ಎಸ್ ಸಿ ದಿನೇಶ್ ಕುಮಾರ್
ಗೆಳೆಯ ಬಿ.ಆರ್.ಭಾಸ್ಕರ್ ಪ್ರಸಾದ್ ಅವರ `ಗೋವಿಸಂ’ ಒಂದು ಹೊಸಬಗೆಯ ಪ್ರಯೋಗ. ಚೆಲ್ಲಾಪಿಲ್ಲಿಯಾಗಿ ಕಳೆದೇ ಹೋಗಬಹುದಾದ ಬಿಡಿಬಿಡಿ ಬರೆಹಗಳನ್ನು ಭಾಸ್ಕರ್ ವಿಶಿಷ್ಠವಾಗಿ ಇಲ್ಲಿ ಸಂಯೋಜಿಸಿದ್ದಾರೆ. ಎಲ್ಲದರ ಆತ್ಮವೂ ಮನುಷ್ಯತ್ವವನ್ನೇ ಉಸಿರಾಡುತ್ತದೆ.
ಭಾಸ್ಕರ್ ಧ್ವನಿ ಒರಟು, ಒಳಗಿನ ಮನಸು ಮಾತ್ರ ಮೃದು. ಪರಮಪಾಪಿಯನ್ನೂ ಎದುರು ನಿಲ್ಲಿಸಿಕೊಂಡು ಆತನ ಮನಪರಿವರ್ತನೆಗೆ ಇಳಿಯುವ ಮುಗ್ಧತೆ ಮತ್ತು ಜೀವನಪ್ರೀತಿ ಅವರಿಗೆ ಸಹಜವಾಗಿಯೇ ಒದಗಿಬಂದಿದೆ. ಚಳವಳಿಗಾರರಾಗಿರುವುದರಿಂದ ಅವರ ಮಾತುಗಳೆಲ್ಲ ಘೋಷಣೆಗಳ ಹಾಗೆ ಕೇಳಿಸಿದರೆ ಆಶ್ಚರ್ಯಪಡುವಂತಿಲ್ಲ.
ಗದ್ಯ, ಪದ್ಯ, ಚುಟುಕು, ಘೋಷವಾಕ್ಯ ಇತ್ಯಾದಿ ಯಾವ ಚೌಕಟ್ಟಿಗೂ ಒಳಪಡದೆ, ಒಮ್ಮೊಮ್ಮೆ ಒಳಪಟ್ಟರೂ ಬಿಡುಗಡೆಗೆ ಹಪಹಪಿಸುವ ಇಲ್ಲಿನ ಬರೆಹಗಳು ಸಹಮಾನವರೆಡೆಗಿನ ಪ್ರೀತಿ ಮತ್ತು ಕರುಣೆಯಿಂದಲೇ ಆಪ್ತವಾಗಿ ಓದಿಸಿಕೊಳ್ಳುತ್ತವೆ. ವಾದಕ್ಕೆ ನಿಂತರೆ ಜಗಜಟ್ಟಿಯಂತೆ ತೊಡೆತಟ್ಟಿ ನಿಲ್ಲುವ ಭಾಸ್ಕರ್, ಧಮ್ಮಿದ್ದರೆ ನನ್ನನ್ನು ಸೋಲಿಸಿ ನೋಡು ಎಂದು ಸವಾಲು ಒಡ್ಡುತ್ತಲೇ ವಿವೇಕದ ಪಾಠವನ್ನು ಹೇಳುತ್ತಾರೆ.
ಎಷ್ಟೇ ಜಗಳಕ್ಕೆ ನಿಂತರೂ ಇವರು ಜಗಳಗಂಟರಲ್ಲ, ಜಗತ್ತಿನ ಹಳವಂಡಗಳಿಗಳಿಗೆಲ್ಲ ಉತ್ತರ ಹುಡುಕುವ, ತನಗೆ ತಾನೇ ಉತ್ತರದಾಯಿಯಾಗಿರುವ ಅಪ್ಪಟ ಮನುಷ್ಯ. ಈ ಎಲ್ಲ ಬರೆಹಗಳು ಯಾವುದೋ ಹೊಸಕ್ರಾಂತಿಯ ಬಾಗಿಲು ತಟ್ಟುತ್ತವೆ. ಇಲ್ಲಿ ನೈರಾಶ್ಯಕ್ಕೆ ತಾವಿಲ್ಲ. ಹೇಡಿತನಕ್ಕೆ ಪ್ರತಿ ಸಾಲಲ್ಲೂ ಧಿಕ್ಕಾರವಿದೆ.
ಗೋವಿಸಂ ಸದ್ಯದ ಧರ್ಮ-ಜಾತಿಗಳ ವೈಷಮ್ಯದ ಜಗತ್ತಲ್ಲಿ ಮನುಷ್ಯತ್ವದ ಸವಾಲುಗಳನ್ನು ಎದುರಿಸಲು ಹೊರಟ ಒಳ್ಳೆಯ ಕೃತಿ. ಇದು ಸಾವಿರ ಸಾವಿರ ಸಂಖ್ಯೆಯ ಓದುಗರನ್ನು ತಲುಪಲಿ ಎಂಬುದು ನನ್ನ ಹಾರೈಕೆ. ಅಂದಹಾಗೆ ಈ ಕೃತಿಯನ್ನು ಸೊಗಸಾಗಿ ವಿನ್ಯಾಸಗೊಳಿಸಿ ಅದರ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದ ಗೆಳೆಯ VR Carpenter ಅವರಿಗೂ ಅಭಿನಂದನೆಗಳು
0 ಪ್ರತಿಕ್ರಿಯೆಗಳು