ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಂದೈತೆ 'ಪ್ರತಾಪರುದ್ರಾ'ವತಾರ!

೧

ಚಿತ್ರಪ್ರಿಯ್ ಸಂಭ್ರಮ್

ತುಂಬಾ ನಿರೀಕ್ಷೆ ಹುಟ್ಟುಹಾಕಿದ್ದ ರುದ್ರಮದೇವಿ ನಿರಾಸೆಗೊಳಿಸಿದ್ದಾಳೆ ಎನ್ನಬಹುದು. ಕೆಲವು ತಿಂಗಳ ಹಿಂದಷ್ಟೇ ಅದೇ ಭಾಷೆಯಲ್ಲಿ ಬಂದಿದ್ದ ಬಾಹುಬಲಿಯ ನೆರಳು ರುದ್ರಮದೇವಿಯ ಮೇಲಿದೆ. ಬಾಹುಬಲಿಗೆ ನೋಡಿಸಿಕೊಂಡು ಹೋಗುವ ಗುಣವಿತ್ತು. ರುದ್ರಮದೇವಿಗೆ ದೃಶ್ಯಶ್ರೀಮಂತಿಕೆಯ ಗುಣಮಟ್ಟವಿದೆಯೇ ಹೊರತು ಮುಂದೆನಾಗುತ್ತೋ? ಎಂಬ ಕುತೂಹಲ ಕೆರಳಿಸುವ ಅಂಶವಿಲ್ಲ.

ಎಲ್ಲ ಹೆಣ್ಣಿಗಾಗಿ, ಮಣ್ಣಿಗಾಗಿ, ಹೊನ್ನಿಗಾಗಿ ಎನ್ನುವಂತೆ ಚಿತ್ರದ ಕಥೆಯ ಎಳೆಯೂ ಅದೇ. ೧೩ ನೇ ಶತಮಾನದಲ್ಲಿ ತೆಲುಗುದೇಶವನ್ನಾಳುವ ಕಾಕತೀಯ ಸಾಮ್ರಾಜ್ಯದ ಮೇಲೆ ದೇವಗಿರಿ ಒಡೆಯರ ಕಣ್ಣು. ಕಾಕತೀಯ ಸಾಮ್ರಾಟನಿಗೆ ಹುಟ್ಟುವ ಮಗು ಗಂಡಾದರೆ ರಾಜ್ಯಭಾರ ಉಳಿಯುತ್ತದೆ. ಹೆಣ್ಣಾದರೆ ವಾರಸುದಾರರೇ ಇಲ್ಲದೇ ಸಾಮ್ರಾಜ್ಯವನ್ನು ಆಳಬಹುದು ಎಂಬುದು ಸಾಮಂತ ಅರಸರ ಲೆಕ್ಕಾಚಾರ. ಇತ್ತ ಕಡೆ ಕಾಕತೀಯ ಸಾಮ್ರಾಜ್ಯದ ಮೇಲೆ ಹಿಡಿತ ಸಾಧಿಸಬೇಕು ಎನ್ನುವ ದೇವಗಿರಿ ಅರಸರ ಅಟ್ಟಹಾಸ.

ಕಾಕತೀಯ ಸಾಮ್ರಾಟನಿಗೆ ಮಗು ಹುಟ್ಟುತ್ತದೆ. ಆದರೆ ಹೆಣ್ಣುಮಗು. ಈ ವಿಷಯ ಇನ್ನುಳಿದವರಿಗೆ ಗೊತ್ತಾದರೆ ಸಾಮ್ರಾಜ್ಯದ ಮೇಲೆ ಶತ್ರುಗಳು ದಾಳಿ ನಡೆಸಬಹುದು ಎಂಬುದನ್ನು ಊಹಿಸಿದ ಮಂತ್ರಿ ಮಹದೇವ, ರಾಜ್ಯದ ಜನರ ಒಳಿತಿಗಾಗಿ ಹುಟ್ಟಿದ ಮಗು ಗಂಡು, ಮಗುವಿನ ಹೆಸರು ರುದ್ರದೇವ ಎಂದು ಲೋಕಕ್ಕೆ ಸಾರುತ್ತಾನೆ. ಶತ್ರುಗಳ, ಹಿತಶತ್ರುಗಳ ಆಸೆ ಮಣ್ಣು ಪಾಲಾಗುತ್ತದೆ.

Anushka-in-Rudramadevi-Movie-Stills

ಅಪ್ಪ, ಮಂತ್ರಿಯ ಆಸೆಯಂತೆ ರುದ್ರಮದೇವಿ ರುದ್ರದೇವನಾಗಿಯೇ ಉಳಿಯುತ್ತಾಳೆ. ಯುದ್ಧದ ಎಲ್ಲ ಕಲೆಗಳನ್ನು ಕರಗತ ಮಾಡಿಕೊಳ್ಳುತ್ತಾಳೆ. ಹೆಣ್ಣಿನ ಬಯಕೆಯನ್ನು ದೇಶಸುಭಿಕ್ಷೆಗಾಗಿ ಅದುಮಿಟ್ಟುಕೊಳ್ಳುತ್ತಾಳೆ. ರುದ್ರದೇವನ ಬಣ್ಣ ಬಯಲು ಮಾಡಲು ಹಿತಶತ್ರುಗಳು ಮದುವೆಗೆ ಒತ್ತಾಯಿಸಿದಾಗಲೂ ಹೆಣ್ಣನ್ನು ಮದುವೆಯಾಗಿ ಗುಟ್ಟು ಕಾಪಾಡಿಕೊಳ್ಳುತ್ತಾಳೆ. ಇದಕ್ಕಾಗಿ ಏಳು ಅಬೇಧ್ಯ ಕೋಟೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಆದರೆ ಇದು ಬಹಳ ಕಾಲ ನಿಲ್ಲುವುದಿಲ್ಲ. ಶತ್ರು ಹಾಗೂ ಹಿತಶತ್ರುಗಳ ಪಾಳಯದ ಪರಿಚಾರಕಿಯೊಬ್ಬಳು, ದಾಸಿ ವೇಷದಲ್ಲಿ ಕಾಕತೀಯ ಸಾಮ್ರಾಜ್ಯ ಪ್ರವೇಶಿಸುತ್ತಾಳೆ. ವಿದ್ಯಮಾನಗಳನ್ನ ಪಾರಿವಾಳದ ಮೂಲಕ ಮುಟ್ಟಿಸುವ ಆಕೆ, ರುದ್ರದೇವ ಗಂಡಲ್ಲ, ರುದ್ರಮದೇವಿ ಎನ್ನುವುದನ್ನ ಪತ್ತೆ ಮಾಡಿ ಶತ್ರುಗಳಿಗೆ ತಿಳಿಸುತ್ತಾಳೆ.

ಸಾಮ್ರಾಜ್ಯದ ಪ್ರಜೆಗಳು ನಮ್ಮನ್ನಾಳುವುದು ಹೆಣ್ಣೆಂದು ತಿಳಿದು ಅವಮಾನ ಮಾಡುತ್ತಾರೆ. ಸಾಮಂತರ ಅರಸರು, ಇಷ್ಟು ದಿನ ಸುಳ್ಳು ಹೇಳಿದ್ದಕ್ಕಾಗಿ ರುದ್ರಮದೇವಿಗೆ ಬಹಿಷ್ಕಾರ ಹಾಕಿ ಊರಿಂದಾಚೆ ಹಾಕುತ್ತಾರೆ. ಪರಾಕ್ರಮಿಯಾದ ರುದ್ರಮದೇವಿ ಹೊರ ನಡೆದ ಮೇಲೆ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ರಾಜನನ್ನು ಕೊಂದು ಗದ್ದುಗೆ ಏರುತ್ತಾರೆ. ಪರೋಪಕಾರಿ ಕಳ್ಳ ರಡ್ಡಿಯ ಸಹಾಯದಿಂದ ಆಕೆ ಮತ್ತೇ ಸಾಮ್ರಾಜ್ಯವನ್ನು ಶತ್ರುಗಳಿಂದ ವಶಪಡಿಸಿಕೊಳ್ಳುತ್ತಾಳೆ. ಇಲ್ಲಿಗೆ ಶುಭಂ. ಆದರೆ ಮುಂದಿನ ಭಾಗ ಪ್ರತಾಪರುದ್ರುಡು, ದಿ ಲಾಸ್ಟ್ ಎಂಪರೈರ್ ಎನ್ನುವುದನ್ನ ಹೇಳುವ ಮೂಲಕ ಕಥೆ ಇನ್ನೂ ಇದೆ ಎಂದು ತಿಳಿಸಲಾಗಿದೆ.

2

ಅನುಷ್ಕಾ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಅಲ್ಲು ಅರ್ಜುನ್ ಡೈಲಾಗ್‌ಗಳಿಗೆ ಶಿಳ್ಳೆ. ಪ್ರಕಾಶ್‌ರಾಜ್ ಹಿತ ಬಯಸುವ ಮಂತ್ರಿಯಾಗಿ ಇಷ್ಟವಾಗುತ್ತಾರೆ. ರಾಣಾ ದಗ್ಗುಬಾಟೆ ಪರಾಕ್ರಮಿ ಎನ್ನುವುದಕ್ಕಿಂತ ಪ್ರೇಮಿಯಾಗಿ ಗಮನ ಸೆಳೆದಿದ್ದಾರೆ. ಸುಮನ್, ಬ್ರಹ್ಮಾನಂದ, ನಿತ್ಯಾ ಮೆನನ್ ಓಕೆ. ನಿರ್ದೇಶಕ ಗುಣಶೇಖರ್ ಇತಿಹಾಸದ ಕಥೆಯನ್ನ ಇನ್ನು ಸೊಗಸಾಗಿ, ಮನಮುಟ್ಟುವಂತೆ, ಬೋರಾಗದಂತೆ ಹೇಳುವ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ. ಇಳಯರಾಜಾ ಸಂಗೀತದಲ್ಲಿ ಒಂದು ಹಾಡು ಕೇಳುವಂತಿದೆ. ಇಡೀ ಸಿನಿಮಾದಲ್ಲಿ ಪ್ರೇಕ್ಷಕರನ್ನ ಹಿಡಿದಿಡುವ ಅಂಶವೆಂದರೆ ಅನುಷ್ಕಾ ಎಂಟ್ರಿ ಹಾಗೂ ಕೊನೇಯ ೨೦ ನಿಮಿಷದ ಕ್ಲೈಮ್ಯಾಕ್ಸ್ ಸೀನ್. ಛಾಯಾಗ್ರಹಣದ ಬಗ್ಗೆ ಚಕಾರವಿಲ್ಲ.

ಈಗ ಇತಿಹಾಸದ ಕಥೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಜೊತೆಗೆ ಸರಣಿ ಸಿನಿಮಾಗಳು ಶುರುವಾಗುತ್ತಿವೆ ಎಂಬುದನ್ನ ರುದ್ರಮದೇವಿ ಮತ್ತೊಮ್ಮೆ ಸಾಬೀತುಮಾಡಿದ್ದಾಳೆ. ಒಟ್ಟಿನಲ್ಲಿ ಐತಿಹಾಸಿಕ ಕಥಾಹಂದರದ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಬಂದಿದೆ. ನೋಡೋದು, ಬಿಡೋದು ನಿಮಗೆ ಸೇರಿದ್ದು!

 

‍ಲೇಖಕರು admin

15 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading