ಗೊರೂರು ಶಿವೇಶ್
‘ಯೋಗ ಮಾಡು, ರೋಗ ದೂಡು’ ಎಂಬ ಮಾತಿದೆ. ಯೋಗ ಶಾಲೆಗೆ ಸೇರಿದ ಎರಡು-ಮೂರು ದಿನಗಳಲ್ಲಿ ಇದು ನಿಮ್ಮ ಅನುಭವಕ್ಕೆ ಬರುತ್ತದೆ. ಶಾಲೆ ಬಿಟ್ಟು ಹೊರಬರುವಾಗ ಎದುರಾದ ಪರಿ ಚಇತರಿಂದ ಇದೇನು ಇಲ್ಲಿ ? ಏನು ಖಾಯಿಲೆ ? ಎಷ್ಟು ದಿನದಿಂದ ? ಮುಂತಾಗಿ ಪ್ರಶ್ನೆಗಳ ಸುರಿಮಳೆಯೇ ಆಗುತ್ತದೆ. ಇಲ್ಲಿ ‘ರೋಗ ಬರದಂತೆ ಮುಂಜಾಗ್ರತೆ ಕ್ರಮವಾಗಿ ಯೋಗಕ್ಕೆ ಬರುತ್ತಿದ್ದೇನೆ’ ಎಂದರೆ ಹೌದಾ, ಯೋಗ ಎಂಬುದು ‘ಆಯುರ್ವೇದ’ ಇದ್ದಂತೆ ಪರಿಣಾಮ ನಿಧಾನ. ಇದರ ಬದಲು ಜಿಮ್ ಯಾಕೆ ಸೇರಬಾರದು. ಒಂದು ಗಂಟೆ ವಕರ್್ಔಟ್ ಮಾಡಿದರೆ ಬೆವರು ಕಿತ್ತು ಹರಿಯುತ್ತೆ ಎನ್ನುತ್ತಾ ಉಚಿತ ಸಲಹೆ ನೀಡುತ್ತಾರೆ.
ಇನ್ನು ಕೆಲವರು ಯೋಗ ತರಗತಿಗೆ ಸೇರಿದ ಮೂರೇ ದಿನಗಳಲ್ಲಿ ಹೊಟ್ಟೆ, ರಟ್ಟೆ, ಬೆನ್ನು, ಕೈ, ಕಾಲುಗಳನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಾರೆ. ಯೋಗಶಿಬಿರದ ಸಮಯದಲ್ಲಿ ಊಟ, ಉಪಹಾರಗಳಲ್ಲಿ ನಿಯಂತ್ರಣ ಮಾಡುವುದರಿಂದ ಆರೋಗ್ಯಸ್ಥಿತಿ ಉತ್ತಮ ಎನ್ನಿಸಿದರೂ ನಂತರ ಸಹಜ ಜೀವನ ಪ್ರಾರಂಭವಾದಾಗ ಮತ್ತೆ ಹಳೆನೋವುಗಳು ಮರುಕಳಿಸಿ ‘ಯೋಗ ನಿಂದನೆ’ ಪ್ರಾರಂಭಿಸುತ್ತಾರೆ.
ಮತ್ತೆ ಕೆಲವರು ಸೇರಿದ ಮೊದಲ ದಿನವೇ ಅತಿಯಾಗಿ ದೇಹವನ್ನು ಬಾಗಿಸಿ, ಬಳುಕಿಸಿ, ತಮ್ಮ ನೋವುಗಳನ್ನು ಹೆಚ್ಚು ಮಾಡಿಕೊಂಡು ಆಸ್ಪತ್ರೆ ಸೇರುತ್ತಾರೆ. ನಿಮ್ಮ ದೇಹಪ್ರಕೃತಿಗೆ ಅನುಗುಣವಾಗಿ ನಿಧಾನವಾಗಿ ಮಾಡಿ ಎಂದು ಸೂಚನೆ ನೀಡಿದ್ದರೂ ಪ್ರಾರಂಭದ ಅತಿ ಉತ್ಸಾಹ ಈ ರೀತಿಯ ಏರು ಪೇರುಗಳಿಗೆ ನಾಂದಿ ಹಾಡುತ್ತದೆ.
ಇನ್ನೂ ಕೆಲವರು ಶಿಬಿರದಿಂದ ಶಿಬಿರಕ್ಕೆ ಹಾರಾಡುವ ಮಂದಿ. ಕೆಲವು ಶಿಬಿರಗಳು ಯೋಗಾಸನಗಳಿಗೆ ಒತ್ತು ನೀಡಿದರೆ ಇನ್ನೂ ಕೆಲವು ಪ್ರಾಣಾಯಾಮಕ್ಕೆ ಮತ್ತೆ ಕೆಲವು ಧ್ಯಾನ ರೇಖಿಗಳಿಗೆ ಪ್ರಾಧ್ಯಾನತೆ ನೀಡುತ್ತವೆ. ಎಲ್ಲಾ ಶಿಬಿರಗಳಲ್ಲಿ ಮೈಯಾಡಿಸಿ ಯಾವುದೇ ಪರಿಣಾಮ ದಕ್ಕದೆ ನಿರಾಶರಾಗುವವರು ಹಲವರು. ಇನ್ನು ಕೆಲವರು ವ್ಯಾಯಾಮ, ಯೋಗ, ವಾಕಿಂಗ್, ಜಿಮ್ ಮುಂತಾಗಿ ಲಭ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾ, ಒಂದರ ಪ್ರಯತ್ನದಲ್ಲಿದ್ದಾಗ ಉಳಿದವುಗಳ ನಿರರ್ಥಕತೆಯನ್ನು ಇತರರಿಗೆ ಮನದಟ್ಟು ಮಾಡುವ ಪ್ರಯತ್ನದಲ್ಲಿರುತ್ತಾರೆ. ಯೋಗಕ್ಕೂ ಹೋದೆ. ಜಿಮ್ಗೂ ಹೋದೆ. ಪ್ರಾಣಾಯಾಮ ಶಿಬಿರಕ್ಕೂ ಹೋದೆ. ಏನು ಪ್ರಯೋಜನವಾಗಿಲ್ಲ ರೀ? ಅದಕ್ಕೆ ಏನು ಬೇಡ ಅಂಥ ವಾಕಿಂಗ್ ಅನ್ನು ಪುನಃ ಪ್ರಾರಂಭಿಸಿದ್ದೇನೆ ಎನ್ನುತ್ತಿರುತ್ತಾರೆ.
ಮತ್ತೇ ಕೆಲವರು ತಾವು ನಂಬಿದ್ದು ಅಥವಾ ತಿಳಿದಿದ್ದೆ ಶ್ರೇಷ್ಠ ಅನ್ನುವವರು. ‘ಕಪಾಲಬಾತಿ ಮಾಡಿದರೆ ಬಿ.ಪಿ. ಹೆಚ್ಚಾಗುತ್ತಂತೆ, ಭಸ್ತ್ರಿಕಾದಿಂದ ಸ್ತ್ರೀಯರಿಗೆ ಗರ್ಭಕೋಶ ಏರು-ಪೇರಾಗುವುದಂತೆ’, ಮುಂತಾಗಿ ಊಹಾ-ಪೋಹಗಳನ್ನು ಮಾತಾಡುತ್ತಾ ಪ್ರಾರಂಭಿಕ ಹಂತದಲ್ಲಿರುವವರಿಗೆ ಗಾಬರಿ ಹುಟ್ಟಿಸಿ ಅತ್ತ ತಲೆ ಹಾಕದಂತೆ ಮಾಡುತ್ತಾರೆ.
ಮಂತ್ರದ ಉಚ್ಚಾರಣೆಯ ಸಮಸ್ಯೆ ಹಲವರಿಗೆ. ‘ಸಾಮೂಹಿಕ ಸೂರ್ಯನಮಸ್ಕಾರ’ ಮಂತ್ರ ಅಭ್ಯಾಸ ಮಾಡಿಸಿ ಕೆಲ ದಿನಗಳ ನಂತರ ಪ್ರತ್ಯೇಕವಾಗಿ ಮಂತ್ರಗಳನ್ನು ಹೇಳಿ ಅಂದರೆ ‘ಭಾನವೇ ನಮಃ’ ಎನ್ನುವುದಕ್ಕೆ ‘ಭಾವನೆ ನಮಃ,’ ‘ಖಗಾಯ ನಮಃ’ ಎನ್ನುವುದಕ್ಕೆ ‘ತಗಾಯನಮಃ’ ಎಂದು ತಾವು ಕೇಳಿದ್ದನ್ನು ತಮ್ಮ ಮನಸ್ಸಿಗೆ ಬಂದಂತೆ ಗ್ರಹಿಸಿ ಉಚ್ಚರಿಸುತ್ತಿರುತ್ತಾರೆ.
ಹೀಗೆ ರೋಗ ದೂಡಲೆಂದು ಯೋಗ ಕಲಿಯಲು ಬರುವ ಶೇಕಡ ತೊಂಬತ್ತರಷ್ಟು ಜನ ವಿಮುಖರಾಗಿ, ಶೇಕಡ ಹತ್ತರಷ್ಟು ಜನ ಮಾತ್ರ ನಿರಂತರ ಅಭ್ಯಾಸದಿಂದ ಯಶಸ್ಸು ಸಾಧಿಸುತ್ತಾರೆ. ಉಳಿದವರ ಕುರಿತಾಗಿಯೇ ಒಂದು ಜೋಕಿದೆ, ಕುಡಿಯುವುದನ್ನು ಬಿಡಿಸಲೆಂದೆ ಯೋಗ ಶಿಬಿರಕ್ಕೆ ಸೇರಿಸಿದ್ದಿರಲ್ವ. ಈಗ ಹೇಗಿದ್ದಾರೆ. ಇದಕ್ಕೆ ಆಕೆಯ ಉತ್ತರ ಮೊದ್ಲು ಕೈ ಉಪಯೋಗಿಸಿ ಕುಡಿಯೋರು. ಇತ್ತೀಚೆಗೆ ಕಾಲನ್ನು ಬಳಸಿಕೊಂಡು ಕುಡಿಯೋದಕ್ಕೆ ಪ್ರಾರಂಭಮಾಡಿದ್ದಾರೆ.
Very informative sir… Thank you