ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂದಿಯ ಮಧ್ಯೆ ಹೀಗೊಂದು ದಾಂಪತ್ಯ ಕಥಾ!

chetana2.jpg

“ಭಾಮಿನಿ ಷಟ್ಪದಿ” 

ಚೇತನಾ ತೀರ್ಥಹಳ್ಳಿ

“ಮಳೇಲಿ ಅಳು ಕಾಣೋಲ್ಲ. ಅತ್ತು ಬಿಡು…”
ಅಂವ ಛಕ್ಕನೆ ತಿರುಗಿದ. “ಚಾಪ್ಲಿನ್ನನ ಡೈಲಾಗು ಕದೀಬೇಡ” ಅಂತ ಕೂಗಬೇಕೆನಿಸಿತು.
ಊಹೂಂ…ಅವಳ ಹತ್ರ ಅಂಥದ್ದೇನಿತ್ತೋ…ಅಂವ ಪೂರಾ ಲಾಚಾರನಾಗಿಬಿಡ್ತಿದ್ದ. ಚಾಲಾಕಿ ಹುಡುಗಿ. ಒಳ್ಳೆ ಏಣಿಯನ್ನೇ ಹುಡುಕಿದ್ದಳು!
 
“ನಂಗೊತ್ತು. ನೀ ನನ್ನ ಬಿಟ್ಟು ಸುಖವಾಗಿರೋಲ್ಲ. ಆದ್ರೆ ನಿಂಗೆ ನನ್ ಮೇಲೆ ಗೌರವ ಇಲ್ಲ. ನಾನು ಅಪ್ಪಟ ಸ್ವಾಭಿಮಾನಿ. ಅವಮಾನ ಸಹಿಸ್ಕೊಂಡು ಇರಲಾರೆ…”

“ಸುಳ್ ಹೇಳ್ತಿದ್ದೀ ನೀನು. ನಾ ಯಾವತ್ತೂ ನಿನ್ನ ಅವಮಾನಿಸಿಲ್ಲ. ಆ ರೀತಿ ಮಾತಾಡಿಲ್ಲ!”

“ಹೌದೋ! ಸದ್ಯಕ್ಕೆ ನಾ ಬಾಯಿ ಮುಚ್ಲೇಬೇಕು. ನೀ ಹೇಳಿದ ಮಾತಿಗೆ ನನ್ ಕಿವಿಗಳನ್ನ ಬಿಟ್ರೆ ಬೇರೆ ಸಾಕ್ಷಿ ಇಲ್ಲ ನೋಡು!”

ಆಹಾ! ಒಳ್ಳೆ ಮಾತುಗಾತಿ!!
 
ಅವಳು  ಕಿನಾರೆಯಲ್ಲಿ ನಿಂತು ಕೂಗ್ತಲೇ ಇದ್ದಳು. ಅಂವ ಒದ್ದೆ ಮರಳಲ್ಲಿ ಕಾಲೂರುತ್ತ ಹೊರಟೇ ಹೋದ. ಅಂದಿಗೆ ಅವರ ಆರು ವರ್ಷಗಳ ಬಂಧ ಕಳಚಿ ಬಿದ್ದಿತ್ತು. ಅದನ್ನ ಅವರು “ಪ್ರೀತಿ” ಅಂದ್ಕೊಂಡಿದ್ದರು!
 
dampatya.jpgಅಂವ ರಾತ್ರಿ ಪೂರಾ ಬಾರಲ್ಲಿ ಕುಂತು, “ನೀನೇ ಸಾಕಿದಾ ಗಿಣೀ….” ಕೇಳಿ ಕೇಳಿ ಅತ್ತ.
ಆಗ, ಮಳೆ ಬರ್ತಿರಲಿಲ್ಲ.
 
*
 
ಶುರುವಲ್ಲಿ ಅವಳು ಅವನನ್ನ ಪ್ರೀತಿಸ್ತಿದ್ದದ್ದೇನೋ ಹೌದು. ಒಳ್ಳೆ ಕಥೆಗಾತಿ.
ಅಂವ ಕೂಡ  ಚೆನ್ನಾಗಿ ಬಳಸಿಕೊಂಡ…..ಅವಳ ಕಥೆಗಳನ್ನ.
ಮಹತ್ವಾಕಾಂಕ್ಷೆಯ ಹುಡುಗ. ಪೇಪರ್ರು, ಪಾಲಿಟಿಕ್ಸು, ಪಿಚ್ಚರ್ರು….ಜನರ ಕಣ್ ಕುಕ್ಕಲಿಕ್ಕೆ ಇವು ಮೂರೇ ಹೆದ್ದಾರಿಗಳು ಅಂದ್ಕೊಂಡಹಾಗಿತ್ತು ಅಂವ. ಹುಡುಗಿ, ಹೆಗಲು ಕೊಟ್ಟಳು.
ಇನ್ನೂ ಏನೆನೋ…….ಕೊಟ್ಟಳು!
 
“ಎಲ್ಲ ಯಶಸ್ವಿ ಪುರುಷನ ಹಿಂದೆ….” -ಜನ ಆಡಿಕೊಂಡರು. ಹೊಟ್ಟೆಯಲ್ಲೇನೋ ಉಪ್ಪು-ಖಾರ! ಎಲ್ಲ ಮುಸುಕಿನ ಗುದ್ದು.
ಹುಡುಗಿ ಬಲಿಯತೊಡಗಿದ್ದಳು. ಅವನ ದಗಲಬಾಜಿತನ ಕಣ್ಣಿಗೆ ರಾಚುತ್ತಿತ್ತು. ಪ್ರೀತಿ ಎಲ್ಲೋ ತೆಳುವಾಗ್ತಿದೆ ಅನಿಸತೊಡಗಿತು. ಪೂರ್ತಿ ಕಳಕೊಳ್ಳುವ ಮುಂಚೆ ಹೊರಬಿದ್ದರೆ ಸಾಕು ಅಂದುಕೊಂಡಳು. ಆ ಹೊತ್ತಿಗೆ ಅವಳ ಹೆಸರು, ಅವನನ್ನೂ ಮೀರಿ ಬೆಳೆಯುತ್ತಿತ್ತು.
 
ಅದೊಂದು ದಿನ, ಎಂಥದೋ ವ್ಯವಹಾರದ ಮಾತು….
“ನೀ ಹೋದರೆ ಕೆಲಸ ಆಗೋದು ಖಂಡಿತ. ನಿನ್ನ ಮುಖಕ್ಕೇ ಜನ ಬೀಳ್ತಾರೆ…” ಅವನಂದ. ಈ ಸಾಲು ಓದುವಷ್ಟು ಸರಳವಾಗಿರಲಿಲ್ಲ.

ಕಣ್ಣಲ್ಲೇನೋ ಅಸಹ್ಯಕರ ಸನ್ನೆ. ದನಿಯಲ್ಲಿ ಕುಹಕ.
 
“ಊರಿಗೆ ಹೋಗಿಬರ್ತೀನಿ” ಬ್ಯಾಗಿಗೆ ಬಟ್ಟೆ ತುಂಬಿದಳು. ನಾಲ್ಕು ತಿಂಗಳು ಪೂರಾ ಕಡಲ ಹೊಯ್ಗೆಯಲ್ಲಿ ಆಡಿಕೊಂಡು ಉಳಿದುಬಿಟ್ಟಳು..

“ನಿನ್ನ ಮುಖಕ್ಕೇ…..” ನೆನಪಾದಾಗಲೆಲ್ಲ ಕಪ್ಪೆಗೂಡು ಕೆಡವಿ ನಕ್ಕಳು.
 
*
ಇವಳ ಪಾಲಿನ ಕಥೆ ಕೇಳಿದ ಮಂದಿ, ಅಯ್ಯೋ! ಪಾಪ ಅಂದರು.
ಅವನ ಗೋಳು ಕೇಳಿದವರು, ಅವಳನ್ನ ಬಯ್ದುಕೊಂಡರು!

‍ಲೇಖಕರು avadhi

18 August, 2007

3 Comments

  1. Mauni

    are! idu nammade kathe…! haganta sakashtu mandi andukondare achchariyilla.E katheyallada kathegondu mechchugeya SALAAM.

  2. Sindhu

    ಚೇತನಾ,

    ಗೆಳೆತನದ ಸ್ವಚ್ಛಂದ ಆಕಾಶದೊಳಗೆ ಪ್ರೀತಿ ಅಂತ ಕರೆಸಿಕೊಂಡಿದ್ದು, ಮದುವೆಯ ನಿಕ್ಕಿಯಾದ ಪರಿಧಿಯೊಳಗೆ ನೂರೆಂಟು ಅನುಕೂಲಗಳ ಮಗ್ಗುಲಲ್ಲಿ ಬಿದ್ದು ಹೊರಳಾಡಿ ಧೂಳೀಪಟವಾಗುವ ರೀತಿಯನ್ನು ಸರಳ ಮತ್ತು ಮಿತ ಮಾತುಕತೆಗಳಲ್ಲಿ, ಕಪ್ಪೆಗೂಡು ಕೆಡವಿ ನಗುವ ವಿಷಾದದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದೀರಿ.

    ಇಷ್ಟವಾಯಿತು.

    ಸಿಂಧು

  3. ಸಂತೋಷಕುಮಾರ

    “ಇವಳ ಪಾಲಿನ ಕಥೆ ಕೇಳಿದ ಮಂದಿ, ಅಯ್ಯೋ! ಪಾಪ ಅಂದರು.
    ಅವನ ಗೋಳು ಕೇಳಿದವರು, ಅವಳನ್ನ ಬಯ್ದುಕೊಂಡರು!”

    ಬಹುತೇಕ ಹಿಂತಾ ಕಥೆಗಳ ಕ್ಲೈಮಾಕ್ಸು ಹೀಗೆ ಅಲ್ವಾ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading