“ಮಿಸೆಸ್ ಅಯ್ಯರ್: ಇನ್ನೊಂದು ಮುಖ” ಲೇಖನ ಪ್ರಕಟಿಸುವಾಗ, ಈ ಸಿನೆಮಾಕ್ಕೆ ಪ್ರತಿಕ್ರಿಯೆಯಾಗಿ ವ್ಯಕ್ತವಾದ ಇನ್ನೊಂದು ರಚನೆಯ ಬಗ್ಗೆ ಪ್ರಸ್ತಾಪಿಸಿದೆವು. ಅದೇ ಜಿ ಎನ್ ಮೋಹನ್ ಅವರ ಈ ಕವಿತೆ. ಅವರ “ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ” ಸಂಕಲನದಲ್ಲಿ ಈ ಕವಿತೆ ಇದೆ. ತಮ್ಮಂತದೇ ಜೀವಗಳ ತತ್ತರದ ನಡುವೆಯೂ ಜನ ಸಂಭ್ರಮ ನಿರುಮ್ಮಳವಾಗಿಯೇ ಉಳಿದುಬಿಡುವ ವಿಪರ್ಯಾಸವನ್ನು ಹೇಳುವ ಈ ಕವಿತೆ ನಿಮಗಾಗಿ.
* * *
ಜಿ ಎನ್ ಮೋಹನ್
ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್
ನಮ್ಮ ಟಿವಿ ಪರದೆಯ ಮೇಲೆ
ಮೂಡುವ ವೇಳೆಗೆ ಸರಿಯಾಗಿ
ನಮ್ಮ ಮನೆಯಲ್ಲಿ ಗಣೇಶನ ಹಬ್ಬ
ಭಾರೀ ಗೌದು ಮಾತುಕತೆ ಕೇಕೆ
ಸಡಗರದಿಂದ ಓಡಾಡುವ ಕಾಲ್ಗಳು
ಕಾಲ್ಗಳಲ್ಲಿ ಕಿಂಕಿಣಿಸುತ್ತಿರುವ ಗೆಜ್ಜೆ
ಹಬ್ಬದ ಜರಿ ಸೀರೆ ಪುಟಾಣಿಗಳಿಗೆ ಲಂಗ
ಎಲ್ಲರ ಕಣ್ಣಲ್ಲೂ ಮಿಂಚು
ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್
ಬಸ್ ಏರಿ ಪಯಣ ಆರಂಭಿಸುವ
ವೇಳೆಗೆ ಸರಿಯಾಗಿ
ನಮ್ಮ ಮನೆಗೆ ಸಾಕಷ್ಟು ನೆಂಟರು;
ಮುತ್ತೈದೆತನ ಗಟ್ಟಿಯಾಗಿರಲಿ ಎಂದು
ಹಾರೈಸುವ ಬಾಗಿನ
ನಮ್ಮ ಬದುಕು ನಮಗೇ ಸರಿಯಾಗಿ
ಕಾಣಲಿ ಎಂದು ಮೇಲೊಂದು ಪುಟ್ಟ ಕನ್ನಡಿ
ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್
ಹೊರಟ ಬಸ್ಸಿಗೆ ದಂಡು ಲಗ್ಗೆ ಹಾಕಿದೆ
ಚೀರಿ ಹೇಳುತ್ತಿದೆ ಬೆಂಕಿ ಕಾರುತ್ತಿದೆ;
“ನಿನ್ನ ಧರ್ಮಕ್ಕೆ ರುಜುವಾತು ಬೇಕು”
ನಮ್ಮ ಮನೆಯಲ್ಲಿ ಈಗ ಮಂಗಳಾರತಿ
ಎಲ್ಲ ಮನೆಯಲ್ಲಿ ಬೆಳಕು ಮೂಡಲಿ
ಮುಂದಿನ ಹಬ್ಬದವರೆಗೂ ವಿಘ್ನ ಬಾರದಿರಲಿ
ಕಣ್ಣುಗಳ ಕಾಂತಿ ಆರದಿರಲಿ
ಹಾಡು ಎಲ್ಲ ಎದೆಯಲ್ಲಿ ಹುಟ್ಟಲಿ
ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್
ಜೊತೆಗೊಂದು ಮಗು, ಹಣೆಯಲ್ಲಿ ಕುಂಕುಮವಿದೆ
ಮಾತನಾಡುತ್ತಿರುವ ಭಾಷೆ ತಮಗೆ ಬೇಕಾದ
ಧರ್ಮದ್ದು ಎಂದು ಗೊತ್ತಾಗಿದೆ
ಉಟ್ಟ ಸೀರೆಯೂ ಧರ್ಮಕ್ಕೆ ಒಪ್ಪುವಂತಿದೆ
ನಮ್ಮ ಮನೆಯಲ್ಲಿ ಈಗ ಹಬ್ಬ ಖಂಡಿತಾ
ಹಬ್ಬದ ಕಳೆ ತಂದಿದೆ ಸಂತಸ ಉಕ್ಕಿಸಲು
ಹಸಿರು ತೋರಣ ಕೌದಿಗೂ ಕುಸುರಿಗೆಲಸ
ಮಾತಿನಲ್ಲಿ ಒಂದಿಷ್ಟು ಹೆಚ್ಚು ಸರಬರ
ಎಲ್ಲವೂ ಹಬ್ಬಕ್ಕೆ ತಕ್ಕಂತೆ
ಸರಿಯಾಗಿಯೇ ಇದೆ
ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್
ಇದ್ದ ಬಸ್ ನಲ್ಲಿ ಮಾತ್ರ ಈಗ ಲೆಕ್ಕ ತಪ್ಪಿದೆ
ಏರುವಾಗ ಇದ್ದ ಪಯಣಿಗರ ಸಂಖ್ಯೆಯಲ್ಲಿ
ಈಗ ಎರಡು ಕಡಿಮೆಯಾಗಿದೆ. ಚೀರುವವರ
ಮಧ್ಯೆ ಬಸ್ ನ ಚಾಲಕ ಕೂಡ
ಮತ್ತೆ ತಲೆ ಎಣಿಸುವುದನ್ನು ಮರೆತಿದ್ದಾನೆ
ದಶಕಗಳ ಹಿಂದಿ ಮಾತು ಆಡುತ್ತಿದ್ದ
ಅಜ್ಜನ ದಂತಪಂಕ್ತಿ ಸಮುದ್ರದ ಅಲೆಯ
ಹೊಡೆತಕ್ಕೆ ಸಿಕ್ಕಿದೆ
ಜೊತೆಗಾತಿಯ ಕನ್ನಡಕ
ಅಲ್ಲೇ ಪಕ್ಕದ ಬಂಡೆಗೆ ಸಿಕ್ಕು
ನುಚ್ಚುನೂರಾಗಿದೆ
ನಮ್ಮ ಮನೆಯಲ್ಲಿ ಈಗ ಊಟದ ಸಮಯ
ಬಾಳೆ ಎಲೆ ಹರಡಿದ್ದಾಗಿದೆ
ಒಂದಿಷ್ಟು ಪಲ್ಯ ಬೇಕಾದಷ್ಟು ಕಡಬು
ಒಂದು ವರ್ಷ ಹೇಗೆ ಕಾಪಾಡಿದನಲ್ಲಾ
ವಿಘ್ನೇಶ್ವರ ಎಂಬ ಪ್ರಶಂಸೆ
ಮತ್ತೊಂದು ವರ್ಷವೂ ನಮ್ಮನ್ನು
ಹೀಗೇ ಕಾಪಾಡು ಎಂಬ ಮೊರೆ;
ಊಟ ಸಂಭ್ರಮದಿಂದ ಸಾಗಿದೆ
ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್
ಏರಿದ್ದ ಬಸ್ ನಲ್ಲಿ ಮಾತ್ರ ಲೆಕ್ಕ ತಪ್ಪಿದೆ…






0 Comments