
ಜಿ ಎನ್ ಅಶೋಕವರ್ಧನ
ಮೊನ್ನೆ ಸಂಜೆ ಕಾರಣಾಂತರಗಳಿಂದ ಮಲ್ಲಿಕಟ್ಟೆಯಲ್ಲಿ ಒಂದೆರಡು ಗಂಟೆಗಳ ವಿರಾಮ ಸಿಕ್ಕಾಗ ಹರಟೆಗೆ ಸಿಕ್ಕವರು ಪ್ರಾಚೀನ ಗೆಳೆಯ, ಬಹುಖ್ಯಾತ ಚಿತ್ರಗ್ರಾಹಿ ಯಜ್ಞ.
೧೯೭೫ರಲ್ಲಿ ನಾನು ವೃತ್ತಿರಂಗಕ್ಕಿಳಿದಾಗ ನನ್ನ ಹವ್ಯಾಸದ ಬಲದಲ್ಲಿ ಅನಿವಾರ್ಯವಾಗಿ ಪರಿಚಯಕ್ಕೊದಗಿ ಆತ್ಮೀಯರಾದವರು ಇವರು.
ಆರೋಹಣದ ೧೯೭೦-೮೦ರ ದಶಕದಲ್ಲಿ ವರಂಗ, ಹಿರಿಮರುದುಪ್ಪೆ, ಬಲ್ಲಾಳರಾಯನದುರ್ಗ, ಜಮಾಲಾಬಾದ್, ಏರಿಕಲ್ಲು, ಅಮೆದಿಕ್ಕೆಲ್ ಎಂದಿತ್ಯಾದಿ ಲೆಕ್ಕವಿಡಲಾಗದಷ್ಟು ಕಲಾಪಗಳಲ್ಲಿ ಸ್ವಂತ ಖರ್ಚು ಕೊಟ್ಟೇ ಸದಸ್ಯನಾಗಿ ಭಾಗವಹಿಸಿದ ನಿಜ-ವೃತ್ತಿಪರ ಛಾಯಚಿತ್ರ ಕಲಾವಿದ ಇವರು. ತನ್ನ ಮೂಲ ಆಸಕ್ತಿಯ ರೇಖಾಚಿತ್ರಣವನ್ನು ಪುನರಾವಾಹಿಸಿ ನನ್ನ `ಪುಸ್ತಕ ಮಾರಾಟ ಹೋರಾಟ’ ಪುಸ್ತಕಕ್ಕೆ ಮುಖಚಿತ್ರ ಬರೆದೂ ಕೊಟ್ಟ ಸರಳಸ್ನೇಹಿ ಯಜ್ಞ.
ತನ್ನ ವೃತ್ತಿಯ ಬಗೆಗಿನ ಇವರ ಪ್ರೀತಿ, ಶ್ರದ್ಧೆ, ಶಿಸ್ತು ಇಂದು ಅನಿವಾರ್ಯವಾಗಿ ಇವರನ್ನು ಮಂಗಳೂರಿನ ಐತಿಹಾಸಿಕ ದಾಖಲೆದಾರನನ್ನಾಗಿಯೂ ಗುರುತಿಸುವಂತಾಗಿದೆ.
ಹಂಪನಕಟ್ಟೆಯ ನೊಯೆಲ್ಲಾ ಕಟ್ಟಡದ ಎರಡನೇ ಮಾಳಿಗೆಯ ಕೋಳಿಗೂಡಿನಂಥ `ಸ್ಟುಡಿಯೋ’ ಇವರ ಜೀವನವನ್ನು ಸಮೃದ್ಧವಾಗಿ ಕಟ್ಟಿಕೊಟ್ಟರೆ, ಈಗಿನ ಮಲ್ಲಿಕಟ್ಟೆಯ ವಿಸ್ತಾರ ನೆಲೆ ಸಂತೋಷವನ್ನು ಮೆಲುಕಲು ಅವಕಾಶ ಮಾಡಿಕೊಟ್ಟಿದೆ.
ಯಜ್ಞ ಅದೇ ಹಳೆಯ ಪ್ರೀತಿಯಲ್ಲಿ ನನ್ನ ಕ್ಯಾಮರಾ ವಿಚಾರಿಸಿ, ಪಡೆದು, ಅದರ ಗುಣಪರೀಕ್ಷಿಸುವಂತೆ ನನ್ನನ್ನೇ ಒಮ್ಮೆ ಕ್ಲಿಕ್ಕಿಸಿ ನೋಡಿದರು. ನನ್ನ ಮಂಕು ಬುದ್ಧಿಗೆ ಅಷ್ಟೇ ಸಹಜವಾಗಿ ನಾನೂ ಅವರದೊಂದು ಭಾವಚಿತ್ರ ತೆಗೆದುಕೊಳ್ಳಬೇಕಿತ್ತು ಎಂದು ಹೊಳೆದದ್ದು ಮತ್ತೆ ಮನೆ ತಲಪಿದ ಮೇಲೇ.
ಹಾಗಾಗಿ ಇಂದು ಸೈಕಲ್ ಸರ್ಕೀಟ್ ಹೊರಟವನಿಗೆ ಅದೃಷ್ಟಕ್ಕೆ ಅವರ ಸ್ಟುಡಿಯೋ ತೆರೆದಿದ್ದದ್ದು ಕಂಡೆ. ಹಾಗೆ ಅವರನ್ನು ಸೆರೆ ಹಿಡಿದು, ತಕ್ಷಣವೇ ಸಾರ್ವಜನಿಕದಲ್ಲಿ `ಅಪರಾಧೀ ಪ್ರಥಮ ವರದಿಯನ್ನು’ ಹಾಜರುಪಡಿಸಲು ಸಂತೋಷಿಸುತ್ತೇನೆ!





0 Comments