‘ಅಭಿನವ’ದಿಂದ ರಜನಿ ನರಹಳ್ಳಿ ಅವರ ‘ನನ್ನ ಅಜ್ಜಿಯ ಜಗತ್ತು’
ಕೃತಿಯು ಮರುಮುದ್ರಣಗೊಂಡಿದೆ. ಓದಲೇಬೇಕಾದ ಕೃತಿ ಇದು..
ಅಜ್ಜಿ ನೆನಪಿಗೆ ಬಂದ ಕೂಡಲೇ ನಿರೂಪಕಿಯನ್ನು ಕಾಡುವ ಪ್ರಶ್ನೆಯೆಂದರೆ ಅಜ್ಜಿಯ ಅಗಾಧ, ಇಂದು ನಂಬಲು ಕಷ್ಟಸಾಧ್ಯವಾದ ಕಾರ್ಯಕ್ಷಮತೆ.
ಬೆಳಿಗ್ಗೆ ಸೂರ್ಯನಿಗಿಂತ ಮೊದಲೇ ಪ್ರಾರಂಭವಾಗುವ ಅಜ್ಜಿಯದಿನಚರಿ ಸೂರ್ಯನು ಮುಳುಗಿದ ನಂತರವೂ ಕೆಲವು ತಾಸುಗಳವರೆಗೆ ಮುಂದುವರೆಯುತ್ತದೆ; ಮತ್ತು ಈ ದಿನಚರಿ ಕೊಟ್ಟಿಗೆಯನ್ನು ಗುಡಿಸಿ ದನ-ಕರುಗಳಿಗೆ ಹಲ್ಲು ನೀಡಿ ಹಾಲು ಕರೆಯುವುದು; ಸ್ನಾನ ಮಾಡಿ, ಎಲ್ಲರಿಗೂತಿಂಡಿ-ಊಟಗಳನ್ನು ತಯಾರಿಸುವುದು; ಹೊಳೆಗೆ ಹೋಗಿ ಪಾತ್ರೆಗಳನ್ನು ತೊಳೆದುಬಟ್ಟೆಗಳನ್ನು ಒಗೆಯುವುದು; ರುಬ್ಬುವುದು-ಬೀಸುವುದು; ಹೂದೋಟಕ್ಕೆ ನೀರುಹಾಕುವುದು; ಇತ್ಯಾದಿಗಳನ್ನು ಒಳಗೊಳ್ಳುತ್ತದೆ. ಇವುಗಳ ನಡುವೆ, ಮದುವೆಮುಂಜಿಗಳಿಗೆ ಹಪ್ಪಳ-ಸಂಡಿಗೆ ತಯಾರಿಸುವುದು, ಹತ್ತು ಮಕ್ಕಳ ಬಸಿರು-ಬಾಣಂತನಗಳು, ಮನೆಗೆ ಬರುವ ಅತಿಥಿಗಳ ಸತ್ಕಾರ, ಆಗಾಗ್ಗೆ ಮನೆಯ ಗೋಡೆಗಳರಿಪೇರಿ.. ಯೋಚಿಸುತ್ತಾ ಹೋದಂತೆ ನಿರೂಪಕಿಗೆ ಅಜ್ಜಿ ಅತಿಮಾನುಷ ವ್ಯಕ್ತಿಯಂತೆಯೇ ಕಾಣುತ್ತಾಳೆ.
ಪ್ರಾಯಃ ಈ ಬಗೆಯ ಬಿಡುವಿಲ್ಲದ ದುಡಿಮೆಯಿದ್ದುದರಿಂದಲೇ `ನನ್ನಜ್ಜಿಗೆ ಮೆನೋಪಾಸ್ ಸಮಯದ ಖಿನ್ನತೆ ಗಿನ್ನತೆ ಏನೂ ಗೊತ್ತಾಗಲಿಲ್ಲ’ ಎಂದು ಊಹಿಸುತ್ತಾ, ನಿರೂಪಕಿ ತನಗಿಲ್ಲದ ಅಜ್ಜಿಯ ಜೀವನೋತ್ಸಾಹವನ್ನು ಮೆಚ್ಚಿಕೊಳ್ಳುತ್ತಾಳೆ.
ಕೂಡಲೇ ನಾವಿಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ನಿರೂಪಕಿ ಅಜ್ಜಿಯನ್ನೇನೂ ದೈವತ್ವಕ್ಕೇರಿಸುವುದಿಲ್ಲ. ಅಜ್ಜಿಯ ಜೀವನೋತ್ಸಾಹ ಮತ್ತು ಕಾರ್ಯಕ್ಷಮತೆ, ಪಶು-ಪಕ್ಷಿಗಳ ಬಗ್ಗೆ ಅವಳಿಗಿದ್ದ ಪ್ರೀತಿ, ಇತ್ಯಾದಿಗಳನ್ನು ವಿವರಿಸುತ್ತಲೇ ಅವಳ ಮಾನವ ಸಹಜ ಮಿತಿಗಳನ್ನೂ ಗುರುತಿಸುತ್ತಾಳೆ.
ಪುರುಷಕೇಂದ್ರಿತ ವ್ಯವಸ್ಥೆಯ ಎಲ್ಲಾ ಗುಣಗಳನ್ನೂ ಅಂತರಂಗೀಕರಿಸಿಕೊಂಡಿದ್ದ ಅಜ್ಜಿಗೆ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳ ಮೇಲೆ ಪ್ರೀತಿ-ಕಾಳಜಿಗಳು ಸ್ವಲ್ಪ ಹೆಚ್ಚು; ಶಾಲೆಯಿಂದ ಬಂದ ನಂತರ ಹೆಣ್ಣು ಮಕ್ಕಳು ಹೊಸಿಲು ದಾಟುವುದು ನಿಷಿದ್ಧ; `ಹೆಣ್ಣು ಮಕ್ಕಳು ಹುಟ್ಟಿರುವುದೇ ಕೆಲಸ ಮಾಡುವುದಕ್ಕೆ’ ಎಂದು ಬಲವಾಗಿ ನಂಬಿದ್ದ ಅಜ್ಜಿ ಗಂಡು ಮಕ್ಕಳ ಕೈಯಲ್ಲಿ ಯಾವ ಕೆಲಸವನ್ನೂ ಮಾಡಿಸುತ್ತಿರಲಿಲ್ಲ. ಮತ್ತೆ, ಇತರ ಸ್ತ್ರೀಯರಂತೆ ಅವಳಿಗೂ ಓರಗಿತ್ತಿಯನ್ನು ಕುರಿತು ಸ್ವಲ್ಪ ಅಸೂಯೆ, ಅವಳೊಡನೆ ಜಗಳ, ಇತ್ಯಾದಿಗಳಿದ್ದೇ ಇರುತ್ತಿದ್ದವು.
ಈ ರೀತಿ ಅಜ್ಜಿಯ ಬಹುಮುಖೀ ಗ್ರಹಿಕೆಯಿಂದಾಗಿ ಕಥನದಲ್ಲಿ ಅವಳೊಂದು ರಕ್ತಮಾಂಸಗಳಿಂದ ಕೂಡಿದ ಹಾಗೂ ಎಲ್ಲರೂ ಗುರುತಿಸಬಹುದಾದ ಜೀವಂತ ವ್ಯಕ್ತಿಯಾಗುತ್ತಾಳೆ.
-ಸಿ.ಎನ್. ರಾಮಚಂದ್ರನ್
(ಮುನ್ನುಡಿಯಿಂದ)
0 ಪ್ರತಿಕ್ರಿಯೆಗಳು