ಭೇಟಿ ಕೊಡಿ: ಒಳಗೂ ಹೊರಗೂ
“ಪ್ರೇಕ್ಷಕ ತನ್ನ ಥಿಯೇಟರಿನಲ್ಲಿ ಮಾತ್ರವಲ್ಲ ಪ್ರಪಂಚದಲ್ಲೂ ಕೂತಿರುವನು. ಅವನಿಗೆ ಪೂಸಿಹೊಡೆದು ಒಲಿಸಿಕೊಳ್ಳುವ ಕೆಲಸ ಕಲಾವಿದನದು ಅಲ್ಲ. ಸೋಂಭೇರಿಯೊಬ್ಬನ ಸತ್ತ ಭಾವನೆಗಳನ್ನು ಉದ್ದೀಪನಗೊಳಿಸುವುದು ಅಡ್ಡಕಸಬಿಯ ಕೆಲಸ; ಕೆಲಸವೂ ಅಲ್ಲ. ವ್ಯಾಪಾರ, ಕೃತಕವಾದ ಸೀನುಗಳನ್ನು ಸೃಷ್ಟಿಸಿ, ಸೋಂಬೇರಿಯ ಮನಸ್ಸು ಕರಗುವಂತೆ ಮಾಡಿ, ಕಣ್ಣೀರು ತರಿಸುವುದು ಅಸಹ್ಯವಾದ ಮಾರಾಟ.
ದಪ್ಪ ಹೊಟ್ಟೆಯ ಕೊಬ್ಬಿದವನೊಬ್ಬನನ್ನು ಮಲಗಿಸಿ, ಬೆರಳುಗಳು ಕಂತಿ ಹಿಟ್ಟು ಕಲಿಸುವಂತೆ ಅವನ ಮಾಂಸಗಳನ್ನು ಉಜ್ಜಿ ತೀಡಿ ತಿಕ್ಕುವ ಮಾಲೀಸು ಮಾಡುವವನ ಕಲೆಯಂತೆ ಇವನ ಕಲೆಯೂ ಇರುತ್ತದೆ. ಇದನ್ನು ನೋಡುವ ಕಂಬನಿ ತುಂಬಿದ ಕಣ್ಣುಗಳು ವಯಾರ್ (voyeur)ಮೂಲಕ ಮಹಾಶಯನವು. ಕಾಮಕ್ರಿಯೆಯನ್ನು ಕದ್ದು ನೋಡುತ್ತಾ ಸುಖಿಸುವ ವಿಕೃತ ಕಾಮಿಯಂತೆ ಪ್ರೇಕ್ಷಕ ಇರುತ್ತಾನೆ. ಅವನ ಸ್ನಾಯುಗಳು ನೋಡುವ ಉನ್ಮಾದದಲ್ಲಿ ಬಿಗಿದು ಹಾಗೇ ಸಡಿಲಗೊಳ್ಳುವುದನ್ನು ನಾವು ರಸಗ್ರಹಣ ಎಂದು ಭ್ರಮಿಸುತ್ತೇವೆ. ಇಂತಹ ದೃಶ್ಯಗಳನ್ನು ನಾವು ಥಿಯೇಟರಿನ ಕತ್ತಲಲ್ಲಿ ಕೂತು ನೋಡುತ್ತೇವೆ. ”
****
ಇವು ಬ್ರೆಕ್ಟ್ ನ ಮಾತುಗಳು. ರಂಗಭೂಮಿಯ ಬಗ್ಗೆ ಹೇಳಿದ್ದ ಈ ಮಾತುಗಳು ಇವತ್ತಿನ ರಿಯಾಲಿಟಿ ಶೋಗೂ ಅನ್ವಯಿಸುತ್ತದೆ ಎನಿಸುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಅನಂತಮೂರ್ತಿಯವರು ಅನುವಾದಿಸಿದ “ಮತ್ತೆ ಮತ್ತೆ ಬ್ರೆಕ್ಟ್ ” ಕವಿತೆಗಳ ಸಂಕಲನದಲ್ಲಿ ಈ ಸಾಲುಗಳು ಇದ್ದವು. ಓದುತ್ತಿರುವಾಗ ಭಾರತೀಯ ರಿಯಾಲಿಟಿ ಶೋಗಳು ಮಾಡುತ್ತಿರುವ ದಂಧೆ ಎಂಥದ್ದಲ್ಲ ಅನ್ನಿಸಿತು. ಇದೇ ವಿಷಯವಾಗಿ ಒಮ್ಮೆ ವಾಹಿನಿಯೊಬ್ಬರ ಮುಖ್ಯಸ್ಥರಿಗೆ (ಬದುಕು ಜಟಕಾ ಬಂಡಿ, ಜೀವನ ಕಥೆಯಲ್ಲ ದಂಥ ಕಾರ್ಯಕ್ರಮಗಳ ಬಗ್ಗೆ) ಕೇಳಿದ್ದೆ, ಈ ಕಾರ್ಯಕ್ರಮಗಳು ಬೇರೆಯವರ ಬದುಕನ್ನು ಡ್ರಾಮಟೈಸ್ ಮಾಡಿ, ಚಾನೆಲ್ ಟಿಆರ್ ಪಿ ಏರಿಸಿಕೊಳ್ಳುವ ತಂತ್ರ ಎನಿಸುವುದಿಲ್ಲವೆ ಅಂತಾ. ಅದಕ್ಕವರು, ನಾವು ಯಾವುದನ್ನು ಡ್ರಾಮಟೈಸ್ ಮಾಡುವುದಿಲ್ಲವಲ್ಲ. ತಮ್ಮ ದುಃಖ ತೋಡಿಕೊಳ್ಳುತ್ತಾರೆ. ನಾವು ಅದಕ್ಕೊಂದು ವೇದಿಕೆ ಒದಗಿಸುತ್ತೇವೆ ಅಂತಾ ಸಮರ್ಥಿಸಿಕೊಂಡಿದ್ದರು!!
ಮೊನ್ನೆ ಊರಿಂದ ಬರುವಾಗ ಬಸ್ ನಲ್ಲಿ ಸಿಕ್ಕ ಪ್ರಿನ್ಸಿಪಾಲ್ ಒಬ್ಬರು ಸಾರ್ವಜನಿಕ ಹಿತಾಸಕ್ತಿಯ ಕೇಸು ಹಾಕಬೇಕೂಂತ ಅನ್ನಿಸಿದೆ ಅಂದ್ರು.
ಜಿ.ಎನ್.ಮೋಹನ್ ತಮ್ಮ ಮಿರ್ಚಿ ಅಂಕಣದಲ್ಲಿ ರಿಯಾಲಿಟಿ ಶೋಗಳ ಬಗ್ಗೆ ಬರೀತಾ ಒಂದು ಪ್ರಶ್ನೆಯನ್ನು ಎತ್ತಿದ್ದಾರೆ; ” ಇಲ್ಲಿ ಇನ್ನೂ ಬದುಕುಕಟ್ಟಿಕೊಳ್ಳೋಕೆ ಒದ್ದಾಡ್ತಾ ಇರೋವಾಗ ರಿಯಾಲಿಟಿ ಶೋಗಳು ತರ್ತಾ ಇರೋ ಅಬ್ಬರಾ ಬೇಕಾ?” ಅಂತ. ಇದೇ ಅಂಕಣದಲ್ಲಿ ಕೇರಳದ ವಾಹಿನಿಗಳೂ ಈ ವಿಷಯದಲ್ಲಿ ಪ್ರಜ್ಞಾವಂತಿಕೆಯನ್ನು, ಸಂವೇದನೆಯನ್ನು ಉಳಿಸಿಕೊಂಡಿರುವುದನ್ನು ಪ್ರಸ್ತಾಪಿಸಿದ್ದಾರೆ.
ಈ ಬಗ್ಗೆ ನಮ್ಮ ಪ್ರಜ್ಞಾವಂತ(!) ಪ್ರೇಕ್ಷಕರು, ಟಿಆರ್ ಪಿ ಭೂತ ಮೆಟ್ಟಿಸಿಕೊಂಡ ವಾಹಿನಿಗಳೂ ಯೋಚಿಸಬೇಕು.
0 ಪ್ರತಿಕ್ರಿಯೆಗಳು