸರಿಯವರದು ಪ್ರಧಾನ ಪಾತ್ರವಾಗಿರುತ್ತದೆ.  ವೀರಕೇಸರಿಯವರಿಗೆ ಇವರು ತಮ್ಮಮಕ್ಕಳಲ್ಲಿ ಒಬ್ಬರಂತಾಗಿಬಿಡುತ್ತಾರೆ. ಪರಮೇಶ್ವರ್ ರವರು ವೀರಕೇಸರಿಯವರ ನಿಃಸ್ಪೃಹತೆಯನ್ನು, ಸಮಾಜಕ್ಕಾಗಿ ಮುಡಿಪಾಗಿಟ್ಟಂತಹ ಅವರ ತ್ಯಾಗಮಯ ವ್ಯಕ್ತಿತ್ವವನ್ನು, ಅವರ ರಾಜಕೀಯ ಸಾಮಾಜಿಕ ಆರ್ಥಿಕಾಭಿವೃದ್ಧಿಯ ಕುರಿತಾದ ಚಿಂತನಪರ ದೃಷ್ಟಿಕೋನವನ್ನು, ಅವರ ಕೌಟುಂಬಿಕ ಸಾಮರಸ್ಯವನ್ನು ಸುದೀರ್ಘವಾಗಿ ದಾಖಲಿಸಿದ್ದಾರೆ.

ವೀರಕೇಸರಿಯವರ ಒಡನಾಟದ ಎಸ್. ಕೆ. ವೆಂಕಟರಂಗ ಅಯ್ಯಂಗಾರ್ಯರು ಅನ್ಯಾಯಕ್ಕೆ ಒಳಗಾದವರ ಪರವಾಗಿ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸುತ್ತಿದ್ದುದರಿಂದ ರಿಟ್ ಅಯ್ಯಂಗಾರ್ಯರೆಂದೇ ಹೆಸರಾಗಿದ್ದರು. ಕನ್ನಡ ಸಾಹಿತ್ಯದ ಬಗೆಗೆ ಆಳವಾದ ಜ್ಞಾನವನ್ನು ಹೊಂದಿದ್ದ ಪುರಾತನ ಜೈನ ಸಾಹಿತ್ಯ ಕೃತಿ ’ಸಿರಿ ಭೂ ವಲಯ’ದ ಕಗ್ಗಂಟನ್ನು ಬಿಡಿಸಿದ್ದ ಕರ್ನಮಂಗಲಂ ಶ್ರೀಕಂಠಯ್ಯ, ಕಾದಂಬರಿಕಾರ ರಾಮಮೂರ್ತಿ ಇವರೆಲ್ಲರ ಪ್ರಭಾವ ಪರಮೇಶ್ವರ ಭಟ್ಟರ ಮೇಲಾಗುತ್ತದೆ. ಚಿರಂತರ ಮೌಲ್ಯಗಳ ಪ್ರತೀಕದಂತಿದ್ದ ಇಂತಹ ಹಲವಾಷೆ  ವ್ಯಕ್ತಿಗಳ ಚಿತ್ರಣವನ್ನು ಕೃತಿಯು ಕಟ್ಟಿಕೊಡುತ್ತದೆ.

ಎಂ.ಬಿ.ಬಿ.ಎಸ್ ನಂತರ ಗುಂಟೂರಿನಲ್ಲಿ ಎಂ.ಡಿ.ಪರೀಕ್ಷೆ ತೆಗೆದುಕೊಂಡು, ಅದಕ್ಕಾಗಿ ಶ್ರದ್ಧೆಯಿಂದ ಅಧ್ಯಯನ ಮಾಡಿ, ಪ್ರಾಧ್ಯಾಪಕರ ಮೆಚ್ಚುಗೆ ಗಳಿಸಿ, ಪರೀಕ್ಷೆಯನ್ನು ಉತ್ತಮವಾಗಿಯೇ ಬರೆದಿರುವಾಗಲೂ ಫಲಿತಾಂಶ ಬಂದಾಗ ಇವರು ಉತ್ತೀರ್ಣರಾಗುವುದಿಲ್ಲ. ಎಂ.ಡಿ. ಪದವಿ ನೀಡಲು ಪ್ರಭಾವ ಬೀರುವ ಪರೀಕ್ಷೇತರ ಹಲವಾರು ಅಂಶಗಳಿರುತ್ತವೆಂಬುದು ಆಗ ಅವರ ಅರಿವಿಗೆ ಬರುತ್ತದೆ. ಈ ಕಹಿ ಅನುಭವದ ಹೊರತಾಗಿಯೂ ಅಲ್ಲಿನ ತೆಲುಗು ಭಾಷೆ ಕಲಿತು ಅಲ್ಲಿ ಉತ್ತಮ ಸ್ನೇಹಿತರನ್ನು ಗಳಿಸಿದ ಫಲವಾಗಿ ಇಂದಿಗೂ ಅಲ್ಲಿನ ಹಲವಾರು ವೈದ್ಯಕೀಯ ಸಮ್ಮೇಳನಗಳಿಗೆ ಹೋಗಿ ಉಪನ್ಯಾಸ ನೀಡುತ್ತಿರುವುದರ ಕುರಿತು ಅಭಿಮಾನದಿಂದ ಹೇಳಿಕೊಂಡಿದ್ದಾರೆ.

ಶ್ರೀಮಂತಿಕೆಯೊಂದೇ ಜೀವನದ ಯಶಸ್ಸಿಗೆ ಅರ್ಹತೆಯೆಂದು ಎಂದೂ ನಂಬಿದವರಲ್ಲ ಡಾ.ಪರಮೇಶ್ವರ್ ರವರು. ಕೊಪ್ಪದ ಶ್ರೀಮಂತ ಪ್ರತಿಷ್ಠಿತ ಆರೂರು ಕುಟುಂಬದ ಡಾ. ನಳಿನಿಯವರು ವಿವಾಹ ವಯಸ್ಕರಾದಾಗ ಡಾ. ಪರಮೇಶ್ವರ್ ರವರೇ ಸೂಕ್ತ ವರ ಎಂದು ಆರೂರು ಕುಟುಂಬದವರು ಭಾವಿಸುತ್ತಾರೆ. ಆದರೆ ಡಾ. ಪರಮೇಶ್ವರ್ ರವರು ಸಾಕಷ್ಟು ಕಾಲಾವಕಾಶ ತೆಗೆದುಕೊಂಡು ಚಿಂತನ ಮಂಥನ ನಡೆಸಿ ಕೊನೆಗೂ ಸಮ್ಮತಿಸಿದ ನಂತರ ಈರ್ವರೂ ವಿವಾಹ ಬಂಧನದಲ್ಲಿ ಒಂದಾಗುತ್ತಾರೆ. ಅಶೋಕ್, ಅರ್ಪಣಾ ಮತ್ತು ಅಶ್ವಿನ್ ಎಂಬ ಮೂವರು ಮಕ್ಕಳೊಂದಿಗಿನ ಅನುರಾಗಪೂರಿತ ಕುಟುಂಬ ಇವರದು. ಎಂ. ಡಿ. ಡಿ. ಜಿ.ಒ. ಪದವಿಯ ಸ್ತ್ರೀ ರೋಗ ತಜ್ಞೆಯಾಗಿರುವ ಪತ್ನಿ ಡಾ. ನಳಿನಿಯವರು ಪತಿಯ ಉತ್ಕರ್ಷಕ್ಕೆ ಸದಾ ಊರುಗೋಲಾಗಿದ್ದವರು.

ವಿವಾಹಾನಂತರ ಯು.ಕೆ.ಯಲ್ಲಿ ಯಶಸ್ವಿಯಾಗಿ ಎಂ.ಆರ್.ಸಿ.ಪಿ.ಪದವಿಯನ್ನು ಪೂರೈಸುತ್ತಾರೆ. ಇವರ ನಿಷ್ಠೆ, ಶ್ರದ್ಧೆ, ಮೇಧಾವಿತನ, ದಕ್ಷತೆ ಇಂಗ್ಲೆಂಡಿನ ಹಲವರು ಪರಿಣಿತ ವೈದ್ಯರ ಗಮನ ಸೆಳೆಯುತ್ತದೆ. ಇವರಿಗೆ ಇಲ್ಲಿನ ವೃತ್ತಿಪರ ಕಾರ್ಯಕ್ಷೇತ್ರದಲ್ಲಿ ಸಂಪೂರ್ಣ ಸಹಕಾರ ಸಿಗುತ್ತದೆ. ಆದರೆ ಅಲ್ಲಿನ ಸಮಾಜವು ಆಗ್ನೇಯ ಏಷ್ಯಾದವರನ್ನು ’ವರ್ಣ’ದವರೆಂದು ಪರಿಗಣಿಸುತ್ತಿದ್ದುದು ಸ್ವಾಭಿಮಾನದ ಮನೋಭೂಮಿಕೆಯ ಸೂಕ್ಷ್ಮತೆಯುಳ್ಳ ಇವರಿಗೆ ಸಹ್ಯವಾಗಲಿಲ್ಲ. ತನ್ನ ನೆಲೆ ಭಾರತದಲ್ಲಿ ಎಂದು ದೃಢವಾಗಿ ನಿರ್ಧರಿಸಿ ಬೆಂಗಳೂರಿಗೆ ಹಿಂದಿರುಗುತ್ತಾರೆ.

ಐ. ಎಂ. ಎ. ಬೆಂಗಳೂರು ಶಾಖೆಯ ಗೌರವ ಕಾರ್ಯದರ್ಶಿಯಾಗಿ ಸಂಶೋಧನೆ ಮತ್ತು ಸಾಮಾಜಿಕ ಸೇವೆಗಳ ಮೂಲಕ ವೈದ್ಯಕೀಯ ವೃತ್ತಿಯ ಸ್ಥಾನಮಾನಕ್ಕೆ ಕೊಡುಗೆ ನೀಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.  “ಮಧುಮೇಹ ಪತ್ತೆಯ ಚಳವಳಿ ಕಾರ್ಯಕ್ರಮ” ಅಂತಹ ಕಾರ್ಯಕ್ರಮಗಳಲ್ಲೊಂದು. ಇವು ಅದೆಷ್ಟು ಜನ ಸಂವೇದಿಯಾಗಿ ಪ್ರಖ್ಯಾತವಾದವೆಂದರೆ, ಡಿ.ವಿ.ಜಿ.ಯವರು ಈ ಕಾರ್ಯಕ್ರಮದ ಧ್ಯೇಯೋದ್ದೇಶವನ್ನು ಸ್ವತಃ ಇವರಿಂದಲೇ ತಿಳಿದುಕೊಳ್ಳುತ್ತಾರೆ.

dr v parameshvarಮರುದಿನವೇ ಆರೋಗ್ಯ ಸಚಿವರಿಗೆ ಇದರ ಮಹತ್ವವನ್ನು ತಿಳಿಸಿ ಇದನ್ನು ಬೆಂಬಲಿಸಲು ಒತ್ತಾಯಿಸುತ್ತಾರೆ. ಅದೇ ರೀತಿ ಡಾ|| ವಿ.ಕೃ. ಗೋಕಾಕರು “ಎಲ್ಲರೂ ಏಕ ರೀತಿಯಲ್ಲಿ ಚಿಂತನೆ ಮಾಡುತ್ತಿದ್ದರೆ ಹೊಸದು ಹುಟ್ಟುವುದು ಹೇಗೆ? ಡಾ.ವಿ. ಪರಮೇಶ್ವರರವರು ಪ್ರವಾಹದ ವಿರುದ್ಧವೇ ಈಜುವ ಸಾಹಸ ಮಾಡಿದರು. ಆದ್ದರಿಂದಲೇ ಇಂತಹ ಬೃಹತ್ ಸರ್ವೇಕ್ಷಣವನ್ನು ಯಶಸ್ವಿಯಾಗಿ ಪೂರೈಸಿ ಸಂಶೋಧನಾಧ್ಯಯನಕ್ಕೆ ಕೊಡುಗೆ ನೀಡಿದ್ದಾರೆ.” ಎಂದರು. ಮುಂದೆ ಐ. ಎಂ. ಎ.ಯ ರಾಷ್ಟ್ರೀಯ ಅಧ್ಯಕ್ಷರೂ ಆಗಿ ಗಮನಾರ್ಹ ಸೇವೆ ಸಲ್ಲಿಸುತ್ತಾರೆ.

ಭಾರತೀಯ ಫಿಸಿಷಿಯನ್ನರ ಸಂಘದ ಅಧ್ಯಕ್ಷರಾಗಿ, ಭಾರತೀಯ ಫಿಸಿಷಿಯನ್ನರ ಕಾಲೇಜಿನ ಡೀನ್ ಆಗಿ ದಕ್ಷತೆಯಿಂದ ನಿರ್ವಹಿಸಿದ್ದಾರೆ. ವಿಶ್ವ ವೈದ್ಯಕೀಯ ಸಂಸ್ಥೆಗೂ ಮಹತ್ವದ ಕೊಡುಗೆ ನೀಡಿದ್ದಾರೆ. ವೈದ್ಯಕೀಯ ಕ್ಷೇತ್ರದ ಇನ್ನೂ ಹಲವು ಸಂಘ ಸಂಸ್ಥೆಗಳ ಚುಕ್ಕಾಣಿ ಹಿಡಿದರು. ಬೆಂಗಳೂರಿನ ಶಾರದಾ ಧನ್ವಂತರಿ ಹಿಮೋಡಯಾಲಿಸಿಸ್ ಕೇಂದ್ರ ಸ್ಥಾಪಿಸಿದರು. ಪ್ರತಿಷ್ಠಿತ ಡಾ. ಬಿ. ಸಿ. ರಾಯ್ ಪ್ರಶಸ್ತಿಯಲ್ಲದೆ, ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವೈದ್ಯಕೀಯ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.

ಹೃದಯ ಬೇನೆ ಮತ್ತು ಹೃದಯಾಘಾತ, ಮಧುಮೇಹ ರೋಗ, ಮೆಡಿಕಲ್ ಎಥಿಕ್ಸ್ ಮುಂತಾದ ವೈದ್ಯಕೀಯ ಕೃತಿಗಳನ್ನು ರಚಿಸಿದ್ದಾರೆ. ‘ದ ಗುಡ್ ಡಾಕ್ಟರ್’ ಎಂಬ ಸ್ಮರಣ ಸಂಚಿಕೆ ಅವರ ಕುರಿತಾದ ಅಭಿನಂದನಾ ಗ್ರಂಥ. ಒಬ್ಬ ಕನ್ಸಲ್ಟೆಂಟ್ ಫಿಸಿಷಿಯನ್ನರಾಗಿ ಹಾಗೂ ಹೃದ್ರೋಗ ತಜ್ಞರನ್ನಾಗಿ ಡಾ. ಪರಮೇಶ್ವರರು ತಾರತಮ್ಯರಹಿತ ಸೇವೆ, ಮಾನವಾನುಕಂಪ ಅವರ ಜ್ಞಾನವನ್ನು, ವೃತ್ತಿ ಕುಶಲತೆಯನ್ನು ಚಿರಂತನವಾಗಿಸಿವೆ. ಇಷ್ಟಾಗಿಯೂ ತಮ್ಮ ಸಾಧನೆಗೆ, ವೃತ್ತಿ ಪರಿಣಿತಿಗೆ ಸಮಾಜವೇ ಕಾರಣ, ನಾನು ಪಡೆದದ್ದಕ್ಕಿಂತ ಹೆಚ್ಚಿನದನ್ನೆ ಸಮಾಜವು ನನಗೆ ನೀಡಿದೆ ಎಂಬ ಅವರ ಸಹಜ ವಿನಯವು ಅವರ ವ್ಯಕ್ತಿತ್ವದ ಶೋಭೆ ಹೆಚ್ಚಿಸಿದೆ. ಒಬ್ಬ ಸಾಧಕನ ಜೀವನವನ್ನು ಕಣ್ಣ ಮುಂದೆ ಚಿತ್ರಿಸಿ ಮನಸ್ಸನ್ನು ಪ್ರೇರೇಪಿಸುವ ಈ ಕೃತಿ ಎಲ್ಲರೂ ಓದಬೇಕಾದುದು.

‍ಲೇಖಕರು Admin

10 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading