ಆರ್ ಜಿ ಹಳ್ಳಿ ನಾಗರಾಜ್ ಅವರ ಅಂಕಣ ಬರಹಗಳ ಸಂಕಲನ ‘ಹೆದ್ದಾರಿ ಕವಲು’ ಸಧ್ಯದಲ್ಲೇ ಬಿಡುಗಡೆಯಾಗಲಿದೆ.
ಇತ್ತೀಚಿಗೆ ತಾನೇ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇವರ ಕೃತಿಗೆ ಬರೆದ ಬೆನ್ನುಡಿ ಇಲ್ಲಿದೆ
ಆರ್ ಜಿ ಎಂಬ ಬೆಳಕಿನ ಕುಡಿ
ಜಿ ಎನ್ ಮೋಹನ್
ಒಂದು ಒಳ್ಳೆಯ ಓದು ಕಳೆದುಕೊಳ್ಳಬಾರದು ಎನ್ನುವುದಾದರೆ ಆರ್ ಜಿ ಹಳ್ಳಿ ನಾಗರಾಜ್ ಅವರ ‘ಹೆದ್ದಾರಿ ಕವಲು’ ನಿಮ್ಮ ಬಳಿ ಇರಲೇಬೇಕು.
ಇದು ಒಳ್ಳೆಯ ಓದು ಮಾತ್ರವಲ್ಲ ಒಂದು ಕಾಲಕ್ಕೆ ಹಿಡಿದ ಕನ್ನಡಿ. ಒಂದು ಕಾಲಕ್ಕೆ ಹಿಡಿದ ಕನ್ನಡಿ ಮಾತ್ರವಲ್ಲ, ಸಮುದಾಯದ ತಲ್ಲಣಕ್ಕೆ ಹಿಡಿದ ಕನ್ನಡಿ. ಬರೀ ತಲ್ಲಣಗಳಿಗೆ ಹಿಡಿದ ಕನ್ನಡಿ ಅಲ್ಲ, ಸಮಾಜ, ವ್ಯಕ್ತಿ, ಹೋರಾಟದಲ್ಲಿ ಇರುವ ಮೌಲ್ಯಗಳನ್ನು ಗುರುತಿಸುವ ಕನ್ನಡಿ.
ಆರ್ ಜಿ ಹಳ್ಳಿ ನಾಗರಾಜ್ ಮಾತ್ರ ಕಾಣಬಲ್ಲ ನೋಟ ಇಲ್ಲಿದೆ.
ಆರ್ ಜಿ ಹಳ್ಳಿಗೆ ಪೊರೆಯುವ ಗುಣವಿದೆ. ಆತ ತನ್ನ ರೆಕ್ಕೆಯೊಳಗೆ ಪಿಳ್ಳೆಗಳನ್ನು ಸೇರಿಸಿಕೊಂಡು ಭರವಸೆ ನೀಡುವ ತಾಯಿಯಂತೆ. ಆತನಿಗೆ ಹೆದ್ದಾರಿಗಿಂತ ಕಾಲ್ದಾರಿಯೇ ಇಷ್ಟ. ಹೆದ್ದಾರಿಯ ಸೋಗು, ಸವಲತ್ತು, ಏಕತಾನತೆಯನ್ನು ಸದಾ ಧಿಕ್ಕರಿಸಿಯೇ ನಡೆದಾತ.
ಬೆಂಗಳೂರು ಎಂಬ ಚಕ್ರವ್ಯೂಹವನ್ನು ಸೇರಿಕೊಂಡು ದಶಕಗಳು ಕಳೆದಿದ್ದರೂ ಈತ ರಾಮಗೊಂಡನಹಳ್ಳಿಯ ಅಭಿಮನ್ಯುವೇ . ಇವನ ಬರಹಕ್ಕೂ, ಮಾತಿಗೂ, ವಿಚಾರಕ್ಕೂ ಕತ್ತಿ ಅಲುಗಿನ ಶಕ್ತಿಯಿದೆ. ನೇರಾ ನೇರ ಮಾತನಾಡುವ, ಜಗ್ಗದೆ ಪ್ರಶ್ನೆ ಎತ್ತುವ ಆರ್ ಜಿ ಹಳ್ಳಿಯ ಗುಣ ಈ ಪುಸ್ತಕದ ಪ್ರತೀ ಲೇಖನದಲ್ಲಿದೆ.
ನನಗೆ ಆರ್ ಜಿ ಎಂದರೆ ‘ಆರ್ ಜಿ’ಯೇ ಏಕೆಂದರೆ ರಾಜಿಯಾಗದ ಆರ್ ಜಿ ಈತ.
ಇವನ ಮಮತೆಯ ಗರಡಿಯಲ್ಲಿ ಬೆಳೆದ ಹುಡುಗರು ನಾವು. ಹಾಗಾಗಿ ಆತನ ಸಿಟ್ಟು ಸೆಡವು ಪ್ರೀತಿ ಮಮತೆಯನ್ನು ಅಗಾಧವಾಗಿ ಉಂಡಿದ್ದೇವೆ.
ಬಹು ಮಾಧ್ಯಮಗಳ ಮೂಲಕ ತನ್ನನ್ನು ಈಗಾಗಲೇ ಕನ್ನಡ ಲೋಕದಲ್ಲಿ ಅಚ್ಚೊತ್ತಿರುವ ಆರ್ ಜಿ ಇಡೀ ಕೃತಿಯುದ್ಧಕ್ಕೂ ತಮ್ಮ ನಿಜ ರೂಪದಲ್ಲೇ ಕಾಣಿಸಿಕೊಳ್ಳುತ್ತಾರೆ. ಆರ್ ಜಿ ಗೆ ಎರಡು ಮಾತಾಡಿ ಗೊತ್ತಿಲ್ಲ ಎರಡು ಬಗೆದೂ ಗೊತ್ತಿಲ್ಲ. ಹಾಗಾಗಿ ನಗರದಲ್ಲಿದ್ದೂ ಹಳ್ಳಿಯ ತಾಯ್ತನ ಹೊಂದಿದ್ದ ಲಂಕೇಶ್, ರಾಮದಾಸ್, ಕೃಷ್ಣ ಆಲನಹಳ್ಳಿ, ಎಂ ಡಿ ಎನ್ ರಂತೆ ಆರ್ ಜಿ ಸಹಾ ನಿಮ್ಮೊಡನಿದ್ದೂ ನಿಮ್ಮ ಬಗ್ಗೆಯೂ ಪ್ರಶ್ನೆ ಎತ್ತುವ ತಾಖತ್ತು ಉಳಿಸಿಕೊಂಡ ಅಪರೂಪದ ವ್ಯಕ್ತಿ.
ಆರ್ ಜಿ ಹಳ್ಳಿ ನಾಗರಾಜ್ ಅವರ ಈ ದಾರಿ ಎಲ್ಲರ ದಾರಿಯಾಗಿದ್ದರೆ ಜಾಗತೀಕರಣದ ಸೊಕ್ಕು ನಾವೆಂದೋ ಅಡಗಿಸಬಹುದಿತ್ತು. ಬೆಳಕಿನ ಕುಡಿ ಆರದಂತೆ ನೋಡಿಕೊಳ್ಳಬಹುದಿತ್ತು
0 ಪ್ರತಿಕ್ರಿಯೆಗಳು