ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್: ವಿಶ್ವ 'ನುಡಿಸಿರಿ' ಸಮ್ಮೇಳನದ ಅಧ್ಯಕ್ಷರಾಗಿ ಬಿ ಎ ವಿವೇಕ ರೈ ಆಯ್ಕೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಡಿಸೆಂಬರ್ 19ರಿಂದ 22ರವರೆಗೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಸಲಿರುವ ಕನ್ನಡ ನಾಡು ನುಡಿ ಸಂಸ್ಕೃತಿಯ ವಿಶ್ವ ಸಮ್ಮೇಳನ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 ಇದರ ಅಧ್ಯಕ್ಷರಾಗಿ ಕನ್ನಡದ ಹಿರಿಯ ವಿದ್ವಾಂಸ, ಸಂಶೋಧಕ, ಲೇಖಕ ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಮೈಸೂರು ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಬಿ. ಎ. ವಿವೇಕ್ ರೈ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ ಮೋಹನ ಆಳ್ವ ತಿಳಿಸಿದ್ದಾರೆ.

ಡಿಸೆಂಬರ 19ರಂದು ಸಂಜೆ ಕರ್ನಾಟಕದ ಸಮಗ್ರ ಜಾನಪದ ವೈಶಿಷ್ಟ್ಯವನ್ನು ಪ್ರತಿನಿಧಿಸುವ ಬೃಹತ್ ಮೆರವಣಿಗೆ ಹಾಗೂ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ಈ ಸಮಾರಂಭದಲ್ಲಿ ಉದ್ಘಾಟನೆ, ಸಮ್ಮೇಳನಾಧ್ಯಕ್ಷರ ಆಶಯ ಭಾಷಣ, ಹಾಗೂ ಈ ಹಿಂದಿನ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷರಿಗೆ ಸನ್ಮಾನ ಸಮಾರಂಭ ನಡೆಯಲಿದೆ.
ಸಮ್ಮೇಳನದಲ್ಲಿ ಪ್ರತಿದಿನ ಎರಡು ಲಕ್ಷಕ್ಕೂ ಅಧಿಕ ಸಾಹಿತ್ಯಾಸಕ್ತರು ಭಾಗವಹಿಸಲಿದ್ದು ನಾಲ್ಕೂ ದಿನಗಳಲ್ಲಿ ಒಟ್ಟು ಹತ್ತು ಲಕ್ಷಕ್ಕೂ ಹೆಚ್ಚಿನ ಸಜ್ಜನರು ಭಾಗವಹಿಸುವ ನಿರೀಕ್ಷೆಯಿದೆ. ನಾಲ್ಕು ವೇದಿಕೆಗಳಲ್ಲಿ ಕ್ರಮವಾಗಿ ಸಾಹಿತ್ಯ, ಜಾನಪದ, ವಿದ್ಯಾರ್ಥಿ ಮತ್ತು ಕೃಷಿ ಸಮ್ಮೇಳನಗಳು ನಡೆಯಲಿದ್ದು ಸಂಜೆ ಹತ್ತು ವೇದಿಕೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪುಣಚದವರಾದ ವಿವೇಕ್ ರೈಗಳು ಮಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ಸುಮಾರು 34ವರ್ಷಗಳ ಕಾಲ ಅಧ್ಯಾಪನ ಸಂಶೋಧನೆಯಲ್ಲಿ ತೊಡಗಿಕೊಂಡವರು. ಪ್ರಸ್ತುತ ಜರ್ಮನಿಯ ವ್ಯೂತ್ರ್ಸ್‍ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಅತಿಥಿ ಪ್ರಾಧ್ಯಾಪಕರಾಗಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ ಇವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರು. ಫಿನ್ಲೇಂಡಿನ ಫೋಕ್ಲೋರ್ ಫೋಲೋಸ್, ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ, ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ, ಮಂಗಳೂರಿನ ಪಿಲಿಕುಳ ನಿಸರ್ಗಧಾಮ ಟ್ರಸ್ಟ್ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳ ಸದಸ್ಯತ್ವಕ್ಕೆ ಪಾತ್ರರಾಗಿರುವ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ, ಸಂದೇಶ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ  ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ದೇಸಿ ಸಮ್ಮೇಳನದ ಅಧ್ಯಕ್ಷತೆ, ಕುವೈಟ್‍ನ ವಿಶ್ವ ತುಳು ಸಮ್ಮೇಳನದ ಅಧ್ಯಕ್ಷತೆ ಮೊದಲಾದ ಗೌರವಗಳು ಸಂದಿವೆ. ತುಳು ಗಾದೆಗಳು, ತುಳು ಒಗಟುಗಳು, ತುಳುವ ಸಂಸ್ಕೃತಿ, ತುಳು ಜನಪದ ಸಾಹಿತ್ಯ, ಆನ್ವಯಿಕ ಜಾನಪದ, ಭಾರತೀಯ ಪರಂಪರೆ ಮತ್ತು ಸಾಹಿತ್ಯದಲ್ಲಿ ಒಗಟು, ಗಿಳಿಸೂವೆ, ಇರುಳ ಕಣ್ಣು, ಹಿಂದಣ ಹೆಜ್ಜೆ, ರಂಗದೊಳಗಣ ಬಹಿರಂಗ, ಬ್ಲಾಗಿಲನು ತೆರೆದು, ಜರ್ಮನಿಯ ಒಳಗಿನಿಂದ, ಕನ್ನಡ ನುಡಿ ನಡೆಯ ಬರಹಗಳು, ನೆತ್ತರ ಮದುವೆ, Siri Epic as performed by Gopala Naika ಮೊದಲಾದ ಕೃತಿಗಳನ್ನಲ್ಲದೆ 15ಕ್ಕೂ ಅಧಿಕ ಕೃತಿಗಳನ್ನೂ ಸಂಪಾದಿಸಿದ್ದಾರೆ. ತುಳು ಸಾಹಿತ್ಯ ಚರಿತ್ರೆ ಮತ್ತು ಸಮಗ್ರ ಕನ್ನಡ ಜೈನ ಸಂಪುಟಗಳ ಪ್ರಧಾನ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಜರ್ಮನಿ, ಫಿನ್‍ಲ್ಯಾಂಡ್, ಸ್ವಿಜರ್ಲ್ಯಾಂಡ್, ಜಪಾನ್, ಅಮೆರಿಕ, ಇಂಗ್ಲೆಂಡ್, ಆಸ್ಟ್ರಿಯ, ಫ್ರಾನ್ಸ್, ದುಬೈ, ಅಬುದಾಬಿ, ಶಾರ್ಜಾ ಮೊದಲಾದ ದೇಶಗಳಲ್ಲಿ ಸಂಶೋಧನೆ ಅಧ್ಯಯನ ಕೈಗೊಂಡಿರುವ ಇವರು 16 ಮಂದಿ ಪಿಎಚ್.ಡಿ ಸಂಶೋಧಕರು ಮತ್ತು ಎಂಫಿಲ್ ಪದವಿಯ 10 ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಪ್ರಸ್ತುತ ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಸಂಸ್ಕøತಿ ಗ್ರಾಮದ ನಿರ್ಮಾಣ ಮತ್ತು ನಿರ್ವಹಣೆ ಹಾಗೂ ಕನ್ನಡ ಸಾಹಿತ್ಯದ ಜರ್ಮನ್ ಅನುವಾದದಲ್ಲಿ ತೊಡಗಿಕೊಂಡಿದ್ದಾರೆ

‍ಲೇಖಕರು G

13 November, 2013

12 Comments

  1. ಪಂಡಿತಾರಾಧ್ಯ ಮೈಸೂರು

    ವಿಶ್ವ ಕನ್ನಡಿಗ ವಿವೇಕರೈಗಳಿಗೆ ಹಾರ್ದಿಕ ಅಭಿನಂದನೆಗಳು.ವಿವೇಕವಾಣಿ ಮುನ್ನೆಡೆಸಲಿ.

  2. ಡಾ.ಪ್ರಕಾಶ ಗ.ಖಾಡೆ

    ಡಾ.ವಿವೇಕ ರೈ ಅವರಿಗೆ ಅಭಿನಂದನೆಗಳು.

  3. shobhavenkatesh

    vivek rai avarege hardika shubhashayagalu

  4. Anonymous

    ಡಾ / ವಿವೇಕ ರೈ ಅವರಿಗೆ ಅಭಿನಂದನೆಗಳು ,ರೈಸಡ್ ನುಡಿಸಿರಿ –

  5. maheshwari.u

    ಹಾರ್ದಿಕ ಅಭಿನಂದನೆಗಳು.

  6. P. Bilimale

    Congratulations sir

  7. Ashok Shettar

    ಪ್ರೊ. ವಿವೇಕ ರೈ ಸರ್ ಗೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ಸಮಕಾಲೀನ ವಾಸ್ತವಗಳು, ಬದಲಾಗುತ್ತಿರುವ ನಮ್ಮ ಸಾಹಿತ್ಯ ಸಮಾವೇಶಗಳ ಸ್ವರೂಪಗಳು, ಹೆಚ್ಚುತ್ತಿರುವ ಆತ್ಮಹೀನ ಮಾತು-ನಡತೆಗಳು, ಆಷಾಢಭೂತಿ ರಾಜಕಾರಣ, ನಮ್ಮ ಸಂಸ್ಕೃತಿಯ ವೈರುದ್ಧ್ಯಗಳು ಇತ್ಯಾದಿಗಳ ಕುರಿತ ಬಿಚ್ಚು ಮನಸಿನ ಕೆಲ ಮಾತುಗಳನ್ನು ಆಡುತ್ತಾರೆಂದು ನೀರಿಕ್ಷಿಸಬಹುದು.

  8. armanikanth

    ವಿವೇಕ ರೈಸರ್ ಗೆ ಅಭಿನಂದನೆಗಳು

  9. Anonymous

    congratulations rai sir

  10. manjunatha B.R.

    ಸಾಹಿತ್ಯ ಪರಿಷತ್ತು ನಡೆಸುವ ಕನ್ನಡ ಸಮ್ಮೇಳನದ ದಿನಾಂಕ ಪದೇ ಪದೇ ಬದಲಾಗುವುದು, ಪ್ರತಿ ಸಮ್ಮೇಳನದಲ್ಲೂ ಅವ್ಯವಸ್ಥೆಯ ಕೂಗು ಒಂದರ್ಥದಲ್ಲಿ ಸಮ್ಮೇಳನದ ಬಗ್ಗೆ ನಿರಾಸೆ ಮೂಡಿಸುತ್ತಲೇ ಇದೆ. ಆದರೆ ಶ್ರೀಯುತ ಆಳ್ವರವರು ಶಿಸ್ತುಬದ್ಧವಾಗಿ ಸಮ್ಮೇಳನ ನಡೆಸುತ್ತಿದ್ದಾರೆ. ಕನ್ನಡ ಕಟ್ಟುವ ಕೆಲಸ ಸತತವಾಗಿ ಮಾಡುತ್ತಲೇ ಇರುವ ಅವರಿಗೆ ನಾವೆಲ್ಲರೂ ಆಭಾರಿಯಾಗಬೇಕಿದೆ.

  11. mahipalreddy munnur

    abhinandanegalu sir…

  12. Anonymous

    ಪ್ರಿಯ ಸ್ನೇಹಿತರೇ , ನಿಮ್ಮ ಪ್ರೀತಿ ವಿಶ್ವಾಸದ ಪ್ರತಿಕ್ರಿಯೆಗಳಿಗೆ ಪದಗಳಲ್ಲಿ ಉತ್ತರಿಸಲು ಆಗುತ್ತಿಲ್ಲ . ನನ್ನನ್ನು ಬಹಳ ಕಾಲದಿಂದ ಬಲ್ಲ ನೀವು ಪ್ರಕಟಿಸಿದ ಭಾವನೆಗಳು ನನಗೆ ಆತ್ಮವಿಶ್ವಾಸವನ್ನು ಕೊಡುತ್ತವೆ . ತುಂಬಾ ಮುಜುಗರದಿಂದ ಈ ಆಹ್ವಾನವನ್ನು ಒಪ್ಪಿಕೊಂಡಿದ್ದೇನೆ . ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಇವತ್ತು ಆಗಬೇಕಾದ್ದನ್ನು ಗಟ್ಟಿಯಾಗಿ ಹೇಳಲು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ . ನಮಸ್ಕಾರ .
    ವಿವೇಕ ರೈ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading