
ಲೀಲಾ ಸಂಪಿಗೆ
ಯಾಕೋ ಮನಸ್ಸಿನ ಚಡಪಡಿಕೆ ಕಡಿಮೆ ಆಗ್ತಾನೇ ಇಲ್ಲ.
ಮತ್ತೆ ಮತ್ತ ಕಾಡ್ತಾ ಇದ್ದಾಳೆ ಮಣಿಪುರದ ಮಹಾ ವನಿತೆ ..
ಆ ದಿನ ಇಂಫಾಲದ ಇಮಾ ಮಾರ್ಕೆಟ್ಟಿಗೆ ಕಾಲಿಟ್ಟ ಕ್ಷಣ ರೋಮಾಂಚನವಾಗಿತ್ತು. ಇಡೀ ದೇಶ ಸುತ್ತಾಡಿದ್ರೂ ಇಂಥಾ ಒಂದು ಪೂರ್ಣ ಪ್ರಮಾಣದಲ್ಲಿ ಅಷ್ಟು ದೊಡ್ಡ ಮಾರ್ಕೆಟ್ ಉಸ್ತುವಾರಿ ವಹಿಸಿದ್ದ, ಅಪೌಷ್ಟಿಕತೆಯ ಸುಳಿವೇ ಇಲ್ಲದ ಎತ್ತರೆತ್ತರದ, ಮತ್ತೆಮತ್ತೆ ನೋಡಬೇಕೆನಿಸುವ ಸ್ವಾಭಿಮಾನದ ಕಳೆಯಿದ್ದ ‘ಸಾವಿರಾರು’ ಮಹಿಳೆಯರ ಕೆಚ್ಚೆದೆಯ ಬದುಕನ್ನು ಕಂಡು ಅಬ್ಬಾ ಸಬಲೀಕರಣದ ಮಾದರಿ ಕೊನೆಗೂ ನನ್ನ ನೆಲದಲ್ಲೇ ಸಿಕ್ಕಿತಲ್ಲಾ ಅಂತ ಹೆಮ್ಮೆಯ ಭಾವದಿಂದ ಬಂದಿದ್ದೆ.
ಅವರ ಹೋರಾಟದ ಹಿನ್ನೆಲೆ, ಈ ವ್ಯವಸ್ಥೆಗೆ ಸೆಡ್ಡು ಹೊಡೆದು ತಾವು ಬೆತ್ತಲಾಗುವ ಮೂಲಕ ಇಡೀ ವ್ಯವಸ್ಥೆಯನ್ನೇ ಬೆತ್ತಲುಗೊಳಿಸಿದ್ದ ವೀರವನಿತೆಯರ ನಾಡಲ್ಲಿ ಇದೇನಾಯ್ತು.
ಮೈಯ್ಯೆಲ್ಲಾ ನಂಜಾಗಿಸಿ ಕೊಂಡು ದೇಶದ ತುಂಬೆಲ್ಲಾ ಅದನ್ನು ತುರುಕಿಸಲು ಬೆದೆಗೆ ಬಂದ ಹೋರಿಗಳಂತೆ ದಿಕ್ಕು ದೆಸೆಯಿಲ್ಲದೆ ಹಾರಾಡುತ್ತಿರುವವರ.. ಮಾಲಿನ್ಯ ಇಷ್ಟೊಂದು ಚಾಚಿಕೊಂಡಿತಾ? ಅವರ ಎಲ್ಲಾ ಕುಯುಕ್ತಿಗಳಿಗೆ ಸ್ವಾಭಿಮಾನದ ಬದುಕುಗಳು ಬಲಿಯಾಗಿ ಬಿಟ್ಟವಾ???
ತನ್ನ ಹರಯವನ್ನೇ ಧಾರೆಯೆರೆದು ತನ್ನ ನೆಲದ ಸ್ವಾಭಿಮಾನವನ್ನು ಚಿರವಾಗಿಸಲು ಪಣತೊಟ್ಟ ಶರ್ಮಿಳಾಳನ್ನು ಯಕಃಷ್ಚಿತ್ತಾಗಿಸಿದ ದುಷ್ಟ ಶಕ್ತಿ ಮನುಕುಲಕ್ಕೆ ಹೇಗೆ ಆಸರೆಯಾದೀತು…..ಮಣಿಪುರದ ವೀರ ವನಿತೆಯರು ಏನಾದರು? ಕೇಸರಿಗೆ ಕೊರಕಲು ಸ್ಥಳವೂ ಇಲ್ಲದಿದ್ದಾಗ ರಾಜಕಾಲುವೆ ಹರಿದಿದ್ದಾದರೂ ಹೇಗೆ? ಹಾಗಿದ್ದಲ್ಲಿ ಭಾರತದ ವೈವಿಧ್ಯತೆಯ ಏಕತೆಯ ವೃಕ್ಷಕ್ಕೆ ಕೊಡಲಿಯೆರಗುವ ಮುನ್ನ ಸೆಟೆದೆದ್ದು ನಿಲ್ಲುವುದು ಎಲ್ಲ ರೀತಿಯ ಅಪೌಷ್ಟಿಕತೆಯಿಂದ ಬಳಲುತ್ತಿರುವ ಯಾರ ಕಡೆ ನೋಡುವುದು.
ಭಾವುಕಳಾಗಿ ಇದನ್ನು ನೋಡಬಾರದೂಂತ ನನ್ನ ನ್ನು ನಾನೇ ಸಂತೈಸಿಕೊಳ್ಳಲು ಪ್ರಯತ್ನಿಸಿದೆ…ಸಾಧ್ಯವಾಗಲಿಲ್ಲ, ನಿಮ್ಮೊಂದಿಗೆ ಹಂಚಿಕೊಳ್ಳೋಣಾಂತ ಕೇಳ್ತಾ ಇದ್ದೀನಿ.. ಇದೊಂದು sample ಅಷ್ಟೇ ಮುಂದೆ ಇನ್ನೆಂತಾ ಅರಾಜಕತೆಗೆ ಮೈಯ್ಯೊಡ್ಡಬೇಕಾಗುತ್ತದೋ..
ಅಚಾನಕ್ಕಾಗಿ ಮಳೆ ಬಿದ್ದು ತಂಪಾದರೂ ಮನದೊಳಗೆ ಬೆಂಕಿ ಬಿದ್ದ ಧಾವಂತವಾಗುತ್ತಿದೆ.
We shall over come..





Nanaguu tumba novaagide…sharmila phinix nante eddu barali endu haraisona….