ಲಾಸ್ಟ್ ಬಸ್ ಮತ್ತು ರಿಯಾಲಿಟಿ ಷೋ
ಗೊರೂರು ಶಿವೇಶ್
ಮರ್ಡರ್ ಮಿಸ್ಟರಿ, ಹಾರರ್ ಮೂವಿ, ಕ್ರೈಮ್ಥ್ರಿಲ್ಲರ್, ಸೈಕಲಾಜಿಕಲ್ ಸಸ್ಪೆನ್ಸ್ ಸಿನಿಮಾ ಮುಂತಾದ ಹೆಸರಲ್ಲಿ ಸರ್ ಪ್ರೈಸ್ ಟ್ವಿಸ್ಟನ್ನು ಹೊಂದಿ ವಿಡ್ಜ್ ಅಪ್ ದ ಸ್ಕಿಟ್ ನಲ್ಲಿ ಕೂರಿಸುವ ಕಥೆ ಕಾದಂಬರಿ ಸಿನಿಮಾಗಳು. ಎಲ್ಲಾ ದೇಶ ಭಾಷೆಗಳಲ್ಲಿ ಆ ಕಾಲದಿಂದಲೂ ಜನಪ್ರಿಯ. ಅದರಲ್ಲೂ ಸಸ್ಪೆನ್ಸ್ ಎಂಬುದು ಇವೆಲ್ಲವನ್ನೂ ಎಳೆದೊಯ್ಯುವ ಎಂಜಿನ್.
ಕನ್ನಡದಲ್ಲಿ ಇಂಥ ಸಿನಿಮಾಗಳು ಆಗೊಮ್ಮೆ, ಹೀಗೊಮ್ಮೆ ಪಾತಾಳಮೋಹಿನಿ, ಅಪರಾಧಿ, ಅಪರಿಚಿತ, ಶ್, ತರ್ಕ, ಮುಂತಾದ ಹೆಸರಿನಲ್ಲಿ ಬಿಡುಗಡೆಗೊಂಡರೂ ಇಂಥ ಸಿನಿಮಾಗಳಿಗೆ ಫ್ಯಾಮಿಲಿ ಆಡಿಯನ್ಸ್ ಕಡಿಮೆಯೇ. ಆದರೆ ಆಪ್ತಮಿತ್ರ 5.4.2. ರಂಗಿತರಂಗ ಚಿತ್ರದ ಅನಿರೀಕ್ಷಿತ ಯಶಸ್ಸಿನ ನಂತರ ಈಗ ಬಿಡುಗಡೆಯಾಗುತ್ತಿರುವ ವಾರಕ್ಕೈದು ಚಿತ್ರಗಳಲ್ಲಿ ಮೂರು ಚಿತ್ರಗಳು ಇವೇ ಆಗಿವೆ. ಈ ಚಿತ್ರಗಳಿಗೆ ಟಿವಿಯಲ್ಲಿ ಸಾಕಷ್ಟು ಬೇಡಿಕೆಯಿದೆ ಮತ್ತು ಅವುಗಳನ್ನು ಮತ್ತೆ ಮತ್ತೆ ನೋಡುವ ಪ್ರೇಕ್ಷಕರೂ ಇದ್ದಾರೆ. ಅಂಥ ಚಿತ್ರಗಳಿಗೆ ಮತ್ತೊಂದು ಸೇರ್ಪಡೆ ‘ಲಾಸ್ಟ್ ಬಸ್ ‘.
ಆ ರಸ್ತೆಯಲ್ಲಿ ಅದುವೇ ಲಾಸ್ಟ್ ಬಸ್ ಬರುತ್ತದೆಯೋ ಇಲ್ಲವೋ ಎಂಬ ಸಂಶಯದಲ್ಲಿ ಇರುವಾಗಲೇ ಟ್ರೆಕ್ಕಿಂಗ್ ಗಾಗಿ ಬಂದು ದಾರಿ ತಪ್ಪಿ ಸ್ನೇಹಿತರಿಂದ ಬೇರ್ಪಟ್ಟ ಟೆಕ್ಕಿ, ನಾಳಿನ ಪರೀಕ್ಷೆಗಾಗಿ ಹೊರಟು ನಿಂತ ವಿದ್ಯಾರ್ಥಿ, ಅಣ್ಣನ ಕಣ್ಣು ತಪ್ಪಿಸಿ ಹೊರಟ ಪ್ರೇಮಿ, ತೋಟದ ಮಾಲಿಕನನ್ನು ಭೇಟಿ ಮಾಡಲು ಹೊರಟ ಬೆಲೆವೆಣ್ಣು, ಕೊನೆಯಲ್ಲಿ ಸೇರಿಕೊಳ್ಳುವ ಪೂಜಾರಿ ಮಾಂತ್ರಿಕ, ಇವರ ಜೊತೆ ಇನ್ನೂ ಕೆಲವು ಪಯಣಿಗರು ದಾರಿಯಲ್ಲಿ ಅಡ್ಡ ಬಿದ್ದ ಮರದಿಂದಾಗಿ ಕಂಡಕ್ಟರ್ ಸಹಿತ ಉಳಿದ ಪಯಣಿಗರು. ಅಲ್ಲಿಂದ ಹಿಂದಕ್ಕೆ ಹೊರಟರೆ ಹೋಗಲೇಬೇಕಾದ ಅನಿವಾರ್ಯತೆಯಿರುವ ಐವರ ಸಂಕಷ್ಟ ಕಂಡು ಡ್ರೈವರ್ ಮತ್ತೊಂದು ಕಚ್ಚಾ ದಾರಿಯನ್ನು ಹಿಡಿಯುತ್ತಾನೆ. ದಾರಿಯಲ್ಲಿ ಬಸ್ ಅಪಘಾತಕ್ಕೆ ಈಡಾಗುತ್ತದೆ. ಅವರು ಎಚ್ಚೆತ್ತು ಹೊರಬಂದರೆ ಡ್ರೈವರು ಮಾಯ. ಅವನ ಕೂಗನ್ನು ಅನುಸರಿಸುತ್ತಾ ಬರುವ ಐವರು ಅಲ್ಲಿರುವ ಪಾಳುಬಂಗಲೆಯಲ್ಲಿ ಬಂಧಿತರಾಗುತ್ತಾರೆ.
ಮುಂದೆ ಅದು ರಿಯಾಲಿಟಿ ಷೋನ ಭಾಗವೆಂದು ಪ್ರೇಕ್ಷಕರಿಗೆ ಅರಿವಾಗುತ್ತದೆ. ಪಯಣಿಗರಿಗೆ ಗೊತ್ತಾಗದಂತೆ ಮನೆಯೊಂದರಲ್ಲಿ ಬಂಧಿಸಿ, ಅಲ್ಲಿನ ಅವರ ಚರ್ಯೆಗಳನ್ನು ಚಿತ್ರೀಕರಿಸಿ ಪ್ರಸಾರ ಮಾಡುವ ಹೊಸ ತರಹದ ರಿಯಾಲಿಟಿ ಷೋ ಅದಾಗಿರುತ್ತದೆ. ಆದರೆ ಮುಂದೆ ನಡೆಯುವ ಘಟನೆಗಳು ಅಲ್ಲಿದ್ದವರ ಜೊತೆಗೆ ಪ್ರೇಕ್ಷಕರನ್ನು ಭ್ರಮೆ ಮತ್ತು ವಾಸ್ತವಗಳ ಗೊಂದಲದಲ್ಲಿ ಸಿಲುಕಿಸುತ್ತದೆ. ಅಂತಿಮವಾಗಿ ಇದು ದೆವ್ವಕಾಟವೆ ಇಲ್ಲವೆ ಸೃಷ್ಟಿಯೆ ಎಂಬ ಪ್ರಶ್ನೆಗಳಲ್ಲಿಯೇ ಚಿತ್ರ ಮುಕ್ತಾಯ ಕಾಣುತ್ತದೆ. ಈ ನಿಟ್ಟಿನಲ್ಲಿ ಹಿಂದಣ ಚಿತ್ರದ ಸೂತ್ರಗಳನ್ನು ಈ ಚಿತ್ರ ಮುರಿದಿದೆ.
ಕಿಟಕಿ ಬಾಗಿಲುಗಳು ಬಡಿಯುವ, ತಂಬಿಗೆ-ಚೊಂಬುಗಳು ಉರುಳುವ, ಹಾರಾಡುವ ಕರ್ಟನ್ಗಳು, ಬಿಳಿ ಸೀರೆ ಉಟ್ಟ ಹೆಂಗಸರು ಓಡಾಡುವ ಚಿತ್ರಗಳಿಗೆ ‘ದೆವ್ವದ ಚಿತ್ರ’ಗಳೆಂದು ಹಣೆಪಟ್ಟಿ ಕಟ್ಟಿಕೊಂಡು ಬಿಡುಗಡೆಯಾದ ನೂರಾರು ಚಿತ್ರಗಳಿಗೆ ಹೋಲಿಸಿದರೆ ಇದು ಕೊಂಚ ವಿಭಿನ್ನ ಸಿನಿಮಾ. ಉತ್ತಮ ಛಾಯಾಗ್ರಹಣ, ಸಂಗೀತದಿಂದಾಗಿ ಚಿತ್ರ ಮೈ ನವಿರೇಳಿಸುತ್ತದೆ. ಇದರ ಜೊತೆಗೆ ಇಂದಿನ ಟಿ.ಆರ್.ಪಿ. ಹಿಂದೆ ಬಿದ್ದಿರುವ ಛಾನಲ್ ಗಳ ಲೋಕವನ್ನು ಅನಾವರಣ ಮಾಡುತ್ತದೆ. ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿಯೇ ‘ಬಿಗ್ ಬಾಸ್’ನ ಫೈನಲ್ ನಡೆದಿದ್ದು ಕಾಕತಾಳೀಯ.
ಸಿನಿಮಾದಲ್ಲಿಯೂ ಆ ಸ್ಪರ್ಧಾಳುಗಳಲ್ಲಿ ಯಾರು ಗೆಲ್ಲುತ್ತಾರೆಂಬ ಪೈಪೋಟಿ. ಜನರ ನಿರೀಕ್ಷೆ ಮೀರಿ ಮತ್ತೊಬ್ಬರನ್ನು ಗೆಲ್ಲಿಸುವ ನಿರ್ದೇಶಕ ನೀಡುವ ಕಾರಣ ‘ಜನರ ಅಭಿಪ್ರಾಯಗಳ ವಿರುದ್ಧವಾಗಿ ಫಲಿತಾಂಶ ಬಂದಾಗ ಜನ ಹುಚ್ಚೆಬ್ಬಿಸುತ್ತಾರೆ. ಫೇಸ್ಬುಕ್, ವ್ಯಾಟ್ಸಾಪ್, ಮೀಡಿಯಾಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದು ಮತ್ತಷ್ಟು ಜನರನ್ನು ಕೆರಳಿಸುತ್ತದೆ. ನೋಡದೆ ಇರುವ ಜನ ಇನ್ನಷ್ಟು ಜನ ನೋಡಲಾರಂಭಿಸುತ್ತಾರೆ. ಟಿ.ಆರ್.ಪಿ. ಏರುತ್ತದೆ. ಇದರ ಲಾಭ ಛಾನಲ್ ಗೆ.’
ಟಿ.ಆರ್.ಪಿ. ಹಿಂದೆ ಬಿದ್ದು ಟಿ.ವಿ. ಛಾನಲ್ ಗಳ ಲೋಕವನ್ನು ಅನಾವರಣಗೊಳಿಸುತ್ತಲೇ ವಾಸ್ತವ ಮತ್ತು ಭ್ರಮೆಗಳ ತಾಕಲಾಟವನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತದೆ. ನಿಯಂತ್ರಿತ ಬಜೆಟ್ನಲ್ಲೂ, ಉತ್ತಮ ಗ್ರಾಫಿಕ್ಸ್ಗಳ ತಂತ್ರಜ್ಞಾನದ ಬಳಕೆಯ ಕೆಲವೊಂದು ದೃಶ್ಯಗಳು. ಹಾಲಿವುಡ್ ಸಿನಿಮಾಗಳನ್ನು ನೆನಪಿಸುವ ಮಟ್ಟಿಗೆ ಬಂದಿದೆ. ಅದರಲ್ಲೂ ತರಗೆಲೆಗಳಲ್ಲಿ ರೂಪಿಸುವ ಪಿಶಾಚಿಯ ರೂಪವಂತೂ ಅದ್ಭುತವಾಗಿ ಮೂಡಿಬಂದಿದೆ. ನಿರ್ದೇಶಕ ಎಸ್. ಡಿ. ಅರವಿಂದ್, ನಟ ಹಾಗೂ ಕಲಾ ನಿರ್ದೇಶಕ ಅವಿನಾಶ್ ಅವರಿಂದ ಇದೊಂದು ವಿಭಿನ್ನ ಪ್ರಯತ್ನ. ಸಿದ್ಧಸೂತ್ರಗಳನ್ನು ಮುರಿಯುವಲ್ಲಿ ಅವರು ಯಶಸ್ವಿಯಾಗುತ್ತಾರೆ. ಎಲ್ಲಾ ಪಾತ್ರಧಾರಿಗಳಿಗೂ ಸಮಾನ ಅವಕಾಶವಿದ್ದು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಜಾನಪದ ಶೈಲಿಯ ‘ದೂರಿ’ ಹಾಡು ಚಿತ್ರದ ವಿಶೇಷಗಳಲ್ಲೊಂದು.
ಜುಗಾರಿ ಚಿತ್ರದಲ್ಲಿದ್ದ ಭರವಸೆ ಮೂಡಿಸಿದ ಚಿತ್ರತಂಡ ಇದರಲ್ಲಿ ಅದನ್ನು ಮುಂದುವರೆಸಿದೆ. ಬಸ್ ಸ್ಟಾಂಡ್ ನಿಂದ ಹೊರಟಾಗ ಕೆಲವೇ ಜನರಿದ್ದ ಮುಂದಿನ ಒಂದೊಂದೇ ಸ್ಟಾಪಿನಲ್ಲಿ ಜನರನ್ನು ಹತ್ತಿಸಿ, ಇಳಿಸಿ ಹತ್ತಿಸಿಕೊಳ್ಳಿಸುತ್ತಾ ಸಾಗುವ ಶೆಟಲ್ ಬಸ್ ನಂತೆ ಚಿತ್ರವೂ ನಿಧಾನಗತಿಯಲ್ಲಿ ಸಾಗುತ್ತಾ ಕೊನೆಗೂ ಯಶಸ್ಸಿನ ಹಾದಿ ಹಿಡಿದಿದೆ.
0 ಪ್ರತಿಕ್ರಿಯೆಗಳು