-ಮಂಜುನಾಥ್ ಚಾಂದ್
ಇವರು ಮೂರ್ತಿ 8
ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಬೇಕು ಎಂಬ ಮಹದಾಸೆ ನನಗಿತ್ತು. ಆದರೆ ಯಾವ ನಿರ್ದೇಶಕರೂ ಆಸಕ್ತಿ ವಹಿಸಲಿಲ್ಲ. ಕೊನೆಯಲ್ಲಿ ನನಗೊಂದು ಪಾತ್ರ ಅಂತ ಕೊಟ್ಟವರು ರಾಜೇಂದ್ರ ಸಿಂಗ್ ಬಾಬು ಅವರು. ಅವರ ‘ಹೂವು ಹಣ್ಣು’ ಚಿತ್ರದಲ್ಲಿ ಅಭಿನಯ ಮಾಡಿದೆ. ಅದನ್ನು ಬಿಟ್ಟರೆ ಬೇರೆ ಯಾರೂ ನನ್ನನ್ನು ಕರೆಯಲಿಲ್ಲ. ನನ್ನ ಸಂದರ್ಶನಕ್ಕೆ ಬಂದ ಅನೇಕರು ಇಂತಹ ಪ್ರಶ್ನೆಗಳನ್ನೇ ಕೇಳಿದ್ದಾರೆ. ನೀವು ಈ ಪ್ರಶ್ನೆಯನ್ನು ನಿರ್ದೇಶಕರಿಗೆ ಕೇಳಿ ಅಂತ ಹೇಳುತ್ತಿದ್ದೆ. ನೀವೆ ಒಂದು ಸಿನೆಮಾ ನಿರ್ದೇಶನ ಮಾಡಿ ಎಂದು ಕೆಲವರು ನನಗೆ ಆಫರ್ ಕೊಟ್ಟಿದ್ದಿದೆ. ಆದರೆ, ನಾನು ಆ ಬಗ್ಗೆ ಹೆಚ್ಚು ಆಸಕ್ತಿ ವಹಿಸಲಿಲ್ಲ.
ಕ್ಯಾಮರಾಮನ್ ಹೆಚ್ಚು ಕ್ರಿಯೇಟಿವ್...
ಒಂದು ವಿಷಯ ನಿಮಗೆ ಸ್ಪಷ್ಟವಾಗಿ ಹೇಳಿಬಿಡುತ್ತೇನೆ. ಒಬ್ಬ ನಿರ್ದೇಶಕನಿಗಿಂತ ಒಬ್ಬ ಕ್ಯಾಮೆರಾಮನ್ ಹೆಚ್ಚು ಕ್ರಿಯೇಟಿವ್ ಆಗಿರುತ್ತಾನೆ. ಆತ ಶೂಟಿಂಗ್ ಮಾಡುವಾಗ ಅತ್ಯಂತ ಡೆಡಿಕೇಟ್ ಆಗಿ, ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ. ಬೆಳಿಗ್ಗೆ 9.30ಕ್ಕೆ ಸ್ಟುಡಿಯೋಗೆ ಶೂಟಿಂಗ್ ಮಾಡೋಕೆ ಅಂತ ಎಂಟರ್ ಆದ್ರೆ ಸಂಜೆ 6.30 ತನಕ ಅವನ ಮನಸ್ಸು, ದೇಹ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ. ಒಂದು ನಿಮಿಷವೂ ಪುರುಸೊತ್ತು ಇರುವುದಿಲ್ಲ.
ಮೋಸ್ಟ್ ಹಾರ್ಡ್ ವರ್ಕಿಂಗ್ ಪರ್ಸನ್ ಅಂದ್ರೆ ಕ್ಯಾಮರಾಮನ್. ಇದೆಲ್ಲರ ಜೊತೆಗೆ ಕ್ಯಾಮರಾಮನ್ ಒಂದು ಸನ್ನಿವೇಶದ ಬಗೆಗಿನ ನಿರ್ಧಾರವನ್ನು ಆ ತಕ್ಷಣವೇ ಆನ್ ದಿ ಸ್ಪಾಟ್ ಕೈಗೊಳ್ಳಬೇಕಾಗುತ್ತದೆ. ನಿರ್ದೇಶಕನಾದರೆ ಯಾವ್ಯಾವುದನ್ನು ಹೇಗೆ ಮಾಡಬೇಕು ಅಂತ ಮೊದಲೇ ಮನೆಯಲ್ಲಿ ಕುಂತೇ ನಿರ್ಧಾರ ಕೈಗೊಳ್ಳಬಹುದು. ಬಟ್ ಸ್ಟುಡಿಯೋಗೆ ಬಂದಾಗ ಕ್ಯಾಮರಾಮನ್ ಕ್ರಿಯೇಟಿವ್ ವರ್ಕ್ ಮಾತ್ರ ಲೆಕ್ಕಕ್ಕೆ ಬರೋದು.
ನಾನು ಪ್ರತಿ ದಿನ ಬೆಳಿಗ್ಗೆ ಚಿತ್ರದ ಶೂಟಿಂಗ್ಗೆ ಒಂದು ತಯಾರಿ ಅಂತ ಮಾಡಿಕೊಳ್ಳುತ್ತಿದ್ದೆ. ಬೆಳಿಗ್ಗೆ ಬಂದ ಕೂಡಲೇ ಸಹಾಯಕ ನಿರ್ದೇಶಕನಿಗೆ ಹೇಳಿ ಇವತ್ತಿನ ಸೀನ್ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಿದ್ದೆ. ಹಿಂದಿನ ದಿನದ ಸೀನ್ ಬಗ್ಗೆಯೂ ಲಿಂಕ್ ಇರಬೇಕಾಗುತ್ತದೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದಿನ ಸೀನ್ ಬಗ್ಗೆ ಚಿಂತನೆ ಮಾಡುತ್ತಿದ್ದೆ. ಇದು ನನಗೆ ತುಂಬಾ ಅನುಕೂಲ ಆಗ್ತಿತ್ತು ಮತ್ತು ನನ್ನ ಕೆಲಸ ಸುಲಭ ಕೂಡ ಆಗ್ತಿತ್ತು. ಕೆಲಸದಲ್ಲಿ ಹೆಚ್ಚು ಇನ್ವಾಲ್ವ್ ಆಗಲು ಪ್ರೇರಣೆ ಕೊಡುತ್ತಿತ್ತು.






0 Comments