Reaction
ಪೆರಿಯಾರ್ ಜನ್ಮೋತ್ಸವದಲ್ಲಿ ಭಗವಾನ್ ಹೇಳಿಕೆ ಮತ್ತು ಅದು ಹುಟ್ಟು ಹಾಕಿದ ವಿರೋಧಕ್ಕೆ ಮೇಲ್ಗಣ್ಣಿಗೆ ಕಾಣದ ಇನ್ನೊಂದು ಕಾರಣವಿದೆ . ಅದು ಪುರುಷ ಪ್ರಜ್ಞೆಯನ್ನು ಸಿಟ್ಟಿಗೇಳಿಸಿದೆ ಎಂದು ಸಂವರ್ತಾ ಸಾಹಿಲ್ ಬರೀತಾರೆ. ಇದಕ್ಕೆ ರಾಘವೇಂದ್ರ ಜೋಷಿ ನೀಡಿದ ಪ್ರತಿಕ್ರಿಯೆ ಇಲ್ಲಿದೆ.
ರಾಘವೇಂದ್ರ ಜೋಷಿ
“ರಾಮ ಅಪ್ಪನಿಗೆ ಹುಟ್ಟಿದವನಲ್ಲ..” ಎಂಬ ಭಗವಾನ್ ಅವರ ಮಾತಿನಲ್ಲಿ ಮುಖ್ಯವಾದದ್ದು ಏನೋ ಇದೆ ಅಂತ ನನಗನಿಸುವದಿಲ್ಲ. ರಾಮ ದಶರಥನಿಂದ ನೇರವಾಗಿ ಹುಟ್ಟಿದ್ದಲ್ಲ ಅಂತ ರಾಮಾಯಣದಲ್ಲಿದ್ದರೂ ಕೂಡ!
ವೈಯಕ್ತಿಕವಾಗಿ ನನಗೆ ರಾಮ, ರಾವಣ, ಸೀತೆ, ಹನುಮ, ಶೂರ್ಪನಖಿ, ತಾಟಕಿಯರು ಒಂದೊಂದು ಕಾನ್ಸೆಪ್ಟುಗಳಷ್ಟೇ. ಒಳ್ಳೆಯತನ, ಕೆಟ್ಟತನ, ಕಾಮುಕತೆ, ಕ್ಷುದ್ರತೆ, ಲಂಪಟತನ, ಹೀರೋತನದ ಪಾತ್ರಗಳಷ್ಟೇ. ಇಲ್ಲಿ, “ಹೀಗೆ ಮಾಡಿದರೆ, ಹೀಗೆ ಫಲ ಸಿಗುತ್ತದೆ..” ಅನ್ನುವ ಫಾರ್ಮುಲಾ ಡಿರೈವ್ ಮಾಡಿಟ್ಟಿರುವ ಒಂದು ಸೂತ್ರವೆಂಬಂತೆ ಇಡೀ ರಾಮಾಯಣವನ್ನು ನೋಡುತ್ತೇನೆಯೇ ಹೊರತು, ರಾಮನ ಪಾತ್ರವನ್ನು ರಾವಣ ಮಾಡಿದ್ದರೂ, ಮಂಡೋದರಿಯನ್ನು ರಾಮನೇ ಹೊತ್ತೊಯ್ದಿದ್ದರೂ ಪರಿಣಾಮ ಒಂದೇ ಆಗಿರುತ್ತಿತ್ತು ಅಂತ ಭಾವಿಸುತ್ತೇನೆ.
ಏನೋ ಒಂದು ಬಲಿಷ್ಠ ಸಂದೇಶ ಕೊಡುವ ನಿಟ್ಟಿನಲ್ಲಿ ಕತೆ ಹೆಣೆಯುವ ಕತೆಗಾರ ಬಿಳುಪಿನ ಜೊತೆ ಕಪ್ಪು ಬಣ್ಣವನ್ನೂ ಬೇಕಂತಲೇ ಸೃಷ್ಟಿಸುತ್ತಾನೆ. ಇಲ್ಲಿ, ಬಿಳಿ ಯಾಕೆ ಸತ್ಯ, ಕಪ್ಪು ಯಾಕೆ ಮಿಥ್ಯ ಅಂತ ತಗಾದೆ ತಗೆದರೆ ನಾವು ಹೊಸತನ್ನೇನೂ ಹೇಳಿದಂತಾಗದು. ಅಸಲಿಗೆ, ಬಿಳಿಯ ಜಾಗದಲ್ಲಿ ಕಪ್ಪಿದ್ದರೂ, ಕಪ್ಪಿನ ಜಾಗದಲ್ಲಿ ಬಿಳಿ ಬಂದು ಕುಳಿತರೂ ಏನೇನೂ ಫರಕಾಗದು. ಒಟ್ಟಿನಲ್ಲಿ, ಮಿಥ್ಯೆಯ ಮೇಲೆ ಸತ್ಯದ ಜಯ ನಿಕ್ಕಿಯಾಗಿರಬೇಕಷ್ಟೇ.
ಪುರುಷಾಲಂಕಾರ, ಪುರುಷಹಂಕಾರ ಇವೆಲ್ಲ ನನಗನಿಸುವಂತೆ ಕೇವಲ ಕೂದಲು ಸೀಳಿ ನೋಡುವ ಕ್ರಮಗಳಷ್ಟೇ. ಇದರಿಂದ ಈಗಾಗಲೇ ಡಿರೈವ್ ಆಗಿರುವ ಫಾರ್ಮುಲಾಗಳಿಗಿಂತ ಹೊಸತಾದ, ಸಕಾಲಿಕವಾದ ಮತ್ತು ಸಾರ್ವಕಾಲಿಕವೂ ಅನಿಸುವಂಥ ಬೇರೆ ಯಾವುದಾದರೂ ಫಾರ್ಮುಲಾ ಬರಬಹುದು ಅನ್ನುವ ನಿರೀಕ್ಷೆ ನನ್ನಲ್ಲಿಲ್ಲ..
0 ಪ್ರತಿಕ್ರಿಯೆಗಳು