ಪ್ರಸನ್ನ ಸಂತೆಕಡೂರು
ಇಂದು ಅಂಚೆಯವನು ಆಕಸ್ಮಿಕವೆಂಬಂತೆ ಮನೆಯ ಬಾಗಿಲು ತಟ್ಟಿ ಅನೀರಿಕ್ಷಿತವಾಗಿ ಕೈಗಿಟ್ಟ ಪ್ಯಾಕೆಟ್ ತೆಗೆದು ನೋಡಿದಾಗ ಎರಡು ಅಮೂಲ್ಯ ಪುಸ್ತಕಗಳು !!
ಸಮಕಾಲೀನ ಕನ್ನಡ ಮತ್ತು ತಮಿಳು ಸಾಹಿತ್ಯಕ್ಕೆ ಸೇತುವೆಯಾಗಿ ನಿಂತು ಕನ್ನಡದ ಕಥೆ, ಕವನ ಮತ್ತು ಆತ್ಮಚರಿತ್ರೆಗಳನ್ನ ತಮಿಳಿಗೆ ಮತ್ತು ತಮಿಳು ಸಾಹಿತ್ಯವನ್ನ ಕನ್ನಡಕ್ಕೆ ಅನುವಾದಮಾಡಿ ಸಾಕಷ್ಟು ಹೆಸರು ಮಾಡಿರುವ ಕೆ. ನಲ್ಲತಂಬಿ ಸರ್ ಅವರು ಪ್ರೀತಿ ಯಿಂದ ಈ ಪುಸ್ತಕಗಳನ್ನ ಕಳುಹಿಸಿಕೊಟ್ಟಿರುವುದಕ್ಕೆ ಧನ್ಯವಾದಗಳು.
ಅವರು ಅನುವಾದ ಮಾಡಿರುವ “ಅರ್ಧನಾರೀಶ್ವರ ” ಮೂಲತಃ ತಮಿಳಿನ ಪೆರುಮಾಳ್ ಮುರುಗನ್ ರವರ “ಮಧುರೋಭಾಗನ್ ” ಕಾದಂಬರಿ. ಇದು ನಮ್ಮ ಕರ್ನಾಟಕದಲ್ಲಿದ್ದ “ಬೆತ್ತಲೆ ಸೇವೆ”, “ಗೆಜ್ಜೆ ಪೂಜೆ” ಮತ್ತು “ದೇವದಾಸಿ” ಯಂತಹ ಅನಿಷ್ಟ ಪದ್ದತಿಗಳ ಗುಂಪಿಗೆ ಸೇರಿದ ತಮಿಳು ನಾಡಿನ ಒಂದು ಅನಿಷ್ಟ ಪದ್ದತಿಯ ಬಗ್ಗೆ ಬರೆದ ಕಾದಂಬರಿ. ಇದು ತಮಿಳು ನಾಡಿನಲ್ಲಿ ಒಂದು ಹೊಸ ಅಲೆಯನ್ನೇ ಎಬ್ಬಿಸಿದ ಕಾದಂಬರಿ. ಇದರ ಬಗ್ಗೆ ದಿವಾಕರ್ ಸರ್ ಅವರು ಈಗಾಗಲೇ ಬರೆದಿದ್ದಾರೆ.
ಇನ್ನೂ “ಹತ್ತು ತಮಿಳು ಕತೆಗಳು” ಹೆಸರೇ ಹೇಳುವ ಹಾಗೆ ಹತ್ತು ತಮಿಳು ಕತೆಗಳನ್ನ ನಲ್ಲತಂಬಿ ಸರ್ ಅವರು ಕನ್ನಡಕ್ಕೆ ಅನುವಾದ ಮಾಡಿರುವುದು.
ಇದರಲ್ಲಿ ಭಾರತೀಯ ತಮಿಳು ಲೇಖಕರ ಕತೆಗಳಲ್ಲದೆ ಶ್ರೀಲಂಕಾ ಮೂಲದ ತಮಿಳು ಕತೆಗಳು ಇವೆ. ಅದರಲ್ಲಿ ಒಂದು ಅಪರೂಪದ ಕತೆ “ಗಂಧ ಗಾಮಿನಿ” ಇದರ ಲೇಖಕರು ಇಳಂಗೋ ಎಂಬ ಶ್ರೀಲಂಕಾದ ಮೂಲದ ತಮಿಳು ಲೇಖಕರು. ಶ್ರೀಲಂಕಾದ ಅಂತರ್ಯುದ್ಧದಿಂದ ನಲುಗಿ ಬೇರೆ ಬೇರೆ ದೇಶಗಳಲ್ಲಿ ಆಶ್ರಯ ಪಡೆದು ಕೊನೆಗೆ ಕೆನಡಾದಲ್ಲಿ ನೆಲೆಸಿ ತಮ್ಮ ಜೀವನದ ಅನುಭವವದ ಘಟನೆಯೊಂದನ್ನ ಕತೆ ಮಾಡಿ ಬರೆದಿದ್ದಾರೆ.
ಅವರು ಜಾಫ್ನಾದಲ್ಲಿದ್ದಾಗ ಭಾರತೀಯ ಸೈನಿಕರು ಶಾಂತಿ ಸ್ಥಾಪನೆಗೆ ಹೋಗಿದ್ದಾಗ ಅದರಲ್ಲಿ ಸಿಖ್ ಸೈನಿಕರನ್ನ ನೋಡಿ ಭಯಪಟ್ಟು ಕೊನೆಗೆ ಅವರನ್ನ ದ್ವೇಷಿಸುತ್ತಿರುತ್ತಾರೆ. ನಿರೂಪಕ ಕೆನಡಾದ ಟೊರೊಂಟೋದಲ್ಲಿ ದಿನವೂ ಮೆಟ್ರೊ ಟ್ರೈನ್ ಗಳಲ್ಲಿ ಪ್ರಯಾಣ ಮಾಡುವಾಗ ಆಕಸ್ಮಿಕವಾಗಿ ಸಿಗುವ ಪಂಜಾಬಿ ಹುಡುಗಿಯೊಬ್ಬಳು (೧೯೮೪ ರ ಇಂದಿರಾಗಾಂಧಿ ಹತ್ಯೆ ನಂತರ ನೆಡೆದ ನರಮೇಧದಲ್ಲಿ ಸಿಲುಕಿ ಕೆನಡದಲ್ಲಿ ಆಶ್ರಯ ಪಡೆದ ಕುಟುಂಬದವಳು) ಇವನ ಆಶ್ರಯವನ್ನ ಬೇಡುತ್ತಾಳೆ.
ನಿರೂಪಕ ತನ್ನ ಪ್ರೇಯಸಿಯ ನೆನಪಾಗಿ ಮತ್ತು ಸಿಖ್ ಸೈನಿಕರ ಮೇಲಿನ ಕೋಪದಿಂದಾಗಿ ಅವಳಿಗೆ ಆಶ್ರಯವನ್ನ ಕೊಡಲು ನಿರಾಕರಿಸುತ್ತಾನೆ. ಮರುದಿನ ಆ ಹುಡುಗಿ ಮತ್ತು ಅವಳ ಮುಸ್ಲಿಂ ಪ್ರೇಮಿಯನ್ನ ಯಾರೋ ಕೊಂದ ಸುದ್ದಿ ದಿನಪತ್ರಿಕೆಯಲ್ಲಿ ಬಂದಿರುತ್ತದೆ. ಇದು ಮರ್ಯಾದೆ ಹತ್ಯೆ ಕೂಡ ಆಗಿರಬಹುದು. ನಿರೂಪಕ ಆಶ್ರಯ ಕೊಟ್ಟಿದ್ದರೆ ಆ ಹುಡುಗಿ ಮತ್ತು ಅವಳ ಸಂಗಾತಿ ಬದುಕಿ ಉಳಿಯುವ ಸಾಧ್ಯತೆ ಇರುತ್ತದೆ. ಕೊನೆಗೆ ನಿರೂಪಕ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುತ್ತಾನೆ.
ಇನ್ನೊಂದು ಕತೆ “ಊರ್ಮಿಳೆ” (ಲಕ್ಷ್ಮಣನ ಹೆಂಡತಿ) ತುಂಬಾ ಅದ್ಭುತವಾಗಿದೆ. ರಾಮಾಯಣ ಯಾವಾಗಲೂ ಸೀತೆ ಕೇಂದ್ರಿತವಾಗಿರುತ್ತದೆ. ಆದರೆ ಊರ್ಮಿಳೆಯ ಗೋಳನ್ನ ಯಾರು ಕೇಳುವುದಿಲ್ಲ. ಊರ್ಮಿಳೆ (ಜನಕರಾಜನ ಮಗಳು) ಸೀತೆಯ ಸ್ವಂತ ತಂಗಿಯಾಗಿದ್ದರು ಕೂಡ ತನ್ನ ಗಂಡ ತನ್ನನ್ನ ಹದಿನಾಲ್ಕು ವರ್ಷಗಳು ಬಿಟ್ಟು ತನ್ನ ಅಣ್ಣ ಮತ್ತು ಅಣ್ಣನ ಹೆಂಡತಿ ಸೀತೆಯನ್ನ ಕಾಯಲು ಹೋಗುವ ಪ್ರಸಂಗ ಮತ್ತು ಮರಳಿ ಬಂದಾಗ ಅವನು ಗುರುತೇ ಸಿಗದ ಹಾಗೆ ಆದ ದೈಹಿಕ ಬದಲಾವಣೆ ಹೆಂಡತಿಯಾದ ಅವಳನ್ನ ಹೇಗೆ ಕಾಡುತ್ತದೆ ಅನ್ನುವುದು. ಇದರ ಲೇಖಕರು ತಮಿಳಿನ ಖ್ಯಾತ ಲೇಖಕರಾದ ಎಸ್. ಎಂ. ಎ. ರಾಮ್.
ಇದಲ್ಲದೆ ಅನ್ನಪೂರ್ಣೆ ಮೆಸ್, ಖಾನ್ ಸಾಹೇಬ್, ಪರಿತಾಪ, ಬೋಧಿ ವೃಕ್ಷ ಇನ್ನು ನಾಲ್ಕು ಸುಂದರ ಕತೆಗಳಿವೆ. ಸಾಹಿತ್ಯವನ್ನ ಸವಿಯುವರೆಲ್ಲರೂ ಓದಲೇ ಬೇಕಾದ ಕತೆಗಳು. ಮತ್ತೊಮ್ಮೆ ನಲ್ಲತಂಬಿ ಸರ್ ಅವರಿಗೆ ಧನ್ಯವಾದಗಳು.
ನಲ್ಲತಂಬಿಯವರು ಕನ್ನಡ ಸಾಹಿತ್ಯಪ್ರೇಮಿಗಳು ಪದೇಪದೇ ಓದುವಂತಹ ಕೃತಿ ಅನುವಾದಿಸಿ ಕೊಟ್ಟಿದ್ದಾರೆ. ಅವರು ತಮಿಳಿನಿಂದ ಕನ್ನಡಕ್ಕೆ ತಂದುಕೊಟ್ಟ ಎಲ್ಲ ಬರಹಗಳೂ ಕನ್ನಡದವೇ ಎನ್ನುವಷ್ಟು ಸರಾಗ ಓದಿಗೆ ದಕ್ಕುತ್ತವೆ. ಹಾಗೇ ತಮಿಳಿಗೆ ತೆಗೆದುಕೊಂಡು ಹೋಗಿರುವ ನೀಲೂಪದ್ಯಗಳನ್ನು ಕೂಡ ತಮಿಳು ಓದುಗರು ಮೆಚ್ಚಿಕೊಂಡಿದ್ದಾರೆ. ಅರ್ಧನಾರೀಶ್ವರ ಕನ್ನಡದಲ್ಲಿ ಓದಸಿಕ್ಕಿದ್ದರಿಂದ ಆ ಕೃತಿಯ ಬಗ್ಗೆ ಎದ್ದ ವಿವಾದದ ಒಳಸ್ವರೂಪಗಳ ಮರ್ಮದ ಸ್ಪಷ್ಟ ರೂಪ ಅರಿವಾಯ್ತು. ಅವರೊಂದಿಗೆ ಅನುವಾದ ಕಾರ್ಯದಲ್ಲಿ ತೊಡಗುವ ಒಂದು ಅವಕಾಶ ನನಗೆ ದೊರಕಿತ್ತು. ಆಗ ಅವರ ಸಜ್ಜನಿಕೆ ಸರಳತೆಗಳನ್ನು ಹತ್ತಿರದಿಂದ ಕಂಡಂತಾಯ್ತು.
ಧನ್ಯವಾದಗಳು ಲಲಿತಾ ಅವರಿಗೆ