ಬಿರುಕು ಬಿಡದ ಗೋಡೆ
ನಾ ದಿವಾಕರ
ಕ್ರಿಕೆಟ್ ಒಂದು ಸೊಗಸಾದ ಆಟ. ಅದರಲ್ಲೂ ಟೆಸ್ಟ್ ಕ್ರಿಕೆಟ್ಗೆ ಒಂದು ಆಂತರ್ಯದ ಸೊಗಡು, ಸೌಂದರ್ಯವಿದೆ. ಅಮೆರಿಕ, ಯೂರೋಪ್ ದೇಶಗಳಲ್ಲಿ ಈ ಕ್ರೀಡೆಯನ್ನು ಸೋಮಾರಿಗಳ ಕ್ರೀಡೆ ಎಂದು ಜರೆದರೂ ಕೇವಲ ಬ್ರಿಟಿಷ್ ವಸಾಹತು ರಾಷ್ಟ್ರಗಳಲ್ಲಿ ನೆಲೆಯಾಗಿದ್ದ ಕ್ರಿಕೆಟ್ಗೆ ತನ್ನದೇ ಆದ ಅಸ್ತಿತ್ವವಿದೆ, ಇತಿಹಾಸವೂ ಇದೆ. ಇಂದಿನ 50-50, 20-20 ಯುಗದಲ್ಲಿ, ನವ ಉದಾರವಾದದ ಬಂಡವಾಳದ ಹರಿವಿನಲ್ಲಿ ಕ್ರಿಕೆಟ್ ಒಂದು ಮನರಂಜನಾ ಕ್ರೀಡೆಯಾಗಿ ಪರಿವರ್ತನೆಯಾಗಿದ್ದರೂ, ಐದು ದಿನಗಳ ಟೆಸ್ಟ್ ಕ್ರಿಕೆಟ್ ಇನ್ನೂ ತನ್ನ ಛಾಪನ್ನು, ಅಸ್ತಿತ್ವವನ್ನು, ಅಂತಃಸತ್ವವನ್ನು ಉಳಿಸಿಕೊಂಡಿದ್ದರೆ, ಅದಕ್ಕೆ ಕಾರಣ ಕೆಲವೇ ಆಟಗಾರರು. ಆಟ ಎಂತಹುದೇ ಆಗಲಿ ಅದರಲ್ಲಿ ಕಲಾತ್ಮಕತೆಯನ್ನು ಸೃಷ್ಟಿಸಿ ಆಕರ್ಷಣೀಯವಾಗಿ ಮಾಡುವ ಕಲೆ ಕ್ರೀಡಾಪಟುಗಳ ಕೈಯ್ಯಲ್ಲಿರುತ್ತದೆ. ಇದು ಎಲ್ಲ ಕ್ರೀಡೆಗಳಿಗೂ ಅನ್ವಯಿಸುವ ವಿದ್ಯಮಾನ. ಕ್ರಿಕೆಟ್ ಆಟವೂ ಅಷ್ಟೆ. ಆಂಗ್ಲ ಭಾಷೆಯಲ್ಲಿ ಕಾಪಿಬುಕ್ ಕ್ರಿಕೆಟ್ ಎಂಬ ಒಂದು ಪದ ಬಳಸಲಾಗುತ್ತದೆ. ಬಹುಶಃ ಕೆಲವೇ ಆಟಗಾರರು ಈ ಪದವನ್ನು ಸಾರ್ಥಕಗೊಳಿಸಿದ್ದಾರೆ.
ಒಂದು ಚೆಂಡನ್ನು ಹೇಗೆ ಆಡಬೇಕೋ ಹಾಗೆಯೇ ಆಡುವ ಈ ಕಾಪಿಬುಕ್ ಕ್ರಿಕೆಟ್ಗೆ ಜೆಫ್ರಿ ಬಾಯ್ಕಾಟ್, ಜಿ.ಆರ್. ವಿಶ್ವನಾಥ್, ಸುನಿಲ್ ಗವಾಸ್ಕರ್ ಮುಂತಾದವರು ಒಂದು ಹೊಸ ಆಯಾಮವನ್ನೂ ನೀಡಿದ್ದಾರೆ. ಇಂತಹ ದಿಗ್ಗಜರ ಸಾಲಿಗೆ ಸೇರುವವರು ಇತ್ತೀಚೆಗೆ ತಮ್ಮ ಕ್ರಿಕೆಟ್ ಜೀವನಕ್ಕೆ ಅಂತ್ಯ ಹಾಡಿದ ಭಾರತದ ಪ್ರತಿಷ್ಠಿತ ಗೋಡೆ ರಾಹುಲ್ ದ್ರಾವಿಡ್. ಏಕ ದಿನ ಪಂದ್ಯಗಳ ಪ್ರಭಾವದಿಂದ ಕ್ರಿಕೆಟ್ ಒಂದು ಮನರಂಜನೆಯಾಗಿ, ಚಿಯರ್ ಗಲ್ಸರ್್ ಪರಂಪರೆಯನ್ನೂ ಅಪ್ಪಿಕೊಂಡಿರುವ ಆಧುನಿಕ ಸಂದರ್ಭದಲ್ಲೂ ಕ್ರಿಕೆಟ್ನ ಆಂತರಿಕ ಸೌಂದರ್ಯವನ್ನು ಉಳಿದಿದೆ ಎಂದರೆ ಅದಕ್ಕೆ ರಾಹುಲ್ ದ್ರಾವಿಡ್ ಅವರಂತಹ ಕೆಲವೇ ಆಟಗಾರರು ಕಾರಣ. ಜಿ.ಆರ್.ವಿಶ್ವನಾಥ್,ಗವಾಸ್ಕರ್, ರಿಚಡ್ಸರ್್, ಲಾಯ್ಡ್, ಬಾಯ್ಕಾಟ್, ಲಾರಾ, ಸ್ಟೀವ್ ವಾ, ಅರವಿಂದ ಡಿಸಿಲ್ವ, ಡೇವಿಡ್ ಗೋವರ್, ಗ್ರೆಗ್ ಚಾಪೆಲ್ ಮುಂತಾದ ದಿಗ್ಗಜರ ಸಾಲಿನಲ್ಲೇ ಅವರ ಪರಂಪರೆಯನ್ನೇ ಭಾರತದ ಗೋಡೆ ಎಂದೇ ಪ್ರಸಿದ್ಧಿಯಾಗಿರುವ ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟ್ನ ಸೌಂದರ್ಯವನ್ನು ಉಳಿಸಿ ಬೆಳೆಸಿದ್ದಾರೆ. ಯಾವುದೇ ಕ್ರೀಡಾಪಟುವಿಗೆ ಅರಂಗೆಟ್ರಂ ಇರುವಂತೆ ನಿವೃತ್ತಿಯ ಸಂದರ್ಭವೂ ಇರುತ್ತದೆ. ಇಂದು ರಾಹುಲ್ ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ. ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ರಾಹುಲ್ ಸೂಕ್ತ ನಿಧರ್ಾರವನ್ನೇ ಕೈಗೊಂಡಿದ್ದಾರೆ. ಒಬ್ಬ ಆಟಗಾರನಿಗೆ ಆತ್ಮ ತೃಪ್ತಿಗಿಂತಲೂ ಹೆಚ್ಚಿನದ್ದು ಯಾವುದೂ ಇರುವುದಿಲ್ಲ. ಇರಲೂ ಕೂಡದು.
ರಾಹುಲ್ ದ್ರಾವಿಡ್ ಕ್ರಿಕೆಟ್ ಆಟದ ಒಂದು ಪ್ರಾತ್ಯಕ್ಷಿಕೆ ಮತ್ತು ಪ್ರಯೋಗಾಲಯವೆಂದರೆ ಅತಿಶಯೋಕ್ತಿಯಲ್ಲ. ಅವರ ಆಟದ ಶೈಲಿಯೂ ಬಹಳ ಚೆಂದ. ಎದುರಾಳಿ ಬೌಲರ್ಗಳು ಎಷ್ಟೇ ಪರಿಣಾಮಕಾರಿಯಾಗಿದ್ದರೂ ತಮ್ಮ ತಾಳ್ಮೆ ಕಳೆದುಕೊಳ್ಳದೆ, ನಿಯಮಾನುಸಾರ ಚೆಂಡನ್ನು ಎದುರಿಸುತ್ತಿದ್ದ ರಾಹುಲ್ ಅನಗತ್ಯವಾಗಿ ಔಟ್ ಆಗಿರುವುದು ಬಹಳ ಅಪರೂಪ. ಬಹುತೇಕ ಸಂದರ್ಭಗಳಲ್ಲಿ ಅವರು ಔಟ್ ಆಗಿರುವುದು ಅತ್ಯುತ್ತಮ ಬೌಲಿಂಗ್ಗೇ ಎಂಬುದೂ ಅಷ್ಟೇ ಸತ್ಯ. ಕನರ್ಾಟಕದ ಹೆಮ್ಮೆ ಎಂದರೆ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಕಂಡಿರುವ ಕಲಾತ್ಮಕ ಕ್ರಿಕೆಟ್ ಕಲಿಗಳ ಪೈಕಿ ಇಬ್ಬರು ಅಪ್ರತಿಮ ಕ್ರೀಡಾಪಟುಗಳನ್ನು ರಾಜ್ಯ ಕೊಡುಗೆಯಾಗಿ ನೀಡಿದೆ. ಜಿ. ಆರ್. ವಿಶ್ವನಾಥ್ ಮತ್ತು ರಾಹುಲ್ ದ್ರಾವಿಡ್ ಈ ಹೆಮ್ಮೆಯ ಪುತ್ರರು.
ಸಚಿನ್ ತೆಂಡೂಲ್ಕರ್, ಗಂಗೂಲಿ ಅವರಿಗೆ ದೊರೆತ ಮಾಧ್ಯಮ ಪ್ರಚಾರವಾಗಲೀ, ಜಾಹೀರಾತು ಲೋಕದ ಅವಕಾಶಗಳಾಗಲೀ ರಾಹುಲ್ಗೆ ದೊರೆಯದಿದ್ದರೂ, ಕ್ರಿಕೆಟ್ ಮೈದಾನದಲ್ಲಿ ಈ ಸುಂದರ ಕ್ರೀಡೆಗೆ ಮತ್ತಷ್ಟು ಮೆರುಗು ನೀಡಿದ ರಾಹುಲ್ ತಮ್ಮ ಕಲಾತ್ಮಕ ಆಟದ ಮೂಲಕವೇ ಜನಮಾನಸದಲ್ಲಿ ನೆಲೆಮಾಡಿದ್ದರು. ಭಾರತದ ಸಂದರ್ಭದಲ್ಲಿ ಹೇಳುವುದಾದರೆ ರಾಹುಲ್ ದ್ರಾವಿಡ್ ಜಯಸಿಂಹ, ಪಟೌಡಿ ಮತ್ತು ಜಿಆರ್ವಿ ಅವರ ಸಾಲಿನಲ್ಲಿ ನಿಲ್ಲುತ್ತಾರೆ. ರನ್ ಗಳಿಸುವುದು, ಶತಕ ಬಾರಿಸುವುದು, ದಾಖಲೆಗಳನ್ನು ಮುರಿಯುವುದೇ ಕ್ರಿಕೆಟ್ ಜೀವನವಲ್ಲ, ಬದಲಾಗಿ ತಮ್ಮೊಡನೆ ಆಡುವ ಯುವ ಪೀಳಿಗೆಗೆ ಒಂದು ಮಾದರಿಯನ್ನು ಸೃಷ್ಟಿಸುವುದು ಒಬ್ಬ ಕಲಾತ್ಮಕ ಆಟಗಾರನ ಆದ್ಯತೆಯಾಗಿರಬೇಕು. ಈ ನಿಟ್ಟಿನಲ್ಲಿ ರಾಹುಲ್ ವಿಶಿಷ್ಟ ಸ್ಥಾನದಲ್ಲಿ ನಿಲ್ಲುತ್ತಾರೆ. ಭಾರತ ತಂಡದ ನಾಯಕತ್ವವನ್ನೂ ವಹಿಸಿದ್ದ ರಾಹುಲ್ ಆರಂಭಿಕ ಬ್ಯಾಟ್ಸ್ಮನ್ ಆಗಿ, ಮಧ್ಯಮ ವರ್ಗದ ಬ್ಯಾಟ್ಸ್ಮನ್ ಆಗಿ, ವಿಕೆಟ್ ಕೀಪರ್ ಆಗಿ ಮತ್ತು ಉತ್ತಮ ಕ್ಷೇತ್ರ ರಕ್ಷಕರಾಗಿ ಭಾರತವನ್ನು ಯಶಸ್ವಿಯಾಗಿ ಪ್ರತಿನಿಧಿಸಿದ್ದಾರೆ.
ತಮ್ಮ ತಂಡದ ಒಳಿತಿಗಾಗಿ ಯಾವ ಜವಾಬ್ದಾರಿಯನ್ನಾದರೂ ಹೊರಲು ಸಿದ್ಧರಾಗಿದ್ದ ದ್ರಾವಿಡ್ ಅತ್ಯುತ್ತಮ ಕೀಪರ್ ಸಹ ಆಗಿದ್ದರು. ಹಲವು ಸಂದರ್ಭಗಳಲ್ಲಿ ಭಾರತ ತಂಡದಲ್ಲಿ ಆರಂಭಿಕ ಬ್ಯಾಟ್ಸ್ಮನ್ಗಳ ಕೊರತೆ ಇದ್ದಾಗ ಅದನ್ನು ನೀಗಿಸಿದವರೂ ದ್ರಾವಿಡ್ ಮಾತ್ರ. ಅದೂ ಟೆಸ್ಟ್ ಕ್ರಿಕೆಟ್ನಲ್ಲಿ. ಅವರ ತಾಳ್ಮೆ, ಸಂಯಮ ಮತ್ತು ರನ್ಗಳಿಸುವ ಹಸಿವು ಅಪ್ರತಿಮ. ಆದರೆ ಎಂದೂ ದಾಖಲೆಗಳಿಗಾಗಿ ಆಡಿದವರಲ್ಲ. ತಮ್ಮ ವೈಯ್ಯಕ್ತಿಕ ದಾಖಲೆಗಾಗಿ ತಂಡವನ್ನು ಬಲಿ ನೀಡಿದವರಲ್ಲ. ಒಬ್ಬ ಆಟಗಾರನ ಹೆಸರು ಜನಮಾನಸದಲ್ಲಿ ನೆಲೆಸುವುದು ದಾಖಲೆಗಳಿಂದಲ್ಲ, ಅವರ ಆಟದ ಶೈಲಿ ಮತ್ತು ಕಲಾತ್ಮಕತೆಯಿಂದ. ಅವರ ಈ ಕಲಾತ್ಮಕತೆಯೇ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿರುತ್ತದೆ. ದ್ರಾವಿಡ್ ವಿಶ್ರಮಿಸಲಿ ಆದರೆ ಯುವ ಪೀಳಿಗೆಗೆ ಅವರ ಮಾರ್ಗದರ್ಶನ ಸದಾ ಲಭ್ಯವಾಗುತ್ತಿರಲಿ.]]>
ರಾಹುಲ್ ದ್ರಾವಿಡ್ ಬಗ್ಗೆ ನಾ ದಿವಾಕರ್





0 Comments