ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೊದಲ ಬಾರಿಗೆ ಕನ್ನಡ ಚಿತ್ರವೊ೦ದು…

ಒಂದೇ ವಾರದಲ್ಲಿ ಐದು ಚಿತ್ರೋತ್ಸವ ಗಳಿಗೆ ಆಯ್ಕೆಯಾದ ಕೂರ್ಮಾವತಾರ  ಕನ್ನಡ ಚಿತ್ರವೊಂದು ಒಂದು ಚಿತ್ರೋತ್ಸವಕ್ಕೆ ಆಯ್ಕೆ ಯಾಗುವುದೇ ವಿಷೇಶ ಸುದ್ದಿಯಾಗುವ ಇವತ್ತಿನ ದಿನಗಳಲ್ಲಿ ಒಂದು ವಾರದ ಅಂತರದಲ್ಲಿ ಒಂದು ಕನ್ನಡ ಚಿತ್ರವು ಐದು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವ ಸಂತಸದ ಸುದ್ದಿಯೊಂದು ಇದೀಗ ಬಂದಿದೆ. ಬಸಂತ ಕುಮಾರ್ ಪಾಟೀಲರು ನಿರ್ಮಿಸಿ, ಗಿರೀಶ ಕಾಸರವಳ್ಳಿಯವರು ನಿರ್ದೇಶಿಸಿದ ಡಾ. ಕುಂ.ವೀರಭದ್ರಪ್ಪನವರ ಕಿರುಗತೆಯಾಧಾರಿಸಿದ, ಈಗಾಗಲೇ ರಾಷ್ಟ್ರ ಪ್ರಶಸ್ತಿ ಪಡೆದ ‘ಕೂರ್ಮಾವತಾರ’ ಚಿತ್ರವೇ ಇಂತಹ ಹೆಗ್ಗಳಿಕೆಗೆ ಪಾತ್ರವಾದ ಚಿತ್ರ. ರೋಂನಲ್ಲಿ ನಡೆಯಲಿರುವ ಏಷ್ಯನ್ ಚಿತ್ರೋತ್ಸವ ಹಾಗೂ ಬರ್ಲಿನ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹಾಗೂ ಮುಂಬೈಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸ್ಪರ್ದಾತ್ಮಕ  ವಿಭಾಗದಲ್ಲಿ ಈ ಚಿತ್ರ ಪಾಲ್ಗೊಳ್ಳಲಿದೆ. ಹಾಗೆಯೇ ಕೆನೆಡಾದ ಟೊರೊಂಟೊದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಾಸ್ಟರ್ ಫéಿಲ್ಮ್ ಮೇಕರ್ ವಿಭಾಗದಲ್ಲಿ ಹಾಗೂ ಬ್ರೆಜéಿಲ್ ದೇಶದ ರಯೋ ಡಿ ಜನೈರೋ ದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಫ಼ಿಲಮ್ಸ್ ವಿಭಾಗದಲ್ಲಿ ಈ ಚಿತ್ರ ಪ್ರದರ್ಶನ ವಾಗಲಿದೆ. ಕನ್ನಡ ಚಿತ್ರವೊಂದಕ್ಕೆ ಇಂತಹ ಗೌರವ ದೊರಕಿರುವುದು ಇದೇ ಪ್ರಥಮ.

ಕೂರ್ಮಾವತಾರ ಎಂಬ ಹೆಸರು ಕೇಳಿ ಕಾಸರವಳ್ಳಿಯವರು ಪೌರಾಣಿಕ ಚಿತ್ರ ಮಾಡಿದ್ದಾರೆಯೇ ಎಂದು ಆಶ್ಚರ್ಯ ಪಡಬೇಕಾಗಿಲ್ಲ. ಕೂರ್ಮಾವತಾರ ಇಲ್ಲಿ ಒಂದು ರೂಪಕ . ಸುರಾಸುರರು ಸಮುದ್ರ ಮಂಥನ ಮಾಡುತ್ತಿರುವ ಸಮಯದಲ್ಲಿ, ಕಡೆಗೋಲಾಗಿ ಬಳಸಿದ ಮಂದರ ಪರ್ವತ ಮುಳುಗ ತೊಡಗಿದಾಗ ಮಹಾವಿಷ್ಣು ಕೂರ್ಮದ ಅವತಾರ ತಾಳಿ ಮುಳುಗುತ್ತಿರುವ ವಿಶ್ವವನ್ನು ಎತ್ತಿ ಹಿಡಿಯುತ್ತಾನೆ. ಭೌತಿಕ ಸುಖ ಲೋಲುಪ್ತತೆಯಲ್ಲಿ ಮುಳುಗಿ, ನಮ್ಮ ವ್ಯವಹಾರಗಳಲ್ಲಿ ಭಿನ್ನ ನೈತಿಕ ಮೌಲ್ಯಗಳಿಗೆ ಮಹತ್ವ ಕೊಡುತ್ತಿರುವ ಇಂದಿನ ಕಾಲ ಘಟ್ಟದಲ್ಲಿ ಜಗತ್ತಿಗೊಂದು ಪರ್ಯಾಯ ಮಾದರಿ ಕೊಡಬಲ್ಲ ಗಾಂಧಿವಾದ ಕೂರ್ಮ ಆದೀತೆ ಎಂಬ ಜಿಜ್ನಾಸೆ ಕಥೆಯ ಅನೇಕ ಆಶಯಗಳಲ್ಲೊಂದು. ನೋಡಲು ಗಾಂಧೀಜಿಯ ಹೋಲಿಕೆ ಇದೆ ಎನ್ನುವ ಏಕ ಮಾತ್ರ ಕಾರಣಕ್ಕೆ ಸರ್ಕಾರಿ ನೌಕರ ಆನಂದ ರಾವ್ಗೆ ಟಿವಿ ಸೇರಿಯಲ್ ನಲ್ಲಿ ಗಾಂಧಿ ಪಾತ್ರ ಮಾಡುವ ಅವಕಾಶ ಸಿಗುತ್ತದೆ. ಅದರಿಂದ ಸಿಗಬಹುದಾದ ಹಣ ಮತ್ತು ಜನಪ್ರಿಯತೆಗೆ ಮರುಳಾದ ರಾಯರ ಮಗ ಹಾಗೂ ಸೊಸೆಯ ಒತ್ತಾಯ ಮಾಡಿದಾಗ ರಾಯರು ಆ ಪಾತ್ರ ಒಪ್ಪಿಕೊಳ್ಳುತ್ತಾರೆ. ಪಾತ್ರಮಾಡುತ್ತಾ ಹೋದಂತೆ ರಾಯರಲ್ಲಿ ಎರೆಡು ಭಿನ್ನ ರೀತಿಯ ಯಾನ ಆರಂಭವಾಗುತ್ತದೆ. ಗಾಂಧೀಜಿಯ ಬದುಕನ್ನು ಪುನರಾವಲೋಕಿಸುತ್ತಾ ಸಾಗಿದ ರಾಯರಿಗೆ ತನ್ನ ವೈಯಕ್ತಿಕ ಬದುಕಿನಲ್ಲಿ ತಾನು ತನ್ನ ಮೃತ ಪತ್ನಿಯ ಬಗ್ಗೆ ತಳೆದ ಕೆಲವು ನಿರ್ಧಾರಗಳು ಅಮಾನವೀಯವಾಗಿದ್ದವು ಅನ್ನಿಸ ತೊಡಗುತ್ತದೆ. ಹಾಗೆಯೇ ಗಾಂಧೀಜಿ ತಮ್ಮ ಮಗ ಹರಿಲಾಲ್ ಬಗ್ಗೆ ತಳೆದ ನಿಲುವು ಅನಾದರ ಎನ್ನಿಸಿ ತನ್ನ ಮನೆ ಸಂಸಾರದ ಬಗ್ಗೆ ವಿಶೇಷ ಅಕ್ಕರೆ ತೋರ ತೊಡಗುತ್ತಾರೆ. ಸೀರಿಯಲ್ ಜನಪ್ರಿಯ ವಾಗತೊಡಗಿದಂತೆ ಅವರ ಮಿತ್ರರು ರಾಯರಲ್ಲಿ ಗಾಂಧೀಜಿಯನ್ನು ಕಾಣ ಬಯಸುತ್ತಾರೆ. ಆದರೆ ಕ್ರಮೇಣ ರಾಯರಿಗೆ ತನ್ನ ಇತಿ ಮಿತಿಗಳೆಲ್ಲಾ ಅರಿವಾಗುತ್ತಾ ಹೋದಂತೆ ಅವರು ಹಲವು ರೀತಿಯ ತಲ್ಲಣಗಳಿಗೆ ಒಳಗಾಗುತ್ತಾ ಸಾಗುತ್ತಾರೆ. ವಿಧುರ ರಾಯರು ಇದಕ್ಕೆ ಉತ್ತರ ಹುಡುಕುತ್ತಾ ಕಸ್ತೂರ್ ಬಾ ಪಾತ್ರದ ನಟಿಯ ಸಹಚರ್ಯಕ್ಕೆ ಹಪಹಪಿಸಿದಾಗ ಕಥೆ ಬೇರೊಂದು ತಿರುವು ಪಡೆಯುತ್ತದೆ. ಡಾ. ಕುಂ.ವೀರಭದ್ರಪ್ಪನವರ ಈ ವಿಭಿನ್ನ ದರ್ಶನ ಇರುವ ಕಥೆಗೆ ಸಮಕಾಲೀನ ಸಂಧಿಗ್ಧತೆ ಗಳನ್ನು ಹೆಣೆದು ಗಿರೀಶ ಕಾಸರವಳ್ಳಿಯವರೇ ಚಿತ್ರ ಕಥೆ ರಚಿಸಿದ್ದಾರೆ. ರಿಚರ್ಡ್ ಅಟೆನ್ ಬರೋ ಚಿತ್ರಿಸಿದ ಗಾಂಧಿ ಚಿತ್ರಕ್ಕೂ ಕೆಲಸ ಮಾಡಿದ ಕನ್ನಡದ ಸಂವೇದನಾಶೀಲ ಛಾಯಾಗ್ರಾಹಕರೆಂದು ಹೆಸರಾದ ಜಿ.ಎಸ್.ಭಾಸ್ಕರ್ ಕ್ಯಾಮರಾ ಕೆಲಸ ನಿರ್ವಹಿಸಿದ್ದಾರೆ. ಗಿರೀಶರ ಎಲ್ಲಾ ಚಿತ್ರಗಳ ಸಂಕಲನ ಮಾಡಿದ ಎಂ.ಎನ್. ಸ್ವಾಮಿಯವರ ಸಂಕಲನ, ಐಸಾಕ್ ಥಾಮಸ್ ರವರ ಸಂಗೀತ, ಶಶಿಧರ ಅಡಪರ ಕಲೆ, ಅನನ್ಯ ಕಾಸರವಳ್ಳಿ ಯವರ ವಸ್ತ್ರ ವಿನ್ಯಾಸ ವಿದೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಪ್ರೊಫéೆಸರ್ ಆಗಿದ್ದ ಡಾ. ಶಿಕಾರಿಪುರ ಕೃಷ್ಣಮೂರ್ತಿಯವರು ಸ್ವತಹ ಗಾಂಧಿಯೇ ಎನ್ನುವಂತೆ ಅಭಿನಯಿಸಿದ್ದಾರೆ. ಕಸ್ತೂರ್ಬಾ ಪಾತ್ರವಹಿಸುವ ಹಿರಿಯ ನಟಿಯಾಗಿ ಅಭಿನಯ ಶಾರದೆ ಜಯಂತಿಯವರು ಅಭಿನಯಿಸಿದ್ದಾರೆ. ಮಗನಾಗಿ ಸಿದ್ಲಿಂಗು ಚಿತ್ರದಿಂದ ಕಿರಿತೆರೆಯಿಂದ ಹಿರಿತೆರೆಗೆ ಬಂದ ಚಸ್ವ, ಸೊಸೆಯ ಪಾತ್ರದಲ್ಲಿ ಕಿರುತೆರೆಯ ರಶ್ಮಿ, ಮೊಮ್ಮಗನಾಗಿ ಸುಮುಖ ಭಾರದ್ವಾಜ್, ಟಿವಿ ನಿರ್ದೇಶಕನಾಗಿ ಅಪೂರ್ವಕಾಸರವಳ್ಳಿ, ಸಹನಿರ್ದೇಶಕನ ಪಾತ್ರದಲ್ಲಿ ಪ್ರವೀಣ್ ರಬಕವಿ ಇದ್ದಾರೆ. ಇವರ ಜೊತೆಯಲ್ಲಿ ಹರೀಶ್ ರಾಜ್,ವಿಕ್ರಂ ಸೂರಿ,ನಂಜುಂಡ, ಹೆಚ್.ಜಿ.ಸೋಮಶೇಖರ ರಾವ್,ಗೋವಾ ದತ್ತು ಮೊದಲಾದವರಿದ್ದಾರೆ. ಕರ್ನಾಟಕ ರಾಜ್ಯೋತ್ಸವದಂದು ರಾಜ್ಯಾದಂತ ಈ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರಾದ ಬಸಂತಕುಮಾರ್ ಪಾಟೀಲರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.    ]]>

‍ಲೇಖಕರು G

23 August, 2012

6 Comments

  1. Nataraju S M

    All the best

  2. SunilHH

    ಈ ಚಿತ್ರ ಬೇಗ ಬಿಡುಗಡೆ ಆಗಲಿ, ಇಂಥಹ ಒಳ್ಳೆ ಚಿತ್ರಗಳ DVDಗಳು ಸಿಗುವಂತಾಗಲಿ

  3. ಧನಂಜಯ

    ಸಿನಿಮಾದ ಕಥೆ ಆಸಕ್ತಿದಾಯಕವಾಗಿದೆ. ಆದರೆ ಚಿತ್ರದ ಹೆಸರು ಹಾದಿ ತಪ್ಪಿಸುವಂತಿದೆ. ಆದಷ್ಟು ಬೇಗ ಈ ಚಿತ್ರವನ್ನ ನೋಡಲು ಬಯಸುತ್ತೇನೆ. ಈ ಚಿತ್ರವು ಹೆಚ್ಹು ಹೆಚ್ಚು ನೋಡುಗರನ್ನು ತಲುಪಲಿ ಎಂದು ಆಶಿಸುತ್ತೇನೆ.

    • puttaswamy k

      chitravu Kasaravalliyavara nirdeshanadalli amoghavaagi moodibandide. adu jgattinellede jayabheri baarisali.

  4. ಶಿವಶಂಕರ್

    ಪ್ರಸ್ತುತ ಲಾಂಗು ಮಚ್ಚುಗಳಲ್ಲಿ ಕುರುಡಾಗಿರುವ ನಿರ್ಮಾಪಕರಿಗೆ ಈ ಚಿತ್ರ ದಿವ್ಯದೃಷ್ಟಿ ನೀಡುವುದೆ?

  5. ashok

    ಗಿರೀಶ್ ಕಾಸರವಳ್ಳಿಯವರ ಚಿತ್ರಗಳು ಅಂತರಾ‍ಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುವುದು ಖು‍ಷಿಯ ವಿಚಾರವೇನೋ ಹೌದು.
    ಆದರೆ ಅವರ ಚಿತ್ರಗಳನ್ನು ನೋಡಲು ನಾವೂ ಕೂಡ ಪರದೇಶಕ್ಕೆ ಹೋಗಬೇಕಾ??
    ofcourse ಕರ್ನಾಟಕದಲ್ಲಿ ಇಂಥ ಚಿತ್ರಗಳಿಗೆ ಚಿತ್ರಮಂದಿರಗಳು ದೊರಕುವುದಿಲ್ಲ ಎಂಬುದೇನೋ ಸತ್ಯವೇ; ನಿರ್ದೇಶಕನಾದವನು ಅದನ್ನು ಜನರಿಗೆ ತಲುಪಿಸುವ ಮಾರ್ಗವನ್ನು ಹುಡುಕಬೇಕಲ್ಲವೇ?
    ಕಾನೂನು ಬದ್ಧವೋ ಅಲ್ಲವೋ ಅತ್ಲಾಗಿರಲಿ ಕೊನೇ ಪಕ್ಷ ಬೇರೆ ಭಾರತೀಯ ಭಾಷೆಗಳ ಕಲಾತ್ಮಕ ಚಿತ್ರಗಳು ಕೊನೆ ಪಕ್ಷ torrent ಸೈಟುಗಳಲ್ಲಾದರೂ ಸಿಗುತ್ತದೆ. ಕಾಸರವಳ್ಳಿಯವರ ಚಿತ್ರಗಳು ಅಲ್ಲೂ ಸಿಗುವುದಿಲ್ಲ!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading