ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯುಗ ಯುಗಾದಿ ಕಳೆದರೂ…

ಗೊರುರು ಶಿವೇಶ್

ಈ ಹಬ್ಬಗಳು ಜನಪದ ಕಾವ್ಯಗಳು

ಹೊಸ ವರುಷ ಕಾಲಿರಿಸುತ್ತಿದೆ. ಬಡವ-ಬಲ್ಲಿದರೆನ್ನದೆ ಎಲ್ಲರೂ ಸಂಭ್ರಮದಿಂದ ಆಚರಿಸುವ ಹಬ್ಬ ಯುಗಾದಿ. ಕೃತ ಯುಗದ ಚೈತ್ರ ಶುದ್ಧ ಪಾಡ್ಯಮಿಯೇ ಸೃಷ್ಟಿಯ ಪ್ರಾರಂಭದ ದಿನ ಎಂದು ಪುರಾಣಗಳು ಹೇಳುತ್ತವೆ. ಚತುರ್ವೇದಗಳನ್ನು ಕಳ್ಳತನಮಾಡಿದ ಸೋಮಕಾಸುರನನ್ನು ಸಂಹರಿಸಲು ಶ್ರೀ ಮಹಾವಿಷ್ಣು ದಶಾವತಾರಗಳಲ್ಲಿ ಮೊದಲನೆಯಾದದ ಮತ್ಯಾವತಾರ ಧರಿಸಿದ ದಿನ ಎಂದೂ ಹೇಳಲಾಗುತ್ತದೆ. ಶ್ರೀ ರಾಮಪಟ್ಟಾಭಿಷೇಕ ನಡೆದ ದಿನವೂ ಹೌದು. ಋತುಗಳ ರಾಜ ವಸಂತ ಕಾಲಿರಿಸುವ ದಿನವೂ ಹೌದು. ಹತ್ತು ಹಲವು ವೈಶಿಷ್ಟ್ಯಗಳಿಂದಾಗಿ ಈ ಹಬ್ಬ ಸಂಭ್ರಮದ ದ್ಯೋತಕ.

ಯುಗಾದಿ ಎಂದೊಡನೆ ಮನ ಬಾಲ್ಯಕ್ಕೆ ಹೊರಳುತ್ತದೆ. ಅಪ್ಪ ಅಮ್ಮನ ಬಲವಂತಕ್ಕೆ ಬೆಳಿಗ್ಗೆ ಬೇಗನೆ ಎದ್ದು ಹೊಳೆ, ಕಾಲುವೆಯ ದಂಡೆಯ ಪಕ್ಕದಲ್ಲಿದ್ದ ಮಾವು-ಬೇವಿನ ಸೊಪ್ಪಿಗಾಗಿ ಅಲೆದಾಟ ನಡೆಸುತ್ತಿದ್ದದ್ದು ನೆನಪಿಗೆ ಬರುತ್ತದೆ. ಹಬ್ಬದ ದಿನ ಹನ್ನೆರಡು ಗಂಟೆಯಾದರೂ ಪೂಜೆಯಾಗದೆ, ಹಸಿವಿನಿಂದ ಹೊಟ್ಟೆ ತಳಮಳಿಸಿದಾಗ ಈ ಹಬ್ಬಗಳು ಯಾಕಾದರೂ ಬರುತ್ತವೆಯೋ? ಎಂದೆನಿಸಿದರೂ, ಹಬ್ಬದ ಊಟದ ಜೊತೆಗೆ ಕಾಯಿ ಒಬ್ಬಟ್ಟಿನ ಜೊತೆಗೆ ತುಪ್ಪ ಬೆರೆಸಿ ತಿನ್ನುವಾಗ ಅನಿಸಿಕೆಗಳೆಲ್ಲ ಮಾಯ.

ವರ್ಷವಿಡೀ ಒಂದಲ್ಲಾ ಒಂದು ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತಾಪಿ ಜನರಿಗೆ, ಸುಗ್ಗಿಯ ನಂತರದ ದಿನಗಳು ಕಳೆದು ನೇಗಿಲಿಗೆ ಪೂಜೆ ಮಾಡಿ ಹೊಲ ಉಳಲು ಹೊರಡುವ ದಿನ. 

ಯುಗಾದಿಯ ಮಾರನೇ ದಿನ ವರ್ಷದ ಒಡಕು. ದಿನವಂತೂ ಯಾವುದೇ ಶುಭಕಾರ್ಯಗಳಿಲ್ಲ. ಹೆಚ್ಚುಗಟ್ಟೆ ಕಡ್ಡಾಯ. ಕಳೆದ ವರ್ಷ ಕರೋನದ  ಲಾಕ್ ಡೌನ್  ಬಿಸಿಯ ನಡುವೆಯೂ ಕಿಲೋಮೀಟರ್ ಉದ್ದದ ಕ್ಯೂನಲ್ಲಿ ನಿಂತು ಮಾಂಸ ಖರೀದಿ ಮಾಡಿದ್ದನ್ನು ನೋಡಿದ್ದೇವೆ. ಜಗುಲಿಗಳ ಮೇಲೆ ಚೌಕಾಭಾರದಿಂದ ಹಿಡಿದು ಬೀದಿ ಬೀದಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ವಿವಿಧ ರೀತಿಯ ಜೂಜಾಟಗಳು ಒಟ್ಟಿನಲ್ಲಿ ಎಲ್ಲೆಡೆ ಸಂಭ್ರಮ:
ಈ ಹಬ್ಬಗಳು ಜನಪದರ ಕಾವ್ಯಗಳು.

ಕವಿ, ಹಬ್ಬದ ಸಂಭ್ರಮ-ಸಡಗರಗಳನ್ನುಶಬ್ದಗಳಲ್ಲಿ ಬಿಡಿಸಿದರ ಜನಪದರು ಅದನ್ನು ಆಚರಣೆಗಳಲ್ಲಿ ಅಳವಡಿಸಿದ್ದಾರೆ. ಕವಿ ಉಪಮೆ, ರೂಪಕ ಪ್ರತಿಮೆಗಳ ಪರಿಕರಗಳನ್ನು ಬಳಸಿ ಕಾವ್ಯ ಹೆಣೆಯುತ್ತಾನೆ. ಜನಪದರು ಹಬ್ಬಗಳ ಆಚರಣೆಯಲ್ಲಿಯೇ ಅವುಗಳನ್ನು ಬಳಸಿದ್ದಾರೆ. ಯುಗಾದಿಯ ಬೇವು-ಬೆಲ್ಲನೋವು-ನಲಿವುಗಳ ದ್ಯೋತಕವಾದರೆ, ಸಂಕ್ರಾಂತಿಯ ಎಳ್ಳು-ಬೆಲ್ಲ, ಸಮೃದ್ಧಿ ಸಂತಸದ ಸಂಕೇತ.

ನವೋದಯದ ಕವಿಗಳಂತೂ, ಯುಗಾದಿಯನ್ನು ಹಾಡಿ ಹೊಗಳಿ ಹಿಗ್ಗಿ, ಸಂಭ್ರಮಿಸಿದ್ದಾರೆ. ಯುಗಾದಿಯ ಸಂದರ್ಭದಲ್ಲಿ ಯಾವುದೇ ಸ್ಟೇಷನ್, ಛಾನಲ್ಹಾಕಿದರೂ ದ.ರಾ. ಬೇಂದ್ರೆಯವರ ‘ಯುಗಯುಗಾದಿ ಕಳೆದರೂ’ ಕವಿತೆ ಕಡ್ಡಾಯ. ಅದರಲ್ಲಿ ನನಗೆ ಇಷ್ಟವಾದ ಸಾಲುಗಳು:
ವರುಷಕ್ಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವ ಜಾತಕೆ, ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ, ಒಂದೇ ಹರೆಯನ ಮಗದಷ್ಟ ಏತಕೆ?

ಸಸ್ಯ ಸಂಕುಲಗಳು ಪ್ರತಿ ವರ್ಷ ಬಾಲ್ಯ, ಹರೆಯ, ಮುಪ್ಪನ್ನು ಅನುಭವಿಸಿದರೆ, ಪ್ರಾಣಿ ಸಂಕುಲಕ್ಕೆ ಹೊಸ ನೆಲೆಯನ್ನು ಅರಸುವ ಸಂಭ್ರಮ. ಆದರೆ ಮಾನವನಿಗೆ ಮಾತ್ರ ಬಾಲ್ಯಕ್ಕೆ, ಯೌವನಕ್ಕೆ ಮರಳಲಾಗದು. ಆದರೆ ಮಗುವಿನ ಮುಗ್ಧತೆಯನ್ನು ಜೀವನದ ಚೈತನ್ಯ ಭಾವವನ್ನು ರೂಢಿಸಿಕೊಂಡು ಜೀವನದ ಸಿಹಿ ಕಹಿಗಳನ್ನು ಸಮನಾಗಿ ಸ್ವೀಕರಿಸುವ ಭಾವ ನಮ್ಮಲ್ಲಿದ್ದರೆ, ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಕ್ಷಣ ನವೀನ ಜನನ
ಎಂದು ಭಾವಿಸಿದರೆ ಈ ಜೀವನವೂ ಹರ್ಷದಾಯಕವೇ.

ಯುಗಾದಿಯ ಅರ್ಥವೂ. ಅದೆ ಅಲ್ಲವೇ?, ಹೊಸದು… ಹೊಸದು… ಹೊಸದು… ಬಡವ ಬಲ್ಲಿದರಾಗಿ ಸರ್ವರು ಸಮಾನ ಸಂಭ್ರಮದಿಂದ ಆಚರಿಸುವ, ಈ ಸಂದರ್ಭದಲ್ಲಿ ನಡೆಯುವ ಜಾತ್ರೆ, ಉತ್ಸವಗಳಲ್ಲಿ ಸಡಗರದಿಂದ ಪಾಲ್ಗೊಳ್ಳುವ, ಚೇತನ ಮೂಡಿಸುವಲ್ಲಿಯೇ ಯುಗಾದಿಯ ಹೆಗ್ಗಳಿಕೆ ಇದೆ ಅಲ್ಲವೇ?

‍ಲೇಖಕರು Avadhi

13 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading