ರಾಜ್ಯೋತ್ಸವ ನವೆಂಬರ್ ಗೆ ಮಾತ್ರ ಸೀಮಿತವಾಗದಿರಲಿ
– ಮಮತಾ ಜಿ
ರಾಜ್ಯೋತ್ಸವದ ಆಚರಣೆ ಕೇವಲ ನವೆಂಬರ್ಗೆ ಮಾತ್ರ ಸೀಮಿತವಾಗದೆ ವರ್ಷದ ಎಲ್ಲಾ ದಿನದಲ್ಲೂ ಕನ್ನಡದ ಕಂಪು ಪಸರಿಸಬೇಕು ಎಂದು ಖ್ಯಾತ ಸಾಹಿತಿ ಮತ್ತು 78ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಸಿ. ಪಿ. ಕೃಷ್ಣಕುಮಾರ್ ಹೇಳಿದರು. ಅವರು ನಗರದ ಹೊರವಲಯದ ಸೋಲದೇವನಹಳ್ಳಿಯಲ್ಲಿರುವ ಆಚಾರ್ಯ ವಿದ್ಯಾಸಂಸ್ಥೆಯು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದುವರೆದ ಅವರು `ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಕನ್ನಡ ಅಳಿವಿನ ಹಾದಿಯಲ್ಲಿದೆ, ಇದು ಹೀಗೆ ಮುಂದುವರೆದರೆ ಕನ್ನಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗದಂತೆ ಇಂದೇ ನಾವು ಎಚ್ಚೆತ್ತುಕೊಳ್ಳಬೇಕು. ರಾಜ್ಯೋತ್ಸವ ನಿತ್ಯೋತ್ಸವ ಆಗಬೇಕುಎಂದರು. ಇಂಗ್ಲಿಷ್ ವ್ಯಾಮೋಹದ ಕುರಿತು ಪ್ರಸ್ತಾಪಿಸಿದ ಅವರು `ಇಂದಿನ ಯುವಸಮುದಾಯದಲ್ಲಿ ಇಂಗ್ಲೀಷ್ ವ್ಯಾಮೋಹ ಹೆಚ್ಚಾಗುತ್ತಿದೆ. ಭಾಷೆಯಾಗಿ ಇಂಗ್ಲಿಷ್ ಬೇಕು ಆದರೆ ಮಾಧ್ಯಮವಾಗಿ ಬೇಡ. ಯಾವ ಭಾಷೆಯನ್ನೂ ದ್ವೇಷಿಸದೇ ಎಲ್ಲವನ್ನೂ ಪ್ರೀತಿಸಬೇಕು ಎಂದು ಕಿವಿಮಾತು ಹೇಳಿದರು. `ವಿಶ್ವಮಾನವ ಎಂದೇ ಕರೆಸಿಕೊಂಡಿದ್ದ ವಿವೇಕಾನಂದರಿಗೂ ಇಂಗ್ಲೀಷ್ನ ಮೋಹ ಇರಲಿಲ್ಲ. ಅವರು ತಮ್ಮ ಬಂಗಾಳಿ ಭಾಷೆಗೇ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಗಾಂಧೀಜಿ ಕೂಡ ‘ನನ್ನ ಮಾತೃಭಾಷೆಯ ಅಧ್ಯಯನಕ್ಕೆ ಇನ್ನೂ ಹೆಚ್ಚು ಒತ್ತು ನೀಡಿದ್ದರೆ ಇನ್ನೂ ಕಲಿಯಬಹುದಿತ್ತು’ ಎಂದು ಹೇಳಿದ್ದನ್ನು ನೆನಪಿಸಿಕೊಂಡರು.
ಖ್ಯಾತ ಅಂಕಣಕಾರರಾದ ಪ್ರೊ. ಎಸ್. ಗುರುರಾಜ್ ಮಾತನಾಡಿ, `ಕುವೆಂಪು ಅವರು ವಿಶ್ವಮಾನವ ಸಂದೇಶವನ್ನು ಜಗತ್ತಿಗೇ ಸಾರಿದರು. ಕನ್ನಡ ಡಿಂಡಿಮವನ್ನು ಸಾಹಿತ್ಯದ ಮೂಲಕ ಪ್ರಚುರಪಡಿಸಿದ ಹೆಗ್ಗಳಿಕೆ ಅವರದು. ಅವರ ಸಂದೇಶವನ್ನು ನಾವಿಂದು ಪರಿಪಾಲಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಬರಹಗಾರರಾದ ಶ್ರೀ ಎಂ.ಎಸ್.ನರಸಿಂಹಮೂರ್ತಿ. ಎಂ.ಜೆ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಬಿ.ಎಂ.ರೆಡ್ಡಿ, ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಶ್ರೀ ಎಚ್. ಡಿ. ಮಹೇಶಪ್ಪ,ಮುಂತಾದವರು ಉಪಸ್ಥಿತರಿದ್ದರು. ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಯುತ ಚನ್ನವೀರಯ್ಯನವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದ ದೃಶ್ಯಗಳು ನಿಮಗಾಗಿ. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






0 Comments