ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಹಮತ್ ಗೆ ಅಭಿನಂದನೆಗಳು, ಭಾನುವಿಗೂ ಸಹಾ..

-ಪುರುಷೋತ್ತಮ ಬಿಳಿಮಲೆ ಗೆಳೆಯ ರಹಮತ್ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಬಂದಿದೆ. ಅದಕ್ಕೆ ಸಂತೋಷ ಪಟ್ಟ ಅವನ ಸಾವಿರಾರು ಗೆಳೆಯರಲ್ಲಿ ನಾನು ಒಬ್ಬ. ಸುದ್ದಿ ತಿಳಿಯುತ್ತಿದ್ದಂತೆ ದೂರವಾಣಿಯಲ್ಲಿ ಸಂಪರ್ಕಿಸಲು ದಿನವಿಡೀ ಪ್ರಯತ್ನಿಸಿದೆ. ಆದರೆ ವಿಫಲನಾದೆ. ಏನೋ ಬರೆಯುತ್ತಿರಬಹುದು ಅಂದುಕೊಂಡೆ. ರಹಮತ್ ನನ್ನು ಕಳೆದ ಸುಮಾರು ೩೦ ವರ್ಷಗಳಿಂದ ನಾನು ಬಲ್ಲೆ. ಶಿವಮೊಗ್ಗದಲ್ಲಿ ಇದ್ದ ಅವನ ಮನೆಗೆ ಹೋಗಿದ್ದೆ, ಕನ್ನಡ ವಿವಿಗೆ ಆತ ಬರುವಂತಾಗಲು ಶ್ರಮಿಸಿದವರಲ್ಲಿ ನಾನು ಒಬ್ಬ. ಆತನ ಜೊತೆ ಕನ್ನಡ ವಿವಿಯಲ್ಲಿ ಕಳೆದ ಒಳ್ಳೆಯ ದಿನಗಳು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಮಧ್ಯಾಹ್ನದ ಬುತ್ತಿ ಊಟದಿಂದ ಆರಂಭವಾಗಿ ಪ್ರತಿಭಟನೆಯ ಸೂಚನೆಯಾಗಿ ಕಾರಿಗೆ ಅಡ್ಡ ಮಲಗುವ ವರೆಗೆ ನಾವು ಜೊತೆಯಾಗಿದ್ದೆವು. ಉತ್ತರ ಕರ್ನಾಟಕದಾದ್ಯಂತ ನಾನು ಮತ್ತು ಆತ ಮಾಡಿದ ಭಾಷಣಗಳಿಗೆ ಲೆಕ್ಕವಿಲ್ಲ. ಆತನ ಮಗಳನ್ನು ನಾನು ‘ಸೊಸೆ ಮುದ್ದು’ ಅಂತಲೇ ಈಗಲೂ ಕರೆ ಯುವುದು. ಕಾರಣಾಂತರಗಳಿಂದ ಮುಂದೆ ನಾನು ದೆಹಲಿ ಸೇರಿದೆ. ಈ ಗೆಳೆಯ ಹಂಪಿಯಲ್ಲಿಯೇ ಉಳಿದು, ಕನ್ನಡದ ಮಣ್ಣಲ್ಲಿ ಆಳವಾಗಿ ತಳ ಊರಿ ಇದೀಗ ಎತ್ತರಕ್ಕೆ ಬೆಳೆದು ನಿಂತಿದ್ದಾನೆ. ಆತನ ಬೆಳವಣಿಗೆಯ ಎಲ್ಲ ಹಂತಗಳನ್ನು ಹತ್ತಿರದಿಂದ ನೋಡಿದ ನನಗೆ ಈಗ ಈ ಪ್ರಶಸ್ತಿಯ ಸುದ್ದಿ ಕೇಳಿ ಅಚ್ಚರಿಯಗಲಿಲ್ಲ, ನಾನದನ್ನು ನಿರೀಕ್ಷಿಸಿದ್ದೆ, ನಿರೀಕ್ಷೆ ಹುಸಿಯಾಗದ್ದಕ್ಕೆ ಸಹಜವಾಗಿ ಸಂತೋಷವಾಗಿದೆ. ರಹಮತ್ ನ ಸಾಹಿತ್ಯದ ಬದ್ಧತೆ ವಿಶೇಷವಾದುದು. ಆತ ಸಾಹಿತ್ಯದ ಅನನ್ಯತೆಯನ್ನು ಮರೆಯುವುದಿಲ್ಲ, ಹಾಗೆಯೇ ಅದರ ಸಾಮಾಜಿಕ ಪ್ರಸ್ತುತತೆ ಮತ್ತು ಆವರಣವನ್ನು ಕೂಡಾ ಮರೆಯುವುದಿಲ್ಲ. ಹೀಗಾಗಿ ಆತನ ವಿಮರ್ಶೆಗೆ ಒಂದು ಬಗೆಯ ಲವಲವಿಕೆ ಪ್ರಾಪ್ತಿಸಿದೆ ಈ ಲವಲವಿಕೆಗೆ ಕನ್ನಡ ಸಂಸ್ಕೃತಿಯ ಹಲವು ಆಯಾಮಗಳನ್ನು ಜೋಡಿಸಬಲ್ಲ ಕ್ಷೇತ್ರ ಕಾರ್ಯದ ಶ್ರಮವು ಸೇರಿಕೊಂಡದ್ದರಿಂದ ರಹಮತ್ ಬರೆವಣಿಗೆಯು ಬಹಳ ವೇಗವಾಗಿ ಇತರರ ಬರೆಹಗಳಿಂದ ಬೇರೆಯಾಗುತ್ತಾ ಹೋಯಿತು. ಹೋರಾಟ, ಅಧ್ಯಯನ , ಕ್ಷೇತ್ರಕಾರ್ಯ ಮತ್ತು ಬರವಣಿಗೆಗಳನ್ನು ರಹಮತ್ ನ ಹಾಗೇ ಸಮದೂಗಿಸಿಕೊನ್ಡು ಹೋಗುತ್ತಿರುವವರು ಕನ್ನಡದಲ್ಲಿ ವಿರಳ. ರಹಮತ್, ಸಾರಾ ಅಬೂಬಕರ್, ಬೊಳುವಾರು ಮಹಮ್ಮದ್ , ಐಯ್ ಕೆ ಬೊಳುವಾರು , ಫಕೀರ್ ಮಹಮದ್ ಕಟ್ಪಾಡಿ, ಸಬಿಹಾ ಮೊದಲಾದ ಅನೇಕರು ಕಾರಣಾಂತರಗಳಿಂದ ನನಗೆ ಬಹಳ ಅಪ್ತರಾದವರು. ಹಿಂದೂ ಕೋಮುವಾದಿಗಳು ಹೇಳುವ ಮಾತುಗಳ ಹಿಂದಿನ ಹುಂಬ ತನಗಳನ್ನು ತಮ್ಮ ಬದುಕಿನ ರೀತಿಯಿಂದಲೇ ಬಯಲುಗೊಳಿಸುವ ಇವರೆಲ್ಲ ನಮ್ಮ ಕಾಲದ ಅತಿ ದೊಡ್ಡ ಶಕ್ತಿಗಳು. ರಹಮತ್ ಗೆಳೆಯನಿಗೆ ಅಭಿನಂದನೆಗಳು, ಭಾನುವಿಗೂ ಸಹಾ.]]>

‍ಲೇಖಕರು G

21 December, 2010

4 Comments

  1. ಬಿ.ಎ.ವಿವೇಕ ರೈ

    ತುಂಬಾ ಒಳ್ಳೆಯ ಸುದ್ದಿ.ಬಿಳಿಮಲೆ ಸರಿಯಾಗಿ ಹೇಳಿದ್ದಾರೆ.ಕನ್ನಡ ವಿವಿ,ಹಂಪಿಯಲ್ಲಿ ಮೂರು ವರ್ಷ ಬಹಳ ಹತ್ತಿರದಿಂದ ರಹಮತ್ ರನ್ನು ಕಂಡಿದ್ದೇನೆ.ಸೂಫಿ ,ಅವಧೂತರ ಬಗ್ಗೆ ಅಪಾರ ತಿಳುವಳಿಕೆ ,ಅಧ್ಯಯನ ಇದ್ದ ರಹಮತ್ ನಿಜ ಬದುಕಿನಲ್ಲೂ ಸೂಫಿ-ಅವಧೂತ ಪರಂಪರೆಯ ಶ್ರೇಷ್ಠ ಪ್ರತಿನಿಧಿ ಆಗಿದ್ದಾರೆ .
    ನಾನು ಹಂಪಿಯಲ್ಲಿ ಕುಲಪತಿ ಆಗಿದ್ದಾಗ ಅವರು ಯಾವುದೇ ಸಭೆಯಲ್ಲಿ ತಾವಾಗಿ ಮೇಲೆ ಬಿದ್ದು ಮಾತಾಡಿದವರಲ್ಲ.’ರಹಮತ್ , ಏನು ಹೇಳುತ್ತೀರಿ ?’ ಎಂದು ನಾನಾಗಿಯೇ ಒತ್ತಾಯಿಸಿ ಕೇಳಿದಾಗ
    ,ಅಪೂರ್ವ ಒಳನೋಟಗಳ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು.ಲೋಹಿಯಾ ಪೀಠದ .ಸಂಚಾಲಕರಾಗಿ ಎಂದಾಗ ,ಸಂಕೋಚದಿಂದ ಬೇಡ ಎಂದವರು ,ನನ್ನ ಒತ್ತಾಯಕ್ಕೆ ಒಪ್ಪಿಕೊಂಡು ,ಅದ್ಭುತ ಯೋಜನೆಗಳನ್ನು ಕಾರ್ಯಗತಗೊಳಿಸಿ ,ಮೂರು ವಿಶಿಷ್ಟ ಗ್ರಂಥಗಳನ್ನು ಹೊರತಂದರು.’ಸಮಾಜವಾದಿ ಹೋರಾಟಗಾರರ ಸಂದರ್ಶನ ‘(ಪೀರ್ ಭಾಷ ),’ಸೊಂಡೂರು ಭೂಹೋರಾಟ'( ಅರುಣ್ ಜೋಳದ ಕೂಡ್ಲಿಗಿ ),ಹೆಬ್ಬಳ್ಳಿ ಭೂ ಹೋರಾಟ ‘(ಸತೀಶ್ ಪಾಟೀಲ್ )-ಇವು ಮೂರು-ಅಪಾರ ಶ್ರಮ ,ಕ್ಷೇತ್ರ ಅಧ್ಯಯನ ಇರುವ ಪುಸ್ತಕಗಳು ಲೋಹಿಯಾ ನೆನಪಿಗೆ ಮಹತ್ವದ ಕೊಡುಗೆಗಳು.
    ‘ಸಾಂಸ್ಕೃತಿಕ ಮುಖಾಮುಖಿ’ವಿಚಾರ ಸಂಕಿರಣ ಚರ್ಚೆಗಳ ಪೂರ್ವಭಾವಿ ಸಭೆಗಳು ,ಸಿದ್ಧತೆಗಳು ನಡೆದಾಗ -ರಹಮತ್ ಅವರ ಶೈಕ್ಷಣಿಕ ಶಿಸ್ತು ಕಾಳಜಿಗಳನ್ನು ನಾನು ನೇರವಾಗಿ ಗಮನಿಸಿದ್ದೆ.
    ಸಾಂಸ್ಕೃತಿಕ ಕ್ಷೇತ್ರಕಾರ್ಯ ,ಅಧ್ಯಯನ ಮತ್ತು ಪ್ರಮಾಣಬದ್ಧ ಪ್ರಕಟಣೆಗಳ ಪರ್ಯಾಯ ದಾರಿಯ ಮೂಲಕವೇ ಎಲ್ಲ ಬಗೆಯ ಅತಿರೇಕಗಳನ್ನು ,ಮೂಲಭೂತವಾದಗಳನ್ನು ನಿರಾಕರಿಸಬೇಕು ಎನ್ನುವ ‘ಸೂಫಿ-ಲೋಹಿಯಾ ‘ಬೆಸುಗೆಯ ರಹಮತ್ ಗೆ ಪ್ರೀತಿಯ ಅಭಿನಂದನೆಗಳು.
    ವಿವೇಕ ರೈ .

  2. kanam

    rahamat tarikere avarige abhinandanegalu.
    kanam

  3. prakashchandra

    Rahamath tharikereyavarige haardhika abhinandanegalu.

  4. Vithal Dalawai

    abhinandanegalu sir…….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading