-ಎಂ ಎಸ್ ಪ್ರಭಾಕರ

ಸನ್ ಸಾವಿರದೊಂಭೈನೂರನಲವತ್ತೆಂಟನೇ ಇಸವಿ ಏಪ್ರಿಲ್ ನಲ್ಲಿ ಅಪ್ಪ ತನ್ನ ಅರವತ್ಮೂರನೇ ವಯಸ್ಸಿನಲ್ಲಿ ತೀರಿಕೊಂಡ. ಅಮ್ಮ ಅಪ್ಪನಿಗಿಂತಾ ಹತ್ತು ವರುಷ ಸಣ್ಣವಳು. ಆಗ ನನಗಿನ್ನೂ ಹನ್ನೆರಡು ತುಂಬಿರಲಿಲ್ಲ.
ಅಪ್ಪ ಸತ್ತಮೇಲೆ ಕೆಲವು ತಿಂಗಳುಗಳು ಅಮ್ಮ ನೋಡಲು ಎಂದಿನಂತೆಯೇ ಇದ್ದಳು. ಐವತ್ತಕ್ಕೆ ಮೀರಿದ ಸಣಕಲು ಹೆಂಗಸು. ಎಂದಿನಂತೆ ಅಗ್ಗದ ಬೆಲೆಯ ಸೀರೆ, ರವಿಕೆ. ಆದರೂ ಕೆಲವು ಬದಲಾವಣೆಗಳು ನನ್ನ ಗಮನಕ್ಕೆ ಬಂದಿದ್ದವು. ಕತ್ತಿನ ಸುತ್ತ ಕರೀಮಣಿ ಸರ ಮತ್ತು ಮಾಂಗಲ್ಯ ಇರಲಿಲ್ಲ. ವಾಲೆಮೂಗುತಿಗಳಿರಲಿಲ್ಲ. ಹಣೆಯ ಮೇಲೆ ಕುಂಕುಮದ ಬೊಟ್ಟು ಇರಲಿಲ್ಲ. ಕೆನ್ನೆಯ ಮೇಲೆ ಅರಿಸಿನದ ನುಣುಹೊಳಪು ಇರಲಿಲ್ಲ. ಮುಂಗೈನ ಬಳೆಗಳು ಮತ್ತು ಕಾಲುಂಗರಗಳು ಇರಲಿಲ್ಲ. ಆದರೆ ಇವುಗಳ ಅರ್ಥವೇನು ಅನ್ನುವುದು ಸ್ಪಷ್ಟವಾಗಿರಲಿಲ್ಲ.
ಆದರೆ ಒಂದು ದಿನ ಎಲ್ಲವೂ ಸ್ಪಷ್ಟವಾದವು. ಕತ್ತಲು ಕತ್ತಲಿನಲ್ಲೇ ಅಮ್ಮ, ನಮ್ಮ ಮನೆಯಲ್ಲಿ ನಮ್ಮಗಳ ಸೇವೆಯಲ್ಲೇ ಜೀವನ ಸವೆಸಿದ್ದ ಬಾಲ್ಯವಿಧವೆ ಸೋದರತ್ತೆ ಕುಟ್ಟಿ ಮತ್ತು ಪರಿಚಯವಿದ್ದ ಮತ್ಯಾರೋ ಇಬ್ಬರ ಜೊತೆ ಎರಡು ಮೈಲಿ ದೂರದಲ್ಲಿದ್ದ ಅಂತರಗಂಗೆ ಬೆಟ್ಟಕ್ಕೆ ಹೊರಟರು. ಅವರುಗಳು ಹೊರಡುವ ಗಡಿಬಿಡಿಯಲ್ಲಿ ನನಗೆ ಎಚ್ಚರ ಆಯಿತು. ಆದರೆ ಇದು ಏಕೆ ವಯಸ್ಸಿಗೆ ಬಂದವರು ಮಾತ್ರ ಬೆಟ್ಟಕ್ಕೆ ಹೋಗುತ್ತಿದ್ದಾರೆ, ನನ್ನನ್ನು ಯಾಕೆ ಕರೆದುಕೊಂಡು ಹೋಗುತ್ತಿಲ್ಲ ಅಂತ ಅನ್ನಿಸಿತು. ನಾನೂ ಬರಲಾ ಅಂದು ಕೇಳುವುದಕ್ಕೆ ಭಯ. ಯಾರಾದರೂ ಎಲ್ಲಾದರೂ ಹೊರಟಾಗ ಎಲ್ಲಿಗೆ ಹೋಗುತ್ತಿದ್ದೀರಿ ಅಥವಾ ನಾನೂ ಬರಲಾ ಅಂತ ಕೇಳುವುದು ಅಪಶಕುನ ಅಂತ ಇನ್ನೂ ಸಣ್ಣವನಾಗಿದ್ದಾಗಲೇ ದೊಡ್ಡವರು ಮನದಟ್ಟು ಮಾಡಿದ್ದರು.
ಅವರೆಲ್ಲಾ ಮನೆಗೆ ವಾಪಸಾಗುವ ಹೊತ್ತಿಗೆ ಮಧ್ಯಾನ್ಹ ಆಗಿತ್ತು. ಮನೆಯ ಮೆಟ್ಟಲಮೇಲೆ ನಿಂತಿದ್ದವನಿಗೆ ಅವರುಗಳು ಬರುತ್ತಿದ್ದದು ಐವತ್ತು ಗಜ ದೂರದಲ್ಲಿದ್ದಾಗಲೇ ಕಾಣಿಸಿತು. ಅಮ್ಮನನ್ನು ತಬ್ಬಿಕೊಳ್ಳಲು ಓಡಿ ಓಡಿ ಹೋದಾಗ ಸೋದರತ್ತೆ ದೂರ ಇರು, ಮುಟ್ಟಬೇಡ, ನಿನ್ನ ಅಮ್ಮ ಈಗ ಮಡಿ ಹೆಂಗಸು, ಮಡಿಯಲ್ಲಿದ್ದಾಳೆ ಅಂತ ಗದರಿಸಿದಳು.
ಕುಳ್ಳಿ ಅಮ್ಮ ಇನ್ನೂ ಕುಗ್ಗಿಬಿಟ್ಟಿದ್ದಾಳೆ ಅನ್ನಿಸಿತು. ಕೆಂಪುಮಣ್ಣಿನ ಬಣ್ಣದ ಸೀರೆ, ರವಿಕೆ ಇಲ್ಲದ ಎದೆ, ತಲೆಯಮೇಲೆ ಕೆಂಪು ಸೀರೆಯ ಸೆರಗು, ಎಲ್ಲಾ ಸೋದರತ್ತೆಯಂತೆ. ಸರಿಯಾಗಿ ಗಮನಿಸಿದಾಗ ಬೋಳು ತಲೆಯೂ ಗಮನಕ್ಕೆ ಬಂತು. ಅಮ್ಮ ಈಗ ಮಡಿಹೆಂಗಸು.
ಅಪ್ಪ ಸತ್ತಾಗ ಅಳಲಿಲ್ಲದ ಅಳು ಉಕ್ಕಿ ಬಂತು. ಅಳು ನುಂಗಲು ಸಾಧ್ಯವಾಗಲಿಲ್ಲ. ಯಾರಿಗೂ ಏನನ್ನೂ ಹೇಳದೇ ಬೆಟ್ಟದ ಕಡೆ ಓಡಿ ಹೋದೆ. ಬೆಟ್ಟದ ಬುಡದಲ್ಲೇ ಸ್ವಲ್ಪ ಹೊತ್ತು ಕುಳಿತು ಮನೆಗೆ ವಾಪಸಾದೆ. ಯಾರೂ ಎಲ್ಲಿ ಹೋಗಿದ್ದೆ ಅಂತ ಕೇಳಲಿಲ್ಲ. ಉಳಿದಿರುವ ಅಕ್ಕನೊಬ್ಬಳು ನೆನೆಪಿಸಿಕೊಂಡಂತೆ ಅವಳನ್ನು ಕೋಣೆಯೊಂದರಲ್ಲಿ ಕೂಡಿಸಿ ಬಾಗಿಲ ಚಿಲಕ ಹಾಕಿ ಅಮ್ಮನನ್ನು ಅಂದು ನೋಡಲು ಬಿಡಲಿಲ್ಲವಂತೆ. ಕಾರಣ, ಇನ್ನೂ ಮದುವೆಯಾಗಿರಲಿಲ್ಲದ ಆ ಅಕ್ಕನಿಗೆ ಅವಳ ಅಮ್ಮನೇ ಅಂದು ಅಪಶಕುನವಾಗಿದ್ದಳು.
ಕಾಲ ಎಲ್ಲಾ ನೋವುಗಳನ್ನೂ ವಾಸಿ ಮಾಡುತ್ತಂತೆ. ಅಪ್ಪನನ್ನು ಕಳೆದುಕೊಂಡ ನೋವು ಎಂದೋ ವಾಸಿಯಾಗಿತ್ತು. ಆದರೆ ಅಮ್ಮನ ರೂಪಾಂತರದ ನೋವು ಮರೆಯಲು ಸಾಧ್ಯವಾಗಲೇ ಇಲ್ಲ. ಮರೆತರೂ ತಿಂಗಳಿಗೊಮ್ಮೆ ನೆನಪಿಗೆ ಬರುತ್ತಿತ್ತು. ಅದು ಅಮ್ಮ ತಲೆ ಬೋಳಿಸಿಕೊಳ್ಳಿಸಬೇಕಾದ ಬೆಳಿಗ್ಗೆ. ಮನೆ ಹಿಂದೆ ಸುಮಾರು ನೂರು ಗಜ ದೂರದಲ್ಲಿ ಮೂರು ನಾಪಿತ ಪರಿವಾದವರು ಒಂದೇ ಸಾಲಿನಲ್ಲಿ ವಾಸವಾಗಿದ್ದರು. ರಸ್ತೆಯ ಆಚೆ ನಿಂತು ಬೆಳಗಿನ ಜಾವ ಹನುಮಂತಪ್ಪಾ, ಹನುಮಂತಪ್ಪಾ ಅಂತ ಕೂಗಿ ಕರೆಯುವುದು ನನ್ನ ತಿಂಗಳಿನಲ್ಲಿ ಒಂದು ಬಾರಿಯ ಕೆಲಸ. ಕೆಲವಾರು ನಿಮಿಷಗಳ ಮೇಲೆ ಆತ ಬಾಗಿಲು ತೆರೆದು, ತೆಲುಗಿನಲ್ಲಿ ಓ, ಏನಪ್ಪಾ ಮತ್ತೆ ಬಂದೆಯಾ, ನೀನು ಹೋಗು ನಾನು ಈಗಲೇ ಬರ್ತೀನಿ, ಅಂತ ಹೇಳಿದರೂ ಬರಲಿಕ್ಕೆ ಕಮ್ಮಿ ಅಂದರೂ ಒಂದು ಘಂಟೆ ಆಗುತ್ತಿತ್ತು. ಕಾರಣ, ಯಾರಾದರೂ ಬೇರೆ ಗಿರಾಕಿಯ ಕ್ಷೌರದ ಕೆಲಸ ಆದನಂತರವೇ ಆತ ಅಮ್ಮನ ತಲೆ ಬೋಳಿಸಲು ಬರುತ್ತಿದ್ದ. ಕ್ಷೌರದ ಮೊದಲನೇ ಗಿರಾಕಿ ಬೋಳಿ ಅಮ್ಮನಾದರೆ ಅವನ ದಿನದ ಆದಾಯಕ್ಕೆ ಅಪಶಕುನ ಅಂತ ಎಲ್ಲರಂತೆ ಅವನಿಗೂ ನಂಬಿಕೆ. ಆ ಕಾರಣ ಕೆಲವಾರುಬಾರಿ ಬಾರಿ ರಸ್ತೆಯಲ್ಲಿ ನಿಂತು ನಾನು ಅವನನ್ನು ಮತ್ತೆ ಮತ್ತೆ ಕೂಗಿ ಕರೆಯಬೇಕಾಗಿತ್ತು.
ಅಂದಿನ ದಿನಗಳಲ್ಲಿ ಬೆಳಿಗ್ಗೆ ಹಜಾಮನನ್ನೊಬ್ಬನನ್ನು ನನ್ನಮ್ಮನ ತಲೆ ಬೋಳಿಸಲು ಬಾ ಅಂತ ಕೂಗಿ ಕರೆಯು ವುದು ನನಗೆ ಬಹಳ ಅವಮಾನದ ವಿಷಯ ಅಂದುಕೊಂಡಿದ್ದೆ. ಆ ಅವಮಾನದಲ್ಲೇ ಮಗ್ನನಾಗಿದ್ದವನಿಗೆ ಇದು ಅಮ್ಮನ ದೇಹ ಮನಸಿನಮೇಲೆ ಬಗೆದ ಎಂತಹ ಕ್ರೌರ್ಯ, ಅವಮಾನ ಅನ್ನಿಸಲೇ ಇಲ್ಲ. ಇದೇ ಕೂಗುವ ಕೆಲಸವನ್ನು ಸೋದರತ್ತೆಯ ತಲೆ ಬೋಳಿಸುವಿಕೆಯಲ್ಲಿ ಇನ್ನೂ ಸಣ್ಣ ವಯಸ್ಸಿನಿಂದಲೇ ಒಮ್ಮೊಮ್ಮೆ ಮಾಡಿದ್ದರೂ ಅದು ನನಗೆ ಎಂದೂ ಹೇಸಿಗೆ, ಅವಮಾನದ ಭಾವನೆ ತಂದಿರಲಿಲ್ಲ. ಅಪ್ಪ ಬದುಕಿದ್ದ ದಿನಗಳಲ್ಲಿ ನಾಪಿತ ಕರೆಯದೆಯೇ ನಿಯಮಿತವಾದ ದಿನ ಬೆಳಿಗ್ಗೆ ಬರುತ್ತಿದ್ದ. ಅದಲ್ಲದೆ ಕುಟ್ಟಿ ನನ್ನ ಗಮನಕ್ಕೆ ಬಂದ ದಿನಗಳಿಂದ ತಲೆಬೋಳಿಸಿಕೊಂಡಿದ್ದ ಹೆಂಗಸು. ಆಮ್ಮ ಕಣ್ಣ ಮುಂದೆಯೇ ಮುತ್ತೈದೆಯಿಂದ ಮಡಿ ಹೆಂಗಸಿಗೆ ರೂಪಾಂತರಗೊಂಡವಳು. ಆದರೂ, ತಿರುಚುಕೂದಲಿನ ಕ್ಷೀಣವಾದ ಜಡೆ ಹಾಕುತ್ತಿದ್ದ ಅಮ್ಮ ಈಗ ತಿಂಗಳಿಗೊಮ್ಮೆ ತಲೆ ಬೋಳಿಸಿಕೊಳ್ಳುವ ಅಮ್ಮನಾಗಿದ್ದರೂ, ಅಮ್ಮ ಅಮ್ಮನೇ.
ಆಮ್ಮನನ್ನು ಯಾರೂ ಬೋಳೀ ಅಥವಾ ಮುಂಡೇ ಅಂತ ಕರೆದಿದ್ದು ನನಗೆ ನೆನಪಿಲ್ಲ. ಆದರೆ ನನ್ನನ್ನು ರೇಗಿಸಲು, ಕೆರಳಿಸಲು ನನ್ನ ಗೆಳೆಯರಿಗೆ ಒಂದು ಹೊಸ ಅವಕಾಶ ದೊರಕಿತ್ತು. ಬೋಳೀಮಗ. ಇದಕ್ಕೆ ಮುಂಚೆ ತೈಮೂರ್ ಲಂಗ್ಡೇ, ಪ್ರಭಾಕರ ಎಮ್ಮೇಕರ ಸುಡುಗಾಡ್ಕರ. ಈಗ ಹೊಸದೊಂದು ಉಪಾಧಿ. ಯಾಕೋ ಕಳ್ಳನನ್ಮಗನೇ ಯಾಕೋ ನನ್ನ ಬೋಳೀಮಗ ಅಂತೀ ಅಂತ ಜಗಳವಾಡಲೂ ಸಾಧ್ಯವಿರಲಿಲ್ಲ. ಏಕೆಂದರೆ ನಾನು ನಿಜವಾಗಲೂ ಒಬ್ಬ ಬೋಳೀಮಗನಾಗಿದ್ದೆ.
ಈ ರೀತಿ ಗೇಲಿ ಮಾಡುತ್ತಿದ್ದವರೆಲ್ಲಾ ನನ್ನ ಸ್ನೇಹಿತರು. ಒಂದೇ ಸ್ಕೂಲಿನಲ್ಲಿ, ಕೆಲವರು ಒಂದೇ ಕ್ಲಾಸಿನಲ್ಲಿ ಓದುತ್ತಿದ್ದವರು. ಆಮ್ಮನ ಬಗ್ಗೆ ಅವರಿಗೆಲ್ಲಾ ಬಹಳ ಪ್ರೀತಿ. ಸಂಜೆ ಆಟದ ನಂತರ ನನ್ನ ಜೊತೆಗೆ ಮನೆಗೆಬಂದವರಿಗೆಲ್ಲಾ ಒಂದಲ್ಲ ಒಂದು ತಿಂಡಿ ಅಮ್ಮ ಕೊಡುತ್ತಿದ್ದಳು. ನಿನ್ನಮ್ಮನ… ಅಂತ ಬೈಯುತ್ತಿದ್ದವರೇ ನಿನ್ನಮ್ಮ ನಿಜವಾಗಲೂ ಬೆಸ್ಟ್ ಕಣೋ ಅನ್ನುತ್ತಿದ್ದರು. ಆಗ ನಮಗೆ ಗೊತ್ತಿದ್ದ ಕೆಲವೇ ಇಂಗ್ಲಿಷ್ ಶಬ್ದಗಳಲ್ಲಿ ಬೆಸ್ಟ್ ಒಂದು. ಅವರಿಗಿಂತ ನನಗೇ ಅಮ್ಮನನ್ನು ಅವರೊಡನೆ ನೋಡಲು ಸಂಕೋಚ.
ಇದಕ್ಕೆ ಕಾರಣ? ಆ ದಿನಗಳ ಹೆಚ್ಚು ಮಟ್ಟಿಗೆ ನನ್ನ ಗೆಳೆಯರೆಲ್ಲಾ ನಾವು ವಾಸಿಸಿದ್ದ ಕೇರಿ ಕಠಾರಿಪಾಳ್ಯದ ಕುರುಬರು, ವಕ್ಕಲಿಗರು, ನಮ್ಮ ಮನೆಯಂಚಿನಲ್ಲಿದ್ದ ತುರುಕರು. ಆ ವಯಸ್ಸಿನಲ್ಲಿ ಅವರಿಗೆ ಬ್ರಾಹ್ಮಣ ಮಡಿಹೆಂಗಸಿನ ಮಡಿತನದ ಬಗ್ಗೆಯಾಗಲೀ ಅಥವಾ ಆಕೆಯನ್ನು ಕಂಡರೆ ಅಪಶಕುನ ಅನ್ನುವ ನಂಬಿಕೆಯ ಬಗ್ಗೆಯಾಗಲೀ ಏನೂ ಗೊತ್ತಿರಲಿಲ್ಲ. ಅವರುಗಳ ಹೆಸರುಗಳು ಈಗ ನೆನಪಿನಲ್ಲಿಲ್ಲ. ಆದರೆ ಇದ್ದ ಒಬ್ಬ ಬ್ರಾಹ್ಮಣ ಗೆಳೆಯ ಈಗಲೂ ನೆನಪಿನಲ್ಲಿದ್ದಾನೆ. ಮೆಟ್ರಿಕ್ ಪರೀಕ್ಷೆಯ ಮುಂಚಿನ ದಿನಗಳಲ್ಲಿ ಒಟ್ಟಿಗೆ ಕಂಬೈನ್ಡ್ ಸ್ಟಡಿ ಮಾಡೋಣ ಅಂತ ಅವನು ಕೊಟ್ಟ ಸಲಹೆ ಪ್ರಕಾರ ನಾವುಗಳು ಮಾಡಿಯ ಮೇಲಿನ ರೂಮಿನಲ್ಲಿ ಒಟ್ಟಿಗೆ ಓದಲು ಒಂದು ಸಂಜೆ ಶುರು ಮಾಡಿದಿವಿ. ರಾತ್ರೆ ಮಲಗಿದ್ದೂ ಮಾಡಿಯಮೇಲೆ. ಬೆಳಗಿನ ಜಾವ ನಮ್ಮನ್ನು ಎಬ್ಬಿಸಳು ಅಮ್ಮ ಬಂದಾಗ ಎರಡು ಲೋಟ ಹಾಲು ತಂದಳು. ಆ ಬ್ರಾಹ್ಮಣ ಗೆಳೆಯ ಹಾಲನ್ನು ಕುಡಿಯಲಿಲ್ಲ. ಅಮ್ಮ ಕೆಳಗೆ ಹೋಗುತ್ತಲೂ ನಾನು ಇವತ್ತು ರಾತ್ರೆ ಬರೊಲ್ಲ, ಬೆಳಿಗ್ಗೆ ಎದ್ದು ಮೊದಲು ನಿನ್ನಮ್ಮನ ಮುಖ ನೋಡೋದು ಒಳ್ಳೆ ಶಕುನ ಅಲ್ಲ ಅಂತ ಹೊರಟುಹೋದ. ನಾನು ಮೆಟ್ರಿಕ್ ಫರ್ಸ್ಟ್ ಕ್ಲಾಸ್ ನಲ್ಲಿ ಪಾಸು ಮಾಡಿದೆ. ಅವನು ಇ.ಪಿ.ಎಸ್.
ಅಮ್ಮ ತೀರಿಕೊಂಡು ನಲವತ್ತೊಂದು ವರುಷಗಳಾಗಿವೆ. ಆದರೂ ಅಂದಿನ ಅವಮಾನ ಮರೆತಿಲ್ಲ. ಆ ಅವಮಾನಕ್ಕಿಂತ ಮೀರಿದ ದೌರ್ಜನ್ಯ ಅಮ್ಮನಿಗೆ ನಮ್ಮ ಮನೆಯ ಹಿರಿಯರು ಬಗೆದ ಕ್ರೌರ್ಯ, ಇದೂ ಮರೆತಿಲ್ಲ. ನೆನಪಿಸಿಕೊಳ್ಳುವ ಅಗತ್ಯವೂ ಇಲ್ಲ.
ನನ್ನ ವಯಸ್ಸಿನ ಮುದುಕರು ಎಲ್ಲಾದರೂ ಒಟ್ಟಾದಾಗ ಹರಟೆ ಮಾತು ಪ್ರಾಯ ಒಂದೇ. ನಮ್ಮಗಳ ಕಾಲ ಎಷ್ಟು ಚೆನ್ನಾಗಿತ್ತು ಕಣಯ್ಯಾ, ಅಂತ. ಹಳೆಯ ದಿನಗಳ ಗುಣಗಾನಕ್ಕೆ ಕೊನೆಯೇ ಇಲ್ಲ. ನನಗಂತೂ ಸದ್ಯ ಆ ದಿನಗಳು ಮತ್ತೆ ಬರುವುದಿಲ್ಲ, ಇದೇ ಸಂತೋಷದ ವಿಷಯ. ಅಮ್ಮನಂತರ ನಮ್ಮ ವಿಸ್ತೃತ ಸಂಸಾರದ ಕೆಲವಾರು ಮಹಿಳೆಯರು ತಮ್ಮ
ಗಂಡಂದಿರನ್ನು ಕಳೆದುಕೊಂಡಿದ್ದಾರೆ. ಭಾಗ್ಯ, ಅವರುಗಳನ್ನು ಯಾರೂ ಜೋರು ಮಾಡಿ, ಭಯ ಪಡಿಸಿ ಅಥವಾ ಪುಸಲಾಯಿಸಿ ಅಂತರಗಂಗೆಗೆ ಅಥವಾ ಅದರ ಸರಿಸಮಾನವಾದ ದೇವಸ್ಥಾನ ಪುಷ್ಕರಿಣಿಗಳಿಗೆ ಕರೆದುಕೊಂಡು ಹೋಗಿಲ್ಲ.





ಈ ಬರಹ ಓದಿದ ಮೇಲೆ ಯಾಕೋ ನನ್ನ ಮನಸ್ಸು ಸ್ಥೀಮಿತಕ್ಕೆ ಸಿಗುತ್ತಿಲ್ಲ… ಇನ್ನೊಮ್ಮೆ ನಿಮಗೆ ಮೇಲ್ ಬರೆಯುವೆ…
this society is always very cruel for women.we are glorified as devi etc etc.But even today those words ;Boli maga,Sule maga Rande maga” comes very easily as scoldings.
ಓದಿ ಕಣ್ಣೀರಿಟ್ಟೆ.
ಅಬ್ಬ!!
ಅಷ್ಟೆ ಅಂದುಕೊಳ್ಳಲಿಕ್ಕೆ ಸಾಧ್ಯವಾಗಿರುವದು ಇಲ್ಲಿಯವರೆಗೆ.
ನಥಿಂಗ್ ಕಂಪೇರ್ಸ್. ಅಲ್ಲವಾ ಪ್ರಭಾಕರರೆ?
ಇದನ್ನೆಲ್ಲ ಓದುವದೇ ಕಷ್ಟ.
ಬರೆಯುವದು ಇನ್ನೂ ಕಷ್ಟ.
ಅನುಭವಿಸುವದು ಅದೆಷ್ಟು ಹಿಂಸೆ..?
ಕರುಳು ಕಿವುಚಿ ಬಂತು ಅಂತಾರಲ್ಲಾ ..ಆ ತರಹದ ಅನುಭವ ಆಯ್ತು..ಅಹಲ್ಯಾ
noodi swamy yestu valleya responses ….! ede tharada golu …ashhya …dalitara bagge chithisi namma samaaja dalli dalitara sittu yaakendu gothaagutade …..
Namma ajjiya taayi heege iddaru. Nammannu kandare, hasi hurihittu koduttiddaru.Sada nagu mukha. Naavu tumba sannavariddaagale avaru hogibitru. Avru ishte yaatane paduttiddaru antha kanatte. Odi tumba bejar aythu.
I had an aunt. Very sweet lady. She was married at the age of 10 and lost her husband at 11. She died when she was 71. Lived like your mother for 60 years.
When I was a kid, I used to ask my mother
not to allow barber to shave the head of hiriyamma.
Remembered her, today. Those days were very cruel. We are much happier and richer today.
ಸ್ಥಾಪಿತ ಪದ್ದತಿಗಳ ಬಗ್ಗೆ ದಿವ್ಯ ತಿರಸ್ಕಾರವಿದೆ. ಗಮನಿಸಬೇಕಾದ ಅಂಶ, ನಾವು ಎಷ್ಟೇ ಸಂಸ್ಕೃತಿ, ಪದ್ಧತಿ, ಪರಂಪರೆ ಎಂಬಿತ್ಯಾದಿ ಮಾತಾಡಿದರೂ ವಿದ್ಯೆ ಇಲ್ಲದಿದ್ದರೆ ವಿನಾಶವೇ ಸರಿ. ವಿದ್ಯಾವಂತ ಸಮೂಹ ಇಂತಹ ಅಮಾನವೀಯ ಪದ್ದತಿಗಳನ್ನು ಪ್ರೋತ್ಶಾಹಿಸುವುದಿಲ್ಲ, ಅಂತೆಯೇ, ವಿದ್ಯೆಯ ಬಗೆಗೆ ನಮಗೆ ಇರುವ ಭಯ- ಅದು ಪವಾಡಗಳನ್ನು ಬಯಲಾಗಿಸಿಬಿಡುತ್ತದೆ!.D.M.Sagar,Dr.
is abuse required o call some body this ay Does not it show the quality of person calling in this fashion ,How aboudt former PM Devegowda uing this word in public towards the CM of karnataka in recent days shame on PM X