ಜೋಗಿ
ನಮ್ಮೊಳಗಿರುವ ಮಲೆ ಮತ್ತು ಮದುಮಗಳೇ ಆ ನಾಟಕದ ಯಶಸ್ಸು..
ಮಲೆಗಳಲ್ಲಿ ಮದುಮಗಳು ಯಾಕೆ ಮತ್ತೆ ಮತ್ತೆ ನಡೆಯುತ್ತಿದೆ ಅಂತ ಕೆಲವರು ತಕರಾರು ಎತ್ತುತ್ತಿರುವುದನ್ನು ನೋಡಿದೆ. ಅದು ಒಳ್ಳೆಯ ನಾಟಕ ಅಲ್ಲ ಅಂತ ಅನೇಕರು ಹೇಳುತ್ತಿದ್ದಾರೆ.
ಆದರೆ, ಮಲೆಗಳಲ್ಲಿ ಮದುಮಗಳು ಆಹೋರಾತ್ರಿ ನಾಟಕ ನಮ್ಮಲ್ಲಿ ಹುಟ್ಟಿಸಿರುವ ವಿಚಿತ್ರ ಪುಳಕವನ್ನು ಮರೆಯಲು ಸಾಧ್ಯವಿಲ್ಲ. ಯಾವತ್ತೂ ನಾಟಕ ನೋಡದವರನ್ನು ಅದು ನಾಟಕ ನೋಡುವಂತೆ ಮಾಡಿತು. ಇಡೀ ರಾತ್ರಿ ನಾಟಕ ನಡೆಯುವುದು ಮತ್ತು ಪ್ರೇಕ್ಷಕ ಅದರಲ್ಲಿ ತಲ್ಲೀನನಾಗುವುದೇ ಒಂದು ಸೊಗಸು.
ಒಂದಷ್ಟು ಮಂದಿ ಗೆಳೆಯರೆಲ್ಲ ಸೇರಿಕೊಂಡು ರಾತ್ರಿಯಿಡೀ ನಾಟಕ ನೋಡುವುದು ಈ ಕಾಲದ ಪವಾಡಗಳಲ್ಲಿ ಒಂದು. ಇಂಥ ನಾಟಕಗಳು ಒಂದೆರಡು ತಿಂಗಳಲ್ಲ, ಇಡೀ ವರ್ಷ ನಡೆಯುತ್ತಿರಬೇಕು. ಬೇರೆ ಬೇರೆ ಸಾಹಿತ್ಯ ಕೃತಿಗಳು ಹೀಗೆ ನಾಟಕಗಳಾಗಿ ಆಹೋರಾತ್ರಿ ಪ್ರದರ್ಶನ ಕಾಣುತ್ತಿರಬೇಕು.
ನಾಟಕ ಶ್ರೇಷ್ಠವಾಗಿರಬೇಕು ಅನ್ನುವ ಭ್ರಮೆ ಬೇಡ. ಮೊದಲು ಅದು ಎಲ್ಲರನ್ನೂ ಒಳಗೊಳ್ಳಲಿ. ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳು ಮಹಾನ್ ಶ್ರೇಷ್ಠವೇನೂ ಆಗಿರಲಿಲ್ಲ. ಆದರೆ ಅವು ನಮ್ಮಲ್ಲಿ ಹುಟ್ಟಿಸಿದ ಅರಿವು, ಬೆರಗನ್ನು ಮಾತ್ರ ಮರೆಯಲಿಕ್ಕೆ ಸಾಧ್ಯವಿಲ್ಲ.
ಮಲೆಗಳಲ್ಲಿ ಮದುಮಗಳು ನಾಟಕಕ್ಕೆ ಶೀರಕ್ಷೆಯಾಗಿರುವುದು ಕುವೆಂಪು ಹೆಸರು ಅಂತ ಹೇಳುತ್ತಿದ್ದಾರಂತೆ. ಅಲ್ಲ, ನಮ್ಮೊಳಗಿರುವ ಮಲೆ ಮತ್ತು ಮದುಮಗಳೇ ಆ ನಾಟಕದ ಯಶಸ್ಸು.
Totally agree to this..
We should celebrate works and genius of KUVEMPU eternally in all possible forms for we see such personalities once in a millennium…