ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯಕ್ಕ ಅಜ್ಜಿಮನೆ ಕೇಳ್ತಾರೆ- ಏನೆಂದು ಹೆಸರಿಡಲಿ…

ವಿಜಯಕ್ಕ ಅಜ್ಜಿಮನೆ

ಸಂಜೆ ದಿನದ ವಹಿವಾಟಿನ ಲೆಕ್ಕ ಮುಗಿಸಿ, ಕ್ಯಾಶ್ ಚೆಕ್ ಮಾಡಿ ತಲೆ ಯೆತ್ತಿದವಳಿಗೆ ಕಾಣಿಸಿದ್ದು ಮರದ ಕೆಳಗೆ ಬೈಕು ನಿಲ್ಲಿಸಿನಿಂತ… ಪ್ರೈವೇಟ್ ಬಸ್ಸಿನ ಮಾಲೀಕ.. ಕೃಷ್ಣ ಪೂಜಾರಿ..

ಉಡುಪಿ ಪರ್ಕಳ ಬಸ್ರುಟಿನಲ್ಲಿ ಹೋಗುತಿದ್ದ ಬಸ್ಸಿನಲ್ಲೂ ಆತನನ್ನು ಬಹಳಸಲ ನೋಡಿದ್ದಿದೆ.. ಆಗಾಗ ಚೆಕ್ಕಿಂಗ್ಗೆ ಅಂತ ಬಸ್ಸು ಹತ್ತುತಿದ್ದ… ಮಲಯಾಳಿ ನಟ ಮುಮ್ಮಟ್ಟಿ ತರ ಕಾಣುತಿದ್ದ. ಬಿಳಿಯ ಶರ್ಟ್ಪ್ಯಾಂಟು.. ತೀರಾ ಗಂಭೀರ ಮುಖ. ಆತ ಕರುಣಾ ಕಡೆ ದೃಷ್ಠಿ ಹರಿಸಿದ್ದೇ ಇಲ್ಲ.

ಕರುಣಾ ರಜ ಹಾಕಿದ ದಿನಾ ಆತ ಲೋನ್ ಗಾಗಿಬಂದಿದ್ದು, ಪೇಪರ್ ಸರಿಯಿಲ್ಲ ಅನ್ನೋ ಕಾರಣಕ್ಕೆ ಲೋನ್ ಆಗಿರಲಿಲ್ಲ.. ಹೌದಾ ಮೊನ್ನೆ ಲೋನ್ ಕೇಳಿ ಬಂದಿದ್ರಲ್ಲ.. ಏನಾಯ್ತು ಅವರದ್ದು? ಸಹದ್ಯೋಗಿಯನ್ನು ಕೇಳಿದಾಗ ಪೇಪರ್ ಸರಿ ಇರ್ಲಿಲ್ಲ ಅನ್ಸುತ್ತೆ. ಲೋನ್ ಆಗೋಲ್ಲ ಅಂದ್ರು ಬಾಸ್…

ಸಾಧಾರಣವಾಗಿ ಲೋನಿಗೆ ಬರುವವರೆಲ್ಲ ಪರಿಚಿತರೇ.. ಕೆಲವೊಮ್ಮೆ ವ್ಯಕ್ತಿ ಬರದೆಯೇ ಸಹಿಹಾಕಿದ ಪೇಪರ್ಗಳು ಬರುವುದುಂಟು.. ದೊಡ್ಡ ಬಿಸಿನೆಸ್ಸಿನ 8 ದೊಡ್ಡ ಜನರು ನಡೆಸುತಿದ್ದ ಸಣ್ಣ ಪ್ರಮಾಣದ ಫೈನಾನ್ಸ್ ಕಂಪನಿ ಅದು.. ಪ್ರಾರಂಬದಿಂದಲೂ ಇದ್ದ ಕರುಣಾ ಬಗ್ಗೆ ಆಡಳಿತದಲ್ಲಿದ್ದ ಎಲ್ಲರಿಗೂ ಗೌರವವಿತ್ತು.. ಹಾಗಾಗಿ ಲೋನಿಗಾಗಿ ನೇರವಾಗಿ ಕರುಣಾಳನ್ನೇ ಸಂಪರ್ಕಿಸುವವರಿದ್ದರು.

ಆಕೆ ಮಾತ್ರ ಸರಿಯಾದ ಕಾಗದ ಪತ್ರಗಳಿಲ್ಲದೆ ಗ್ಯಾರಂಟಿಗಳಿಲ್ಲದೆ ವ್ಯವಹರಿಸುತಿರಲಿಲ್ಲ… ಇದೂ ಹಾಗೆ ಆಯಿತು ಪರ್ಕಳದಿಂದ ಉಡಿಪಿಗೆ ಹೋಗುವ ಪ್ರೈವೇಟ್ ಬಸ್ಸಿನ ಮಾಲಿಕನಾಗಿದ್ದ ಕೃಷ್ಣ ಪೂಜಾರಿಗೆ ರೆನ್ಯುವಲ್ಗಾಗಿ ಹಣದ ಅವಶ್ಯಕತೆ ಇತ್ತು.. ಕಳೆದ 4 ದಿನದಿಂದ ಉಸಿರಾಡಲು ಕಷ್ಟವೆನಿಸುವ ಪರಿಸ್ಥಿತಿಯಲ್ಲಿದ್ದ.. ಬಸ್ಸಿನ ಪೇಪರ್ ತಂದರೂ ಅದೇ ರಸ್ತೆಯಲ್ಲಿ ಓಡುವ ಇನ್ನೊಂದು ಬಸ್ಸಿನ ಮಾಲೀಕನ ಸಂಬಂದಿ ಈತನಿಗೆ ಲೋನ್ ಸಿಗದಂತೆ ಮಾಡಿದ್ದರು.. ಕಂಗಾಲಾಗಿದ್ದ ಕೃಷ್ಣ ಪೂಜಾರಿಗೆ ಪರಿಚಯದವರೊಬ್ಬರು ಹೇಳಿದ್ದರು ನೀವು ಅಲ್ಲಿ ಕರುಣಾ ಅಂತ ಇದ್ದಾರೆ ನೋಡಿ ಅವರನ್ನು ಹಿಡಿಯಿರಿ.. ತುಂಬಾ ಒಳ್ಳೆ ಹೆಂಗಸು..

ಕೆಲಸ ಮುಗಿಸಿ ಕಷ್ಟಪಟ್ಟು ಕುರ್ಚಿಯಿಂದ ಎದ್ದ್ ಕರುಣಾ ಬಸ್ ಸ್ಟಾಪಿನತ್ತ ಹೆಜ್ಜೆ ಹಾಕಿದಳು.. ಆರು ತಿಂಗಳು ತುಂಬಿ ಏಳಕ್ಕೆ ಬಿದ್ದಿತ್ತು.. ಹೊಟ್ಟೆ ನೋಡಿದರೆ ಅರ್ಧ ಗಂಟೆಯಲ್ಲಿ ಹೆರಿಗೆ ಆಗುವ ಹಾಗೆ ಕಾಣಿಸುತ್ತಿತ್ತು.. ಇನ್ನೂ ಒಂದು ತಿಂಗಳು ಹೇಗೋದೂಡುವುದು.. ಇತ್ತೀಚಿಗೆ ಬಸ್ಸು ಹತ್ತಲು ತುಂಬಾ ಕಷ್ಟ ಪಡ್ಬೇಕಿತ್ತು.. ಖಾಸಗಿ ಬಸ್ಸುಗಳ ಮೆಟ್ಟಲುಗಳು ತುಂಬಾ ಎತ್ತರದಲ್ಲಿದ್ದು ಹೊಟ್ಟೆಯೊಂದಿಗೆ ಬಸ್ಸು ಹತ್ತುವುದು ದೊಡ್ಡ ಸಾಹಸದ ಕೆಲಸವಾಗಿತ್ತು..

ದಾರಿಯಲ್ಲಿ ಕಾದಿದ್ದ ಕೃಷ್ಣಪೂಜಾರಿ ಪರಿಸ್ಥಿತಿಯನ್ನು ವಿವರಿಸಿದ.. ಲೋನ್ ಆಗದಿದ್ದಲ್ಲಿ ಆತ್ಮಹತ್ಯೆ ಒಂದೇ ದಾರಿ ಎಂದವನಿಗೆ, ಸಮಾಧಾನ ಹೇಳಿ ಮಾರನೆದಿನ ಆಫೀಸಿಗೆ ಬರುವಂತೆ ಹೇಳಿದಳು.. ರಾತ್ರಿ ಬಾಸ್ ಗೆ ಫೋನ್ ಮಾಡಿ ಲೋನ್ ವಿಷಯ ಕೇಳಿದಾಗ.. ಲೋನ್ ಆಗದಿರಲು ಕಾರಣ್ ಬೇರೆಯೇ ಅನ್ನೋದು ತಿಳಿಯಿತು.. ಬೇಡವೆಂದ ನಂತರ ಕೊಡುವ ಪ್ರಶ್ನೇನೆ ಇಲ್ಲ.. ಅಷ್ಟುದೊಡ್ಡ ಜೀವತನ್ನ ಮುಂದೆ ನಿಂತು ಕೇಳಿದ ರೀತಿ ತುಂಬಾ ಸಂಕಟಕ್ಕೆ ಈಡುಮಾಡಿತ್ತು… ಆತನಿಗೆ ಬೇರೆ ಯಾವ್ದೋ ಹಣ ಬರುವುದಿತ್ತು…

15 ದಿನದಲ್ಲೇ ಹಣ ವಾಪಾಸ್ ಮಾಡುವುದಾಗಿ ಅತ ಕೇಳಿಕೊಂಡಾಗ ಬೆಳಿಗ್ಗೆ ಹೋಗುವಾಗ ತನ್ನೆಲ್ಲಾ ಒಡವೆಯನ್ನುಎತ್ತಿಟ್ಟು ಕೊಂಡಳು.. ಆಫೀಸಿನಲ್ಲಿ ಕೆಲಸ ಮಾಡುತಿದ್ದ ಇನ್ನಿಬ್ಬರು ಇವಳಿಗಾಗಿ ತಮ್ಮ ಒಡವೆ ಬಿಚ್ಚಿ ಕೊಟ್ಟರು.. ಒಡವೆ ಮೇಲೆ ಲೋನ್ ಸಾಂಕ್ಷನ್ ಮಾಡಿಕೊಟ್ಟು ಕಳಿಸಿದ್ದಾಯಿತು…

2 ದಿನದಲ್ಲಿ ಬಸ್ಸು ಮತ್ತೆ ಪ್ರಾರಂಬವಾಯಿತು.. ಸಂಜೆ ಕೆಲಸ ಮುಗಿಸಿ ಬಸ್ ಸ್ಟಾಪಿನಲ್ಲಿ ನಿಂತವಳಿಗೆ, ಬಸ್ ಬಂದಾಗಆಶ್ಚರ್ಯ.. ಹೊಸದೊಂದು ಮೆಟ್ಟಿಲು ಸೇರ್ಪಡೆಯಾಗಿ ಹತ್ತುವುದು ಸ್ವಲ್ಪ ಆರಾಮ ಅನಿಸಿದೊಂದೇ ಅಲ್ಲ.. ಅಕ್ಕ… ಮಾಲಿಕರು ಹೇಳಿದ್ದಾರೆ ನೀವು ನಡ್ಕೊಂಡು ಹೋಗೋದು ಕಾಣಿಸಿದರೆ ಬಸ್ ನಿಲ್ಲಿಸಿ ಕೇಳಬೇಕಂತ..ಅಂದ ಡ್ರೈವರ್.. ಸುಮಾರು 15 ದಿನಗಳ ಕಾಲ ಹೇಗೋ ಕೆಲಸಕ್ಕೆ ಬಂದವಳು ಮತ್ತೆ ಸಾಧ್ಯವಾಗದೆ ಮನೆಯಲ್ಲೇ ಉಳಿಯುವಂತಾಯಿತು.. ಆತನಿಗೆ 15 ದಿನದಲ್ಲಿ ಹಣ ವಾಪಾಸ್ ಮಾಡಲು ಸಾಧ್ಯವಾಗಲಿಲ್ಲ…

ಹೆರಿಗೆಯಾಗಿ ಎರಡೂ ಮಗ್ಗುಲಲ್ಲಿ ಒಂದೊಂದು ಮಗುವನ್ನು ಮಲಗಿಸಿಕೊಂಡು ಮಲಗಿದವಳಿಗೆ ಎಚ್ಚರವಾದಾಗ ಎದುರಲ್ಲಿ ಆತನಿಂತಿದ್ದ.. ಅಬ್ಬಾ!! ಅದೆಷ್ಟು ಖುಷಿಯಾಗಿತ್ತು ತನಗೆ.. ಕೊಟ್ಟ ಹಣದ ಬಗ್ಗೆ ಅಲ್ಲ.. ಅರ್ಥವಾಗದ ಒಂದು ಭಾವ.. ಹಣ ಹಿಂತಿರುಗಿಸಿದ.. ಇದೆಲ್ಲ ನಡೆದು ಇಪ್ಪತ್ತು ವರ್ಷಗಳು ಮೊನ್ನೆ ಜೂನ್ ೨೮ಕ್ಕೆ.. ಈಗ ಆತ ಪರ್ಕಳದಲ್ಲಿ ಬಾರ್ ರೆಸ್ಟೋರೆಂಟ್ ಇಟ್ಟಿದ್ದಾನಂತೆ..

2 ಬಸ್ಸುಗಳು ಮಂಗಳೂರು ಮಣಿಪಾಲ ಓಡಾಡುತ್ತಿವೆ… ಎಲ್ಲಾದರು ಹೋಗಬೇಕಾದ್ರೆ ಹೇಳಿ ವೆಹಿಕಲ್ ಕಳಿಸ್ತೀನಿ ಅಂದನಂತೆ. .ಈ ೨೦ ವರ್ಷದಲ್ಲಿ 3 ಬಾರಿ ಕಾರಲ್ಲಿ ಡ್ರಾಪ್ ಮಾಡಿದ್ದನಂತೆ.. 3 ಬಾರಿಯೂ ಕೇಳಿದ ಪ್ರಶ್ನೆ ಆರಾಮ್ ಇದ್ದಿರಲ್ವಾ..ಅಂತ.. ಹಿಂದಿನಸೀಟ್ ನಿಂದ ಹುಂ ಅನ್ನೋದು.. ಬೇರೆ ಒಂದೇ ಒಂದು ಮಾತಿಲ್ಲ..

ಆತನ ಎರಡೂ ಬಸ್ಸುಗಳು ಇವಳನ್ನು ದಾರಿಯಲ್ಲಿ ಕಂಡರೆ ಸ್ಲೋ ಮಾಡಿ ಕೇಳದೆ ಹೋಗೋದಿಲ್ಲ.. ಮೊನ್ನೆ ಆಕೆಯೊಂದಿಗೆ ಕಿನ್ನಿಮುಲ್ಕಿ ರಸ್ತೆಯಲ್ಲಿ ಈ ವಿಷಯನ್ನೇ ಮಾತಾಡಿಕೊಂಡು ನಡೆದು ಕೊಂಡು ಹೊಗುವಾಗ ನಮ್ಮನ್ನು ದಾಟಿದಬಸ್ಸೊಂದು ಸ್ವಲ್ಪ ಮುಂದಕ್ಕೆ ಹೋಗಿ ಸ್ಲೋ ಆಯಿತು… ನಾನು ಇದೇ ಬಸ್ಸಾ… ಅಂತ ಕೇಳೋದರೊಳಗೆ

ಅಕ್ಕಾ.. ಬರ್ಪೆರೆ.. ಅಂತ ಕೊರಳು ಹೊರ್ಗೆಹಾಕಿ ಕಂಡಕ್ಟರ್ ಕೇಳಿದಾಗ ಇಲ್ಲ ಎನ್ನುವಂತೆ ತಲೆಯಾಡಿಸಿದಳು.. ಆರ್ಥಿಕವಾಗಿ ಬಹಳಷ್ಟು ತೊಂದರೆ ಇದ್ದರೂ.. ಆತನಿಂದ ಸಹಾಯ ಕೇಳುವ ಮನಸ್ಸಿಲ್ಲ.. ನೆನಪಾದಾಗಲೆಲ್ಲ ಒಂದು ಖುಷಿ ಇದೆ.. ಅವನಿದ್ದಾನೆ ಎನ್ನುವ ಧೈರ್ಯ ಮನಸ್ಸಲ್ಲಿ.. ಆತನ ಬಸ್ಸು ನಿಂತು ಕೇಳುವ ಬಗ್ಗೆ ಕೆಲವರು ಏನೇನೊ ಮಾತಾಡುತ್ತಿರಬಹುದೇನೋ… ಬೇಸರವಿಲ್ಲ ನನಗೆ.. ಈ ಚೆಂದದ ಅನುಭವ ಯಾರೋ ಒಬ್ಬರೊಂದಿಗೆ ಒಮ್ಮೆ ಘಟಿಸಿತಲ್ಲ.. ಅದೇ ಖುಷಿಯಲ್ಲಿದ್ದಿನಿ..

‍ಲೇಖಕರು Admin

5 July, 2021

1 Comment

  1. ನೂತನ ದೋಶೆಟ್ಟಿ

    ವಿಜಯಕ್ಕ,
    ಅವಳು ದೇವತೆಯಾಗಿ ಕಂಡಳು ನನಗೆ. ಅವನು ಅವಳ ಒಳ್ಳೆಯ ತನವನ್ನು ನೆನೆಯುತ್ತಿದ್ದಾನೆ.
    ಅಪರೂಪದ ಸಂಗತಿ ಬರೆದಿದ್ದೀರಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading