ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈಕೋ ಮೈಕು…

ಶಬ್ದಮಾಲಿನ್ಯದ ಕಿರಿಕಿರಿಯ ಬಗ್ಗೆ ಸುಂದರರಾಯರ ನೋಟ ಇಲ್ಲಿದೆ-ಎಚ್  ಸುಂದರ ರಾವ್

ಮೈಕಿನ (ಇಂಥದೇ ಬೇರೆ ಬೇರೆ ಸಮಸ್ಯೆಗಳಿವೆ. ಇರಲಿ.) ಕಿರಿಕಿರಿಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾರು ಮೈಕ್ ಹಾಕುತ್ತಾರೋ ಅವರೊಂದಿಗೆ ಜಗಳಕ್ಕಿಳಿಯಬೇಕು. ಜಗಳ ಯಾರಿಗೆ ಬೇಕು? ನಾವೆಲ್ಲ ಸಭ್ಯರು, ಸಜ್ಜನರು. ನಮ್ಮಿಂದ ಅದು ಸಾಧ್ಯವಿಲ್ಲ. ಅದೂ ಅಲ್ಲದೆ, ಹಾಗೆ ಮಾಡಿದರೆ ಮೈಕಿನ ಗಲಾಟೆ ಕಡಿಮೆಯಾಗುವುದಕ್ಕಿಂತ ಹೆಚ್ಚಾಗುವ ಸಂಭವವೇ ಜಾಸ್ತಿ. ಪೋಲಿಸ್ ಸ್ಟೇಷನ್ನಿಗೆ ಹೋಗಿ ದೂರು ಕೊಡಬೇಕು. ಇದು ಇನ್ನೂ ದೊಡ್ಡ ರಗಳೆ. ನಮ್ಮ ದೇಶದಲ್ಲಿ ಇದೂ ಸಾಧ್ಯವಿಲ್ಲ. ಮತ್ತೆ? ಫ್ಯಾನಿನ ವೇಗ ಹೆಚ್ಚಿಸಿ, ಸಾಧ್ಯವಾದಷ್ಟೂ ಜೋರಾಗಿ ಶಬ್ದ ಆಗುವಂತೆ ಮಾಡಿ, ಮೈಕ್ ಶಬ್ದ ಬರುವ ಕಡೆಯ ಕಿಟಿಕಿ ಬಾಗಿಲು ಹಾಕಿ, ಮೈಕ್ ಹಾಕಿದವರಿಗೆ ಸಹಸ್ರನಾಮ ಅರ್ಚನೆ ಮಾಡುತ್ತಾ ಮಲಗಿಬಿಡಿ! ಮತ್ತೆ? ಮತ್ತೆ ಬೇರೆ ಯಾರಾದರೂ ನಿಮ್ಮ ಕಷ್ಟ ಕೇಳುವವರು ಸಿಕ್ಕಿದರೆ ನಿಮ್ಮ ತಲೆನೋವು ಅವರಿಗೆ ದಾಟಿಸಿ. ಅಲ್ಲಿಗೆ ಸಮಸ್ಯೆ ಪರಿಹಾರವಾಯಿತು! ಮಗನೋ ಮಗಳೋ ಎರಡನೇ ಪಿಯುಸಿ ಪರೀಕ್ಷೆ ಕಟ್ಟಿದ್ದರೆ ಏನು ಮಾಡುತ್ತೀರಿ? ಕೂತಲ್ಲಿಯೇ ರಕ್ತದೊತ್ತಡ ಹೆಚ್ಚಿಸಿಕೊಳ್ಳಿ!

ಏನು ಮಾಡುವುದು? ಏನು ಪರಿಹಾರ? ಕೆಲವು ವರ್ಷಗಳ ಕೆಳಗೆ ನಾನು ನಮ್ಮ ತಾಲೂಕಿನ ಹಳ್ಳಿಯೊಂದರಲ್ಲಿ ಅದೆಷ್ಟೋ ದಿನಗಳ ಅಖಂಡ ಭಜನೆ ಮಾಡಿಸುವ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿಯೊಬ್ಬರನ್ನು ಕೇಳಿದೆ:”ನೀವು ಭಜನೆಗೆ ಮೈಕ್ ಯಾಕೆ ಹಾಕುತ್ತೀರಿ?” (ಹೀಗೆ ಪ್ರಶ್ನೆ ಕೇಳುವುದು ತುಂಬ ಅಪಾಯಕಾರಿ. ನಾನು ಮೊದಲೇ ಬೇರೆ ಪೀಠಿಕೆ ಹಾಕಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೆ). ಅವರು ನನಗೆ ಭಜನೆಯ ಮಹತ್ವವನ್ನೂ, “ಭಜನೆಯಿದ್ದಲ್ಲಿ ವಿಭಜನೆ ಇಲ್ಲ” ಎಂಬ ತತ್ವವನ್ನೂ ವಿವರಿಸಿ ಹೇಳಿದರು. ನಾನು ಎಲ್ಲವನ್ನೂ ಸಮಾಧಾನದಿಂದ ಕೇಳಿ, “ಅದೆಲ್ಲ ಸರಿಯೇ. ಆದರೆ ಮೈಕ್ ಯಾಕೆ? ಅದಿಲ್ಲದೇ ಭಜನೆ ಮಾಡಬಹುದಲ್ಲ?” ಎಂದೆ. ಆಗ ಅವರು ” ಓ ಅದಾ? ಅದು ನೋಡಿ, ಮೈಕ್ ಇಲ್ಲದಿದ್ದರೆ ಭಜನೆ ಮಾಡುವವರಿಗೆ ಉಮೇದೇ ಬರುವುದಿಲ್ಲ” ಎಂದರು. ನನಗೆ ಶಬ್ದಮಾಲಿನ್ಯದ ವಿಷಯದಲ್ಲಿ ಒಂದು ಭಾಷಣ ಮಾಡುವ ಜವಾಬ್ದಾರಿ ಇದ್ದುದರಿಂದ, ನಾನು ಇನ್ನೂ ಹಲವರನ್ನು ಈ ಪ್ರಶ್ನೆ ಕೇಳಿದೆ. ಯಾರೂ ಸಮರ್ಪಕ ಉತ್ತರ ಕೊಡುವುದಿಲ್ಲ. ಆದರೆ, ಈ ಪ್ರಶ್ನೆ ಕೇಳಿದರೆ ಎಲ್ಲರಿಗೂ ಸಿಟ್ಟು ಬರುತ್ತದೆ..

ಹಲವು ವರ್ಷಗಳ ಕೆಳಗೆ, ಉಡುಪಿಯಲ್ಲಿ ಕ.ಸಾ.ಪ. ಒಂದು ಸಮ್ಮೇಳನ ನಡೆಸಿದಾಗ ಅದಕ್ಕೆ ಪ್ರತಿ ಎಂಬಂತೆ ಅಲ್ಲಿಯೇ ಮತ್ತೊಂದು ಸಮ್ಮೇಳನವೂ ನಡೆಯಿತು. ನಾನು ಅದಕ್ಕೆ ಹೋಗಿದ್ದೆ. ಜಿ. ರಾಜಶೇಖರ ಈ ಪ್ರತಿ ಸಮ್ಮೇಳನದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಮ್ಮೇಳನ ಮುಗಿಸಿ ಬಂದ ನಾನು ಅದರ ಕುರಿತಂತೆ ಅವರಿಗೊಂದು ಪತ್ರ ಬರೆದಿದ್ದೆ. ಅದರಲ್ಲಿ, ಊರಿಗೆಲ್ಲ ಕೇಳುವಂತೆ ಮೈಕ್ ಹಾಕಿದ ಕ್ರಮದ ಬಗ್ಗೆ ಆಕ್ಷೇಪಿಸಿದ್ದೆ. ಅವರು ನಾನು ಎತ್ತಿದ ಹಲವು ಸಂದೇಹಗಳಿಗೆ ಉತ್ತರ ಕೊಟ್ಟರು. ಮೈಕಿನ ಬಗ್ಗೆ ಮೌನ ವಹಿಸಿದರು. ಎಂಥೆಂಥ ಸೂಕ್ಷ್ಮವಾಗಿ ಆಲೋಚಿಸಬಲ್ಲವರೂ ಸಹ ಮೈಕ್ ಬಳಕೆಯ ಬಗ್ಗೆ ಹೇಗೆ ಒಂದು ನಿರ್ಲಿಪ್ತಿ ಬೆಳಸಿಕೊಂಡು ಬಿಟ್ಟಿರುತ್ತಾರೆ ಎಂಬುದಕ್ಕೆ ಇದನ್ನು ಹೇಳಿದೆ ಅಷ್ಟೆ.

ಬಂಟ್ವಾಳದಲ್ಲಿ ವಂಶ ಎಂಬ ಪತ್ರಿಕೆ ಇದೆ. ಈ ಪತ್ರಿಕೆಯ ಸಂಪಾದಕ ವರ್ಗದವರೊಂದಿಗೆ ನಾನೂ ಸೇರಿಕೊಂಡು ನಮ್ಮೂರಿನ ಪೋಲಿಸ್ ಸ್ಟೇಷನ್ನಿಗೆ ಒಮ್ಮೆ ಸಂದರ್ಶನಕ್ಕಾಗಿ ಹೋಗಿದ್ದೆವು. ಪೋಲೀಸಿನವರ ಪ್ರಕಾರ, ಮೈಕು ಒಂದು ಸಮಸ್ಯೆಯೇ ಅಲ್ಲ. ಅದನ್ನು ಬಳಸುವವರೆಲ್ಲ ಸರಿಯಾದ ಲೈಸೆನ್ಸ್ ಪಡೆದೇ ಬಳಸುತ್ತಿದ್ದಾರೆ! ಸಮಸ್ಯೆಯೇ ಅಲ್ಲದ ಮೇಲೆ ಪರಿಹಾರದ ಮಾತೆಲ್ಲಿ ಬಂತು?

ಮಾಹಿತಿ ಹಕ್ಕು ಬಂದನಂತರ ಅದರ ಮೂಲಕ ಈ ಸಮಸ್ಯೆಗೆ ಏನಾದರೂ ಮದ್ದರೆಯಲು ಸಾಧ್ಯವೇ ಎಂದು ಯೋಚಿಸಿದೆ. ದಾರಿ ಕಾಣಲಿಲ್ಲ. ಮೂರು ತಿಂಗಳ ಹಿಂದೆ ಜಿಲ್ಲಾಧಿಕಾರಿಯವರಿಗೆ ಹೀಗೊಂದು ಪತ್ರ ಬರೆದೆ:

“ವಿಷಯ: ಧ್ವನಿವರ್ಧಕ ವ್ಯವಸ್ಥೆಯನ್ನು ಸಮರ್ಪಕಗೊಳಿಸುವ ಬಗ್ಗೆ

ಧ್ವನಿವರ್ಧಕಗಳು ಉಂಟು ಮಾಡುವ ಶಬ್ದಮಾಲಿನ್ಯದಿಂದ ಅನೇಕ ನಾಗರಿಕರಿಗೆ ಕಿರಿಕಿರಿಯಾಗುತ್ತಿದ್ದರೂ ಸಹ ಸೂಕ್ತ ಮಾಹಿತಿಯ ಕೊರತೆಯಿಂದ ಅಂಥವರು ಅಸಹಾಯಕರಾಗಿದ್ದಾರೆ. ಆದ್ದರಿಂದ ಇನ್ನು ಮುಂದೆ ಧ್ವನಿವರ್ಧಕ ಬಳಸಲು ಅನುಮತಿ ನೀಡುವಾಗ, ಅನುಮತಿ ಪಡೆದವರು ಈ ಕೆಳಗಿನ ಮಾಹಿತಿಗಳನ್ನು ಸಾರ್ವಜನಿಕರಿಗೆ ಕಡ್ಡಾಯವಾಗಿ ನೀಡುವಂತೆ ಅವರಿಗೆ ಸೂಚಿಸಬೇಕಾಗಿ ಕೋರುತ್ತೇನೆ.

೧. ಧ್ವನಿವರ್ಧಕ ಬಳಸಲು ಅನುಮತಿ ಪಡೆದವರ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ

೨. ಬಳಸುವ ಧ್ವನಿವರ್ಧಕಗಳ ಸಂಖ್ಯೆ ಮತ್ತು ಅವುಗಳನ್ನು ಬಳಸುವ ಸ್ಥಳ

೩. ಧ್ವನಿವರ್ಧಕಗಳನ್ನು ಬಳಸುವ ಅವಧಿ (ಯಾವ ತಾರೀಕಿನಿಂದ ಯಾವ ತಾರೀಕಿನವರೆಗೆ ಮತ್ತು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ)

೪. ಅನುಮತಿಯ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ದೂರು ನೀಡಬಹುದಾದ ಅಧಿಕಾರಿಯ ಪದನಾಮ ಮತ್ತು ಮೊಬೈಲ್ ಸಂಖ್ಯೆ/ಸ್ಥಿರ ದೂರವಾಣಿ ಸಂಖ್ಯೆ

(ಯಾವುದೇ ಕಾರ್ಯಕ್ರಮ ಮಾಡುವವರು ತಮ್ಮ ಕಾರ್ಯಕ್ರಮದ ಬಗ್ಗೆ ಕರಪತ್ರ ಅಥವಾ ಆಮಂತ್ರಣವನ್ನು ಮುದ್ರಿಸುತ್ತಾರೆ. ಅದರಲ್ಲಿಯೇ ಈ ಮಾಹಿತಿಗಳನ್ನು ಮುದ್ರಿಸತಕ್ಕದ್ದೆಂದು ಅವರಿಗೆ ಸೂಚಿಸಬಹುದು. ಜೊತೆಗೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಎಲ್ಲರಿಗೂ ಕಾಣುವಂತೆ ಈ ಮಾಹಿತಿಯನ್ನು ಪ್ರದರ್ಶಿಸಲು ಸೂಚಿಸಬಹುದು.)

ಮೇಲ್ಕಂಡ ಕ್ರಮವನ್ನು ಕೈಗೊಂಡಲ್ಲಿ ಸಾರ್ವಜನಿಕರು ತಮಗೆ ಧ್ವನಿವರ್ಧಕದ ಬಳಕೆಯಿಂದ ಕಿರಿಕಿರಿಯಾದರೆ ಕೂಡಲೇ ದೂರು ಸಲ್ಲಿಸಲು ಅನುಕೂಲವಾಗುತ್ತದೆ ಎಂದು ನನ್ನ ಅಭಿಪ್ರಾಯ.

ಈ ಪತ್ರಕ್ಕೆ ತಮ್ಮಿಂದ ಸಕಾರಾತ್ಮಕ ಉತ್ತರವನ್ನು ನಿರೀಕ್ಷಿಸುತ್ತೇನೆ.”

ಜಿಲ್ಲಾಧಿಕಾರಿಗಳು “ಸೂಕ್ತ ಹಿಂಬರಹ ನೀಡುವುದು” ಎಂದು ಟಿಪ್ಪಣಿ ಹಾಕಿ, ಪತ್ರವನ್ನು ಎಸ್ ಪಿಯವರ ಆಫೀಸಿಗೆ ಕಳಿಸಿದ್ದಾರೆ.ಅಲ್ಲಿಂದ ಉತ್ತರ ಬಂದಿಲ್ಲ. ಒಂದು ನೆನಪೋಲೆ ಬರೆದಿದ್ದೇನೆ. ಆದರೂ ಉತ್ತರ ಬಂದಿಲ್ಲ. ಇನ್ನೊಂದು ನೆನಪೋಲೆ ಬರೆಯುವ ಸಮಯ ಆಗಿದೆ. ಬರೆಯುತ್ತೇನೆ. ಈ ಹಂತದಲ್ಲಿ ಮಾಹಿತಿ ಹಕ್ಕನ್ನು ಬಳಸಿಕೊಳ್ಳುವುದನ್ನೂ ಪರಿಶೀಲಿಸಬಹುದು.

ಓದುಗರಿಂದ ಕೂಡಲೇ ಬರುವ ಪ್ರತಿಕ್ರಿಯೆ “ಹೀಗೆ ಪತ್ರ ಬರೆಯುವುದರಿಂದ ಯಾವುದೇ ಪ್ರಯೋಜನವಿಲ್ಲ” ಎಂಬುದು. ಅಂಥವರಿಗೆ ನನ್ನ ಪ್ರಶ್ನೆ: “ಬರೆದು ನೋಡಿದ್ದೀರಾ?” ಏನೂ ಮಾಡದಿರುವುದಕ್ಕಿಂತ ಹೀಗೆ ಮಾಡುವುದು ಉತ್ತಮ ಅಲ್ಲವೆ? ಇದು ಪ್ರಜಾಪ್ರಭುತ್ವ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳೋಣ. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು. ಅಣ್ಣಾ ಹಜಾರೆಯಂಥವರಿಂದ ನಮಗೊಂದು ನೈತಿಕ ಬೆಂಬಲಕ್ಕಿಂತ ಹೆಚ್ಚೇನೂ ಸಿಗುವುದು ಸಾಧ್ಯವಿಲ್ಲ.

ನನ್ನದೊಂದು ಬ್ಲಾಗ್ ಇದೆ. http://www.sundararao.blogspot.com ಆಸಕ್ತರು ನೋಡಬಹುದು:

 

‍ಲೇಖಕರು G

27 May, 2011

2 Comments

  1. sangeetha shantha johnson

    ಶಬ್ದ ಮಾಲಿನ್ಯವನ್ನುಂಟುಮಾಡುವುದು ಅಪರಾಧ ಎಂದು ಗೊತ್ತಿದ್ದರೂ ಪ್ರಜ್ನಾವಂತರೆನಿಸಿಕೊಂಡ ಅನೇಕರು ಕಿಂಚಿತ್ತೂ ಮುಜುಗರವಿಲ್ಲದೆ ಈ ಕೆಲಸವನ್ನು ಆರಾಮವಾಗಿ ಮಾಡುತ್ತಾರೆ. ಮುಂದೆ ನಡೆಯಲಿರುವ ಕಾರ್ಯಕ್ರಮದ ರಿಹರ್ಸಲ್ ಕೂಡಾ ಹೀಗೆ ಬೊಬ್ಬಿಡುವ ಮೈಕ್ ಹಾಕಿಕೊಂಡೇ ಮಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಇವು ಧಾರ್ಮಿಕ, ರಾಜಕೀಯ ಇತ್ಯಾದಿ ಸಂಘಟನೆಗಳಿಗೆ ಸಂಬಂಧಿಸಿರುವುದರಿಂದ ಕಿರಿಕಿರಿ , ಹಿಂಸೆ ಅನುಭವಿಸುತ್ತಿರುವವರೂ ಅಸಹಾಯಕರಾಗಿ ಸುಮ್ಮನಿರಬೇಕಾಗುತ್ತದೆ. ಸುಂದರರಾಯರಿಗೆ ನನ್ನ ಕೃತಜ್ನತೆಗಳು. ನಿಮಗೆ ಅನಿಸಿದುದೆಲ್ಲ ನಿಜ, ಹೀಗೆ ಅಂದುಕೊಳ್ಳುವವರು ಅನೇಕರಿದ್ದಾರೆ. ಕಾರ್ಯಕ್ರಮ ನಮ್ಮದಾದರೆ ಮೈಕ್ ಓಕೆ, ಇಲ್ಲವಾದರೆ ಮಾಲಿನ್ಯ ಎನ್ನುವವರೇ ಹೆಚ್ಚು.
    ಎಸ್. ಸಂಗೀತಾ ಜಾನ್ಸನ್

  2. dinesh kukkujadka

    ಈ ವಿಚಾರದಲ್ಲಿ ನಾನೂ ಒಬ್ಬ ರೆಗ್ಯುಲರ್ ಸಂತ್ರಸ್ತನೇ!

    ನಮ್ಮೂರಿನಲ್ಲಿ ಯಾವುದೇ ಫಂಕ್ಷನ್ನು ನಡೆಯುವುದಿದ್ದರೂ ಅದು ನಮ್ಮ ಮನೆಯಿಂದ ನೂರಿನ್ನೂರು ಮೀಟರ್ ದೂರದಲ್ಲೇ ಇರುವ ಹೈಯರ್ ಪ್ರೈಮರಿ ಶಾಲೆಯಲ್ಲೇ ನಡೆಯುವುದು ಸಂಪ್ರದಾಯ. ಹೀಗಾಗಿ ಅಲ್ಲೇನು ಕಾರ್ಯಕ್ರಮ ನಡೆಯುವುದಿದ್ದರೂ ನಮಗೆ ಉಚಿತ ಕಿರಿಕಿರಿ ಖಾಯಮ್ಮು!

    ಹೋದ ವರ್ಷ ಗಣಪತಿ ಕೂರಿಸುವ ಕಾರ್ಯಕ್ರಮವೊಂದಿತ್ತು. ಕಾರ್ಯಕ್ರಮದ ಹಿಂದಿನ ರಾತ್ರಿ ೧೨ ರ ಅವೇಳೆಯಲ್ಲಿ ಮೈಕಿನ ಗರಿಷ್ಟ ಸಾಮರ್ಥ್ಯದ ನಿರಾತಂಕ ಪ್ರದರ್ಶನ ಉದ್ದಕ್ಕೂ ನಡೆದೇ ಇತ್ತು.ರಾತ್ರಿಯ ನೀರವ ಮೌನವನ್ನು ರಾಕ್ಷಸ ರೀತಿಯಲ್ಲಿ ಕದಡುವ ಅಖಂಡ ಭಕ್ತಿಯ ನಿರ್ದಯ ಪ್ರಯೋಗಗಳಗೆ ರಾಜಕೀಯದ ಗಟ್ಟಿ ಅಡಿಗಟ್ಟು ಬೇರೆ! ಯಾವುದೇ ಎಗ್ಗಿಲ್ಲದೆ ಅರಚಿಕೊಳ್ಳುತ್ತಿತ್ತು ಮೈಕು.ಮಂಚದಲ್ಲಿ ಎತ್ತ ಹೊರಳಿದರೂ ನಿದ್ದೆ ಬರಲೊಲ್ಲದೆ ಕೊನೆಗೊಮ್ಮೆ ಟಾರ್ಚು ಹಿಡಿದವನೇ ನೇರ ಅಲ್ಲಿಗೇ ತೆರಳಿ ಕಾರ್ಯಕ್ರಮ ಸಂಘಟಕರನ್ನು ತರಾಟೆಗೆತ್ತಿಕೊಂಡೆ.ಅವರಲ್ಲೊಬ್ಬ ,”ವರ್ಷಕ್ಕೊಮ್ಮೆ ನಡೆಯುವ ಫಂಕ್ಷನ್ನಲ್ಲವಾ?” ಅಂದ.” ಈ ದೇವರ ಪಾಳಿ ವರ್ಷಕ್ಕೊಮ್ಮೆ ಹೌದಪ್ಪಾ. ಆದರೆ ಈತನ ಅಪ್ಪ-ಅಮ್ಮ-ತಾತ-ಮುತ್ತಾತಂದಿರ ಸರದಿಯಿನ್ನೂ ಬಾಕಿಯಿದೆಯಲ್ಲ!ಕಾರ್ಯಕ್ರಮದ ವೇಳೆ ಮೈಕು ಹಾಕುವುದೇನೋ ನ್ಯಾಯವೇ. ಆದರೆ ಹಿಂದಿನ ದಿನ ತಯಾರಿಗೂ ಮೈಕು! ದೇವರ ವಿಸರ್ಜನೆಯ ನಂತರವೂ ಅಹೋರಾತ್ರಿ ಮೈಕು! ಇಡೀ ವರ್ಷ ಇದೇ ಆದರೆ ನಾವೆಲ್ಲಾ ನಿದ್ದೆ ಮಾಡುವುದ್ಯಾವಾಗ? ” ಅಂತ ಸ್ವಲ್ಪ ಎಕ್ಸೈಟಾಗಿಯೇ ಜರಿದೆ.

    ಕೊನೆಗೂ ಅವರಲ್ಲೊಬ್ಬ ಅರೆಬರೆ ಮನಸ್ಸಿನಿಂದ ಸ್ವಲ್ಪ ವಾಲ್ಯೂಮ್ ಕಮ್ಮಿ ಮಾಡಿ, ಪಕ್ಕದ ನೆಲ್ಲಿಕಾಯಿ ಮರಕ್ಕೆ ಹತ್ತಿ ಅಲ್ಲಿದ್ದ ಮೈಕಿನ ಮೋರೆಯನ್ನು ನಮ್ಮ ಮನೆ ದಿಕ್ಕಿನಿಂದ ಬೇರೆ ಕಡೆ ತಿರುಗಿಸಿದ. ನನ್ನ ಪಾಪಪ್ರಜ್ಣೆ ಇನ್ನೂ ಹೆಚ್ಚಾಯಿತು. ನಾನು ಮನೆ ಸೇರುವಷ್ಟರಲ್ಲಿ ಆ ಕಡೆ ಮನೆಯವರೂ ಎದ್ದು ಬಂದು ,ಮೈಕಿನ ಮೋರೆಯನ್ನು ಇನ್ನೊಂದು ಕಡೆ ತಿರುಗಿಸಿ…. ಮತ್ತೆ ಮತ್ತೊಂದು ಮನೆಯವರು ಬಂದು….. ಒಟ್ಟಿನಲ್ಲಿ ಮೈಕು ಒಂದು ಪೂರ್ತಿ ಸುತ್ತು ಸುತ್ತುವಷ್ಟರಲ್ಲಿ ಬೆಳಗಾಗಿರುತ್ತೆ ಅಂತ ಆವಾಗಲೇ ಲೆಕ್ಕ ಹಾಕಿದ್ದೆ.

    ಡಾ.ಶಿವರಾಮ ಕಾರಂತರ ವಿಚಾರವಾಗಿಯೂ ಹೀಗೊಂದು ಕತೆಯಿದೆ. ಕಾರಂತರೊಮ್ಮೆ ಮಧ್ಯರಾತ್ರಿ ಇಂತದೇ ಕಿರಿಕಿರಿ ಅನುಭವಿಸಿ,ಕೊನೆಗೆ ಸಿಟ್ಟಿನಿಂದ ಟಾರ್ಚನ್ನೆತ್ತಿಕೊಂಡು ಸೀದಾ ಫಂಕ್ಷನ್ನಿನ ತಯಾರಿ ನಡೆಯುತ್ತಿದ್ದಲ್ಲಿಗೆ ಹೋದವರೇ “ಇಷ್ಟೊಂದು ಕಿವಿಹರಿಯುವ ಹಾಗೆ ಹಾಕ್ತೀರಲ್ಲ? ನಿಮ್ಮ——-(ಆ ದೇವರ ಹೆಸರು ಹೇಳಿ) ಆತನೇನು ಪೊಟ್ಟನಾ~~???….. ” ಅಂತ ಹಿಗ್ಗಾಮುಗ್ಗಾ ಬೈದಿದ್ದರಂತೆ! ಯಾರೋ ಹೇಳಿದ ಈ ಕತೆಯ ಸತ್ಯಾಸತ್ಯತೆಯ ಬಗ್ಗೆ ನನಗೇನೂ ತಿಳಿದಿಲ್ಲವಾದರೂ, ಈ ಕಿರಿಕಿರಿಯಿಂದ ಬೇಸತ್ತವನಾಗಿ ಈ ಕತೆಯನ್ನು ಈಗಷ್ಟೇ ನಡೆದುದು ಎಂಬಷ್ಟು ಹಸಿಯಾಗಿ ನಂಬಿದ್ದೇನೆ. ಮತ್ತು ಸಂದರ್ಭ ಬಂದಾಗಲೆಲ್ಲಾ ನನ್ನ ಸುತ್ತಮುತ್ತಣ ಹತ್ತಾರು ಜನರ ಕಿವಿಗೂ ಹಾಕಿ, ನನ್ನ ಸಾಮಾಜಿಕ ಪ್ರಜ್ಣೆಯ ಹಿಂದೆ ಎಂತೆಂಥ ಮಹಾನುಭಾವರ ತಾತ್ವಿಕ ಪ್ರೇರಣೆಯ ಒತ್ತಾಸೆಯಿದೆ ಅನ್ನುವಂತೆ ಒಂಥರಾ ವಿಪರೀತ ಫೋಸೂ ಕೊಟ್ಟಿದ್ದೇನೆ!

    ಕೋರ್ಟು-ಕಾಯಿದೆಗಳ ವಿಶೇಷ ಅರಿವು- ಈ ವಿಚಾರದಲ್ಲಿ ನನಗಿಲ್ಲವಾದರೂ, ಒಂದೆರಡು ಬಾರಿ ಸಂಘಟಕರನ್ನು “ಸುಪ್ರೀಮ್ ಕೋರ್ಟು-ಆ ಕೋರ್ಟು-ಈ ಕೋರ್ಟು”ಅಂತೆಲ್ಲಾ ಹೆದರಿಸಿ, ಈರ್ವರ ಅಜ್ಣಾನವೂ ಏಕೀಭವಿಸಿದ ಪರಿಣಾಮವಾಗಿ, ಅದೊಂದೊಂದು ರಾತ್ರಿಯ ಮಟ್ಟಿಗೆ ಮೈಕು ಮೆತ್ತಗಾಗಿಸಿದ್ದೆ! ಕಷ್ಟವೆಂದರೆ, ಇಲ್ಲಿ ದೇವರ ಸೀಸನ್ ಕಳೆಯಿತೋ, ಮತ್ತೆ ಮದುವೆ ಸೀಸನ್ ಶುರು! ಮತ್ತದೇ ಅಬ್ಬರ! ಬಹುತೇಕ ಊರವರ- ನೆಂಟರಿಷ್ಟರ- ಪರಿಚಯಸ್ಥರ ಕಾರ್ಯಕ್ರಮಗಳೇ ಜರಗುವುದರಿಂದ ಒಮ್ಮೊಮ್ಮೆ ತೀರ ಒರಟಾಗಿ ಕಾಣಿಸುವುದೂ ಕಷ್ಟವೇ! ಆದರೂ ಯಾವತ್ತಿಗೂ ಊರೊಳಗಿನ “ಮೈಕಿಗರ” ಕಣ್ಣಲ್ಲಿ ನಾನೊಬ್ಬ ಭಯೋತ್ಪಾದಕನಾಗಿರುವುದು ನನ್ನ ಕಡಿಮೆ ಸಾಧನೆಯೇನಲ್ಲ!!

    –ದಿನೇಶ್ ಕುಕ್ಕುಜಡ್ಕ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading