ರಾಜಾಸ್ಥಾನವೆಂಬ ಸ್ವರ್ಗದ ತುಣುಕು : ಜೈಸಲ್ಮೇರ್, ಜೈಸಲ್ಮೇರ್!

(ಹಿಂದಿನ ತುಣುಕುಗಳು)

ಕರ್ಣಿ ಮಾತಾ ಮಂದಿರದಿಂದ ಸೀಧಾ ಲಾಡ್ಜಿಗೆ ನಮ್ಮ ಸವಾರಿ ಹೊರಟಿತು. ಲಾಡ್ಜ್ ತುಂಬ ಲಕ್ಷುರಿಯಿಂದ ಐಸಾರಾಮಿಯಾಗಿತ್ತು. ವಿದೇಶೀಯರಿಂದಲೇ ತುಂಬಿತ್ತು. ತಿರುಗಾಟದಲ್ಲಿ ತುಸು ಹೆಚ್ಚೇ ದಣಿದಿದ್ದುದರಿಂದ ಹಸಿವಾಗಿತ್ತು. ರಾಜಸ್ಥಾನಿ ಬಾಜರಾ ರೋಟಿಯ ಬಿಸಿಯಾದ, ರುಚಿಯಾದ ಭೋಜನ ಸವಿದು, ಬೇಗನೇ ನಿದ್ದೆಗೆ ಜಾರಿದೆವು. ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ, ಹೊರಟಾಗ, ಅಂಥ ಗದ್ದಲದಲ್ಲಿಯೂ ಕೂಡ, ನಾವು ಹಾಗೆಯೇ ಹೊರಗೆ ನಮ್ಮ ರಥ ಇನೋವಾ ಕಡೆಗೆ ಹತ್ತಲು ಅಣಿಯಾಗುತ್ತಿದ್ದಂತೆ, ಹೋಟಲ್ ಪರಿಚಾರಕ ಬಂದು ಕಾಳಜಿಯಿಂದ ತಾವು ಬ್ರೇಕ್ ಫಾಸ್ಟ್ ಮಾಡದೇ ಹೋಗುತ್ತಿದ್ದೀರಲ್ಲ, ನಮ್ಮಲ್ಲಿ ಕಾಂಪ್ಲಿಮೆಂಟ್ ಬೆಳಗಿನ ತಿಂಡಿ ಇದೆ. ತಾವು ಟಿಫನ್ ಮಾಡಿಯೇ ಹೋಗಿ, ಎಂದು ಕರೆದ. ವಿದೇಶೀಯರಿಂದಲೇ ತುಂಬಿದ್ದರಿಂದ ಹಾಗೂ ನಮಗೆ ಬಹಳ ಬೇಗ ತಿಂಡಿ ತಿಂದು ಅಭ್ಯಾಸವಿಲ್ಲದ್ದರಿಂದ ಮುಂದೆಲ್ಲಾದರೂ ನೋಡಿದರಾಯಿತು ಎಂದುಕೊಂಡೇ ಕೆಳಗೆ ಇಳಿದಿದ್ದೆವು ಹಾಗೂ ನಮಗೆ ಅಲ್ಲಿ ಕಾಂಪ್ಲಿಮೆಂಟರಿ ಟಿಫನ್ ಇರುವುದು ತಿಳಿದಿರಲಿಲ್ಲ. ಹೀಗಾಗಿ ಅವನ ಕರೆಗೆ ಓಗೊಟ್ಟು, ಅಲ್ಲಿಯೇ ಸ್ವಾದಿಷ್ಠವಾದ ಬಗೆ ಬಗೆಯ ಬಫೆಯ ತಿಂಡಿ ತಿಂದು ಹೊರಹೊರಟೆವು.
ಬಿಕಾನೇರ್ ಸಿಹಿ ತಿಂಡಿಗೆ ಸುಪ್ರಸಿದ್ಧ. ಅಲ್ಲಿಯ ಸ್ವೀಟ್ ಅಂಗಡಿಯೊಂದರಲ್ಲಿ ತರತರಹದ ತಿನಿಸುಗಳ ಹೆಸರು ನೆನಪಿಲ್ಲ, ಹಾಂ! ಬಿಸಿ ಜಿಲೇಬಿಯ ಮುಖ ಮಾತ್ರ ಗುರುತು ಸಿಕ್ಕಿತು, ಉಳಿದಂತೆ ಎಲ್ಲಾ ಅಪರಿಚಿತ ಮುಖಗಳೇ. ಕೆಲ ಗುಂಡಗೆ ಕೆಲ ಚಪ್ಪಟೆ, ಇನ್ನು ಕೆಲವಕ್ಕೆ ಆಕಾರವೇ ಇಲ್ಲ, ಅಮೀಬಾ ಅನ್ನಬಹುದು, ಹೀಗೆ ಸಿಹಿ ಮಿಕ್ಷರ್ಗಳ ತಿನಿಸುಗಳ ಪ್ಯಾಕೇಟ್ ಕಟ್ಟಿಸಿಕೊಂಡು ಜೈಸಲ್ಮೇರನೆಡೆ ನಮ್ಮ ಪ್ರಯಾಣಕ್ಕೆ ಚಾಲನೆ ನೀಡಿದೆವು. ದಾರಿಯಲ್ಲಿ ಅವುಗಳನ್ನು ಒಂದೊಂದಾಗಿ ಬಿಚ್ಚಿ ತಿನ್ನತೊಡಗಿದರೆ, ನನಗೊಬ್ಬನಿಗೇ ಇವೆಲ್ಲ ಇದ್ದರೆ ಚನ್ನಾಗಿತ್ತಲ್ಲವೆ ಎಂಬ ಮಗುವಿನ ಮೊದ್ದು ತನದ ಹಠವೊಂದು ಮನದಲ್ಲಿ ಮೂಡಿ, ಒಂದಿಷ್ಟು ಹೆಚ್ಚಿಗೆ ತಿಂದಿದ್ದನ್ನು ಆ ಮೇಲೆ ಅವರಿಗೆ ಹೇಳಿದೆ, ಮೊದಲೇ ಹೇಳಿದ್ದರೆ ನಮ್ಮದನ್ನೂ ಕೊಡುತ್ತಿದ್ದೆವಲ್ಲ ಎಂದು ಬಿಡೆಬೇಕೇ! ಎಲಾ ಸ್ವಾರ್ಥವೇ , ನೋಡು , ಕಲಿ, ಎಂದೆ ಮನಸ್ಸಿಗೆ, . ಉಹೂಂ, ಪ್ರೀತಿಯಲ್ಲಿ, ಊಟದಲ್ಲಿ ಎಲ್ಲಾ ಸರಿಯೇ ಎಂದಿತು ಸೋಲದ ಮನಸ್ಸು. !
ಬೀಕಾನೇರನ ನೆಲದ ಕೆಲ ಭಾಗಕ್ಕೆ ಗ್ರೇಟರ್ ಗ್ಯಾಂಜಿಸ್ ಪ್ರೊಜೆಕ್ಟ್ನ ಕಾಲುವೆ ಹರಿದಿದ್ದು, ಅದರ ಕೆಲ ಭಾಗಗಳಿಗೆ ನೀರು ಲಭ್ಯವಿದೆ ಹಾಗೂ ನೀರಾವರಿ ಸೌಲಭ್ಯವಿದೆ ಎಂದು ಸರವನ್ ತಿಳಿಸಿದ. ನಾವು ಹೊರಟ ದಾರಿಯಲ್ಲಿ ಅದರ ಸುಳಿವೆಲ್ಲೂ ಕಾಣಿಸಲಿಲ್ಲ, ಅದೇ ಬಂಜರು ಬರಡು ಕುರುಚಲು ಪೊದೆಗಳ ಸಮತಟ್ಟಾದ ಒಣ ಭೂಮಿ ಸುತ್ತಲೂ , ಮುಂದೆಯೂ, ಹಿಂದೆಯೂ ಎಡಕ್ಕೂ ಬಲಕ್ಕೂ . ಎಲ್ಲಿಯೂ ಸಣ್ಣ ಬೆಟ್ಟಗಳೂ ಕೂಡ ಇಲ್ಲ, ಎಲ್ಲವೂ ಸಾಗರದಂತೆ ಸಮತಟ್ಟು. ಭೂಮಿಯು ಗುಂಡಗೆ ಇರುವುದರಿಂದ ಅದೇ ಮರೆಯಾಗುತ್ತದೆ, ನಮ್ಮ ಕಣ್ಣುಗಳಿಂದ. …..ಅಡೆತಡೆಗಳೇ ಇಲ್ಲ. ಜಾಲಿಯ ಗಿಡಗಳೂ ಕೂಡ ಬರಬರುತ್ತ ವಿರಳವಾಗುತ್ತ ಸಾಗುತ್ತದೆ ದಾರಿ. ರಾಜಸ್ಥಾನದಲ್ಲಿ ರಸ್ತೆಗಳನ್ನು ತುಂಬ ಉತ್ತಮ ಗುಣಮಟ್ಟದಲ್ಲಿ ಕಾಯ್ದುಕೊಂಡಿದ್ದಾರೆ. ನಾವು ಇದುವರೆಗೂ ಪಯಣಿಸುತ್ತಿದ್ದುದು ರಾಷ್ಟ್ರೀಯ ಹೆದ್ದಾರಿಗಳಲ್ಲಿ. ಈಗ ನಾವು ಚಲಿಸುತ್ತಿದ್ದುದು ಕೂಡ ಎನ್ ಹೆಚ್ 15 ರಲ್ಲಿ. ಬೀಕಾನೇರ್ದಿಂದ ಜೈಸಲ್ಮೇರ್ ಸುಮಾರು 330 ಕಿಮೀ. ಹೀಗಾಗಿ ನಮ್ಮ ಪಯಣದ ವೇಗ 80 ಕಿಮೀ ಕಾಯ್ದುಕೊಂಡಿದ್ದ ಸರವನ್. ಆದರೂ ನಡುನಡುವೆ ರಸ್ತೆ ಮಧ್ಯೆ ಕುರಿ ಆಡುಗಳ ಹಿಂಡುಗಳು, ಜಿಂಕೆಗಳು, ನವಿಲುಗಳು ಬಹಳ ಸಂಖ್ಯೆಯಲ್ಲಿ ಕಾಣಸಿಗುತ್ತವೆ, ಹೀಗಾಗಿ ಸ್ವಲ್ಪ ಕಡಿಮೆ ವೇಗದಲ್ಲಿ ನಡೆಸಲು ಇಷ್ಟಪಡುತ್ತಾರೆ ಡ್ರೈವರುಗಳು. ಕಾನೂನುಗಳು ಬಹಳ ಸ್ಟ್ರಿಕ್ಟ್ ಅಲ್ಲಿ, ಹೀಗಾಗಿ ಬಹಳ ಜಾಗ್ರತೆ ವಹಿಸಲೇ ಬೇಕು. ಅದು ಇರಬೇಕು ಕೂಡ ಅಲ್ಲವೇ.. ನಾವಂತೂ ಅವನಿಗೆ ಯಾವುದೇ ರಿಸ್ಟ್ರಿಕ್ಷನ್ ಹಾಕಿರಲಿಲ್ಲ. ಬಿ ಕಂಫರ್ಟೆಬಲ್ ಎಂದೇ ಹೇಳುತ್ತಿದ್ದೆ..

ಮೊದಲು ಈಗ ಒಂದಿಪ್ಪತ್ತು ವರ್ಷಗಳ ಹಿಂದೆ ಅಲ್ಲಿ ದಾರಿ ಮಧ್ಯದಲ್ಲಿ ಹಳ್ಳಿಗಳ ಹೊರತಾಗಿ,, ಎಲ್ಲಿಯೂ ಜನಸಂಖ್ಯೆಯೇ ಇರುತ್ತಿರಲಿಲ್ಲ. ಈಗ ಬೋರವೆಲ್ಗಳು ಬಂದ ಮೇಲೆ, ಕೆಲವು ಜಾಗಗಳಲ್ಲಿ ಕೆಲ ಬೊಗಸೆಯಷ್ಟಾದರೂ ಉಪ್ಪು ನೀರಾದರೂ ದೊರೆಯುತ್ತದೆ. ಹೀಗಾಗಿ ಅಲ್ಲಲ್ಲಿ ಹೊಲಗಳಲ್ಲಿ ಜನ ತಮ್ಮ ಜಾನುವಾರುಗಳೊಂದಿಗೆ ಅಪರೂಪವಾಗಿ ವಾಸವನ್ನೂ ಮಾಡತೊಡಗಿದ್ದಾರೆ ಎಂದು ಹೇಳುತ್ತಿದ್ದ, ಇವೂ ಕೂಡ ವಿರಳಾತಿ ವಿರಳ. ಮೊದಲು ಅಲೆಮಾರಿ (ನೋಮ್ಯಾಡಿಕ್) ಕುರಿಗಾಹಿಗಳು ರಸ್ತೆ ಅಂಚಿಗೆ ನಿಂತು, ನೀರಿಗಾಗಿ ಕೈಚಾಚಿ ನಿಲ್ಲುತ್ತಿದ್ದರಂತೆ, ಆ ಕಡೆ ಹೋಗುವ ಲಾರಿಗಳವರು ಇವರಿಗಾಗಿ ಖಾಲಿ ಬಾಟಲಿಗಳನ್ನು ತುಂಬಿಟ್ಟುಕೊಂಡು ಇವರು ಕಂಡಲ್ಲೆಲ್ಲ ಅವರತ್ತ ಎಸೆಯುತ್ತಿದ್ದರು, ಮತ್ತು ಈ ಪದ್ಧತಿ ಈಗಲೂ ಪ್ರಚಲಿತದಲ್ಲಿದೆಯಂತೆ.
ತೀರ ಇತ್ತೀಚೆಗೆ ಸರವನ್ ಒಂದು ಕೋಲ್ಕತ್ತದ ಕುಟುಂಬವನ್ನು ರಾಜಸ್ಥಾನದ ಪ್ರವಾಸಕ್ಕೆ ಕರೆದೊಯ್ದಿದ್ದನಂತೆ. ಈ ಬಟಾ ಬಯಲು ನೋಡಿ ಅವರಿಗೆ ಅತೀವ ಖುಷಿಯಾಗಿತ್ತು. ಹೀಗೂ ಇರಲು ಸಾಧ್ಯವೇ? ‘ ಕಿತನಾ ‘ಫಾಕಾ ಫಾಕಾ( ಖಾಲೀ ಖಾಲೀ) ‘, ಹಮ್ ಉಧರ್ ಕಿತನಾ ಛೋಟಾ ಜಗಾ ಮೆಂ ರಹತೇ ಹೈಂ. ಯಹಾಂ ತೊ ಆಸಮಾನ್ ಜೈಸೆ ಸೈಟ್ಸ್ ಪಡೇ ಹೈಂ,’ ( ಇಲ್ಲಿ ಎಷ್ಟೆಲ್ಲಾ ಖಾಲಿ ಆಗಸದಷ್ಟು ಅಗಲ ಸೈಟುಗಳಿವೆ, ಅಲ್ಲಿ ಕಲ್ಕತ್ತೆಯಲ್ಲಿ ನಿಲ್ಲಲೂ ಆಗದಷ್ಟು ಸಣ್ಣ ಸಣ್ಣ ಮನೆಗಳಲ್ಲಿ ವಾಸಿಸುತ್ತೇವೆ ನಾವು) ಎಂದು ಉದ್ಘರಿಸಿದ್ದನಂತೆ’
ಬಿಕಾನೇರ್ ದಿಂದ ಜೈಸಲ್ಮೇರ್ ಮಧ್ಯದಲ್ಲಿ ಭರತಖಂಡ ಮರೆಯಲಾರದ ಜಗವೊಂದು ಬರುವುದು. ಒಮ್ಮೆ ಬೋರ್ಡನಲ್ಲಿ ಅದರ ಹೆಸರು ನೋಡಿ, ಥ್ರಿಲ್ ಅನಿಸಿತು. ಓಹೋ! ನಾನು ಅಲ್ಲಿಗೆ ಹೋಗುವೆನೇ. ಖುಷಿಯಿಂದ ಕುಣಿದಾಡಿತು ಮನಸ್ಸು. ಅದೇ ಬಿಕಾನೇರ್ದಿಂದ ಈ ರೂಟ್ನಲ್ಲಿ 225 ಕಿಮೀ ದೂರದಲ್ಲಿ ಇರುವ ಪೋಕರಾನ್, ನೆನಪಿದೆಯೇ ಭಾರತದ ಸೈನ್ಯ ಪಡೆಗೆ ಅಣುಬಾಂಬುಗಳನ್ನು ಸೇರಿಸಿದ, ಭಾರತದ ಸೇನೆಯ ಹೆಮ್ಮೆಯ ಕಾಶಿ ಇದು. ಸುಮಾರು ಮೂರು ಗಂಟೆಗಳ ಪ್ರಯಾಣದಲ್ಲಿ ನಾವು ಪೋಕರಾನ್ಗೆ ತಲುಪಿದೆವು. ಇದು ಒಂದು ಪುಟ್ಟ ಪಟ್ಟಣ. ಇತಿಹಾಸ ಕಾಲದಿಂದಲೂ ಕೋಟೆಗಳು, ಕೊತ್ತಲುಗಳು, ಜೋಧಪುರ ಮಹಾರಾಜರ ಮಾಂಡಲಿಕ ರಾಜರು ಆಳಿದ ಊರು ಇದು.. .
ಈ ನೆಲ ತಲುಪುತ್ತಲೇ ಸರವನ್ಗೆ ಗಾಡಿ ನಿಲ್ಲಿಸಲು ಮೊದಲೇ ಹೇಳಿದ್ದೆ, ಒಂದು ವೇಳೆ ನಿದ್ದೆ ಆವರಿಸಿದ್ದರೆ ದಾಟಿ ಹೋಗಬಾರದಲ್ಲ!, ಗಾಡಿಯಿಂದ ಕೆಳಗಿಳಿದು ನಮಗೆಲ್ಲಾ ಪವಿತ್ರವೆನ್ನಿಸಲೇಬೇಕಾದ,, ನಮ್ಮ ನೆರೆಹೊರೆ ದೇಶಗಳು, ಅದೇಕೆ ಅಮೇರಿಕೆಯಂತಹ ದೊಡ್ಡಣ್ಣರಂತವರು ಕೂಡ ನಮ್ಮೆಡೆಗೆ ಕೆಮ್ಮಲಾರದಂತೆ ಮಾಡಿದ ಪುಣ್ಯಭೂಮಿ ಇದು. 1974ರ ಅಣುಸ್ಫೋಟದಿಂದ, ‘ಬುದ್ಧನನ್ನು ನಗಿಸಿದ’ ಆ ಮಹಾ ಐತಿಹಾಸಿಕ ಸ್ಫೋಟ, ಮತ್ತೆ 1998 ರಲ್ಲಿ ಮತ್ತೊಮ್ಮೆ ಜಗತ್ತನ್ನೇ ಎದುರು ಹಾಕಿಕೊಂಡು ಬ್ಲಾಸ್ಟಿಸಿದ 5 ಅಣುಪ್ರಯೋಗಗಳು ಭರತಖಂಡವನ್ನೇ ಎದೆಯುಬ್ಬಿಸಿ ನಿಲ್ಲುವಂತೆ ಮಾಡಿದ್ದು ಸಾಮಾನ್ಯವೇ. ಕೆಳಗೆ ಇಳಿದೆ ಎಂದು ಹೇಳಿದೆನಲ್ಲಾ., ರಸ್ತೆಯಿಂದ ತುಸು ದೂರ ಮರಳು ಮಣ್ಣಿನತ್ತ ಸಾಗಿ, ಅದರ ಆ ಪವಿತ್ರ ಮಣ್ಣನ್ನು ಹಣೆಯ ವಿಭೂತಿಯಾಗಿಸಿದೆ. ಡಾ. ಹೋಮಿ ಜಹಾಂಗಿರ ಭಾಭಾ, ಅಣು ಕೇಂದ್ರದ ವಿಜ್ಞಾನಿಗಳಿಗೆ, ಡಾ, ಅಬ್ದುಲ್ ಕಲಮ್ರಿಗೆ, ರಾಜಾ ರಾಮಣ್ಣ ಆದಿಯಾಗಿ ಎಲ್ಲ ವಿಜ್ಙಾನಿಗಳಿಗೆ ನನ್ನ ಮನದಾಳದ ಹೃನ್ನಮನವನ್ನು ಇದೇ ಪುಣ್ಯಭೂಮಿಯಿಂದ ಅಣುಸ್ಫೋಟಿಸಿದ ದಿಕ್ಕಿನತ್ತ, ಒಂದು ಸೆಲ್ಯೂಟ್ ಸಲ್ಲಿಸಿದೆ. ನಾನು ಮಾಡುತ್ತಿರುವುದನ್ನು ದೂರದಿಂದ ಗಮನಿಸಿದ ಇಂಡಿಯನ್ ಆಮರ್ಿಯ ಸೈನಿಕನೊಬ್ಬ ತನ್ನ ದೊಡ್ಡದೊಂದು ಟ್ರಕ್ನಿಂದ ಹೃತ್ಫೂರ್ವಕ ನಗೆಬೀರಿ, ಜಯದ ಸಂಕೇತ ತೋರಿ , ತನ್ನ ಏಕೆ -47 ರೈಫಲ್ನ್ನು ಎತ್ತಿ ಹಿಡಿದು, ನಗುಮೊಗದಿಂದ ಅಭಿನಂದಿಸಿದ. ಯಾವ ತಾಯಿಯ ಪುಣ್ಯ ಮಗನೋ, ಅಸಲು ಅಭಿನಂದಿಸಬೇಕಾದವನು ನಾನು, ತಮ್ಮ ಮುದ್ದಿನ ಮಡದಿ ಮಕ್ಕಳಾದಿ, ಮುಪ್ಪಿನ ಅಪ್ಪ ಅಮ್ಮಂದಿರನ್ನು ಬಿಟ್ಟು ಅಲ್ಲಿ ಬಾರ್ಡರ್ನಲ್ಲಿ ರಣಬಿಸಿಲಿನಲ್ಲಿ ನಮಗಾಗಿ ಜೀವ ಸವೆಸುತ್ತಾರಲ್ಲ, ಅವರ ನೆನಪಾಗಿ, ಇದು ನಿನಗೆ ಎಂದು ಅವನೆಡೆ ಕೈ ತೋರಿ ಒಂದು ಸೆಲ್ಯೂಟ್ ಹೊಡೆದೆ. ಖುಷಿಯಿಂದ ನಕ್ಕಿತು ಇಂಡಿಯನ್ ಆಮರ್ಿ. ದೇವರು ನಿಮಗೆ ಸುಖವಾಗಿಡಲಿ ಎಂದು ಹೇಳಿ ಎರಡು ಕೈಮೇಲೆದೋರಿ ಅವನೆಡೆ ಬಾಗಿದೆ. ಅವನ ಕಣ್ಣುಗಳು ಮಿಂಚಿದ್ದನ್ನು ಗ್ರಹಿಸಿದೆ. ಅಲ್ಲಿ ತಮಗೆ ಬೇಕಿರುವುದನ್ನು ಖರೀದಿಸಲು ಅಲ್ಲಿ ನಿಂತಿದ್ದಿರಬಹುದು ಅವರು. ಇವರೇ ಅಲ್ಲವೇ ನಮ್ಮೆಲ್ಲರ ನೆಮ್ಮದಿಗೆ ಕಾರಣರಾದವರು.

ಇಲ್ಲಿಯ ನೀರು ಗಾಳಿಯನ್ನು ಇನ್ನಷ್ಟು ಹೆಚ್ಚು ಸವಿಯುವ ಆಸೆಯಿಂದ, ಇನ್ನಷ್ಟು ಹೊತ್ತು ಇರಬೇಕೆಂದು, ಇಲ್ಲಿಯೇ ತುಸು ಚಹ ಕುಡಿಯೋಣವೆಂದು ಅಲ್ಲಿಯೇ ಸಮೀಪದಲ್ಲಿ ಇದ್ದ, ರಸ್ತೆ ಪಕ್ಕದ ಹೋಟಲ್ವೊಂದಕ್ಕೆ ಹೋಗಿ ಕುಳಿತೆವು. ಹಾಗೆಯೇ ಅದರ ಮಾಲೀಕ ಸುಮಾರು ಅರವತ್ತರ ಆಸುಪಾಸು ಇರುವುದನ್ನು ಗಮನಿಸಿ, ಅವರತ್ತ ತೆರಳಿ, ಪೋಕರಾನ್ ಅಣುಸ್ಫೋಟವಾದದ್ದು ಗೊತ್ತೇ, ಭಯೀ ಸಾಬ್ ಎಂದೆ.. ಅಂದರೆ ಅವರು ಆಗ ಅಲ್ಲಿ ಇದ್ದರೋ ಇಲ್ಲವೋ ಎಂಬ ಅನುಮಾನದಿಂದ ಕೇಳಿದ್ದೆ ಅಷ್ಟೆ. ನನ್ನೆಡೆ ನಿಲರ್ಿಪ್ತನಾಗಿ ಕೇಳಿದ,.’ ಕಹಾಂ ಸೆ ಆಯೇ ಹೈಂ ಸರ್, ‘ ಎಂದು ಕೇಳಿದ. ‘ಬೆಂಗಳೂರು’ ಎಂದೆ. ‘ಖುಷಿಯಿಂದ , ಗಿರಾಕಿಯೊಬ್ಬರಿಗೆ ಚಿಲ್ಲರೆ ಕೊಟ್ಟು, ತುಸು ತಡೆದು ಹೇಳಿದ, ‘ಹಮೇಂ ಅಭೀ ಭೀ ವೊ ದಿನ್ಯಾದ ಹೈ , ಯೇ ರಾತ ಮೇಂ ಹುವಾ ಥಾ, , ಘರ ಮೇಂ, ಕಿಚನ್ ಪೆ ಥಾಲಿ, ಲೋಟಾ ಗಿರ್ ಪಡೇ ಥೇ, , ಭೂಕಂಪ್ ಜೈಸಾ ಹುವಾ ಥಾ, ರಾತ್ ಮೇಂ ಹಮ್ ಸಬ್ ಭೂಕಂಪ ಹೀ ಸಮಝೇ ಥೇ, ಜಬ್ ಸುಬಹ್ ರೇಡಿಯೋ, ಪೇಪರ್ಮೇಂ ಪಡಾ ತೋ, ಸಾರಾ ಗಾಂವ್ ರಸ್ತೇ ಪೆ ಥಾ, ಜಸ್ನ್ ಮನಾನೇ ಕೆ ಲಿಯೆ, ಪೂರಾ ಕಾ ಪೂರಾ ರಾಜಸ್ಥಾನ ಉಸ್ ದಿನ್ ಜಸ್ನ್ ಮನಾಯಾ, , ಆಜ್ ಭೀ ರೋಮ್ತೇ ಖಡೇ ಹೋತೇ ಹೈಂ, ಉಸ್ಕೋ ಗರ್ ಯಾದ ಕಿಯೇ ತೊ” ಭಾರೀ ಯಾದ ತಾಜಾ ಕರವಾದಿಯೇ ಭಾಯೀ ಸಾಬ್ ಎಂದ. ( ಅದು ಭೂಕಂಪವೆಂದೇ ಬಗೆದಿದ್ದೆವು, ಅಡಿಗೆ ಮನೆಯಲ್ಲಿಯ ಕೆಲ ಸಾಮಾನುಗಳು ಉರುಳಾಡಿದ್ದವು. ಮರುದಿನ ಪೇಪರ್ ರೇಡಿಯೋಗಳಲ್ಲಿ ಕೇಳಿ, ಇಡೀ ಊರಿಗೆ ಊರೇ, ಅಷ್ಟೇ ಅಲ್ಲ ಪೂರಾ ರಾಜಸ್ಥಾನ ಅಂದು ಇಡೀ ದಿನ ಕುಣಿದಾಡಿತ್ತು, ರಸ್ತೆಗಳಿದು ಕುಣಿದು ಕುಪ್ಪಳಿಸಿತ್ತು.. ಅದನ್ನು ನೆನೆದರೆ ಇಂದಿಗೂ ಮೈಗೂದಲು ನಿಮಿರುತ್ತವೆ’ ಒಂದೊಳ್ಳೆಯ ನೆನಪು ಮಾಡಿಸಿದ್ದಕ್ಕೆ ಸಲಾಮ್ ಭಾಯಿ ಎಂದ. ಆ ಜಾಗವೆಲ್ಲಿದೆ, ನೀವು ನೋಡಿರುವಿರಾ? ಎಂದದ್ದಕ್ಕೆ, ಅದು ಇಲ್ಲಿಂದ 17 ಕಿಮೀ ಆಗುತ್ತದೆ, ‘ಪೂರಾ ಮಿಲಿಟರಿ ಹೈ ವಹಾಂ, ಆಮ್ ಆದಮೀ ನಹೀ ಜಾ ಸಕತಾ’ ( ಮಿಲಿಟರಿ ವಶದಲ್ಲಿದೆ, ಸಾಮಾನ್ಯರು ಅಲ್ಲಿಗೆ ಹೋಗಲಾರರು ) ಎಂದ.
ಮತ್ತೆ ಮುಂದುವರೆಸಿದ, ‘ಏ ಜೊ ಬಗಲ್ ಮೇಂ ಛೋಟಾ ದೇಸ್ ಹೈ ನಾ, ಇತನಾ ಮಸ್ತಿ ಕರತಾ ರಹತಾಹೈ,…. ಇಸ್ ಕೊ ಖಾನೇ ಕೊ….. ಯೆ ಆಮರ್ಿ ನಹೀಂ…, ಇಸ್ ವತನ್ ಕೆ ಆಮ್ ಆದಮೀ ಹೀ ಕಾಫೀ ಹೈ,…ಇಸಕೋ ಖಾಕೆ ಛೊಡತೇ ಹೈಂ, ಹಮೇಂ ಛೋಡಕೆ ದೇಖೋ’ ಸ್ವಲ್ಪು ತಡೆದು ಹೇಳಿದ, ” …ಮಗರ್ ದೋನೋಂ ಮುಲ್ಕೋಂ ಕೆ ಆಮ್ ಆವಾಮ್ ಅಭೀ ಭೀ ವಹೀ ಕೆ ವಹೀ ಹೈ’ …’ ಮಗರ್ ಸರಕಾರ ವಹಾಂ ಕೆ, ಕುಛ ಜ್ಯಾದಾ ಹೀ ಬಿಗಡಾ ಹೈ ಮಾಹೋಲ್ ಕೊ’….’ (ಇಷ್ಟು ಮಾತ್ರ ಖರೆ. ಎರಡೂ ದೇಶಗಳ ಜನ ಇನ್ನೂ ಒಂದೇ ಇದ್ದಾರೆ, ಅಲ್ಲಿನ ಆಳುವವರು ಸ್ವಾರ್ಥಕ್ಕಾಗಿ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದ್ದಾರೆ’) ಅವರಲ್ಲಿ ಸಹಜವಾಗಿ ಪುಟಿಯುತ್ತಿದ್ದ, ವೀರಾವೇಶದ ಮಾತುಗಳನ್ನು ಕೇಳುತ್ತಿದ್ದರೆ, ಮೈಯೆಲ್ಲ ಪುಳಕ. ಅವರ ದೇಶಪ್ರೇಮಕ್ಕೆ ಸುಮ್ಮನೆ ತಲೆಬಾಗಿಸಿದೆ. ಅವರು ಹೇಳುವ ವಿಚಾರಗಳಿಗೆ, ಅವರಲ್ಲಿ ಹುದುಗಿದ ದೇಶಪ್ರೇಮ ನನ್ನನ್ನು ಮೂಕವಿಸ್ಮಿತನನ್ನಾಗಿಸಿತ್ತು. ಇನ್ನೊಂದು ಕಣ್ಣಿಗೆ ಬಿದ್ದ ಖುಷಿಯ ವಿಷಯವೆಂದರೆ, ನಮ್ಮ ಪ್ರಕಾಶ ರೈನೊಂದಿಗೆ ಫೋಟೋ ತೆಗೆಸಿಕೊಂಡು ಆ ಮೆನೇಜರ್ ತನ್ನ ಹಿಂದೆ ಗೋಡೆಗೆ ನೇತು ಹಾಕಿಕೊಂಡಿದ್ದು ದನ್ನು ಕಂಡೆ. ‘ಎಲ್ಲಿ ‘ಎಂದೆ? ‘ಯಹೀಂ’ ಎಂಬಂತೆ ಗೋಣು ಹಾಕಿದ. ‘ ಒಹೋ, ಯು ಆರ್ ಲಕೀ ಭಾಯೀ ಸಾಬ್’ ಎಂದೆ, ನಕ್ಕು ಬೀಗಿದ, ಹಕ್ಕು ಎಂಬಂತೆ.! ನಿಜಕ್ಕೂ ಸೊಕ್ಕಿದ್ದು ನಾನು ಎಂಬುದು ಅವನ ಅಳಿವಿಗೆ ದಕ್ಕಲಿಲ್ಲ.
ಇಲ್ಲಿಂದ ಮತ್ತೆ ಮುಂದುವರೆಯಿತು ನಮ್ಮ ಪಯಣ, ಜೈಸಲ್ಮೇರ್ನೆಡೆಗೆ,. ಇಲ್ಲಿಂದ ಇನ್ನು ಜೈಸಲ್ಮೇರ ಕೇವಲ ಸುಮಾರು ನೂರು ಕಿಮೀಗಳಷ್ಟೆ. ಸುತ್ತಲೂ ಪ್ರಖರ ಬಿಸಿಲು. ಎತ್ತಲೂ ಕುರುಚಲು, ನಮ್ಮ ಬಳ್ಳಾರಿ ಜಾಲಿ ತರಹದ ಕಂಟಿಗಳು. ಅಲ್ಲಲ್ಲಿ ಜಿಂಕೆಗಳು ಕಂಡುಬಂದವು, ಹಿಂಡುಗಳಲ್ಲಿ, ಕುರಿಗಾಹಿಗಳು ತಮ್ಮ ಕುರಿಮಂದೆಯೊಂದಿಗೆ ರಸ್ತೆ ಬದಿಯಲ್ಲಿ ಹೊರಟಿದ್ದಾಗ ಕಂಡುಬರುತ್ತವೆ. ಸುಮ್ಮನೆ ಸ್ವಪ್ನ ಲೋಕದತ್ತ ಹೋಗುತ್ತಿರುವೆವೋ, ಮನುಷ್ಯರನ್ನೆಲ್ಲಾ ಹಿಂದೆ ಬಿಟ್ಟು! ಕಾರಣ, ಎದುರು ಯಾವ ವಾಹನವೂ ಬರುವುದಿಲ್ಲ. ನಾವು ಹೋಗುವುದಷ್ಟೆ. ನಮ್ಮ ಹಿಂದೆಯೂ ಯಾವ ವಾಹನವು ಇಲ್ಲ. ಮುಂದೆಯೂ ಇಲ್ಲ. ವಿಚಿತ್ರ ಪಯಣವಿದು.. ಆಗಾಗ ಎದುರಿನಿಂದ ಮಿಲಿಟರಿ ಗಾಡಿಗಳು ಮಾತ್ರ ಬರುತ್ತಿದ್ದವು. ನಮ್ಮತ್ತ ನೋಡಿ ಮುಗುಳ್ನಗುವಿನೊಂದಿಗೆ ಸಾಗುತ್ತಿದ್ದರು. ಅವರೂ ಕೂಡ ಕುರಿಮಂದೆಗಳ ಹತ್ತಿರ ನಿಂತೇ ಸಾವಧಾನದಿಂದಲೇ ಸಾಗುತ್ತಾರೆ, ಪ್ರತಿಯೊಬ್ಬರೂ ಅಲ್ಲಿಯ ನೆಲದ ಬದುಕಿನ ಸಂಪ್ರದಾಯವನ್ನು ಬಹಳ ಗೌರವಿಸುತ್ತಾರೆ. ಆ ಅಲೆಮಾರಿ (ನೊಮ್ಯಾಡಿಕ್)ಗ ರೊಂದಿಗೆ ಮಾತಿಗೆ ಇಳಿಯುತ್ತಾರೆ. ಅವರಿಗೆ ನೀರು ಒದಗಿಸುತ್ತಾರೆ. ರಕ್ಷಣಾ ದೃಷ್ಟಿಯಿಂದ ಮಿಲಿಟರಿ ಬಗ್ಗೆ ವಿವರ ಬರೆಯುವುದು ಬೇಡ. . ಅವರು ಅಲ್ಲಿ ಎಲ್ಲೆಲ್ಲೂ ಇದ್ದಾರೆ ಅಷ್ಟು ಸಾಕು. ಅಭಿಮಾನ ಪಡುವಷ್ಟು ಅಹರ್ನಿಶಿ ಸನ್ನದ್ಧ ಸ್ಥಿತಿ ಅಲ್ಲಿ, ಸಾಮಾನ್ಯರಾಗಿ ಅಷ್ಟು ಗ್ರಹಿಸಿದರೆ ಸಾಕು. ಏಕದಂ ಅಪ್ಡೇಟೆಡ್.
ಪಯಣ ಮುಂದುವರೆದಂತೆ, ಇನ್ನೇನು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ, ಸರವನ್ ಜೈಸಲ್ಮೇರ್ ಇನ್ನು ಎರಡು ಕಿಮೀ ನಷ್ಟೆ ಇರುವಾಗ, ಊರ ಹೊರಭಾಗದಲ್ಲಿ ಒಂದು ದೊಡ್ಡ ಕೋಟೆಯಂತಹ ನೋಟಹೊಂದಿದ ಕಟ್ಟಡವೊಂದನ್ನು ತೋರಿಸಿ, ಪಕ್ಕಕ್ಕೆ ನಿಲ್ಲಿಸಿದ. ಅದು ದಿನವೂ ನಮ್ಮ ಮನೆಗಳ ಟಿವಿಗಳಲ್ಲಿ ಬರುವ ‘ಬಾಲಿಕಾ ಬಧು’ ಧಾರಾವಾಹಿವೊಂದರ ದೊಡ್ಡ ಶಾಹಿ ಕುಟುಂಬವೊಂದರ ಹವೇಲಿ. ಅರೇ ಇದಿಲ್ಲಿದೆಯೇ. ನಮಗೆ ಅದರ ಒಳಗೆ. ಅಡಿಗೆ ಮನೆಯವರೆಗೂ ಎಲ್ಲವೂ ಗೊತ್ತು ಮಾರಾಯರೆ. ಅದು ನಮ್ಮದೇ ಎನ್ನುವಷ್ಟು ಪ್ರೀತಿ ಬಂದು ಬಿಟ್ಟಿತು ಅದರ ಮೇಲೆ. ನಿತ್ಯವೂ ಕಲರ್ಸ ಟಿವಿಯಲ್ಲಿ ಅದರ ದರ್ಶನವಾಗುತ್ತದೆ, ಇದೇ ಇಲ್ಲಿಯ ‘ಡೆಸರ್ಟ್ ಟುಲಿಪ್’ ಎಂಬ ರಿಸಾರ್ಟ್ ಇದು.
ದೊಡ್ಡದಾದ ಕೋಟೆ ತರಹ, ರಸ್ತೆಯಿಂದ ಕಾಣುವುದು, ಅಲ್ಲಿ ಅದನ್ನು ಕ್ಲಿಕ್ಕಿಸಿ, ಜೈಸಲ್ಮೇರ ಎಂಬ ಥಾರ್ ಮರಳ ರಾಣಿಯ ಸಿಲ್ಕ ರೂಟಿನ ಆತ್ಮದೊಳಗೆ ಒಳಪ್ರವೇಶ ಪಡೆದೆವು. ಎಡಬಲಕ್ಕೂ ನಮ್ಮನ್ನು ಸ್ವಾಗತಿಸಿದವು ನಾಗರಿಕ ಬೋರ್ಡಗಳೊಂದಿಗೆ ಮಿಲಿಟರಿ ಹೆಡ್ಕ್ವಾರ್ಟರ್ಗಳ ‘ವೆಲ್ಕಮ್’ ಬೋರ್ಡಗಳು.
ಮೊದಲು ಊರಗಡಿಯಲ್ಲೇ ಸಿಗುವ, ‘ಗಡಿಸರ ಲೇಕ್’ ನೋಡಲು ತೆರಳಿದೆವು. ಸುತ್ತ ಮರಳುಗಾಡಿನಿಂದ ಹರಿದು ಬರುವ ನೀರನ್ನು ಸಂಗ್ರಹಿಸಲು, ನಮ್ಮ ರಾಜ ಮಹಾರಾಜರುಗಳ ಶಾಹಿ ಆಡಳಿತ ಒಂದು ಕೆರೆ ಕಟ್ಟಿಸಿದೆ. ಕೆರೆ ಏರಿಯ ಮೇಲೆ ಸುಂದರ ಕಟ್ಟಡಗಳನ್ನು ನಿಮರ್ಿಸಿದ್ದಾರೆ. ಕೆರೆ ನೀರಲ್ಲಿ ದೋಣಿಯಲ್ಲಿ ವಿಹರಿಸುವ ವ್ಯವಸ್ಥೆ ಇದೆ. ನಡುವೆ ನಡುಗಡ್ಡೆ ನಿಮರ್ಿಸಿ ಅಲ್ಲೊಂದು ಮಂದಿರ ಕಟ್ಟಿದ್ದಾರೆ. ನೋಡಲು ಸುಂದರವಾಗಿದೆ. ಕೆರೆಯ ಸುತ್ತ ಪರಿಸರವನ್ನು ಚಂದ ಮಾಡಬಹುದಾದದ್ದನ್ನೆಲ್ಲ ಮಾಡಲು ಪ್ರಯತ್ನಿಸಿದ್ದಾರೆ. ಎಲ್ಲ ಕಡೆಯೂ ಅಲ್ಲಿ ಪಾರಿವಾಳಗಳಿವೆ. ಇಡೀ ರಾಜಸ್ಥಾನದಲ್ಲಿ ಪಕ್ಷಿಗಳನ್ನು ಹೆಚ್ಚು ಪ್ರೀತಿಸುತ್ತಾರೆ. ವಾಹ್! ಅಲ್ಲಿಯ ನಡುಗಡ್ಡೆಯ ಮಂದಿರದ ಗೋಪುರವೇ ಕಾಣದಷ್ಟು ಪಾರಿವಾಳಗಳು,, ಲೇಕ್ ತುಂಬ ಎಲ್ಲೆಡೆಗೂ ಲೆಕ್ಕವಿಲ್ಲದಷ್ಟು ಕಾಣಸಿಗುತ್ತವೆ. ನಿಸರ್ಗದೊಂದಿಗೆ ಬೆರೆತು, ನಮ್ಮ ಬಾಲ್ಯದ ಕ್ಷಣಗಳನ್ನೂ , ಆ ಹಳೆಯ ದಿನಗಳ ಉಸಿರನ್ನು ಇನ್ನೂ ಉಳಿಸಿಕೊಂಡಿದೆ ಇದು ಈ ಜೈಸಲ್ಮೇರ, ಅದನ್ನೇ ಉಸಿರಾಡುತ್ತಿದೆ, ಸಿಲ್ಕ್ ರೂಟಿನ ಕಾಲದಿಂದಲೂ, ಈಗಲೂ ಭದ್ರವಾಗಿ ಅಂದಿನ ಕೊಂಡಿಗಳನ್ನು ತನ್ನ ಮಡಿಲಲ್ಲಿ ಹಿಡಿದಿಟ್ಟುಕೊಂಡಿದೆ ಅನ್ನಿಸಿತು.

ಅಲ್ಲಿ ದಂಡೆಯ ಮೇಲೆ ಕುಳಿತು ಯಾವುದೋ ಗೋವಿನಜೋಳದ ಅರಳಿನ ಪ್ಯಾಕೇಟ್ ಕೊಂಡು ಒಡೆದು ತಿನ್ನುವುದರಲ್ಲಿ ಕೆಲ ಅರಳು ಕೆಳಗೆ ಉದುರಿತು, ಅರೆ, ಏನಿದು, ನಾವು ಕಳೆದುಕೊಂಡ, ಆ ಮಧುರ ಕ್ಷಣಗಳ ತುಣುಕುಗಳು, ನಮ್ಮ ಬಾಲ್ಯದ ಗಳಿಗೆಗಳು, ಸಮಯಗಳ ಕೊಂಡಿಗಳು ಅಲ್ಲಿ ದಾಖಲಾಗಿ ಬಿಟ್ಟಿದ್ದವು. ‘ಇಕ್ ಬಾರ್ ವಕ್ತ್ ಸೆ , ಲಮ್ಹಾ ಗಿರಾ ಕಹೀಂ, ವಹಾಂ ದಾಸ್ತಾ ಮಿಲೀ, ಲಮ್ಹಾ ಕಹೀಂ ನಹೀ, ‘(ಕಾಲ ದೆಳೆಯಿಂದ ಕಳಚಿ ಕ್ಷಣ ತುಣುಕು ಉದುರಿತೆಲ್ಲೋ,ಕಥೆ ಕಂತೆ ದೊರೆತವಲ್ಲಿ ಕ್ಷಣವೆಲ್ಲೂ ದೊರೆಯದಲ್ಲಿ) ಎಂದರಲ್ಲವೇ ಗುಲ್ಜಾರರು,. .. ಏನು ಹಾಗಂದರೆ, ಏನು ಒಗಟದು, ನನ್ನ ‘ಅಆಇಈ’ ದಿನಗಳಲ್ಲಿ ನನ್ನ ಪಕ್ಕದಲ್ಲಿಯೇ ಓಡಾಡುತ್ತ, ಚಿಂವ್ ಚಿಂವ್ ಅನ್ನುತ್ತಿದ್ದವಲ್ಲ, ನನ್ನ ಗೆಳೆಯರು, ಕಣ್ರಿ,…. ‘ಗುಬ್ಬಚ್ಚಿಗಳು, ….ಥೇಟ್ ನಮ್ಮ ಶಾಲಾ ದಿನಗಳ ಅವೇ ಗುಬ್ಬಿಗಳು ಸಾಕ್ಷಾತ್ ನಮ್ಮ ಕಣ್ಣ ಮುಂದೆಯೇ, ನಮ್ಮ ಬಾಲ್ಯವನ್ನು ಹಿಡಿದು ನಮ್ಮ ಕಾಲ ಬಲಿ ಇಟ್ಟಿದ್ದವು. ಆ ಎಲ್ಲಾ ಪಾಕೇಟ್ನ್ನು ಅವುಗಳಿಗೆ ಸುರಿದೆ. ಇನ್ನಷ್ಟು ಮತ್ತಷ್ಟು ಬಂದವು. ಅದೇ ಕಾಗೆಗಳು ‘ಕಾಂವ್ ಕಾಂವ್’ ಎಂದು ಸುತ್ತ ನೆರೆದವು. ಗುಬ್ಬಚ್ಚಿಗಳೊಂದಿಗೆ ಆಟವಾಡುತ್ತ ತಿನ್ನತೊಡಗಿದೆವು. ಪಾರಿವಾಳಗಳೂ ಸೌಹಾರ್ಧ ಮೆರೆಯುತ್ತ ಎಲ್ಲವೂ ಹಾಜರು. ಹೌದು ಇವು ಇಲ್ಲಿ ಹೇಗೆ ಬಂದೆವು?. ಮೋಬೈಲ್ಗಳ ತರಂಗಗಳಿಂದ ಮಾಯವಾದವು ಅನ್ನುತ್ತಾರಲ್?
ಅದೇ ಕಾರಣವೋ ಅಥವಾ … ಬಹುಶ: ಇಲ್ಲಿ ಹೊಲಗದ್ದೆಗಳಿಲ್ಲ, ಹೀಗಾಗಿ ಯೂರಿಯಾದಂತಹ ಹಕ್ಕಿ, ಪಿಕ್ಕಿಗಳಿಗೆ ವಿಷಕಾರಿ ಗೊಬ್ಬರಗಳ ಪ್ರಯೋಗ ಈ ಮಾತೃ ದೇಹದ ಮೇಲೆ ಇನ್ನೂ ಆಗಿಲ್ಲದಿದ್ದುದಕ್ಕೆ ಇವು ಇಲ್ಲಿ ಜೀವಂತ ಇರುವವೋ? ಯಾವುದು ಸರಿ? ಅಧ್ಯಯನಕ್ಕೆ ಯೋಗ್ಯ ವಿಷಯ ಇದು. .ಹೀಗೆ ನನ್ನ ಬಾಲ್ಯದೊಂದಿಗೆ ನನ್ನನ್ನು ಜೋಡಿಸಿ ಬಿಟ್ಟಿತು ಜೈಸಲ್ಮೇರ್. …ನಾವು ನಮ್ಮ ಹಳೆಯ ಕೊಂಡಿಗಳನ್ನು ಕಳಚಿಕೊಂಡಿದ್ದೇವೆ ಇಲ್ಲಾ ಕಳೆದುಕೊಂಡಿದ್ದೇವೆ. ಆದರೆ ಜೈಸಲ್ಮೇರ್ ಹಾಗಲ್ಲ, ಸಮಯ ಹೊದ್ದು ಮಲಗಿ ಬಿಟ್ಟಿದೆ ಅಲ್ಲಿ., ಸ್ಥಬ್ಧ ಚಿತ್ರದಂತೆ, ಹುಡುಕಿದರೆ ಇತಿಹಾಸದ ಎಲ್ಲ ಕಾಲಘಟ್ಟಗಳೂ, ಹಳೆಯ ಪುಸ್ತಕದ ಪುಟ ಪುಟಗಳಲ್ಲಿ ದೊರೆವ ನವಿಲುಗರಿಗಳಂತೆ, ಪುಸ್ತಕದೊಳಗಿನ ಸುವಾಸಿತ ಹೂವುಗಳಂತೆ ದೊರೆತಾವು. ಹುಡುಕಬೇಕಷ್ಟೆ. …ಎದುರಿನ ಮರಳುಗಾಡಿನಿಂದ ಜಿಂಕೆಯಾದಿಯಾಗಿ ಪ್ರಾಣಿಗಳು ಈ ಕೆರೆಯ ನೀರನ್ನು ಕುಡಿಯಲು ಬರುವುದು ಸಾಮಾನ್ಯವಂತೆ. ಕೆರೆದಂಡೆಯ ಮೇಲೆ ಅಲ್ಲಿಯ ಕರಕುಶಲ ಬಟ್ಟೆ, ಬರೆ, ಆಟಿಕೆಗಳ ಸಣ್ಣ ಸಣ್ಣ ಅಲೆಮಾರಿ ಮಳಿಗೆಗಳಿವೆ. ಏನಾದರೂ ಕೊಳ್ಳಿ , ಅವರಿಗೆ ಒಂದು ದಿನದ ಊಟ ನೀಡಿದಂತಾಗುತ್ತದೆ, ಎಂದೆ ಕಿವಿಯಲ್ಲಿ ಇವಳಿಗೆ, ತುಸು ಹೆಚ್ಚೇ ಖರೀದಿಸಿದರು.. ಅವನೆಲ್ಲ ಹೊತ್ತು ತಂದು ಗಾಡಿಯಲ್ಲಿ ಹಾಕುವ ಮಾಲಿಯ ಪಾತ್ರ ಖುಷಿಯಿಂದ ನಿಭಾಯಿಸಿದೆ.
ಸರವನ್ ಬೇಗ ಹೋಗದಿದ್ದರೆ ಡೆಸಟರ್್ನಲ್ಲಿ ಸೂಯರ್ಾಸ್ತ ನೊಡುವುದು ತಪ್ಪುತ್ತದೆ ಎಂದದ್ದಕ್ಕೆ ಚಹ ಕುಡಿಯಬೇನ್ನುವ ಬೇಡಿಕೆ ಬಿಟ್ಟು, ಅದರತ್ತ ಓಡಿದೆವು. ಅಲ್ಲಿಂದ ಸುಮಾರು 50-60 ಕಿಮೀಗಳ ಪಯಣ.. ಖುರಿ ಎಂಬ ಗ್ರಾಮ. ಅಲ್ಲಿ ಹೆಚ್ಚಿನ ವಿಶಾಲತೆಯ ಮರುಳುಗಾಡಿದೆ. ಇಲ್ಲೇ ಸಮೀಪದಲ್ಲೂ ಕೂಡ ನಾವು ಅದನ್ನು ಕಾಣಬಹುದು ಆದರೂ ಅವು ತುಂಬ ಸೊಗಸಾಗಿವೆ. ಅಲ್ಲಿಗೆ ಹೋಗೋಣ ಎಂದ. ಅವರು ನಮಗಾಗಿ ಎರಡು ಒಳ್ಳಯ ಡೆಸಟರ್್ ರಿಸಾಟರ್್ಗಳನ್ನು ನೋಡಿ ಇಟ್ಟಿದ್ದರು. ನಾವು ಎಲ್ಲಿ ಅಂತಿಮಗೊಳಿಸುತ್ತೇವೆಯೋ, ಅಲ್ಲಿಯೇ ವಾಸ್ತವ್ಯ ಮಾಡಿಸುವವರಿದ್ದರು. ಖುರಿಯನ್ನು ತಲುಪಿದಾಗ, ಸುಮಾರು 4.30 ಸಂಜೆ. ಅಲ್ಲಿ ಖುರಿಯಲ್ಲಿ ಹಲವಾರು ರೆಸಾಟರ್್ಗಳಿವೆ. ಆದರೆ ನಮಗೆ ಯಾವುದೂ ನಿಸರ್ಗದಲ್ಲಿದ್ದಂತೆ ಅನಿಸಲಿಲ್ಲ. ಹಾಗೆಯೇ ಮುಂದೆ ಇನ್ನೂ ಹತ್ತು ಹನ್ನೆರಡು ಕಿಮೀಗಳಷ್ಟು ಒಳಹೋದರೆ, ನಮಗೆ ಪಕ್ಕಾ ಮರುಭೂಮಿಯ ನಟ್ಟ ನಡುವಿನಲ್ಲಿಯೇ ಸ್ಥಾಪಿಸಿದ್ದೊಂದು ಮೆಚ್ಚುಗೆಯಾಯಿತು. ಅಲ್ಲಿನ ವ್ಯವಸ್ಥೆ ಉಳಿದವುಗಳಿಗಿಂಗ ತುಸು ಕಡಿಮೆಯಾದರೂ, ನಾವು ಈಗಾಗಲೇ ಇದಕ್ಕೂ ಹೆಚ್ಚಿನ ಕಂಫರ್ಟ ಲೆವಲ್ಗೆ ಹಣ ಕೊಟ್ಟಿದ್ದರೂ ಇದರಲ್ಲೇ ಉಳಿಯಲು ಮನಸ್ಸು ಮಾಡಿದೆವು. ಅಲ್ಲಿ ನಮ್ಮ ಲಗೇಜ್ಗಳನ್ನು ಇಟ್ಟು ನಮ್ಮನ್ನು ಒಂಟೆ ಸಫಾರಿಗೆ ಕರೆದೊಯ್ದರು. ನಮಗೊದಗಿಸಿದ ಒಂಟೆಗಳ ಹೆಸರು, ಸಂಯ್ಯಾ ಮತ್ತೆ ರಾಜೂ. ಅವುಗಳ ಮೇಲೆ ಹತ್ತಲು ಹರಸಾಹಸ. ಕಾಲು ಅದರ ಬೆನ್ನ ಮೇಲೆ ಹಾಕಲು ಬರುವದೇ ಇಲ್ಲ.
ಒಮ್ಮೆ ಹತ್ತಿದರೆ, ಅದರ ಥಡಿಗೆ ಕಟ್ಟಿದ ಕೋಲಿನ ತರಹದ್ದೊಂದನ್ನು ಹಿಡಿದು ಕೂರಬೇಕು. ಅದರ ಮಾವುತರಂತೂ ಆ ಒಂಟೆಗಳಂತೆಯೇ . ಹೊರಜಗತ್ತನ್ನು ಎಂದೂ ನೋಡದವರು. ಜೈಸಲ್ಮೇರ್ ಆಚೆ ಹೆಜ್ಜೆಯನ್ನೇ ಹಾಕದವರು. ಅಸಲಿಗೆ ಮಾತೇ ಇಲ್ಲ., ಮುಗುಳು ನಗುವೇ ಎಲ್ಲ. ಬಲು ಮುಗ್ಧ ಜೀವಗಳು. ತಾನಾಯಿತು ತನ್ನ ಒಂಟೆಯಾಯಿತು. ತನ್ನ ತಾಯಿ ಮರುಭೂಮಿಯಾಯಿತು. ಇದಿಷ್ಟೆ ಅವರ ಪ್ರಪಂಚ. ಅವರೊಡನೆ ಮಾತಿಗಿಳಿದರೆ, ಬರೀ ನನ್ನವೇ ಮಾತುಗಳು. ಅವರವು ಒಂಟೆಗಳೊಂದಿಗೆ ಸಂಜ್ಞಾರೂಪದ ಮಾತುಗಳು. ಹಗಲೆಲ್ಲ ನಮ್ಮೆಡೆಗೆ ತಿರುತಿರುಗಿ ನೋಡಿ ನಗುತ್ತ, ಎಲ್ಲಾ ಠೀಕ್ ಇದೆಯೇ ಎಂದು ಕೇಳುತ್ತಿದ್ದರು, ಕೈ ಸನ್ನೆಯಲ್ಲಿ.. ಏನನ್ನಾದರೂ ಕೇಳಿದರೆ, ‘ಹುಕುಂ ಸಾ’ ಎಂದು ಗೋಣು ಹಾಕುವರು. ಹಿರಿಯ ಮಾವುತ ಸುಮಾರು 70 ವರ್ಷದವನು. ಇನ್ನೊಬ್ಬ ಮೂವತ್ತೆಂಟು ವರ್ಷದವನು. ಮರುಭೂಮಿ ಮನುಷ್ಯನನ್ನು ಬೇಗ ಮುಪ್ಪು ಮಾಡಿಬಿಡುತ್ತದೆ ಎಂದು ಕಾಣುತ್ತದೆ. 38 ರವನೂ ಕೂಡ 70 ರಂತೆಯೇ ಕಾಣುತ್ತಿದ್ದ..
ಮುಂದೆ ಒಂದು ಸ್ಥಳದಲ್ಲಿ ಗ್ರಾಮದ ಹೆಂಗಳೆಯರು ನೀರಿಗಾಗಿ ಮರುಭೂಮಿಯಲ್ಲಿ ಕಟ್ಟಲಾದ ಕೆಲ ಕಟ್ಟೆಯಂತಹ ಜಾಗದಲ್ಲಿ ಬಗ್ಗಿ ನೀರು ಸೇದುತ್ತಿದ್ದುದನ್ನು ಕಂಡೆ. ನಮ್ಮ ಕುತೂಹಲ ಕಂಡು ನಮ್ಮನ್ನು ಅಲ್ಲಿಗೇ ಕರೆದೊಯ್ದರು. ಸಮೀಪದಲ್ಲೆಲ್ಲೋ ಇರುವ ಹಳ್ಳಿಯಿಂದ ಹೆಣ್ಣುಮಕ್ಕಳು ನೆಲಮಟ್ಟದ ಕಟ್ಟೆಯ ಮೇಲೆ ಕುಳಿತು ನೀರು ಸೇದುತ್ತಿದ್ದರು. ತಮ್ಮ ಕೊಡಗಳ ಮೇಲೆ ಎರಡು ಮೂರು ಕೊಡಗಳನ್ನು ಇಟ್ಟುಕೊಂಡು ಗುಂಪುಗಳಲ್ಲಿ ಮನೆಯತ್ತ ಹೆಜ್ಜೆಹಾಕುತ್ತಿದ್ದರು. ಅಲ್ಲಿ ಒಂಟೆಗಳ ಕಾರವಾನ್ ಇರುವಂತೆ, ಈ ಹೆಂಗಳೆಯರ ಗುಂಪಿಗೆ ‘ಘೂಂಘಟ್ ಕಾರವಾಂ’ ಎಂದೆ, ಇವಳು ಮುಗಳ್ನಕ್ಕಳು. ಅವರು ನೀರಿಗಾಗಿ ಪಡುವ ಕಷ್ಟವನ್ನು ನೋಡಿ ಸಂಕಟವೆನಿಸಿತು. ಎಲ್ಲರೂ ತಮ್ಮ ಮುಖ ಮಾತ್ರ ಕಾಣದಂತೆ ಘೂಂಘಟ್ ಹೊದ್ದವರೇ, ಹುಟ್ಟಿನಿಂದಲೇ ಇದು ಅಭ್ಯಾಸವಿರುವ ಅವರಿಗೆ ಇದೊಂದು ಕೊರತೆ ಅನಿಸುವುದೇ ಇಲ್ಲ. ಅವರ ಪರಿಶ್ರಮಕ್ಕೆ ತಲೆ ಬಾಗಿದೆ. ಮರುಭೂಮಿಯಲ್ಲಿ ಬದುಕು ನೆಲೆಗೊಳ್ಳಲು ಇವರೇ ಮೂಲ ಬೇರುಗಳು ಅಲ್ಲವೇ. ನಿಜಕ್ಕೂ ಈ ತಾಯಿ ಎನ್ನುವ ಜೀವ ಈ ಭೂಮಿಯ ಮೇಲೆ ಎಂತಹ ಕಷ್ಟಗಳನ್ನಾದರೂ ಸಹಿಸುವ ಪರಿ ಅದ್ಭುತ, ವಿಸ್ಮಯಕರವಲ್ಲವೇ? ಧನ್ಯ ತಾಯಿ ಧನ್ಯ, ಈ ತಾಯಿಯೆಂಬ ನೆಲದಾಯಿಯ ಜೀವಸೆಲೆಗೆ ನೂರು ಸಲಾಮ್.
ಅಲ್ಲಲ್ಲಿ ಮಳೆನೀರು ಕೊಯ್ಲು ತರಹ ಮಾಡಿ ಅದಕ್ಕೆ ಕಟ್ಟೆ ಕಟ್ಟಿ ಮರಳಿನ ಆಳದಲ್ಲಿ ಸಂಗ್ರಹವಾದ ನೀರೇ ಇವರಿಗೆ ವರ್ಷವಿಡೀ ಕುಡಿಯಲು ಆಧಾರ. ಬಹು ಕಷ್ಟಜೀವಿಗಳು. ಘೂಂಘಟ್ ಪದ್ಧತಿಯ ಆಚರಣೆಯ ಪಾಲನೆ ಬಲು ಕಟ್ಟು ನಿಟ್ಟು. ಸುಮ್ಮನೆ ಒಂದು ಫೋಟೋ ಪೋಸ್ ಕೊಡಿ ಎಂದು ನನ್ನ ಕೋರಿಕೆಯಂತೆ, ನಮ್ಮ ಡ್ರೈವರ್ ಆ ತಾಯಂದಿರಿಗೆ ವಿನಂತಿಸಿದ , ಊಹೂಂ, ಅವರು ಸ್ಪಂದಿಸಲೇ ಇಲ್ಲ, ತಮ್ಮಷ್ಟಕ್ಕೆ ತಾವು ನೀರು ತುಂಬಿದ ಕೊಡಗಳೊಂದಿಗೆ ಗುಂಪುಗಳಲ್ಲಿ ‘ಘೂಂಘಟ್ ಕಾರವಾಂ’ ಹೊರಟೇ ಬಿಟ್ಟಿತು. ಎಲ್ಲಿದ್ದವೋ ಅವರ ನಿವಾಸಗಳು, ನಮಗಂತೂ ಕಣ್ಣಿಗೆ ಬೀಳಲಿಲ್ಲ, ಸ್ಯಾಂಡ್ಡ್ಯೂನ್ಗಳ ಆಚೆಯೆಲ್ಲೋ ಸುಮಾರು 2 ರಿಂದ 3 ಕಿಮಿಗಳಷ್ಟು ದೂರದಿಂದ ಬಂದಿರುತ್ತಾರೆ ಎಂದ ಸರವನ್.
ಅಲ್ಲಿಂದ ಮುಂದೆ ನಡೆದರೆ ಕಣ್ಣಿಗೆ ಬಿದ್ದದ್ದು ಅಚ್ಚ ಬಿಳಿ ಬಣ್ಣದ ವಿಶಾಲವಾಗಿ ತನ್ನಷ್ಟಕ್ಕೆ ತಾನು ಕಾಲವನ್ನು ಹೊದ್ದು, ಅಲ್ಲಲ್ಲ, ಕಾಲವೇ ಹೊದ್ದು ಮಲಗಿದೆಯೇನೋ ಎನ್ನುವಂತೆ ಸ್ಥಬ್ಧ ರೂಪಕ, ಮರಳುಭೂಮಿಯ ರೂಪದಲ್ಲಿ. ಇದುವೇ ಥಾರ್ನ ಅಸಲಿ ಮುಖ.. ಶ್ವೇತ ಶ್ವೇತವಾಗಿ ತೆರೆದುಕೊಂಡ ಮರಳಿನ ಪ್ಯಾಕೆಟ್ಗಳಿವೆ. ಸುಮಾರು 8 -10 ಕಿಮೀಗಳಷ್ಟು ವಿಶಾಲತೆಯಲ್ಲಿ ಅಲ್ಲಲ್ಲಿ ಇರುತ್ತವೆ. ಆ ನಂತರ ಒಂತರಹದ ಒಣ ಕುರುಚಲು ನೆಲ, ಮತ್ತೆ ಮರುಭೂಮಿಯ ಪಾಕೆಟ್ ತೆರದುಕೊಳ್ಳುತ್ತದೆ. ಇದಕ್ಕೂ ಮುಂದೆ ಇದ್ದರೂ, ಇಲ್ಲಿಂದ ಮುಂದೆ ಪಾಕಿಸ್ತಾನದ ಬಾರ್ಡರ್ ಅತಿ ಸಮೀಪವಾಗುವುದರಿಂದ ಮುಂದಕ್ಕೆ ಹೊರಗಿನಿಂದ ಬರುವ ಪ್ರವಾಸಿಗರಿಗೆ ಪ್ರವೇಶವಿಲ್ಲ. ಸ್ಥಳೀಯ ಹಳ್ಳಿಗಳ ಜನ ಮಾತ್ರ ಆ ಕಡೆಗಳಲ್ಲಿ ಓಡಾಡುತ್ತಾರೆ ಎಂದು ತಿಳಿಯಿತು. ‘ಮೇ ಬಿ, ಡ್ಯು ಟು ಸೆಕ್ಯುರಿಟಿ ರೀಸನ್ಸ್ ಇರಬೇಕು’ ಎಂದುಕೊಂಡೆ.
ಇಲ್ಲಿ ಕೇವಲ ಕಂಟಿಯಂತಹ ಸಣ್ಣ ಸಣ್ಣ ಗಿಡಗಳು ಮರಳಲ್ಲಿ ವಿರಳಾತಿವಿರಳವಾಗಿ ಬೆಳೆದಿರುವುದನ್ನು ಬಿಟ್ಟರೆ, ಕೇವಲ ಮರಳಿನ ಸ್ಯಾಂಡ ಡ್ಯೂನ್ಸ್(ಮರಳ ದಿನ್ನೆ) ಗಳು ಮಾತ್ರ. ನೋಡಲು ಬಲು ಚಂದ, ಅಂದ. ನಿಸರ್ಗವೇ ತೀಡಿ ಇಟ್ಟಿದೆಯೇನೋ ಗಂಧ, ಇಲ್ಲವೇ, ಶ್ವೇತ ಮೋಡಗಳು ವಿಶ್ರಾಂತಿಗೆಂದು ಕೆಳಗಿಳಿದಿವೆಯೇನೋ. ಅಂಕೆಗೂ ಸಿಗದ ಅಸಾಧ್ಯ ಮೌನದಲ್ಲಿ ಮರಳೆಂಬ ಈ ಸಾಧು ಮೈಗೆಲ್ಲ ಹಾಲುಬಣ್ಣ ಬಳಿದು ತಪಸ್ಸು ಮಾಡುತ್ತಿರುವನೇನೋ, ಹಾಗಾದರೆ ಯಾರಿಗಾಗಿ? ಯಾತಕ್ಕಾಗಿ?
ಈ ಗಾಳಿಯು ತನ್ನ ರೆಕ್ಕೆಗಳಿಗೆ ಸಿಕ್ಕ ಮರಳನ್ನು, ಮೇಲೆ ಕೆಳಗೆ ಚಲಿಸುತ್ತ ಈ ಮರಳು ದಿನ್ನೆಗಳನ್ನು ನಿಮರ್ಿಸುತ್ತಲೇ ಇರುತ್ತದೆ ನಿರಂತರ. …… ಮರಳಿನ ಮೇಲೆ ಗಾಳಿಯ ಪ್ರೊಡಕ್ಟ್ಗಳು ಇವು. ಗಾಳಿಯ ಕೊಯ್ಲು. ಇವುಗಳು ಆಕಾರದಲ್ಲಿ, ಹಾಗೂ ಗಾಳಿಯು ಚಲಿಸಿದ ದಿಕ್ಕಿಗೆ ಚಲಿಸುತ್ತವೆ. ಈ ದಿನ ಇಲ್ಲಿರುವ ದಿನ್ನೆ, ಮರುದಿನ ಅಥವಾ ಮರುಗಳಿಗೆಯಲ್ಲಿ, ಅಥವಾ ಕೆಲದಿನಗಳಲ್ಲಿ ಅಲ್ಲಿರುವುದಿಲ್ಲ. ಈ ಗಾಳಿ ಅದನ್ನು ಇನ್ನಷ್ಟು ಪಕ್ಕಕ್ಕೆ ಸರಿಸಿರುತ್ತದೆ. ಈ ಡ್ಯೂನ್ನ ಮೈಮೇಲೆ ಎಂತಹ ಚಂದದ ಚಿತ್ತಾರಗಳು, ಕ್ಷಣಕ್ಷಣಕ್ಕೂ ಬದಲಾಗುತ್ತಲೇ ಇರುತ್ತವೆ. ನಮ್ಮ ಗಮನಕ್ಕೆ ಬರಲು ತುಸು ಗಂಟೆ, ದಿನಗಳೇ ಬೇಕು. ತನ್ನ ಮೈಮೇಲೆ ಹಚ್ಚೆ ಹಾಕಿಕೊಂಡಂತೆ ಅದರ ಮೈಯಲ್ಲಾ ರಂಗೋಲಿಮಯ. ಒಂದೆಡೆ ನೇರ, ಸಮಾನಾಂತರ ರೇಖೆಗಳಿದ್ದರೆ, ಇನ್ನೊಮ್ಮೆ ಹಾವಿನಾಕಾರ. ಹೀಗೆ ಅನೇಕ ಸಾಧ್ಯತೆಗಳಲ್ಲಿ ಕುಸುರಿ ಕಲೆಯನ್ನು ಚಿತ್ರಿಸುತ್ತಲೇ ಇರುತ್ತವೆ, ಈ ಗಾಳಿಯ ಕುಂಚದ ಬೆರಳುಗಳು.. ಇವೆಲ್ಲ ರಜಿಯಾ ಸುಲ್ಥಾನಳ ಕೈಯ ಮದರಂಗಿಯ ರೇಖೆಗಳೇ!
ಗಾಲಿಬ್ ಬರೆದ ಆಯತೇಂ, ಕಪ್ಲೆಟ್ಗಳೋ! , ಇಲ್ಲಾ ಶೇರ್ ಶಾಯರೀಗಳೋ, ಗಜಲು ಹೌದೋ!, ಅಥವಾ ಹೀರಳ ದಾವಣಿಯ ಹೆಜ್ಜೆಗಳಲ್ಲಿ ಮೂಡಿದ ಕಮಲವದನದ ಚಿತ್ತಾರಗಳೋ, ಲೈಲಾಳ ಹೆಜ್ಜೆ ಗೆಜ್ಜೆ ನಾದಕ್ಕೆ ಮರುಳಾಗಿ, ಮರುಳನಾದ ಮರಳೇ? ಮೈಮೇಲೆ ಗೆರೆ ಕೊರೆದುಕೊಂಡ ಮರಳು,, ಎಷ್ಟೊಂದು ಸುಂದರಾತಿ ಸುಂದರ ಬೆರಗು ಮೂಡಿಸುವ ಕಲಾಕೃತಿಗಳನ್ನು ಸೃಷ್ಟಿಸುತ್ತಲೇ ನಮ್ಮನ್ನೇ ಮರಳು ಮಾಡಿಬಿಡುತ್ತದೆ ಮರುಳ ಮರಳು. ಮೈಕೆಲೆಂಜೆಲೋ ಇವುಗಳನ್ನೇ ಕದ್ದಿದ್ದನೋ, ಲಿಯೋನಾಡರ್ೋ ಡ ವಿಂಚಿಯಿಂದ ಇದೇ ಪಾಠ ಕಲಿಯಿತೋ. ಚಿತ್ರ ವಿಚಿತ್ರ ಚಿತ್ರಿಕೆಗಳ ಲೈವ್ ಮೂಜಿಯಂ ಕಣ್ರೀ. ಅಬ್ಬಾ, ಕೈಯಿಂದ ತುಸು ನೀರು ಜಾರಿ ಬಿದ್ದೊಡನೆ ಎಂತಹ ಅನೂಹ್ಯ , ಅನಿರ್ವಚನೀಯ ಸುವಾಸನೆಯ ಗಂಧ, ಆ ಮರಳ ಆತ್ಮದೊಳಗಿಂದ! ಇಲ್ಲ ಗಾಲಿಬ್ ಇಲ್ಲ, ನೀನು ಸತ್ತಿಲ್ಲ, ಇಲ್ಲೆಲ್ಲೋ ಇರುವೆ, ಖಂಡಿತ, ನೀನು ಸತ್ತಿಲ್ಲ ಕಣೋ!

ಒಂದೊಂದು ಸ್ಯಾಂಡ್ ಡ್ಯೂನ್ ಒಂದೊಂದು ಪ್ರಕೃತಿ ಪುರುಷರ ಬೆತ್ತಲೆ ರೂಪಕಗಳು. ಬೋರಲು ಮಲಗಿ ಬಿಟ್ಟಿರುತ್ತವೆ. ಕೆಲವು ಜೋಡಿಗಳು ಶೃಂಗಾರಮಯವಾದರೆ, ಇನ್ನು ಕೆಲವು ಚಿರ ವಿರಹಿಗಳಂತಿವೆ. ಕೆಲವು ಒಬ್ಬಂಟಿಯಾಗಿರುತ್ತವೆ. ‘ರುಡಾಲಿ’ಯ ಡಿಂಪಲ್ನಂತೆ….ಏಕಾಂತವಾಗಿ ಒಂದೊಂದೇ ಪವಡಿಸಿವೆ. ಖಿನ್ನವಾಗಿ, ಅಗೋಚರದತ್ತ ದೃಷ್ಟಿ ನೆಟ್ಟು, …….ಶ್! ಕೇಳಿ ಕಿವಿಗೊಟ್ಟು, ……ಅವು ಏನೋ ಹೇಳುತ್ತಿವೆ,..ಹಾಡುತ್ತಿವೆ, ……ಏನೋ ಅನುರಣಿಸುತ್ತಿವೆ, ……ತಾಳಿ, ತಾಳಿ,….. ಕೇಳಿ ಕೇಳಿ…,ಯಾರಿಗಾಗಿಯೋ ಕೂಗುತ್ತಿವೆ, ಆರ್ತವಾಗಿ, …’ರೂಹ್’ನೊಳಗಿಂದ
‘ಧೋಲಾ,…. ಧೋಲಾ ….ಧೋಲಾ…..ಧೋಲಾ……!,
ಯಾರಾ ಸೀಲಿ ಸೀಲಿ ಬಿರಹಾ ಕಿ ರಾತ ಕಾ ಜಲನಾ,
ಯೆ ಭೀ ಕೊಯೀ ಜೀನಾ ಹೈ,,
ಯೆ ಭೀ ಕೊಯೀ ಮರನಾ.
( ಗೆಳೆಯಾ ಧೋಲಾ, ಹಸಿ ಹಸಿ ವಿರಹದ ಬೆಂಕೀಲಿ ಬೇಯುವ ಇದೆಂಥ ಜೀವನ ರೀತಿಯೋ, ಈ ರೀತಿಯ ಮರಣವೋ”)
ಯಾಕೆ ಲತಾ ದೀದಿ ಹಾಡು ಮರೆತಿರಾ, ..ಗುಲ್ಜಾರರ ಈ ಹಾಡು….ಹೇಗೆ ಮರೆಯಲು ಸಾಧ್ಯ ಅಲ್ಲವೇ? , ಹೌದು ಇದೆ ಮಣ್ಣಲ್ಲಿ, ಇದೇ ಹೆಜ್ಜೆಗಳಲ್ಲಿ ಇದೇ ಉಸಿರನ್ನು ಬಗೆದು, ಇದೇ ನೆಲದ ಹೃದಯ ಹುಚ್ಚೆದ್ದು ತನ್ನ’ ಯಾರಾ…..(ಇನಿಯ) ನಿಗಾಗಿ ಕೂಗಿ ಕರೆದು, ವಿರಹದುಂಬಿ ಹಾಡಿದ ಹಾಡಿದು. ಸೀದಾ ಎದೆಯಲ್ಲಿ ಬಸಿದು ಬಿಡುವ ಹಾಡು. ಇದುವೇ ರಾಜಸ್ಥಾನದ ನಿಜ ಆತ್ಮ ಗೆಳೆಯರೆ., ಎಲ್ಲರಿಗೂ ಕೇಳಿಸುವುದಿಲ್ಲ ಅದು .
‘ವೊ ಮೊರೆ ಚಂದ್ರಮಾ, ತೆರೆ ಚಾಂದನೀ ಅಂಗ ಜಲವಾಯೆ,’
ಇಕ್ ಬೂಂದ ಪಾನೀ ಕೋ, ಮೊರೆ ಅಖಿಯೋಂಸೆ ಬರಸಾವೆ’
(ಒಂದಾದರೂ ಬಿಂದು ಹನಿಯೇ ಈ ಕಂಗಳಿಂದಲೂ ಸುರಿಯೆಯಾ
ಓ ನನ್ನ ಚಂದ್ರಮನೆ, ನಿನ್ನ ಬೆಳದಿಂಗಳಿದು ಬೆಂಕಿಯುಗಿಳಿದೆ)
ಎಂದು ಗೋಗರೆಯುತ್ತಿವೆ, ಮರಳ ಒಳ ಆತ್ಮದ ದನಿಯದು. ‘ಜಾನ್ ನಿಸ್ಸಾರ್ ಆಖ್ತರ್ನ ‘ಐ ದಿಲೇ ನಾದಾನ್’ ಮರಳ ಕಣ ಕಣಗಳತ್ತ ಕಣ್ಣಿಟ್ಟು , ಕಿವಿಯಾಣಿಸಿದರೆ, ಕೇಳಿದರೆ ಕೇಳಿಸೀತು ,
‘ಏ ಜಮೀಂ ಚುಪ್ ಹೈ,……. ಆಸಮಾಂ ಚುಪ್ಹೈ, …
ಫಿರ್ ಯೆ ಧಡಕನ್ಸೀ ಜುಸ್ತಜೂ ಕ್ಯಾ ಹೈ,
ಯೆ ಕೈಸೀ ಉಲ್ಝನ್ ಹೈ, ಕ್ಯಾ ಯೆ ಉಲಝನ್ ಹೈ’
(ನೆಲ ಮೌನ ಹೊದ್ದಿದೆ, ಗಗನವೂ ನಿಮರ್ೌನ, ಆದರೂ ಮಿಡಿವ ಮನ, ಏನು ಏನು, ಯಾವ ಗುಟ್ಟು ನೀನು)
ಕಿವಿಗೊಟ್ಟು ಕೇಳಿದರೆ ಕೇಳಿಸೀತು, ‘ಹಮ್ ಭಟಕತೇ ಹೈ, ಕ್ಯೂ ಭಟಕತೇ ಹೈಂ’ ಸುಳಿದಾಡುವ ಅದರ ಆತ್ಮದ ಸ್ಪರ್ಶಕ್ಕೆ ಒಳಗಣ್ಣುಗಳು,, ಆಲಿಸುವ ಆದ್ರ್ರಕಿವಿಗಳು ಬೇಕಷ್ಟೆ. ….ಹೇ ಮರುಳು ಮರಳೇ, ಏನು ನಿನ್ನ ವೇದನೆ ಎಂದು ಮಾತಿಗಿಳಿದರೆ, ದ್ವಾಪರದಿಂದಲೇ ಎದೆಯಲ್ಲಿ ಮಥಿಸಿ, ‘ ವಕ್ತ್ ಕೆ ಸಿತಮ್ ಕಮ್ ಹಸೀಂ ನಹೀಂ’ ಎಂದು ಮುಚ್ಚಿಟ್ಟುಕೊಂಡ ದಮನಗಳನ್ನೆಲ್ಲಾ ಅರುಹೀತು, ರಾಜಸ್ಥಾನದ ಮಂಗಾನಿಯರ್ ಸೂಫಿ ಸರಗಮ್ಗಳ ಹಾಡುಗಳ ಮೂಲಕ ಶತಮಾನಗಳಷ್ಟು ಹಳೆಯದಾದ ಕಮಾಯಿಚಾದ ಆಡಿನ ಕರುಳಿನ ತಂತಿಯನ್ನು ಮೀಟಿ ಸುಶ್ರಾವ್ಯವಾಗಿ ವಿಶದಪಡಿಸೀತು. ಅಹೋರಾತ್ರಿ ಕಾನ್ಬೇಲಿಯನ್ ನರ್ತಕಿಯರ ನೃತ್ಯಗಳಲ್ಲಿ, ಅವರ ಕಾಲ ಗೆಜ್ಜೆಗಳಲ್ಲಿ, ತನ್ನೆಲ್ಲ ಏಕಾಂತವನ್ನು, ಖಿನ್ನತೆಯನ್ನು ನಿತ್ಯ ರಾತ್ರಿಯೂ ಮರೆಯಲು ಪ್ರಯತ್ನಿಸುತ್ತಿದೆಯೇನೋ!
‘ಆರಜೂವೋಂ ನೆ ಹರ್ ಕಿಸೀ ದಿಲ್ಕೋ ದರ್ದ ಬಾಂಟೆ ಹೈ,
ಕಿತನೇ ಘಾಯಲ್ ಹೈ, ಕಿತನೇ ಬಿಸಮಿಲ್ ಹೈ, ಏಕ್ ತೂ ಕ್ಯಾ ಹೈ’
(ಆಸೆಗಳೆಲ್ಲ ಪ್ರತಿ ಹೃದಯಕ್ಕೂ ನೋವನ್ನೇ ಹಂಚುವವು, ಗಾಸಿಗೊಂಡವರೆಷ್ಟೊ, ಸತ್ತುಹೋದವರೆಷ್ಟೊ, ಇನ್ನು ನೀನ್ಯಾವ ಲೆಖ್ಖ್!)
ಎಂತಹ ಅದ್ಭುತ ಸಾಲುಗಳು. ಈ ಸಾಲುಗಳಲ್ಲಿ ಬರುವ ‘ಏಕ್ ತೂ ಕ್ಯಾ ಹೈ’ ಸಾಲು ನೋಡಿ, ಮನುಷ್ಯನೆಂಬ ಮನುಷ್ಯನ ಅರೆಕ್ಷಣ ಬದುಕಿನ ಕಾಲಯಾಣವನ್ನು ಹೇಗೆ ಬಿಡಿಸಿ ತೆರದು ತೋರಿಬಿಡುತ್ತವೆ, ಎರಡು ಕ್ಷಣಗಳ ಬದುಕಿನ ಈ ಭೂವಿಯ ಋಣ ಸಂಬಂಧದ ಭೇಟಿಯ ನಂಟಿನ ಕ್ಷಣಗಳನ್ನು ತೆರೆದಿಟ್ಟ ಬಗೆ. ಇಲ್ಲಿ ಕೇವಲ ಕೆಲ ಗಳಿಗೆಯ ಅತಿಥಿ ಅಷ್ಟೆ ನಾವು. ಕಾಲಯಮನ ಮುಂದೆ, ಕ್ಷಣಮಾತ್ರದವರು. ಯುಗಯುಗಗಳ ಇತಿಹಾಸದ ಕೊಂಡಿಗಳೂ ಹರಳುಗಟ್ಟಿದ ಮರಳ ಕಣ ಕಣಗಳಲ್ಲಿ ದೊರೆತಾವು. ಅದರ ಆತ್ಮವನ್ನು ನಮಗೆ ಪರಿಚಯಿಸಿದ ಲತಾ ದೀದಿಗೆ, ಜಾನ್ ನಿಸ್ಸಾರ್ ಅಖ್ತರ್ಗೆ ಹೃದಯನಾಥ ಮಂಗೇಶಕರ, ಖಯಾಮ್, ಗುಲ್ಜಾರರಿಗೆ ಇದೇ ಸ್ಯಾಂಡ ಡ್ಯೂನ್ನಿಂದಲೇ ಸಲಾಮ್ ಹೇಳದಿದ್ದರೆ, ಮನುಷ್ಯನೆನಿಸಿಕೊಳ್ಳಲಾರೆ ಎಂದೆನಿಸಿ ಅವರೆಲ್ಲರಿಗೊಂದು ತುಂಬು ಮನದ ಸಲಾಮ್ ಹೇಳಿಬಿಟ್ಟೆ.
ಇರಲಿ…..ಸಂಜೆಯ ಸೂರ್ಯಸ್ತವನ್ನು ನೋಡಲು ಅಲ್ಲಿನ ಸುತ್ತಮುತ್ತಲಿನ ಡೆಸಟರ್್ ರೆಸಾಟರ್್ನ ಪ್ರವಾಸಿಗರು ಒಂಟೆಗಳ ಕಾರವಾನ್ಗಳಲ್ಲಿ ಇಂತಹ ಮರಳುದಿನ್ನೆಗಳ ಮೇಲೆ ಸೇರುತ್ತಾರೆ. ಸೂರ್ಯಸ್ತವು ಇಲ್ಲಿ ತುಂಬ ನಯನ ಮನೋಹರವಾಗಿರುತ್ತವೆ. ಆ ಸಂಜೆಗೆಂಪಿನ ಆಗಸದ ಅಂಚಲ್ಲಿ ನಿಧಾನವಾಗಿ ಮುಳುಗುವ ಸೂರ್ಯ, ಒಂದೇನೋ ಅನೂಹ್ಯವಾದ, ಅವಿರ್ವಚನೀಯವಾದ ಭಾವವೊಂದರಲ್ಲಿ ನಮ್ಮನ್ನು ಅದ್ದಿ, ತಾನು ಮುಳುಗಿ, ನಮ್ಮನ್ನು ಧನ್ಯತೆಗೆ ದೂಡುತ್ತಾನೆ. ಅವ ಮುಳುಗಿದ ಮೇಲೆ ಆಗಸದಲ್ಲಿ ಆಗುವ ಆ ಬೆಳಕಿನ ಹೊಂಬಣ್ಣದ ಕಿರಣಗಳಲ್ಲೂ ಅಗಸದಿಂದ ಪ್ರತಿಫಲಿತವಾಗಿಯೂ, ಮಂದಬೆಳಕಿನಲ್ಲಿ ರಂಗೋಲಿಯ ಗೆರೆಗಳನ್ನು ತುಂಬ ಸುಂದರವಾಗಿ ಹೊದ್ದ, ಆ ಮರಳ ದಿನ್ನೆ, ಅದರ ಏರು ಇಳಿವುಗಳು, ಹೊರಳುಗಳು, ಮಗ್ಗಲುಗಳು, ಎಷ್ಟೊಂದು ರಮ್ಯವೆನಿಸುತ್ತವೆ, ಅದರ ಜೀವಂತ ಉಸಿರಾಟದಂತೆ, ಅದರ ಕ್ಷಣ ಕ್ಷಣವೂ ಬದಲಾಗುವ ಆ ದೃಶ್ಯವೈಭವ ಅನನ್ಯ. ……..ನೋಡಿ ಆನಂದ ಪಡವುದಷ್ಟೆ ನಾವು ಮಾಡಬಹುದಾದ ಕೆಲಸ ಅಲ್ಲಿ.. ಏನು ವರ್ಣಿಸಿದರೂ ಬೊಗಸೆ ಮಾತ್ರ!
ಆ ರಮ್ಯತೆಯನ್ನು ಇಡಿಯಾಗಿ ಹಿಡಿದಿಡಲು ಸಾಧ್ಯವಾಗದು. ಅದೊಂದು ಅದ್ಭುತ ಅನುಭವವಾಗಿ, ಬಹುಶ: ಪ್ರತಿಯೊಬ್ಬ ಪ್ರವಾಸಿಯ ನೆನಪಿನಾಳದಲ್ಲಿ ಖಾಯಂ ಅತಿಥಿಯಾಗಿ ಪ್ರತಿಷ್ಠಾಪಿಸಿಬಿಡುತ್ತದೆ. ಗೆಳೆಯರೆ, ನೆನಪಾದರೂ ಎಂಥ ನೆನಪು ಅಂತೀರಿ. ಈ ತ್ರೀ ಡಿ, ಅನ್ನುವರಲ್ಲ, ಅಲ್ಲ, ಅದು ಅದರ ಹತ್ತು ಪಟ್ಟು. . ಮರಳದಿನ್ನೆಗಳ ಮೇಲೆ ಅಲ್ಲಲ್ಲಿ ಆಸಕ್ತ ಪ್ರವಾಸಿಗರ ಮುಂದೆ ಕುಳಿತು ಈ ನೆಲದ ಮೂಲಜೀವಗಳಾದ ಮಂಗಾನಿಯರ್. ಲಂಗದಾ ಪ್ರತಿನಿಧಿ, ಜನಪದೀಯ ಹಾಡುಗಾರ ಸ್ವರೂಪಖಾನ್ ಸರಗಮ್ನೊಂದಿಗೆ ಢೋಲು ನುಡಿಸುತ್ತ, ಸುಶ್ರಾವ್ಯವಾಗಿ, ”ಕೇಸರಿಯಾ ಬಾಲಮ್, ಆವೋ…ಪಧಾರೋ ………….ಮಾರೇ ದೇಸ್, ಸಾಜನ್ ಸಾಜನ್….” ಹಾಡುವಾಗಿನ, ಆ ನಿಸರ್ಗದ ರಂಗೋತ್ಸವದ ಕ್ಷಣಗಳನ್ನು ಸವಿಯುವಾಗ, ಮನದ ಪಟಲದಲ್ಲಿ ಈ ಮನಸೆಂಬ ಮನಸು, ಬಣ್ಣಬಣ್ಣದ ಕುಂಚಗಳಿಂದ ಅಂತಿಮವಾಗಿ, ಎಂದೂ ಮರೆಯಲಾರದ ಶಾಶ್ವತ ಅಪರೂಪದ ಸ್ಥಬ್ದ ಚಿತ್ರವೊಂದನ್ನು ನಮ್ಮಲ್ಲಿ ಬಿಡಿಸಿಬಿಡುತ್ತದೆ, ಸ್ಮೃತಿಪಟಲದಲ್ಲಿ. ……ಅದನ್ನು ಮತ್ತೆ ಮತ್ತೆ ಆಸ್ವಾದಿಸಲು ಕಣ್ಣು ತೆರೆಯಬೇಕಿಲ್ಲ, ……ಮುಚ್ಚಬೇಕಷ್ಟೆ!
(ಇನ್ನೂ ಇದೆ…)

‍ಲೇಖಕರು G

June 10, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

8 ಪ್ರತಿಕ್ರಿಯೆಗಳು

  1. Shrinivas. Huddar

    ಕನ್ನಡ ಸಾಹಿತ್ಯದಲ್ಲಿ ಬಹುತೇಕ ಮರತೇ ಹೊಗಿದ್ದ ವೀರ ರಸ ಈ ಪ್ರವಾಸ ಕಥನದಲ್ಲಿ ಹರಿದಿದೆ. ಇತ್ತೀಚಿನ ಸಾಹಿತ್ಯದಲ್ಲಿ ಇದು ಮರೆಯಾಗಿದೆ. ಸುಂದರ ಲೇಖನ.ವಂದನೆಗಳು ಇಟ್ನಾಳ ಸರ್.

    ಪ್ರತಿಕ್ರಿಯೆ
    • ಲಕ್ಷ್ಮೀಕಾಂತ ಇಟ್ನಾಳ

      ಪ್ರವಾಸ ಕಥನದಲ್ಲಿ ವೀರ ರಸವನ್ನೇ ಹುಡುಕಿದಂತೆ ಅದು ನಿಮಗೆ ಸಿಕ್ಕಿದೆ. ತಾವು ತುಂಬಾ ದೇಶಪ್ರೇಮಿ ಅನ್ನುವುದು ಗೊತ್ತಾಯಿತು ಬಿಡಿ. ಪ್ರವಾಸದ ಮೆಚ್ಚುಗೆಗೆ ವಂದನೆಗಳು ಶ್ರೀನಿವಾಸ ಸರ್.

      ಪ್ರತಿಕ್ರಿಯೆ
  2. Palahalli Vishwanath

    ಪ್ರವಾಸ ಲೆಖ ಇಷ್ಟವಾಯಿತು. (೧) ಸತ್ಯಜಿತ್ ರೇ ರವರ ಸೊನಾರ್ ಕಿಲಾ ಚಿತ್ರ ನೋಡಿದ೦ದಿನಿ೦ದ ಜೈಸಲ್ಮೆರ್ ನೋದಬೇಕೆ೦ಬ ಆಸೆಇದ್ದಿತು. ಕಡೆಗೂ ಸುಮಾರು ೧೦ವರ್ಷದ ಹಿ೦ದೆ ಜೋಧ್ಪುರ -ಜೈಸಲ್ಮೇರ್ ಪ್ರವಾಸ ಮಾಡಿ ಬ೦ದೆವು. ಜೈಸಲ್ಮೆರ ನಮಗೆ ಬಹಳ ಇಷ್ಟವಾಯಿತು. ಈ ದೇಶದಲ್ಲಿ ಒರಿಸ್ಸಾ ಮತ್ತು ರಾಜಸ್ಥಾನ್ are probably the best (೨) ಪೋಖ್ರಾನ್ ಬಗ್ಗೆ ಏನಾಗುತ್ತಿದೆ ಎ೦ದು ಯೋಚಿಸ ಬೇಕಾಗುತ್ತದೆ. ಕ್ಯಾನ್ಸರ್ ಹೆಚ್ಚಾಗಿದೆ.

    ಪ್ರತಿಕ್ರಿಯೆ
    • ಲಕ್ಷ್ಮೀಕಾಂತ ಇಟ್ನಾಳ

      ಪಾಲಹಳ್ಳಿ ವಿಶ್ವನಾಥ ಸರ್, ತಮ್ಮ ಲೇಖನದ ಮೆಚ್ಚುಗೆಗೆ ಧನ್ಯ. ತಾವೂ ಕೂಡ ಜೈಸಲ್ಮೇರ್ ಜೋಧಪುರ ಪ್ರವಾಸ ಮಾಡಿದ್ದು ಖುಷಿ ತಂದಿತು.ತಾವಂದಂತೆ ಓರಿಸ್ಸಾ, ರಾಜಸ್ಥಾನಗಳು ನಿಜಕ್ಕೂ ಅದ್ಭುತ ಅನುಭವ ನೀಡುವ ಸ್ಥಳಗಳು, ಹಾಂ, ಪೋಖ್ರಾನ್ ವಿಷಯ, ಕ್ಯಾನ್ಸರ್, ಇತ್ಯಾದಿ, ಅದು ಹೌದು, ಆದರೆ ವಿಶಾಲತೆ, ರಕ್ಷಣೆಯ ದೃಷ್ಟಿಯಿಂದ ಅನಿವಾರ್ಯವೂ ಹೌದು ಎನಿಸಿತ್ತದೆ, ರೆಮೆಡಿ ಹುಡುಕಿಕೊಳ್ಳಬೇಕಷ್ಟೆ, ನನ್ನ ಅಭಿಪ್ರಾಯದಲ್ಲಿ.

      ಪ್ರತಿಕ್ರಿಯೆ
  3. Hanumanth Ananth Patil

    ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
    ರಾಜಸ್ತಾನದ ಸ್ವರ್ಗದ ತುಣುಕು ಜೈಸಲ್ಮೆರ ಎಂದಿದ್ದೀರಿ ಅದು ಅಕ್ಷರಶಃ ನಿಜ ನಿಮ್ಮ ಬರವಣಿಗೆಯ ಶೈಲಿ ಪ್ರವಾಸದ ಅನುಬವಗಳನ್ನು ಮನಮುಟ್ಟುವಂತೆ ನಿಮ್ಮ ದಾಖಲಿಸಿದ ರೀತಿ ಓದುಗನ ಮನ ತಟ್ಟುವಂತಿವೆ. ಪೋಖ್ರಾನ್‌ಗೆ ಭೇಟಿ ನೀಡಿ ನಿಮ್ಮ ಭಾವನೆಗಳನ್ನು ವ್ಯಕ್ತ ಪಡಿಸಿದ ರೀತಿ ಕಂಡು ಮೂಕನಾದೆ. ಅ ಪವಿತ್ರ ಬೂಮಿಗೆ ನಿಮ್ಮ ಸೆಲ್ಯೂಟ್ ಅದನ್ನು ಗ್ರಹಿಸಿ ನಸು ನಕ್ಕು ಸೆಲ್ಯೂಟ್‌ ಮಾಡಿದ್ದು ಎಲ್ಲವೂ ಅಮೂಲ್ಯ ಕ್ಷಣಗಳೆ, ನಿಮ್ಮ ಅನಿಸಕೆಗಳನ್ನು ಓದಿ ಭಾವುಕನಾದೆ. ಅಲ್ಲಿನ ಉಸ್ತಿತಿಯ ಸರಸ್ತೆಗಳು ಅಲ್ಲಿನ ಜನತೆ ನೀರಿಗಾಗಿ ಪಡುವ ಭವಣೆ ಅಲ್ಲಿನ ಮೂಲ ನಿವಾಸಿಗಳ ಜೀವನೋತ್ಸಾಹಗಳನ್ನು ಸಮರ್ಥವಾಗಿ ಬಿಂಬಿಸಿದ್ದೀರಿ. ಅಲ್ಲಿನ ಸೂರ್ಯಾಸ್ತ ಮರಳುಗಾಡಿನಲ್ಲಿ ಅಗುವ ಪ್ರಕರತಿಯಲ್ಲಿನ ಬದಲಾವಣೆಗಳು ನೀವು ನೆನಪಿಸಿಕೊಂಡ ಚಿತ್ರಕಾರರು ಲಿಯೋನಾರ್ಡ ಡಿವಿಂಚಿ, ಮೈಕಲೆಂಜಲೋ, ಕವಿ ಶ್ರೆಷ್ಟರಾದ ಮಿರ್ಜಾ ಗಾಲಿಬ್‌,ಗುಲ್ಜಾರ, ಜಾನೆಸರ ಅಖ್ತರ್‌ರ ಗ ಗಜಲ್‌ ಮತ್ತು ಕವನಗಳ ಸಾಲುಗಳು ಸಂಗೀತ ಸಂಯೋಜಕರು ಗಾಯಕ ಗಾಯಕಿಯರು ಅವುಗಳನ್ನು ಅಮರಗೊಳಿಸಿದುದು ಎಲ್ಲವನ್ನು ನೆನದು ಅಕ್ಷರ ರೂಪ ಕೊಟ್ಟಿದ್ದಿರಿ, ಯಾವ ಸಣ್ನ ವಿವರವೂ ನಿಮ್ಮ ಕಣ್ಣಳತೆಯಿಂದ ಗ್ರಹಿಕೆಯಿಂದ ತಪ್ಪಿಸಿಕೊಳ್ಳಲಾಗಿಲ್ಲ. ಅದ್ಭುತ ಅನುಬವ ನೀಡುವ ಪ್ರವಾಸ ಕಥನ. ಈ ಕಥನ ಶೈಲಿಯನ್ನು ಯಾವ ರೀತಿ ವರ್ಣಿಸುವುದು. ವರಕವಿ ಬೇಂದ್ರೆಯವರ ಶೈಲಿಯಲ್ಲಿ ಹೆಳುವುದಾದರೆ ಇದೊಂದು ದ್ರಾಕ್ಷಿ ಗೋಡಂಬಿ ಕಲ್ಲುಸಕ್ಕರೆನ ಖರ್ಜೂರ ಕೇರುಬೀಜದ ತುಣುಕುಗಳನ್ನು ಸೇರಿಸಿ ಕಟ್ಟಿದ ರುಚಿಕರವಾದ ಉಂಡಿ ಯಅವ ಬದಿ ಕಚ್ಚಿ ತಿಂದರೂ ಅದೆ ರುಚಿ. ಮನದಾಳಕಿಳಿದು ದಾಖಲಾಗುವ ಪ್ರವಾಸ ಕಥನ.

    ಪ್ರತಿಕ್ರಿಯೆ
    • ಲಕ್ಷ್ಮೀಕಾಂತ ಇಟ್ನಾಳ

      ಹನುಮಂತ ಅನಂತ ಪಾಟೀಲ ಸರ್, ತಮ್ಮ ನಲ್ಮೆಯ ನುಡಿ, ಪ್ರವಾಸ ಕಥನದ ಎಲ್ಲ ಸಾಲುಗಳನ್ನು ಬಸಿದುಕೊಂಡು ಓದಿದ ಪರಿಗೆ ಧನ್ಯ ಸರ್. ತಮ್ಮಂತಹ ಆತ್ಮೀಯ ಹಿರಿಯರ ಹಾರೈಕೆ ಇನ್ನಷ್ಟು ಬರೆಯಲು ಪ್ರೇರಣೆ ನೀಡುವಂತಿದೆ, ವಂದನೆಗಳು.

      ಪ್ರತಿಕ್ರಿಯೆ
  4. Mallappa

    ಪ್ರವಾಸ ಕಥನ ತುಂಬಾ ಸುಂದರವಾಗಿದೆ. ನೀವು ಮಿಲಿಟರಿಯವರಿಗೆ ಮನದುಂಬಿ, ಎದೆಯೂಬ್ಬಿಸಿ ಹಾಕಿದ ಸಲ್ಯೂಟ್ ಗೆ ನಮ್ಮದೂ ಸಲ್ಯೂಟ್. ಬರೆಯುವ ಭಾಷೆಗೆ ಮನದ ಭಾವ ಸೇರಿ ಆಗಿರುವ ಪಾಕ ಅದು. ಪ್ರವಾಸ ಎಂದೆ ಎಸಿ ಗಾಡಿಯಲ್ಲಿ ಕೂತು, ಮೋಬೈಲಲ್ಲಿ ತಲೆ ಇಟ್ಟು ಪ್ರಯಾಣ ಮಾಡಿ,ಗೈಡ್ ಹೇಳಿದತ್ತ ತಲೆ ಮಾಡಿ ಎರಡು ನಿಮಿಷದಲ್ಲಿ ಪಕ್ಷಿನೋಟವನ್ನು ಬೀರಿ,ಭುರ್ ಎಂದು ಹಾರಿ ಬರುವುದಲ್ಲ.ಅಲ್ಲಿರುವ ಮೂಲ ವಾಸಿಗಳೊಂದಿಗೆ ಬೆರೆತು ಅವರ ರೀತಿ/ನೀತಿ/ಆಚಾರ/ವಿಚಾರ, ಅವರ ಹಾಡು ಕಲೆ ಸಾಧ್ಯವಾದಷ್ಟು ತಿಳಿದುಕೊಳ್ಳುವುದು.ನೀವು ಅಲ್ಲಿನ ಮರಳಿನಲ್ಲಿ ಮುರಳಿ ನಾದ ಕೇಳಿದ ಪರಿ ಅನನ್ಯ.ಇನ್ನೂ ಲೇಖನ ಬರಲಿ

    ಪ್ರತಿಕ್ರಿಯೆ
    • ಲಕ್ಷ್ಮೀಕಾಂತ ಇಟ್ನಾಳ

      ಮಲ್ಲಪ್ಪ ರವರೆ ಪ್ರವಾಸ ಕಥನದ ಮೆಚ್ಚುಗೆಗೆ ವಂದನೆಗಳು.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: