ಅನುಷ್ ಶೆಟ್ಟಿ
ಯಾರೂ ಇರದ, ಯಾವ ಕೆಲಸವೂ ಇರದ, ಯಾವ ಜಂಜಾಟಗಳು, ರಗಳೆಗಳು, ಒತ್ತಡವೂ ಇರದ, ಸದ್ದಿರದ, ಏನೂ ಮಾಡದೆ ಎಲ್ಲರಿಂದ ದೂರವಿರುವ ದಿನಗಳೆರಡು ಬೇಕೆಂದು ಬಯಸಿದ್ದು ಸುಳ್ಳಲ್ಲ, ಆದರೆ ಅಂತಹ ನೆಮ್ಮದಿಯು ಎರಡು ದಿನಗಳಿಗಷ್ಟೇ ಸರಿ.. ತಿಂಗಳುಗಟ್ಟಲೆ ಅದೇ ನೆಮ್ಮದಿಯನ್ನು ಸಹಿಸಲಾಗದೆ ಅದೇ ನೆಮ್ಮದಿ ನರಕದಂತೆ ಕಾಣಬಹುದೆಂಬ ಕಲ್ಪನೆ ಇರಲಿಲ್ಲ.
ಜಗವೆಲ್ಲ ನರಳುತಿರುವಾಗ.. ರಕ್ತ ಸುರಿಸುತ ನಡೆಯುತಿರುವಾಗ.. ಇದೆಲ್ಲದರಿಂದ ಪಾರಾಗಿ. ನಮ್ಮ ನಮ್ಮ ಮನೆಗಳೊಳಗೆ ಬಂಧಿಯಾಗಿ ಏನೂ ಮಾಡಲಾಗದ ಅಸಹಾಯಕತೆಯ ನರಳಾಟದ ಮುಂದೆ ಜಗದ ರಗಳೆಗಳು ಎಷ್ಟೋ ಮಿಗಿಲೆಂದು ಅರ್ಥವಾಗುತ್ತದೆ.
ಇಂತಹ ಅರ್ಥ ಮಾಡಿಸುವ ತಿಂಗಳುಗಳು ಕಳೆಯುತ್ತವೆ.. ದೇವರುಗಳೆಲ್ಲ ಬಾಗಿಲು ಮುಚ್ಚುತ್ತಾರೆ.. ಆತ್ಮಹತ್ಯೆಗಳಾಗುತ್ತವೆ.. ಕೆಲಸವಿಲ್ಲದ ಮಂದಿ ದರೋಡೆಗಿಳಿಯುತ್ತಾರೆ.. ತಂದೆಯ ಗೆಳೆಯರೊಬ್ಬರು ರೋಗಕ್ಕೆ ಬಲಿಯಾಗುತ್ತಾರೆ.. ಕ್ರಮೇಣ ಇದೆಲ್ಲ ಮಾಮೂಲಿಯಾಗುತ್ತದೆ.. ಸಾವೂ ಮಾಮೂಲಿಯಾಗುತ್ತದೆ.
ಯಾರೂ ಇರದ.. ಕೆಲಸಗಳ ಒತ್ತಡವಿರದ.. ಖಾಲಿ ದಿನಗಳು ರೇಜಿಗೆ ಹುಟ್ಟಿಸುತ್ತವೆ.
ಎಲ್ಲರೂ ಬೇಕು.. ಸದ್ದಿರಬೇಕು.. ಟ್ರಾಫಿಕ್ನಲ್ಲಿ ಸಿಕ್ಕಿಬೀಳಬೇಕು.. ಇಷ್ಟದ ಹೋಟೆಲ್ನ ಟೀ ಕುಡಿಯಬೇಕು.. ಗೆಳೆಯ ಗೆಳತಿಯರ ನಗು.. ಅಳು.. ಸಂಗೀತ.. ನಾಟಕ..
ಹಾ.. ಈ ಎಲ್ಲ ರಗಳೆಗಳು ಬೇಕು.
ಕಾದಂಬರಿಕಾರರು, ಈಗಾಗಲೇ ಐದು ಕಾದಂಬರಿಗಳನ್ನು ಬರೆದಿದ್ದಾರೆ. ಸಂಗೀತದಲ್ಲಿ ವಿಶೇಷ ಪರಿಣಿತಿ. ರಿದಂ ಅಡ್ಡಾ, ನಾವು ಬ್ಯಾಂಡ್, ಅನುಗ್ರಹ ಪ್ರಕಾಶನದಲ್ಲಿ ಸಹಭಾಗಿ. ಮಾಧ್ಯಮದಲ್ಲಿ ಕೆಲಸ ಮಾಡಿದ್ದಾರೆ, ರಂಗಸಂಗೀತ, ಮಕ್ಕಳ ಶಿಬಿರ….. ಬಹುಮುಖಿ ಯುವ ಪ್ರತಿಭೆ.
0 ಪ್ರತಿಕ್ರಿಯೆಗಳು