ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಧಾನಸೌಧ ಕೆಡವಿ ರೆಸಾರ್ಟ್ ಕಟ್ಟಿಸಲು ಚಿಂತನೆ!….

-ಅನ್ವೇಷಿ

ನಡೆ-ನುಡಿಯನ್ನು ತನ್ನದೇ ಆದ ವ್ಯಂಗ್ಯ ನೋಟದಿಂದ ನೋಡುವ ಬ್ಲಾಗ್-ಬೊಗಳೆ ರಗಳೆ.
ಕರ್ನಾಟಕದ ಈ ದಿನಗಳ ವಿದ್ಯಮಾನವನ್ನು ಈ ಬ್ಲಾಗ್ ನೋಡಿದ ರೀತಿ ಇಲ್ಲಿದೆ.
(ಬೊಗಳೂರು ಅರಾಜಕೀಯ ಬ್ಯುರೋದಿಂದ)
ಬೊಗಳೂರು, ಅ.11-ಕರ್ನಾಟಕದ ರೆಸಾರ್ಟ್ ರಾಜಕಾರಣ ಹೊಸ ತಿರುವು ಪಡೆದುಕೊಂಡಿದ್ದು, ತಮಗೆ ವಿಧಾನಸಭೆಯೇ ಬೇಡ ಎಂದು ಎಲ್ಲ ಶಾಸಕರೂ ಪಕ್ಷಾತೀತವಾಗಿ ಪ್ರತಿಭಟನೆ ಮಾಡಲಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಬೊಗಳೂರು ವಿಶೇಷ ತನಿಖಾ ತಂಡವು ಮಾಟ ಮಂತ್ರ ಬ್ಯೂರೋದ ಸಹಾಯ ಪಡೆದು ವಿಧಾನಸಭೆಯನ್ನು ಪರಿಶೀಲಿಸಲಾಗಿ, ವಿಧಾನಸಭೆಯ ಸುತ್ತಲೂ ಕೆಂಪು ಕೆಂಪು ರಕ್ತ, ಕುಂಕುಮ, ನಿಂಬೆಹಣ್ಣು, ಗೊಂಬೆ, ಆರ್ಯಭಟ ಉಪಗ್ರಹವನ್ನು ಹೋಲುತ್ತಿರುವಂತೆ ನಿಂಬೆ ಹಣ್ಣಿಗೆ ಮೊಳೆ ಚುಚ್ಚಿ ಮಾಡಿದ ತಂತ್ರಗಳು… ಇವುಗಳೆಲ್ಲವೂ ವಿಧಾನಸಭವನ್ನು ನಿರ್ನಾಮ ಮಾಡುವ ಸಂಚು ಎಂದು ಪತ್ತೆ ಹಚ್ಚಲಾಗಿದೆ. ಇತ್ತೀಚೆಗೆ ಬೆಂಗಳೂರಿನ ಹೊರವಲಯ, ಗೋವಾ, ಪುಣೆ, ಕೊಚ್ಚಿ ಇತ್ಯಾದಿಗಳೇ ಶಾಸಕರನ್ನು ಹೆಚ್ಚಾಗಿ ಸೆಳೆಯುತ್ತಿರುವುದರಿಂದ, ಬೆಂಗಳೂರಿನಲ್ಲಿ ವಿಧಾನಸೌಧವನ್ನು ಒಡೆದು ಅಲ್ಲಿ ರೆಸಾರ್ಟ್ ಕಟ್ಟಿಸಬೇಕು, ಸಂಪುಟ ಸಭೆ, ವಿಧಾನಸಭೆ ಅಧಿವೇಶನ ಎಲ್ಲವೂ ಈ ರೆಸಾರ್ಟ್‌ಗಳಲ್ಲೇ ನಡೆಯಬೇಕು ಎಂದು ಶಾಸ-ಕರುಗಳೆಲ್ಲರೂ ಬೊಗಳೂರು ಬ್ಯುರೋದ ಮೂಲಕ ಒತ್ತಾಯಿಸಿದ್ದಾರೆ. ಈ ಮಧ್ಯೆ, ಮತ್ತೊಂದು ಮೂಲವೊಂದು ಹೊಸ ಐಡಿಯಾವನ್ನು ಕೊಟ್ಟಿದ್ದು, ಅಷ್ಟೆಲ್ಲಾ ಐಷಾರಾಮಿ ರೆಸಾರ್ಟ್‌ಗಳನ್ನು ಕಟ್ಟಿಸಲು ಸಾಕಷ್ಟು ದುಡ್ಡು ಬೇಕಾಗುತ್ತದೆ. ಈಗಾಗಲೇ ರೆಸಾರ್ಟ್‌ಗಳಿಗೆ ತಿರುಗಾಡಲು ವಿಮಾನದ ಖರ್ಚು, ರೆಸಾರ್ಟ್ ಖರ್ಚು ಎಂದೆಲ್ಲಾ ರಾಜ್ಯದ ಖಜಾನೆ ಖಾಲಿಯಾಗಿದೆ. ಇನ್ನು ಕೊಡಲು ಜನರ ಬಳಿ ಹಣವೂ ಇಲ್ಲ. ಹೀಗಾಗಿ, ಗೋವಾವನ್ನೇ ಅಥವಾ ಪುಣೆಯ ಲೋನಾವಲದಲ್ಲಿರುವ ಆಂಬಿವ್ಯಾಲಿ ರೆಸಾರ್ಟ್ ಅನ್ನೇ ಬೆಂಗಳೂರಿನಲ್ಲಿ ತಂದು ಇಟ್ಟರೆ ಎಲ್ಲ ಸಮಸ್ಯೆಗಳೂ ಪರಿಹಾರವಾದಂತೆಯೇ ಎಂಬ ಅಮೂಲ್ಯ ಸಲಹೆ ನೀಡಿದ್ದಾರೆ. ಈ ಸಲಹೆಯ ಪರಿಶೀಲನೆಗೆ ಮುಖ್ಯಕಂತ್ರಿಗಳು ಬೊಗಳೂರು ಏಕ ಸದಸ್ಯ ಬ್ಯುರೋದ ಸಮಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿದ್ದು, ಸಮಿತಿಯ ಸದಸ್ಯರಿಗೆ ತಲಾ ಕೋಟಿ ಕೋಟಿ ಕೊಡಲಾಗುತ್ತಿದೆಯಾದರೂ, ‘ಕುದುರೆ ವ್ಯಾಪಾರ’ವೇನೂ ನಡೆಯಲಿಲ್ಲ ಎನ್ನುತ್ತಾ, ಈ ಸಮಿತಿ ಸದಸ್ಯತ್ವವನ್ನು ಒಪ್ಪಿಕೊಳ್ಳಲಾಗಿದೆ ಎಂದು ಸೊಂಪಾದ-ಕರುಗಳು ಸ್ಪಷ್ಟಪಡಿಸಿದ್ದಾರೆ. ಈ ನಡುವೆ, ಇತ್ತೀಚೆಗೆ ಬಂದಿರುವ ವರದ್ದಿಗಳ ಪ್ರಕಾರ, ದೇಶದ ಎಲ್ಲ ರೆಸಾರ್ಟ್‌ಗಳು ‘ರೆಸಾರ್ಟ್ ರಾಜಕೀಯ ಪ್ಯಾಕೇಜ್’ಗಳನ್ನು ರಾಜಕೀಯ ಪಕ್ಷಗಳ ಮುಖಂಡರಿಗೆ ನೀಡುತ್ತಿದ್ದು, ಭರ್ಜರಿ ಡಿಸ್ಕೌಂಟ್, ಹಬ್ಬದುಡುಗೊರೆ ಇತ್ಯಾದಿಗಳಿವೆ ಎಂದು ನಮ್ಮ ಜಾಹೀರಾತುದಾರ ಬಾತ್‌ಮೀದಾರರು ಹೇಳಿದ್ದಾರೆ.]]>

‍ಲೇಖಕರು avadhi

14 October, 2010

4 Comments

  1. ಜಿ೦ಕೆ ಸುಬ್ಬಣ್ಣ, ಪುತ್ತೂರು

    ನಿನ್ನೆ ಹಲವು ಕಾ೦ಗ್ರೆಸ್ ಶಾಸಕರು ಹೈಕಮಾ೦ಡ್ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಹಾಗಾಗಿ ಸಾಮೂಹಿಕ ರಾಜಿನಾಮೆ ಕುರಿತು ಚಿ೦ತನೆ ಮಾಡುತ್ತಿದ್ದೇವೆ ಎ೦ದು ಜಾರಕಿಹೊಳಿ ನೇತೃತ್ವದಲ್ಲಿ ಹೇಳಿದ್ದುದು ಟಿವಿಯಲ್ಲೆಲ್ಲ ಪ್ರಸಾರ ಆಗಿತ್ತು, ಆಗ ಹಾಲೀ ಮುಖ್ಯಮ೦ತ್ರಿಗಳು ಅವರನ್ನು ಸ್ವಾಗತಿಸಿದರು ಎ೦ದು ಕುಹಕಿಯೊಬ್ಬ ಹೇಳಿದ್ದು ನೆನಪಾಯಿತು !

  2. ಸೋಮೇಶ ಉಪ್ಪಾರ

    ಬೊಗಳೆ ರಗಳೆ ಉತ್ತಮ ವ್ಯಂಗ್ಯವರದಿಇಯಾಗಿದೆ ಆದರೂ ಈ ವರದ್ದಿಯ ಪತ್ರಿಕೆಯನ್ನ ಮಾನ್ಯ ರಾಜ್ಯಪಾಲರಿಗೂ ರಾಷ್ಟ್ರಪತಿಗಳಿಗೂ ತಲುಪಿಸಲು ಕೋರಲಾಗಿದೆ.
    ಸೋಮೇಶ ುಪ್ಪಾರ

  3. Mahendra

    ೨ ಸಾವಿರ ವರ್ಷಗಳ ಹಿಂದೆ ರೋಮ್ ಚಕ್ರಾದಿಪತ್ಯದ ಹುಚ್ಚು ಚಕ್ರವರ್ತಿ ನೇರೊ ಮನೋಹರವಾದ ರಾಜಧಾನಿಯನ್ನು ಬೆಂಕಿಗೆ ಆಹುತಿಮಾಡಿ ಹೊಸ ಪಟ್ಟಾಣವನ್ನು ಕಟ್ಟಿ ನಿರ್ಮಿಸಲು ಮಾಡಿದ ಮೂರ್ಖ ಯತ್ನ ಙ್ಞಾಪಕಕ್ಕೆ ಬರುವುದು – ಕರ್ನಾಟಕ ರಾಜಕೀಯರ ಯೋಚನೆ. ವಿದಾನಸೌಧವನ್ನು ನಾಶ ಮಾಡುವ ಯೋಚನೆ!!! ಅದೆಂಥ ದಾರ್ಢ್ಯ ಹುಚ್ಚು. ಅವರೆಲ್ಲರ ಮೆದುಳು ಅರ್ಧ ಕಡಿದು ಹಾಕಿರುವುದೆ?
    ಜೇಮ್ಸ್ ಬಾಂಡ್ ೦೦೭ ಸರಾವಳಿಯಲ್ಲಿ ಹುಚ್ಚಾಟದಿಂದ ಮೆರೆಯುವ ದುಷ್ಟನಾಯಕ ಇಡೀ ವಿಶ್ವದಲ್ಲಿ ಎಲ್ಲಜನವನ್ನು ಕೊಂದು ಇಡೀ ಹೊಸದಾದ ಚುರುಕು ಜನಾಂಗವನ್ನು ನಿರ್ಮಾಣಿಸಲು ಪ್ರಯಸಿದ ಹೋಲಿಕೆ ಙ್ಞಾಪಕಕ್ಕೆ ಬರುವುದು.
    ಇಡೀ ಭಾರತ ದೇಶದಲ್ಲಿ ವಿದಾನಸೌಧದಂತ, ಬ್ರಿತೀಷರ ಅಥವ ಮುಸ್ಲಿಮ್ ಚಕ್ರವರ್ತಿಗಳನ್ನು ಬಿಟ್ಟು, ಕೇವಲ ಭಾರತೀಯರಿಂದ ನಿರ್ಮಾಪಿಸಿದ ಸುಂದರವಾದ ಇನ್ನೊಂದು ಕಟ್ಟಡ ಇನ್ನೆಲಿದೆ?
    ಕನ್ನಡಿಗನೊಬ್ಬನ ರಾಜಕೀಯ ನಾಯಕತ್ವದಲ್ಲಿ ಕನ್ನಡ ಶಿಲ್ಪಿಗಳ ಕಟ್ಟಡ ನಿರ್ಮಾಪಕರಿಂದ ನಿರ್ಮಿತವಾದ ವಿದಾನಸೌಧದ ಬಗ್ಗೆ ಅತಿ ಹೆಮ್ಮೆಇಲ್ಲದಿರುವುದು ಅತ್ಯಂತ ವಿಷಾದಕ ವಿಷಯ.
    – ವಿಜಯಶೀಲ.

  4. sritri

    ಅನ್ವೇಷಿಗಳೇ, ಈ ವರದ್ದಿ ಬರೆದೆಸೆಯಲು ನಿಮಗೆಷ್ಟು ಕೋಟಿ ಸಂದಾಯವಾಯಿತು? ಯಾಕೆ ಕೇಳುತ್ತಿದ್ದೇನೆಂದರೆ, ನಿಮ್ಮ ಬೊಗಳೆ ಬ್ಯೂರೋದ ಬೀರುಗಳಲ್ಲಿ ಹುಡುಕಿದರೆ, ನಮಗೂ ಏನಾದರೂ ಸಿಕ್ಕಬಹುದೇನೋ ಎಂಬ ದುರಾಸೆಯಿಂದ …. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading