ವಸುಂಧರಾ ಕದಲೂರು
ಕಣ್ಣುಗಳಲಿ ಕಾರುಣ್ಯದ ಝರಿ!
ಕರುಣಾ ಮೂರ್ತಿಯೇ ಅದನ್ನು
ಒಮ್ಮೆ ಬಡಪಾಯಿಯತ್ತ
ಹರಿಸಬೇಕಿತ್ತು…
ಬಡಪಾಯಿ ಎಂದೆನೇ…!
ಸತ್ಯವಾಗಿಯೂ ಅದು ನಾನಲ್ಲ.
ಕಿವಿಗಪ್ಪಳಿಸುವ ಮೂದಲಿಕೆ, ಕೊಂಕು
ತಿವಿತಗಳು ಘಾಸಿಗೊಳಿಸಿ ಕಾಲ
ಕೆಳಗಿನ ಮರಳಿನಾಧಾರ ಜರಿಯುತ್ತಾ
ಕುಸಿಯುವಾಗ ಮಾತ್ರ ಬಡಪಾಯಿ
… ತಟ್ಟನೆದ್ದು ಗಟ್ಟಿ ನಿಲ್ಲುತ್ತಾ..
ಒಂದೇ ಒಂದು ಎಳೆಬಳ್ಳಿಯ
ಆಸರೆ! ಅಪ್ಪಿ ಪರಸ್ಪರರ
ಸಂತೈಸಿಕೊಂಡು..

ನಿನ್ನಂತಹ ಅರಸು ಕುವರನಿಗೆ
ಆದರಿಸುವುದು ತಿಳಿದಿರಲಿಲ್ಲ..
ಹತಭಾಗ್ಯೆಯ ಕುವರ ಆತ
ಅರಸುವುದು ಬೇಕಿರಲಿಲ್ಲ…
ಆದರೂ
ನಿನ್ನ ಅನುಸರಿಸಿತು ಆ
ಪರಂಪರೆಯ ಪಳೆಯುಳಿಕೆ..
ನಿನ್ನ ಬದಲು ನಾನು ಹೊರಟಿದ್ದರೆ…?!
ಶತಮಾನಗಳ ಜಯಂತಿಗಳಿರಲಿ,
ಬರಿಯ ಸ್ಮರಣಿಕೆಯಾಗಾದರೂ
ಉಳಿಯುತ್ತಿದ್ದೆನೇ






ಇಷ್ಟ ಆಯಿತು ಕವಿತೆ ವಸುಂಧರಾ