ಮುಕ್ಕಿ ಮುಗಿಸಿದ ಮೇಲೆ..

ಹಸಿವು!

ಎಂ ಆರ್ ಕಮಲ 

ಕಾಡು, ಗುಡ್ಡ, ಬೆಟ್ಟ ಎಲ್ಲದರ ಎದೆ, ಹೊಟ್ಟೆ
ಬಗೆದು ಸಿಗಿದು ರಕ್ಕಸರು ಮುಕ್ಕಿ ಮುಗಿಸಿದ ಮೇಲೆ…
ದೇವರಂಥ ಗಿರಿಬಾಲರು, ಬಾಲೆಯರು ನೆಲಕ್ಕಿಳಿದರು
ಗೆಡ್ಡೆ ಗೆಣಸುಗಳಿಲ್ಲ, ಹಣ್ಣುಹಂಪಲುಗಳಿಲ್ಲ
ಜೇನುಹುಟ್ಟಿ ಕಟ್ಟಿ `ಮಧು’ ತುಂಬಿಡಲು ಹೂವಿಲ್ಲ
ಮಕರಂದವರಸುವ ಮಧುಕರವೃತ್ತಿಯಿಲ್ಲ
`ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದಡೆ
ವಿಷವೇರಿತ್ತಯ್ಯ ಆಪಾದಮಸ್ತಕಕ್ಕೆ’
ಹಸಿವಿಗನ್ನವನಿಕ್ಕಿ ವಿಷವನಿಳಿಸಲು ಬಂದವನ
ಸೆರೆಹಿಡಿದರು, ಬಡಿದು ಅಟ್ಟಹಾಸದಲಿ ಮೆರೆದರು
ಹಸಿವು ಸತ್ತರೂ ಸುತ್ತಲಿನವರ ವಿಷವಿಳಿಯಲಿಲ್ಲ

೨.

ಬೆಳಕು ಬೆಳದಿಂಗಳಲಿ ಕಣ್ಣು ಕೋರೈಸಿದ ಲಾಸ್ಯ
ವಿರಹಿಗಳಿಗೆ ಅದೆಂಥ ಸಿಂಗಾರ, ನವಿರು ಹಾಸ್ಯ
ಹಾಲ್ಗಡಲಲಿ ಮಿಂದ `ಸಿರಿದೇವಿ’ಯೇ ಇರಬೇಕು
ಅರಮನೆಯ ತುಂಬ ಬರಿಯ ಕನ್ನಡಿಯ ಬಿಂಬ
ಬೆಳ್ಳಿ, ಬಂಗಾರದ ತಟ್ಟೆಯಲಿ ಶಾಲ್ಯನ್ನ
ಮೃಷ್ಟಾನ್ನ ಭೋಜನ ಇದ್ದರೂ ಮುಟ್ಟುವಂತಿಲ್ಲ
ಶಾಪಗ್ರಸ್ತ ಗಂಧರ್ವೆ ಭೂಲೋಕ ಮುಟ್ಟಿದ
ಮೇಲೂ ಅಮೃತವ ಕುಡಿದಂತೆ ನಟಿಸಬೇಕು
ರನ್ನದೆರೆಯ ಮೇಲೆ ಹಂಸದಂತೆ ತೇಲಬೇಕು
ಕಂಡವರ ಕಂಗಳಲ್ಲಿ ಮಿಂಚು ಮೂಡಿಸಬೇಕು
ಹಸಿವಿಗನ್ನವನಿಕ್ಕಿ ವಿಷವಿಳಿಸಲಿಲ್ಲ, ಪ್ರಾಣ ಹಾರಿತಲ್ಲ!

‍ಲೇಖಕರು avadhi

February 26, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. S.P.Vijaya lakshmi

    ಪ್ರಸ್ತುತ, ಚಂದದ ಕವಿತೆಗಳು ಕಮಲ…

    ಪ್ರತಿಕ್ರಿಯೆ
  2. Lalitha siddabasavayya

    ನಿಜ ಕಮಲಾ , ತಣಿಗೆ ತುಂಬ ಅನ್ನವಿದ್ದರೂ ತೂಕ ಮಾಡಿ ಮಾಡಿ ತುತ್ತೆಣಿಸುತ್ತಿದ್ದ ಶ್ರೀದೇವಿಯವರ ಸಾವು, ಹಸಿದ ಹೊಟ್ಟೆಯ ಮೇಲೆ ಹೊಡೆದು ಹೊಡೆದೂ ಕೊಂದುಹಾಕಿದರಲ್ಲ ಆ ಅಡವಿ ಹುಡುಗನನ್ನು, ಅವನ ಸಾವು ,,, ಎರಡೂ ಈ ದೇಶದಲ್ಲೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: