ಜಿ ಪಿ ಬಸವರಾಜು
ದೇವ ಭಾಗ
ಕೊಡಬೇಕು ದೇವತೆಯೆ-
ಮೃತ್ಯು ದೇವತೆಯೇ
ನಿನ್ನ ಪಾಲನ್ನು ನಿನಗೆ
ಅದು ಸಹಜ, ನ್ಯಾಯ
ಆದರೆ
ಹೀಗಲ್ಲ:
ಏಕಾಏಕಿ ಮಾರಿ-
ಬಲೆ ಬೀಸಿ
ಸಾರಾಸಗಟು ಜೀವಗಳ
ಎಳೆದೊಯ್ಯುವುದಲ್ಲ
ಹುಡುಗು ಹರಯ ಮುದಿತನಗಳ
ಗೆರೆಯನ್ನು ಅಳಿಸಿ
ಉಳಿಸದೆ ಏನನ್ನೂ
ಸೆಳೆಯುವುದೆಷ್ಟು
ಸಹಜ, ನ್ಯಾಯ?
ನೀನು ಹೊರತಲ್ಲ
ಲೋಕ ನಿಯತಿಗೆ
ಋತ ಗತಿಗೆ;
ನಿಫಾ, ಕೊರೊನಾ, ಎಬೋಲ
ಹೆಸರೇನಾದರೇನು?
ಪರಿಣಾಮ, ಪದ
ನೀನೇ;
ನಿಂತು, ಧ್ಯಾನಿಸಿ
ನೋಡು: ನ್ಯಾಯದ
ತಕ್ಕಡಿ ತೂಗುವುದನ್ನು
ಕರುಳೆಂಬುದು
ನಿನಗೂ ಇದ್ದರೆ
ನಡೆದುಕೊ ತಕ್ಕಂತೆ
ಮರಣದ ಬಾಗಿಲಲ್ಲಿ
ತಲೆಬಾಗಿದ ಬಲಿ ನಾವು
ಕಾದು ನಿಂತಿದ್ದೇವೆ
ಕರುಣೆಯ ಕಣ್ಣಿಗಾಗಿ
ಕೇಳುತ್ತೇವೆ ಕೊನೆಯ
ಬಾರಿ: ನೋಡು ಇನ್ನೊಮ್ಮೆ
ನಿನ್ನ ಪಾಲು ಸರಿಯಿದೆಯೇ?
ಕರುಣೆಯ ಕಣ್ಣಿಗಾಗಿ
ಕೇಳುತ್ತೇವೆ ಕೊನೆಯ
ಬಾರಿ: ನೋಡು ಇನ್ನೊಮ್ಮೆ
ನಿನ್ನ ಪಾಲು ಸರಿಯಿದೆಯೇ?
…… ಏನೂ ಹೇಳಲು ಆಗುತ್ತಿಲ್ಲ. ಈ ಸಾಲುಗಳು ಹೇಳುವ ಹಾಗೆ.
ಚೆನ್ನಾಗಿದೆ