ಪ್ರತಿಕ್ರಿಯೆಗೆ ಸ್ವಾಗತ..
ರಾಮ ಮತ್ತಿತರ ದೇವ ದೇವಿಯರು
ಡಾ ಕೆ ಪಿ ನಟರಾಜ
ಮೊನ್ನೆ ರಾಮ ನವಮಿ …ರಾಮನಂತಹ ಅಸಂಖ್ಯ ಮೂರ್ತಿಗಳನ್ನು ಕಡೆದ ಕಲಾಕಾರರು ನಾವು ಭಾರತೀಯರು ಅಂತಹವರಲ್ಲಿ ರಾಮನೂ ಒಬ್ಬ.
ರಾಮನಲ್ಲಿ ವಿಶೇಷವಾದ ಹುಳುಕು ಹುಡುಕಬಾರದು ಅನ್ನಿಸುತ್ತದೆ..ಯಾಕೆಂದರೆ ಅವನು ಪಾಪ ನಮ್ಮ ಸಮಷ್ಟಿ ವ್ಯಕ್ತಿತ್ವದ ಬಿಂಬವಷ್ಟೇ. ಅವನು ನಮ್ಮ ಮನಃತತ್ವವನ್ನಷ್ಟೇ ಬಿಂಬಿಸುತ್ತಾನೆ . ಬೇರೆ ಅವನಿಗೆ ಸೀಮಿತವಾದ ನಮ್ಮಲ್ಲಿಲ್ಲದ ಮತ್ತೇನನ್ನೂ ಅಲ್ಲ..
ನಮ್ಮಲ್ಲಿರುವ ಸಂಶಯಗ್ರಸ್ತ ಪತ್ನಿ ಪೀಡಕನನ್ನು, ಪಿತೃ ಮೌಲ್ಯ ಸಮರ್ಥಕನನ್ನು, ಆರ್ಯೇತರ ಕುಲಗಳ ಬಗ್ಗೆ ಪೂರ್ವಾಗ್ರಹ ಹೊಂದಿರುವವನನ್ನು, ಮರೆಯಲ್ಲಿ ನಿಂತು ಶತ್ರುಗಳನ್ನು ನಿವಾರಿಸುವವನನ್ನು ,..ಇತ್ಯಾದಿ ಇತ್ಯಾದಿ..
ಅದೇ ರೀತಿ ತಂದೆಯ ಮಾತು ನಡೆಸಿಕೊಟ್ಟ, ಕಠಿಣ ವನವಾಸಕ್ಕೆ ತಲೆಗೊಟ್ಟ, ರಾಜ್ಯಾಧಿಕಾರವನ್ನು ನಿರಾಕರಿಸಿದ ತರುಣ ಅದರ್ಶವಾದಿ ರಾಮನೂ ಈ ಪ್ರತಿಮೆಯಲ್ಲಿ ಅವಿನಾಭಾವವಾಗಿ ಕಡೆಯಲ್ಪಟ್ಟಿದ್ದಾನೆ.
ಆದ್ದರಿಂದ ನಮ್ಮ ಬಿಂಬ ಅವನು. ನಾವು ಸರಿಹೋದಂತೆ ಅವನೂ ಸರಿಹೋಗುತ್ತಾನೆ. ಭಾರತ ಅಂತಹ ರಾಮಪರಂಪರೆಯನ್ನು ಕಡೆದಿದೆ ಕೂಡಾ. ಭವಭೂತಿಯಿಂದ ಕುವೆಂಪುವರೆಗೆ ಈ ರಾಮ ರೂಪ ಮಾನವೀಕರಣಕ್ಕೆ ಒಳಗಾಗುತ್ತಲೇ ಬಂದಿದೆ
ಅದಕ್ಕೇ ಕುವೆಂಪು, ಕಲಾಕೃತಿಗಳು ಪ್ರತಿಮೆಗಳು… ಎಂದೂ ಬದಲಾಗದ ತದ್ವತ್ xerox ಗಳಲ್ಲ… ಪ್ರತಿಕೃತಿಗಳಲ್ಲ ಅಂದರು
ಈಗ ನಾನಿರುವ ಮಧುಗಿರಿಯ ದೇವತೆ ದಂಡಿನಮಾರಮ್ಮನ ಕುರಿತು ಹೇಳುವೆ.. ಈಯಮ್ಮನಿಗೆ ವರ್ಷ ವರ್ಷವೂ ಕೋಣನ ಬಲಿ ಬೀಳುತ್ತಿತ್ತು. ಈ ವರ್ಷ ಕಾಯ್ದೆಯ ಕಾರಣಕ್ಕೆ ಕೋಣನ ಬಲಿ ಕೊಡಲಾಗಲಿಲ್ಲ ಅನ್ನಲಾಗುತ್ತದೆ..
ಮಧುಗಿರಿ ಮಾರಮ್ಮನಿಗೆ ಕೋಣದಂತಹ ಅಮಾಯಕ ಪ್ರಾಣಿಯನ್ನು ಬಲಿಕೊಡುವುದು ಜೀವವಿರೋಧಿ ಕೃತ್ಯ ಆದರೆ ಅದು ಜನತೆಯ ನಂಬಿಕೆ, ಈ ಜನತೆಯ ನಂಬಿಕೆಯ ಕಾರಣ ಈ ಊರ ಮಾರಮ್ಮನೂ ಪ್ರಾಣಿ ಬಲಿಯ ದೇವಿಯಾಗಿ ಚಿತ್ರಿತವಾಗುತ್ತಾಳೆ ಅಥವಾ ಪ್ರತಿಮಿಸಲ್ಪಡುತ್ತಾಳೆ.
ಅದು ಅವಳ ತಪ್ಪಲ್ಲ ಅದು ಹಿಂಸಾರಭಸಮತಿ ಮನುಜ ಮಾತ್ರರದ್ದು. ಆದರೆ ಬಲಿ ಪಡೆದ ಕಾರಣಕ್ಕಾಗಿ ಆ ಒಳಿತು ಕೆಡುಕನ್ನು ಆ ದೇವಿ ಹೊರಬೇಕಾಗಿ ಬರುತ್ತದೆ..
ಅದೇ ರೀತಿ ರಾಮ ಕೂಡಾ. ರಾಮನ ವ್ಯಕ್ತಿತ್ವದ ದೋಷಗಳು ಸಮಾಜಸ್ಥಿತ ದೋಷಗಳು. ಅವುಗಳನ್ನು ರಾಮ ಪಾತ್ರ ಹೊತ್ತು ಪ್ರತಿಮಿಸಲ್ಪಟ್ಟಿದೆ.. ಆದಿಕವಿಯ ಕಾವ್ಯ ಈ ಬಗೆಯಲ್ಲಿ ನಮ್ಮಸಾಮಾಜಿಕ ವ್ಯಕ್ತಿತೆಯನ್ನು ರಾಮ ಮೂರ್ತಿಯಲ್ಲಿ ಅಳಿಸಲಾಗದಂತೆ ಪ್ರತಿಮಿಸಿಬಿಟ್ಟಿದೆ.
ಆ ಪ್ರತಿಮೆಯನ್ನು ಸುಂದರಗೊಳಿಸಬಹುದಾದದ್ದು ಆ ರಾಮನನ್ನು ಸೃಷ್ಟಿಸಿದ ಜನಪದವೇ. ಹೇಗೆ ದಂಡಿನ ಮಾರಮ್ಮನಿಗೆ ಕೋಣನ ಬಲಿಗೊಡದೆ ಅವಳಿಗೆ ಹೂವು ಹಣ್ಣು ಕಾಯಿ ಆರತಿಯಿಂದ ಭಕ್ತಿಯನ್ನು ಸಮರ್ಪಿಸಿ ಅವಳಿಗೆ ಹೊದಿಸಿದ್ದ ಹಿಂಸಾವಕುಂಠನವನ್ನು ತೆಗೆದೆಸೆದರೋ ಹಾಗೆ
ಇಂಡಿಯಾದ ದೇವರುಗಳು ನಮ್ಮ ಜನಪದದ ವ್ಯಕ್ತಿತೆಯ ಪಾಪ ಪುಣ್ಯಾಂಶಗಳ ಪ್ರತಿಮೆಗಳಷ್ಟೇ. ಅವುಗಳ ಸೃಜನಶೀಲ ವಿಮರ್ಶೆ ನಮ್ಮನ್ನು ಉನ್ನತಿಕೆಯತ್ತ ಮುನ್ನಡೆಸಲು ನೆರವಾಗಬೇಕು ..
ಅವುಗಳ ಕಟುಟೀಕೆ ತಿರಸ್ಕಾರ ಸಲ್ಲದ ಜಡತೆಯದು ..
0 ಪ್ರತಿಕ್ರಿಯೆಗಳು