ಶ್ಯಾಮಲಾ ಮಾಧವ
ಮುಂಬಯಿ ಕುರ್ಲಾಪೂರ್ವದ ಬಂಟರ ಭವನದಲ್ಲಿ ಜನವರಿ ೧೧, ೧೨ – ಎರಡು ದಿನಗಳ ಕಾಲ ಸುಗಮ ಸಂಗೀತ ಸುಧೆ ಹರಿದು ಶ್ರೋತೃಗಳ ಕಣ್ಮನಗಳಿಗೂ ತಂಪೆರೆಯಿತು. ಸಂಗೀತ ಕಲಾನಿಧಿಗಳ ಜೊತೆಗೆ ಸಾಹಿತಿ ಶ್ರೇಷ್ಠರ ಸಂಗಮವೂ ಒದಗಿಬಂದು ಎರಡು ದಿನಗಳ ಸಾರ್ಥಕ ಕಾಲಕ್ಷೇಪ ಮುದನೀಡಿತು.
ಕರ್ನಾಟಕೆ ಸುಗಮ ಸಂಗೀತ ಪರಿಷತ್ತು, ಮಹಾರಾಷ್ಟ್ರ ಘಟಕದ ಜೊತೆಗೂಡಿ ಆಯೋಜಿಸಿದ ಈ ಸಂಗೀತ ಹಬ್ಬದ ಸಂಯೋಜಕರು, ಕರ್ನಾಟಕ ಸಂಘ, ಅಂಧೇರಿ. ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ಕಾವ್ಯಶ್ರೀ ಪ್ರಶಸ್ತಿಯನ್ನು , ಇಂದು ವಿಶ್ವನಾಥ್ ಅವರಿಗೆ ಭಾವಶ್ರೀ ಪ್ರಶಸ್ತಿಯನ್ನಿತ್ತು ಸಮ್ಮಾನಿಸಲಾಯ್ತು.
ಪರಿಷತ್ತಿನ ಅಧ್ಯಕ್ಷ ಮುದ್ದುಕೃಷ್ಣ, ಡಾ. ಮುದ್ದುಮೋಹನ್, ನಗರ ಶ್ರೀನಿವಾಸ ಉಡುಪ, ಡಾ.ವೆಂಕಟೇಶ ತುಪ್ಪಿಲ್, ಡಾ. ಬಿ.ಕೆ. ಸುಮಿತ್ರಾರಂತಹ ಸುಗಮ ಸಂಗೀತ ಕ್ಷೇತ್ರದ ಗಣ್ಯರೊಂದಿಗೆ ಸಾಹಿತಿಶ್ರೇಷ್ಠರ ಉಪಸ್ಥಿತಿ ರತ್ನಕ್ಕೆ ಕುಂದಣವಿಟ್ಟಂತಾಯ್ತು.
ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಸಮಾರೋಪ ಸಮಾರಂಭದ ಅಧ್ಯಕ್ಷರಾಗಿದ್ದರು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಎಚ್.ಎಸ್. ವೆಂಕೆಟೇಶಮೂರ್ತಿ , ಸಮಾರೋಪ ಭಾಷಣಗೈದ ಸಾಹಿತಿ ಜೋಗಿ , ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಅರ್.ಕೆ. ಶೆಟ್ಟಿ , ವಿಜ್ಞಾನಿ ಡಾ. ವೆಂಕಟೇಶ್ ತುಪ್ಪಿಲ್ , ಮುಂಬಯಿಯ ಪ್ರಸಿದ್ಧ ಸರ್ಜನ್ ಡಾ.ಅಂಬರೀಶ್, ಗಾಯಕಿ ಬಿ.ಕೆ.ಸುಮಿತ್ರಾ ಅವರನ್ನು ಸನ್ಮಾನಿಸಲಾಯ್ತು.
ದಾಸಚಿಂತನದ ಉತ್ಕೃಷ್ಟ ಸವಿಯನ್ನುಣಿಸಿದ ಮುದ್ದು ಮೋಹನ್, ಪುತ್ತೂರು ನರಸಿಂಹ ನಾಯಕ್, ಅರ್ಚನಾ ಉಡುಪ, ಕೆ.ಎಸ್. ಸುರೇಖಾ, ನಗರ ಶ್ರೀನಿವಾಸ ಉಡುಪ, ಶ್ಯಾಮಲಾ ಪ್ರಕಾಶ್, ಶ್ಯಾಮಲಾ ರಾಧೇಶ್ , ನಂದಿನಿ ರಾವ್, ಸುರೇಖಾ ಹೀಗೆ ಹಲವು ಕಂಠಗಳ ಗಾನಸುಧೆ ಸವಿಯುವ ಅವಕಾಶ ಪ್ರಾಪ್ತವಾಯ್ತು.
ಕವಿಯ ನೋಡಿ, ಕವಿತೆ ಕೇಳಿ ಕಾರ್ಯಕ್ರಮದಲ್ಲಿ ಡಾ.ಎಚ್.ಎಸ್.ವಿ., ದೊಡ್ಡರಂಗೇಗೌಡ, ಜಯಂತ್ ಕಾಯ್ಕಿಣಿ, ಸುಬ್ರಾಯ ಚೊಕ್ಕಾಡಿ , ನಾದಾ, ಹೇಮಾ ಪಟ್ಟಣಶೆಟ್ಟಿ, ನಗರ ಶ್ರೀನಿವಾಸ ಉಡುಪ ಹೀಗೆ ಕವಿತಾ ಸುಧೆ ಹರಿದು ಬಂತು.
ಹೌದು ಮೇಡಮ್… ನಾವು ಮುಂಬಯಿ ಕವಿಗಳಿಗೂ ಸಂಭ್ರಮ… ನನ್ ಕವಿತೆಗೆ ಪುತ್ತೂರು ನರಸಿಂಹ ನಾಯಕರು ಮದುಮದುರ ಸ್ವರ ಸಂಯೋಜಿಸಿ ಹಾಡಿಸಿದ್ದೂ….ಆ ಎರಡೂ ದಿನಗಳು ಅವಿಸ್ಮರಣೀಯ….