ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಅವರ ಕೃತಿ ‘ಬರೆಯದ ಕಥೆಗಳು ’.
‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿ ಓದಿ ಸಚಿನ್ ಎಲ್ ಎಸ್ ಬರೆದ ಅನಿಸಿಕೆ ಇಲ್ಲಿದೆ.
– ಸಚಿನ್ ಎಲ್ ಎಸ್
ಅನುಭವದ ಕತೆಗಳ ವೈಶಿಷ್ಟ್ಯವೆಂದರೆ ಅದರಲ್ಲಿ ನೈಜತೆ, ಸಹಜ ಹಾಸ್ಯ, ಹುದುಗಿದ ಪಾಠ ಎಲ್ಲವೂ ಇರುತ್ತವೆ. ವರ್ಷಾನುಗಟ್ಟಲೆ ದಿನ ಬೆಳಗಾದರೆ ಜನರ ಒಡನಾಟ, ಸಮಾಜದ ಮಧ್ಯೆಯೆ ಇರುವ ಪತ್ರಕರ್ತರಿಗೆ ಒದಗುವ ಅನುಭವದ ಬುತ್ತಿ ಬರೆದು ಮುಗಿಯದು. ಅಂತಹ ಮುಗಿಯದ ಕತೆಗಳ ಜೋಳಿಗೆಯಿಂದ ಹೆಕ್ಕಿದ ಕೆಲವು ಕತೆಗಳನ್ನು ಬರೆದು ರವೀಂದ್ರ ಭಟ್ ಅವರು ಬರೆಯದ ಕತೆಗಳು ಕೃತಿಯನ್ನು ತಂದಿದ್ದಾರೆ.

ಇಲ್ಲಿ ಹಳ್ಳಿಗರ ಹರಟೆಯಿಂದ ತಿಳಿದ ವಿಷಯಗಳಿವೆ, ಶಾಸಕರು ಅಧ್ಯಯನಕ್ಕಾಗಿ ಹೊರ ದೇಶಕ್ಕೆ ಪ್ರವಾಸ ಹೋದಾಗ ನಡೆದ ಘಟನೆಗಳಿವೆ, ಗ್ರಾಮ್ಯ ಪ್ರದೇಶದ ಪದ್ಧತಿ ಬದ್ಧತೆಗಳಿವೆ, ತಿಳಿದಿರದ ವಿಷಯಗಳಿವೆ, ಮನುಷ್ಯನ ಮನಸ್ಥಿಯ ಅನಾವರಣವಿದೆ, ಅಲ್ಲಲ್ಲಿ ಬದುಕಿನ ಹೆಜ್ಜೆಯಿಡಲು ಪಾಠಗಳಿವೆ, ಚುಟುಕು ಹಾಸ್ಯಗಳಿವೆ. ಮೈಸೂರಿಂದ ಚೈನ್ನೈ, ಸಿಂಗಾಪುರದವರೆಗಿನ ಅನುಭವಗಳಿವೆ.
ಇನ್ಸ್ಟಾಗ್ರಾಮ್ ಯುಗದ ಓದುಕರ ಮನ ಅರಿತ ಪುಸ್ತಕವಿದು. ಇಲ್ಲಿನ ಕತೆಗಳು ಎರಡೆರಡು ಪುಟಗಳನ್ನು ಮೀರುವುದಿಲ್ಲ. ಅತ್ಯಂತ ಏಕಾಗ್ರವಾಗಿ ಓದಬೇಕೆನ್ನುವ ಚೌಕಟ್ಟಿಲ್ಲ. ಓದಿಸಿಕೊಳ್ಳುವ ಪುಸ್ತಕವಿದು. ಕೆಲವು ಕತೆಗಳು ಮುಗಿದಾಗ ನಮ್ಮಲ್ಲಿ ಯೋಚನೆಯ ಪ್ರಕ್ರಿಯೆಯನ್ನು ಪ್ರಾರಂಭ ಮಾಡುತ್ತವೆ.
ಲೇಖಕರ ಅಗಾಧ ಪ್ರಯಾಣದ ಅನುಭವದರಿವು ಓದುಗರಿಗೆ ದೊರೆತಿದೆ. ಪತ್ರಿಕೆ ಸಮಾಜದ ಮೇಲೆ ಬೀರುವ ಪರಿಣಾಮ, ಪತ್ರಕರ್ತರ ಮೇಲಿರುವ ಜವಾಬ್ದಾರಿ ಅಲ್ಲಲ್ಲಿ ಕಾಣಸಿಗುತ್ತದೆ. ಪತ್ರಿಕೆಯಲ್ಲಿ ಬರೆಯದ ಕತೆಗಳನ್ನು ಇಲ್ಲಿ ಬರೆದಿರುವ ಲೇಖಕರ ಬಳಿ ಇಲ್ಲೂ ಬರೆಯಲಾಗದ ಕತೆಗಳು ಇನ್ನೆಷ್ಟೊ ಇರಬಹುದು. ಇಲ್ಲಿನ ಬಹುತೇಕ ಕತೆಗಳು ನಡೆದಿರುವುದು ದಶಕಗಳ ಹಿಂದೆ, ಅದರರ್ಥ ಇವು ಬರೆಯದ ಕತೆಗಳು ಮಾತ್ರವಲ್ಲ, ಮರೆಯದ ಕತೆಗಳೂ ಹೌದು. ನಿಮ್ಮ ಅನುಭವವನ್ನು ನಮ್ಮೆಲ್ಲರಿಗೆ ತೆರೆದಿದ್ದಕ್ಕೆ ಧನ್ಯವಾದ.
ಕೃತಿ: ‘ಬರೆಯದ ಕಥೆಗಳು’
ಲೇಖಕರು: ರವೀಂದ್ರ ಭಟ್ಟ
ಪ್ರಕಾಶಕರು: ಬಹುರೂಪಿ
ಸಂಪರ್ಕ: 70191 82729
ಆನ್ ಲೈನ್ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ – BAHUROOPI.IN






0 Comments