ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ ಹೊಸ ಕವನ ಸಂಕಲನ ಹಿಡಿದು ಓದುಗರ ಮುಂದೆ ಬಂದಿದ್ದಾರೆ. ಅಮ್ಮ ಪ್ರಶಸ್ತಿ ವಿಜೇತರಾದ ಶೇರಿ ಅವರ ಸಂಕಲನದ ಹೆಸರು-‘ಅಪ್ಪನ ಹೆಗಲ ಮೇಲೆ’. ಸೇಡಂನ ಜಾಕನಹಳ್ಳಿಯ ಶ್ರೀ ಸಸಾ ಪ್ರಕಾಶನ ಈ ಕೃತಿ ಪ್ರಕಟಿಸಿದೆ.
ಈ ಸಂಕಲನಕ್ಕೆ ಹಿರಿಯ ಪತ್ರಕರ್ತ ಮಹಿಪಾಲ ರೆಡ್ಡಿ ಅವರು ಬರೆದ ಬೆನ್ನುಡಿ ಇಲ್ಲಿದೆ-
ಮಹಿಪಾಲರೆಡ್ಡಿ ಮುನ್ನೂರ್
ಅಪ್ಪನ ಹೆಗಲ ಮೇಲೆ ಮಟ್ಟಸವಾಗಿ ಕೂತಿರುವ ಕವಿತೆಗಳ ಆಕರ್ಷಣಾ ಶಕ್ತಿಗೆ ಕಾರಣಗಳು ಅನೇಕ. ಕಾವ್ಯದ ಬಗ್ಗೆ ತೀರಾ ಸಂಭ್ರಮದ ಒಲವುಳ್ಳ ಹಿರಿಯ ಕವಿ ಲಿಂಗಾರೆಡ್ಡಿ ಶೇರಿ ಅವರು ಕನ್ನಡದ ಮಹತ್ವದ ಕವಿಗಳಲ್ಲೊಬ್ಬರು. ಅವರ ಐದನೆಯ ಕವನ ಸಂಕಲನದ ಹೆಸರು… ಅಪ್ಪನ ಹೆಗಲ ಮೇಲೆ’.
ಕಾವ್ಯದ ಬಗ್ಗೆ ಇಂದಿಗೂ ಕುತೂಹಲ ಮತ್ತು ಹಸಿವು ಇಟ್ಟುಕೊಂಡೇ ಬರೆಯುವ ಶೇರಿ ಸರ್ ಅವರ ಕವಿತೆಯ ಕಥನ ವರ್ಣನೆ ತೀರಾ ಅಪರೂಪ. ಹಳತು ಹೊಸತಾಗುವುದಕ್ಕಿಂತ, ಹೊಸದು ಇನ್ನಷ್ಟು ಹೊಸದಾಗುವ ಕ್ರಿಯಾವಂತಿಕೆ ಸದಾ ‘ಭಾವ’ಗಳನ್ನು ತಬ್ಬಿಕೊಳ್ಳವ ಶೇರಿ ಸರ್ ಅವರದು ನವನವೀನತೆಯ ಕಾವ್ಯದ ಗುಣಸ್ವಭಾವ.
‘ಕೆಂಪು ಚಿತ್ತಾರ’ದಿಂದ ‘ಅಪ್ಪನ ಹೆಗಲ ಮೇಲೆ’ವರೆಗಿನ ಐದು ಕವಿತಾ ಸಂಕಲನಗಳನ್ನು ಕಾವ್ಯಮೀಮಾಂಸಕರು ಗುರುತಿಸಿದ್ದಾರೆ. ನಿರಂತರ ಚಲನಶೀಲತೆ, ಅನುಭವಗಳ ಪ್ರಾಮಾಣಿಕತೆ ಮತ್ತು ಸಂವೇದನೆಗಳ ತಾಜಾದೃಷ್ಟಿ : ಶೇರಿ ಸರ್ ಅವರ ಕಾವ್ಯ ಜಗತ್ತು. ನೆಲದ ಮೇಲೆ ನಿಂತುಕೊಂಡೇ ‘ಜಗದಗಲ ಮುಗಿಲಗಲ’ ಚಾಚಿಕೊಳ್ಳುವ ವ್ಯಾಕುಲತೆ, ಮುಕ್ತ ಮನಸು, ಪ್ರೀತಿ ಸ್ನೇಹ ಮತ್ತು ಪ್ರಾಂಜಲತೆಯಿಂದಾಗಿ ‘ಕಾವ್ಯವೂ ಹಸನಾಗಬಹುದೆಂಬ’ ಕಾರಣದಿಂದ ಶೇರಿ ಸರ್ ಕವಿತೆಗಳು ತಟ್ಟುತ್ತವೆ.
ಜಗತ್ತಿನ ಕಾವ್ಯ ಮರುವ್ಯಾಖ್ಯಾನಗೊಳ್ಳುತ್ತಿರುವ ಈ ಹೊತ್ತಿನಲ್ಲಿ.. ಹಳೆಯ ಸಿದ್ಧರೂಪಗಳು ಹೊಸತನದಲ್ಲಿ ಅದ್ದಿತೆಗೆಯುವ ಕಾಲಘಟ್ಟದಲ್ಲಿ.. ಇಂತಹ ಯಾವ ಚಹರೆಗಳಿಲ್ಲದೇ, ಸರಳವಾಗಿ ‘ಕವಿತೆ ಹೇಳುವುದಕ್ಕೆ ತಲ್ಲೀನತೆ ಅಗತ್ಯ’ ಎಂಬುದನ್ನು ಪ್ರತಿಪಾದಿಸಿದ್ದಾರೆ. ಅಂತಹ ಹದವನ್ನು ಕಾಯ್ದುಕೊಂಡೇ ಮನಸ್ಸು ಸೂರೆಗೊಳ್ಳುವ ಕವಿತೆಗಳು ‘ಅಪ್ಪನ ಹೆಗಲ ಮೇಲಿ’ವೆ. ಇನ್ನೇಕೆ ತಡ.. ‘ಶೇರಿ ಕಾವ್ಯ’ ಜಗತ್ತಿನ ಪ್ರವೇಶಕ್ಕೆ..?
ಅಭಿನಂದನೆಗಳು ಶೇರಿ ಸರ್