ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಧ್ಯಮಗಳಿಗೂ ಬೇಕು ಸೆನ್ಸಾರ್..

ಜಯಶ್ರೀ ಕಾಸರವಳ್ಳಿ

ಒಂದು ನಿಮಿಷದಲ್ಲಿ ಸರಾಸರಿ ಹತ್ತು ಮಹಿಳೆಯರು ಈಗಲೂ ರೇಪ್ ಗೆ ಒಳಗಾಗುತ್ತಿರುವ ಈ ಅಸುಧಾರಿತ, ಅಭದ್ರ ಪ್ರಪಂಚದಲ್ಲಿ ಹೆಣ್ಣುಗಳೆನಿಸಿಕೊಂಡ ನಾವೆಲ್ಲ ಅನಿಶ್ಚಿತೆಯಲ್ಲಿ, ಎಂದೋ ಒಂದು ದಿನ ಕಾಣಬಹುದಾದ ನಿರಾತಂಕ ಬದುಕಿನ ಹಂಬಲ ಕೇವಲ ಹಂಬಲವಾಗಿಯೇ ಉಳಿದುಹೋಗುವ ದುರಂತದಲ್ಲಿ ಆಯುಷ್ಯವನೆಲ್ಲಾ ಕಳೆಯುವ ಬದುಕಿನಲ್ಲಿ ಒಬ್ಬ ಸಾಮಾನ್ಯ ಮಹಿಳೆಗೆ ನಿಷ್ಕಲ್ಮಶ ಬದುಕೆಂಬುದು ಕೇವಲ ಕನಸಾಗುತ್ತಿರುವಾಗ, ಸಾಮಾಜಿಕ ಜವಾಬ್ದಾರಿ ಹೊತ್ತಂತಹ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರದ ದೃಷ್ಟಿಯಷ್ಟೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತಾ ವ್ಯಕ್ತಿಗಳ ವೈಯಕ್ತಿಕ ಬದುಕು ಮೂರಾಬಟ್ಟೆಯಾಗುವುದನ್ನು ಕಂಡಾಗ ನಿಜಕ್ಕೂ ನಾವು ಬದುಕುತ್ತಿರುವ ಬದುಕಿನ ಪ್ರಪಂಚದ ಬಗ್ಗೆಯೇ ಖೇದವೆನ್ನಿಸುತ್ತದೆ. ಕಾನೂನಿನ ಪ್ರಕಾರ ಹದಿನೆಂಟು ವಯಸ್ಸು ದಾಟಿದ ಒಂದು ಹೆಣ್ಣು ಒಂದು ಗಂಡಿನೊಡನೆ ಸಂಪರ್ಕವಿಟ್ಟುಕೊಳ್ಳಲು ಅಡ್ಡಿ ಇಲ್ಲದಿರುವಾಗ, ಇವಕ್ಕೆಲ್ಲಾ ಯಾರಪ್ಪಣೆ ಬೇಕೆಂದು ಕೆಲವೊಂದು ಸುದ್ದಿ ಮಾಧ್ಯಮಗಳು ಇಂಥವನ್ನು ಸುದ್ದಿ ಮಾಡುತ್ತವೆಯೋ ಏನೋ ಅರ್ಥವಾಗುವುದಿಲ್ಲ. ಕರ್ನಾಟಕದಾದ್ಯಂತ ನೊಂದ ಬೆಂದ ಹಲವು ಹೆಣ್ಣುಗಳ ನೂರಾರು ಆರ್ತಧ್ವನಿಗಳು ಧ್ವನಿಯಾಗದೇ ಮುರುಟಿಹೋಗುತ್ತಿರುವಾಗ, ಸುದ್ದಿ ಮಾಧ್ಯಮಗಳು ಇಂಥವರ ಆಸರೆಗೆ ನಿಂತು, ಅಂತಹದನ್ನು ಹೆಕ್ಕಿ ಭಿತ್ತರಿಸಿದರೆ, ಅನ್ಯಾಯವಾದವರಿಗೆ ನ್ಯಾಯದ ಬಾಗಿಲು ತೆರೆದು ತೋರಿದರೆ, ಮಾಧ್ಯಮಗಳ ಮೇಲೆ ಗೌರವವೂ ಮೂಡುತ್ತೆ. ಮನೆಯ ಸರ್ವರೂ ಕುಳಿತು ವೀಕ್ಷಿಸುವ ಟಿ. ವಿ.ಯಂತಹ ಪ್ರಬಲ ಪ್ರಚಾರ ಮಾಧ್ಯಮಗಳು ಘನತೆಯುಳ್ಳ ಗೌರವಿಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ನೋಡುವ ಮನಸ್ಸಾಗುತ್ತೆ; ನೋಡುವವರ ಮನ ಮುಟ್ಟುತ್ತೆ. ಕೇವಲ ಹಸಿಬಿಸಿ ಸುದ್ದಿಗಳನ್ನು ಬಿತ್ತರಿಸುವ ನಮ್ಮ ಮಾಧ್ಯಮದವರಿಗೆ ಸಿಗುವ ಲಾಭವಾದರೂ ಏನು? ಕೇವಲ ಟಿ ಅರ್ ಪಿ ಒಂದೇ ಬಂಡವಾಳವೇ? ಕೊಚ್ಚೆಯಲ್ಲುರುಳಿ ರಾಡಿ ಮೆತ್ತಿಕೊಂಡಾಗಲೇ ಆತ್ಮಸಮಾಧಾನವೆಂಬಂತೆ ಬೇಕಿತ್ತೋ, ಬೇಡಿತ್ತೋ, ಪ್ರಸ್ತುತವೋ, ಅಪ್ರಸ್ತುತವೋ ಒಂದೂ ತಿಳಿಯದ ಹಾಗೆ ಬಿತ್ತರಗೊಳ್ಳುವ ಕೆಲವೊಂದು ಕಾರ್ಯಕ್ರಮಗಳಂತೂ… ಟಿ.ವಿ.ಯಂತಹ ಪ್ರಚಲಿತ ಮಾಧ್ಯಮಗಳಿಗೆ ಬರ್ನಿಂಗ್ ಇಶ್ಯೂಸ್, ಸೆನ್ಸೇಶನಲ್ ಇಶ್ಯೂಸ್, ಬ್ರೇಕಿಂಗ್ ನ್ಯೂಸ್ ಗಳಿದ್ದರೆ, ಕೊಲೆ-ಸುಲಿಗೆ-ದರೋಡೆಗಳಂತಹ ಕ್ರೈಂ ಸ್ಟೋರಿಗಳಂತಹ ರೋಚಕ ಸುದ್ದಿಗಳಿದ್ದರೆ, ಯಾವ ಸಿನಿಮಾ ನಟ ಹೆಂಡ್ತಿ ಕೈ ಮುರಿದ, ಯಾರಿಗೆ ಆಸಿಡ್ ಎರೆಚಲು ಹೋದ, ಯಾರ ಹಿಂದೆ ಯಾರು ಮುಗ್ಗರಿಸಿದ _ ಇಂತಹ ಚುರಿಮುರಿಗಳಿದ್ದರೆ ನಮ್ಮಂತಹ ಬಡಪಾಯಿಗಳು ಊಟ-ನಿದ್ರೆ ಬಿಟ್ಟು, ಬಿಟ್ಟ ಬಾಯಿ ಬಿಟ್ಟುಕೊಂಡು ಟಿ.ವಿ. ನೋಡುತ್ತೇವೆಂದು ಇವರಿಗೆ ಯಾವ ಸರ್ವೆಯವನು ಹೇಳಿದನೋ ಆ ಭಗವಂತನಿಗೆ ಗೊತ್ತು. ಮೊನ್ನೆಯ ಶಿವಮೊಗ್ಗದ ಪ್ರಕರಣ ತೆಗೆದುಕೊಳ್ಳಿ. ಒಂದು ಸಾಧಾರಣ ಹುಡುಗ-ಹುಡುಗಿಯ ಸಹಜ ಪ್ರಣಯವನ್ನು ಅಸಹಜವೆಂಬಂತೆ, ಅಶ್ಲೀಲವೆಂಬಂತೆ (ಅಶ್ಲೀಲ ಎಂದು ಸಾಬೀತುಪಡಿಸಲು ತೋರಿದ್ದನ್ನೇ ಮತ್ತೆ ಮತ್ತೆ ತೋರಿಸಿ) ಕರ್ನಾಟಕದ ಪ್ರತಿಯೊಬ್ಬರಿಗೂ ರೋಚಕ ಸುದ್ದಿಯೆಂಬಂತೆ ಬಿತ್ತರಿಸಿದ ಕಾರ್ಯಕ್ರಮದ ಘನ ಘೋರ ಉದ್ದೇಶವಾದರೂ ಏನಿತ್ತು? ಕಡೆಯಲ್ಲಿ ಆ ಹುಡುಗಿ, ಆ ಹುಡುಗ ಈಗ ಮದುವೆಯಾಗಿದ್ದಾರೆಂದು ಸುದ್ದಿ ಬಂದಿದೆ ಎಂದು ತಣ್ಣಗೆ ಹೇಳುವುದಕ್ಕೆ ಕೇವಲ ಕ್ಷಣ ನಿಮಿಷದ ಮೊದಲು ಅರೆಬರೆ ಹಸಿ ಸುದ್ದಿಗಳನ್ನು ಹೆಕ್ಕಿ, ಚಪ್ಪರಿಸುತ್ತಾ ಸಾರಿ, ಸರ್ವರೂ ನೋಡುವಂತೆ ವಿಡೀಯೋ ಕ್ಲಿಪಿಂಗ್ಗಳನ್ನು ಝೂಮ್ ಮಾಡಿ, ಭಾರಿ ಅನಾಹುತಗಳನ್ನು ಕಟ್ಟೆಚ್ಚರದಿಂದ ಬೊಗಳಿ, ಹುಡುಗ-ಹುಡುಗಿಯ ಬದುಕನ್ನು ರಾಡಿ ಎಬ್ಬಿಸಿ, ಜಾಲಾಡಿ, ಮೂರಾಬಟ್ಟೆ ಮಾಡಿ ಹುಡುಗಿ ಓಡಿ, ಅತ್ಮಹತ್ಯೆಯವರೆಗೂ ಜರುಗಿ, ಮನೆಯವರು ಮುಖ ಮುಚ್ಚಿಕೊಂಡು……… ಕಡೆಗೆ ತಮ್ಮಿಂದಲೇ ಘಟಿಸಿದಂತೆ ಆ ಹುಡುಗಿ, ಆ ಹುಡುಗ ಮದುವೆಯಾದರೆಂದು ಘೋಷಿಸುವ ಮುಂಚೆ ಮಾಧ್ಯಮಗಳು ತಾಳ್ಮೆಯಿಂದಯಿದ್ದಿದ್ದರೇ…..? ಅವಮಾನ, ಅಪಮಾನ, ಅವಮರ್ಯಾದೆ, ಅನಾದಾರ, ಅಸಹ್ಯ, ಅಹಿತಕರ ಘಟನೆಗಳ ನೋವಿನ ಸರಮಾಲೆಗಳ ಸಾಂಗತ್ಯದೊಡನೆ ತಮ್ಮ ಹೊಸ ಬದುಕನ್ನ ಆ ಹುಡುಗ ಆ ಹುಡುಗಿ ಕಟ್ಟಿಕೊಳ್ಳಬೇಕಾದ ಅಗತ್ಯವಿರಲಿಲ್ಲ ಅಲ್ಲವೇ? ಇದಕ್ಕೆ ಹೊಣೆ ಯಾರು? ತನ್ನ ಸೆಲ್ ಫೋನ್ ಕಳೆದುಕೊಂಡ ಹುಡುಗಿಯೇ? ಕದ್ದವನು ಕಳುಹಿಸಿದ ಎಮ್ ಎಮ್ ಸ್ಸೇ ?, ಘಟನೆಯನ್ನು ಹಿಗ್ಗಾಮುಗ್ಗಾ ಎಳೆದು ಕರ್ನಾಟಕದ ಕೋಟಿ ಕೋಟಿ ಜನತೆಗೆ ಸಾರಾಸಗಟಾಗಿ ಸಾರಿದ ಮಾಧ್ಯಮವೇ….?]]>

‍ಲೇಖಕರು G

16 April, 2012

1 Comment

  1. sunil

    ಪ್ರತಿ ಬಾರಿ ಅಸಹ್ಯ ಆಗೋದು ಇದಕ್ಕೆ…ಹಿಂದೊಮ್ಮೆ ನನ್ನ ಫೇಸ್ ಬುಕ್ ಗೋಡೆಯಮೇಲೆ ಬರೆದಿದ್ದೆ…
    ಯಾವಾಗಲು ಕೂತು NDTV , TIMES NOW ನಂತಹ ಸುದ್ಧಿವಾಹಿನಿಗಳನ್ನು ನೋಡಿದಾಗ ಎಷ್ಟು ಪ್ರಬುದ್ಧ ಅನ್ಸತ್ತೆ…ಎಂತೆಂತಹ ವಿಚಾರ ತಗೊಂಡು ಚರ್ಚೆ ಮಾಡ್ತಾರೆ ಹಾಗೆಯೇ…ಈ ಚರ್ಚೆ ಮಾಡೋ ಜನ ಇರ್ತಾರಲ್ಲ…ಅವರಿಗೆ ವಿಷಯದ ಮೇಲೆ ಅಪಾರ ಜ್ಞಾನ ಇರತ್ತೆ…ಮಾತಾಡುವ ಹಾಗು ಶಭ್ದ ಬಳಕೆಗಳ ಕನಿಷ್ಠ ಸೌಜನ್ಯ ಇರತ್ತೆ…
    ಆದರೆ ನಮ್ಮ ಸುದ್ಧಿ ಮಾಧ್ಯಮದವರ ಅಸಹ್ಯ ಎಷ್ಟು ಅಂತ ಹೇಳಲಿ?? ಅವರ ಭಾಷೆ…ಅದು ಪಕ್ಕ repeated ..ವರದಿಗಾರರು ಅಷ್ಟು ಪಕ್ಕಾ ನ್ಯೂಸ್ ಕೊಡೋಲ್ಲ…ಹೇಳಿದ್ದನ್ನೇ ಹೇಳಿ ಹೇಳಿ ಸಾಯಿಸಿಬಿಡುತ್ತಾರೆ…ಅಂತಹ repeatednessಗಳನ್ನೂ ತಡೆಯಲು ಸಾಧ್ಯ ಇಲ್ಲ…outdated ಅನ್ಸತ್ತೆ…..ನೋಡ್ತೈರೋ ಜನ…ಯಾಕೆ ತಾನೇ ಇತಹ ಹೇಸಿಗೆ ಗಳು ನೋಡಲು ಇಚ್ಚಿಸುತ್ತಾರೆ ಹೇಳಿ…ತುಂಬಾ ಒಳ್ಳೆಯ ಲೇಖನ ಜಯಶ್ರೀ ಮೇಡಂ…ಸೂಕ್ಷ್ಮಗಳ ಪದರಗಳು ನಿಮ್ಮ ಲೇಖನ ಅನಾವರಣ ಮಾಡುತ್ತದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading