ರಾಜಶ್ರೀ ಟಿ ರೈ ಪೆರ್ಲ ಕವಿತೆ – ಸಂಕ್ರಮಣದ ಬಿಕ್ಕಳಿಕೆ…

ರಾಜಶ್ರೀ ಟಿ ರೈ ಪೆರ್ಲ

ಎಡ ಬಲಕ್ಕೆ ಖಾಲಿತನವಿದೆಯೆಂಬ ಅರಿವು ಹಡೆದವರಿಗೂ ಮತ್ತಿವರಿಗೂ ಇತ್ತು.
ಆವರಿಸಿ ಸ್ವಂತ ಆಕಾರವಿಲ್ಲದ ದ್ರವ
ಪೂರ್ತಿಯಾಗಿ ತುಂಬಿಕೊಳ್ಳಬೇಕು
ಮತ್ತೆ ತುಳುಕಬೇಕು ಜೀವನದಿ.

ಕತ್ತರಿಸಿ ಇತ್ತವರು ಅತ್ತರಿನ ಪರಿಮಳದ
ನಡುವೆಯೂ ಬಿಕ್ಕಳಿಸಿ ಅತ್ತರು.
ಮಣ್ಣು ನೆರಳು ನೋಡಿಟ್ಟು ರಂಗಲ್ಲಿ
ಅದ್ದಿ ಅಲ್ಲಿಟ್ಟು ಇದೇ ಲೋಕರೂಢಿ ಎಂದು
ಕರ ತೊಳೆದುಕೊಂಡರು.

ಹೂತಲ್ಲಿ ಸೋತು ತಗ್ಗಿ ಬಗ್ಗಿ
ಹಳತರ ನಡುವೆ ಹೊಸತು ಆದಷ್ಟು ಬೇಗ ತೇಯಬೇಕೆಂಬ ಹವಣಿಕೆ.
ಬುಡಕೆ ಅಂಟಿಕೊಂಡ ಅಪರಿಚಿತ ಮಣ್ಣು.
ಒಣಗುವ ಮೊದಲು ತೇವ ತೇಪೆಗೆ ಜೀವಂತಿಕೆ.

ಆ ಗಿಡಕೆ ಮೂಲ ಹಿತ್ತಿಲ ಹೆಸರು.
ಇಲ್ಲಿಯ ನೀರು, ಕೆಸರು
ಒಳಸೆಲೆಗೆ ಹಸಿರು, ಬಸಿರ ಹೊಣೆ.
ಉಸಿರೊಳಗೆ ಉಸಿರ ಸೃಷ್ಟಿ. ಒಡಲು ಗೀರಿ,
ಹಣ್ಣು, ಕಾಯಿ ಹೂ ಎಸಳು, ಪ್ರತ್ಯುತ್ಪಾದನೆ.

ಹಸ್ತಾಂತರಿಸಬೇಕು ಹೊಸ ಹುಟ್ಟನ್ನು.
ಹರೆಯದ ನಡು ಬಳುಕಿದಂತೆ
ಉಬ್ಬು ತಗ್ಗುಗಳು ಸೆಟೆದು ಬಲಿತಂತೆ.
ಬೇರ್ಪಡಿಸಿ ಮತ್ತೆಲ್ಲೋ ಊರುವಾಗ
ಭಾರ ಉಸಿರಿನ ನೀರಸ ದುಮ್ಮಿಕ್ಕುವಿಕೆ.

ಪಲ್ಲಟದ ಹಾದಿಯಲಿ
ಕೆಂಪು ಶ್ರವಿಸಿ ಒಣಗಿ ಮತ್ತೆ ಮತ್ತೆ
ಹೊಸ ಬೇರು ಹುಟ್ಟಿಕೊಳುತ್ತದೆ
ಇತಿಹಾಸದ ಮರುಕಳಿಕೆ.
ಅದೇ ತಣ್ಣನೆಯ ಚಡಪಡಿಕೆ

ಕಳೆತು ಮೊಳೆತು ಎತ್ತರೆತ್ತರ ಬೆಳೆದು
ರೆಂಬೆ ಕೊಂಬೆ ಚಾಚಿದ ಪ್ರೌಢ ಕ್ಷಣ
ಉಸಿರ ಹುದುಗಿಸಿದಲ್ಲಿಗೆ ಮರಳಬೇಕೆಂದರೂ
ಬೇರುಗಳು ಬಿಡುವುದಿಲ್ಲ
ಕಿತ್ತ ರೆಂಬೆಯೂ ಸ್ವಂತವಲ್ಲ
ಭೂತ ಕಾಡಿದೆ, ಭವಿಷ್ಯ ಕಾಣಿಸದೆ
ವರ್ತಮಾನ ಮೆಲ್ಲ ಸಾಯುತ್ತದೆ.

ಬೇರು ಅಂಟಿಸುವಾತನಿಗೆ ದೂರು ಹೇಳಬೇಕು
ಆತ್ಮ ಕಳಚಿಡುವ ಪೋಷಾಕಿನ ಒಳಗಿಂದ
ಮತ್ತದೇ ಕ್ಷೀಣ ಸ್ವರ
ಸಂಕ್ರಮಣದ ಬಿಕ್ಕಳಿಕೆ

‍ಲೇಖಕರು Admin

January 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: