( ಇಲ್ಲಿಯವರೆಗೆ)
ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು.
ಆದರೆ ನನ್ನ ಹೋರಾಟಕ್ಕೆ ಉಳಿದಿರುವುದು ಒಂದೇ ಹಾದಿ..
ಮೇಲಾಗಿ ಅವಳು ನೀನು ಪ್ರೀತಿಸಿದ್ದ, ಪ್ರೀತಿಸುತ್ತಿರುವ ನನ್ನ ಪ್ರೀತಿಯ ಹೆಂಡತಿ.
ಅವಳಾಗಿಯೇ ನೀಡಿದ ಸಲಹೆ ಇದು. ನಾನವಳ ಆರೋಗ್ಯವನ್ನು ಕಿತ್ತುಕೊಳ್ಳಲು ಹೊರಟಿಲ್ಲ.
ಈ ಕುರಿತು ಆಕೆಯಲ್ಲೂ ಯಾವುದೇ ಗೊಂದಲಗಳಿದ್ದಂತೆ ನನಗಂತೂ ಕಾಣಿಸುವುದಿಲ್ಲ.
ಮೇಲಾಗಿ ಅವಳೇ ನನ್ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಪಾಪ ಪ್ರಜ್ಞೆಯನ್ನು ಕಡಿಮೆ ಮಾಡುತ್ತಿದ್ದದ್ದು ನಿನಗೂ ಗೊತ್ತಿದೆ.
ಅವಳೇ ದೂರವಾಣಿಯ ಮೂಲಕ ಆಕೆಯ ತಂದೆ-ತಾಯಿ, ತಮ್ಮ ಮತ್ತು ತಂಗಿಯರಿಗೆ ಅದನ್ನು ಹೇಳಿದ್ದಳು. ನನಗೆ ತೊಂದರೆಯಾಗದೆ ಅವರಿಗೆ ಉಪಕಾರವಾಗುವುದಿದ್ದರೆ ಯಾಕೆ ಮಾಡಬಾರದು? ಈ ಹಂತದಲ್ಲಿ ನಾನವರಿಗೆ ಬೆಂಬಲವಾಗಿ ನಿಲ್ಲದೆ ಬೇರಾರು ನಿಲ್ಲಬೇಕು? ಎಂದೆಲ್ಲಾ ಆಕೆ ಹೇಳುತ್ತಿದ್ದುದನ್ನು ನೀನೂ ಕೇಳಿದ್ದೀಯಾ.
ಅವಳ ಉದಾತ್ತ ವ್ಯಕ್ತಿತ್ವ, ಉದಾರ ಮನಸು, ಗಟ್ಟಿ ನಿರ್ಧಾರಗಳ ಬಗ್ಗೆ ನಿನಗೆ ಗೊತ್ತಿದೆ.ಅವಳದ್ದು ಭಾಷೆ ಮೀರಿದ ಭಾವ. ನನ್ನ ಮುಂದೆ ಹೆಚ್ಚು ಆಯ್ಕೆಗಳಿಲ್ಲದೇ ಇದ್ದಾಗ ಬೇರೇನು ಮಾಡಲು ನನ್ನಿಂದ ಸಾಧ್ಯ?
ಸಾಮಾನ್ಯವಾಗಿ ಆಸ್ಪತ್ರೆಯ ನಿಯಮಾನುಸಾರ ಬಂಧುಗಳು ಕಿಡ್ನಿ ಕೊಡಬೇಕು. ಅಣ್ಣ, ತಮ್ಮ, ತಂಗಿಹೀಗೆ ರಕ್ತ ಸಂಬಂಧಿಗಳ ನಡುವೆಯೇ ಕಿಡ್ನಿ ಕಸಿ ಯಶಸ್ವಿಯಾಗುತ್ತದಂತೆ.
ಆದರೆ ನನ್ನ ಅಣ್ಣಂದಿರಿಬ್ಬರೂ ಮಧುಮೇಹಿಗಳು. ಅವರು ಕಿಡ್ನಿ ಕೊಟ್ಟರೂ ವೈದ್ಯರು ತೆಗೆದುಕೊಳ್ಳಲಾರರು. ನನ್ನ ತಂಗಿ ಗುಲಾಬಿ ಬಿಳಿಮಲೆಯ ಗಂಡ ಶ್ರೀನಿವಾಸ್ ಕಾರ್ಕಳ ಬೆನ್ನು ಮೂಳೆಯ ತೊಂದರೆಗೆ ಒಳಗಾಗಿ, ಎರಡೂ ಕಾಲುಗಳನ್ನು ಕಳೆದುಕೊಂಡು, ಕಳೆದ ೧೨ ವರ್ಷಗಳಿಂದ ಮನೆ ಬಿಟ್ಟು ಹೊರಬಾರದೇ ಉಳಿದಿರುವಾಗ ತಂಗಿಯನ್ನು ನಾನು ಕೇಳುವುದಾದರೂ ಹೇಗೆ?
ನಾನು ಕೆಲಸ ಮಾಡುವ ಕಛೇರಿಯ ಕ್ಯಾಂಟೀನ್ನಲ್ಲಿದ್ದ ಸುಮಾರು ೪೦ ವರ್ಷದ ರಮೇಶ್ ಒಂದಿನ ನನ್ನ ಕಛೇರಿಗೆ ಬಂದು ದೇವರಿಗೆ ಬಾಯಿಗೆ ಬಂದ ಹಾಗೇ ಬೈದು, ನಿಮ್ಮಂತಹವರಿಗೆ ಹೀಗಾಗ ಬಾರದಿತ್ತು, ತಗೊಳ್ಳಿ ನನ್ನ ಕಿಡ್ನಿನಾ ಅಂತ ವೀರಾವೇಶದಿಂದ ಹೇಳಿದ್ದನ್ನು ನೀನೂ ಕೇಳಿದ್ದೀಯಾ. ಅವನಿಗೆ ನಾನೇ ಸಮಾಧಾನ ಹೇಳಿದ್ದಿರಲಿಲ್ಲವೇ?
ಬದುಕಿನ ಇಕ್ಕಟ್ಟಿನ ಘಳಿಗೆಗಳಲ್ಲಿ ಜೊತೆ ನಿಲ್ಲುವ ಹೆಂಡತಿಯ ಮುಂದೆ ಯಾವ ದೈವ? ಯಾವ ದೇವರು?
೨೫ ವರ್ಷಗಳ ಹಿಂದೆ ನೀನು ಅವಳನ್ನು ಪ್ರೀತಿಸಿದ್ದರಿಂದಲ್ಲವೇ ನಾನು ಮದುವೆಯಾದದ್ದು?
ನಮ್ಮ ಮದುವೆಗೆ ಜಾತಿ ಅಡ್ಡ ಬಂದುದರಿಂದ ಸುಮಾರು ಏಳು ವರ್ಷಗಳ ಕಾಲ ನಾವು ಮೌನವಾಗಿ, ತಾಳ್ಮೆಯಿಂದ ಕಾಯಲಿಲ್ಲವೇ? ಕೊನೆಗೂ ನಿನ್ನ ಪ್ರೀತಿಯೇ ಗೆಲ್ಲಲಿಲ್ಲವೇ? ತಂದೆ ತಾಯಿ, ಬಂಧುಗಳನ್ನು ತೊರೆದು ನನ್ನೊಡನೆ ಬಂದ ಆಕೆ ನನ್ನ ಉಸಿರಾದಳು. ನಮ್ಮ ಪ್ರೀತಿ ನನ್ನ ಮನೆಯವರನ್ನೂ, ಆಕೆಯ ಮನೆಯವರನ್ನೂ ಬಹಳ ಬೇಗ ಹತ್ತಿರ ಮಾಡಿತು.
ಜಾತಿ ನಮಗೆಂದೂ ಗೋಡೆಯಾಗಲಿಲ್ಲ. ಜಾತಕದ ಮೇಲೆ ತುಂಬಾ ವಿಶ್ವಾಸವಿರುವ ನನ್ನ ತಂದೆ ಬಿಳಿಮಲೆಗೆ ಹೋದಾಗಲೆಲ್ಲ ನಿನ್ನೆದುರೇ ಹೇಳಲಿಲ್ಲವೇ? ಶೋಭಾಳ ಜಾತಕ ಚೆನ್ನಾಗಿದೆ, ನಿನ್ನದು ಸಾಲದು.ಅವಳ ಜಾತಕದ ಫಲದಿಂದ ನಿನ್ನ ಜಾತಕ ನಡೆಯತ್ತಿದೆ, ಅವಳನ್ನು ಚೆನ್ನಾಗಿ ನೋಡಿಕೋ ಅಂತ?
ಮಹಾರೋಗದ ಮಜ
ದೆಹಲಿ ಕರ್ನಾಟಕ ಸಂಘದಲ್ಲಿ ಇವನೇ ಅಧ್ಯಕ್ಷನಾಗಿದ್ದಾಗ ಮೆನೇಜರ್ ಆಗಿ ಕೆಲಸ ಮಾಡುತ್ತಿದ್ದ ಬಾಲಚಂದ್ರರ ಹೆಂಡತಿ, ತನ್ನ ತಂಗಿಯಿಂದ ಕಿಡ್ನಿ ದಾನ ಪಡೆದು ಕಸಿ ಮಾಡಿಸಿಕೊಂಡಿದ್ದರು. ಇವನ ದೂರದ ನೆಂಟ ಪುತ್ತೂರಿನ ಶ್ರೀ ಸಿ.ಪಿ ಜಯರಾಮರಿಗೆ ಅವರ ಹೆಂಡತಿಯೇ ಕಿಡ್ನಿ ದಾನ ಮಾಡಿದ್ದರು. ಇವನು ನೇರವಾಗಿ ಅವರನ್ನೇ ಮಾತನಾಡಿಸಿದಾಗ ಅವರೂ ಧೈರ್ಯ ಹೇಳಿದ್ದರು. ನಾನು ಒಂದು ಕಿಡ್ನಿಯನ್ನು ಅವರಿಗೆ ಕೊಟ್ಟಿದ್ದೇನೆ. ಅದರಿಂದ ನನಗೇನೂ ತೊಂದರೆಯಾಗಿಲ್ಲ. ಮೇಲಾಗಿ ನಾವೆಲ್ಲ ಹಳ್ಳಿಯಲ್ಲಿ ಇರುವವರು, ಬೇರೆ ಬೇರೆ ಕೆಲಸ ಮಾಡಬೇಕಾಗುತ್ತದೆ, ನೀವು ಪೇಟೆಯಲ್ಲಿ ಇರುವವರು, ಏನೋ ತೊಂದರೆ ಆಗಲಾರದು ಎಂಬ ಅವರ ಮಾತು ಇವನಿಗೆ ವಿಶೇಷ ಬಲ ನೀಡಿತ್ತು.
ಕಿಡ್ನಿ ತೊಂದರೆಯ ಅಂತಿಮ ಹಂತದಲ್ಲಿ ಕಸಿ ಚಿಕಿತ್ಸೆ ಅನಿವಾರ್ಯ. ಕಿಡ್ನಿ ಚಿಕಿತ್ಸೆಯಂತೆಯೇ ಅದಕ್ಕಾಗಿ ನಡೆಸಬೇಕಾದ ತಯಾರಿಯೂ ಅಷ್ಟೆ ಕಾಂಪ್ಲೆಕ್ಸ್. ದಾನ ಮಾಡುವವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಗಟ್ಟಿ ಇರಬೇಕಾಗುತ್ತದೆ. ಅದಕ್ಕಾಗಿ ನಡೆಸಲಾಗುವ ಎಲ್ಲ ಪರೀಕ್ಷೆಗಳಲ್ಲೂ ಪಾಸ್ ಆಗಬೇಕಾಗುತ್ತದೆ.ಐವತ್ತು ವರ್ಷ ವಯಸ್ಸು ದಾಟಿದವರು, ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಇವೆರಡರ ಫ್ಯಾಮಿಲಿ ಹಿಸ್ಟರಿ ಇರುವವರು, ಧೂಮಪಾನಿಗಳು, ಅಧಿಕ ತೂಕವಿರುವವರು ಕನಿಷ್ಟ ವರ್ಷಕೊಮ್ಮೆಯಾದರೂ ತಮ್ಮ ಕಿಡ್ನಿ ಯನ್ನು ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು.
ಎಲ್ಲಿ ಕಸಿ ಮಾಡಿಸಿಕೊಳ್ಳುವುದು?
ಮೈಸೂರು, ಬೆಂಗಳೂರು ಮತ್ತು ಮಣಿಪಾಲಗಳಿಂದ ಮಾಹಿತಿ ತರಿಸಿಕೊಂಡ.ಕೊನೆಗೆ ದೆಹಲಿಯೇ ಒಳಿತೆಂಬ ನಿರ್ಣಯಕ್ಕೆ ಬಂದ.
ದೆಹಲಿಯಲ್ಲಿ ಹತ್ತಾರು ಒಳ್ಳೆಯ ಆಸ್ಪತ್ರೆಗಳಿವೆ. ಅದರಲ್ಲಿ ಇವನು ಆಯ್ದುಕೊಂಡದ್ದು ಮ್ಯಾಕ್ಸ್ ಆಸ್ಪತ್ರೆ. ಇದಕ್ಕೆ ಕಾರಣವಿಲ್ಲದೆ ಇಲ್ಲ. ಮ್ಯಾಕ್ಸ್ ಆಸ್ಪತ್ರೆಯ ನಿರ್ದೇಶಕರ ಕಾರ್ಯದರ್ಶಿಯಾಗಿರುವ ಶ್ರೀಮತಿ ಅನುರಾಧಾ ರಾವ್ ಅವರು ಮೂಲತಹ ಆಂಧ್ರ ಪ್ರದೇಶದವರು ಮತ್ತು ಅವರ ಗಂಡ ಇವನ ಒಳ್ಳೆ ಸ್ನೇಹಿತರು. ಶ್ರೀಮತಿ ಅನುರಾಧ ಅವರು ಇವನ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಒಂದು ಸೂಚನೆ ನೀಡಿ ಇವನಿಗೆ ವಿ.ಐ.ಪಿ ಸ್ಥಾನ ಮಾನ ನೀಡಲು ಕಾರಣರಾಗಿದ್ದರು. ಇದರಿಂದಾಗಿ ವೈದ್ಯರಿಂದ ಆರಂಭವಾಗಿ ದಾದಿಗಳವರಗೆ ಇವನಿಗೆ ಎಲ್ಲಿಯೂ ಯಾವ ಬಗೆಯಲ್ಲೂ ತೊಂದರೆಯಾಗಲಿಲ್ಲ. ಎಲ್ಲಿಯೂ ಕ್ಯೂ ನಿಲ್ಲುವ ಪ್ರಸಂಗ ಬರಲಿಲ್ಲ. ಇವನ ಕಾರಿನ ನಂಬರ್ ಕಂಡ ತಕ್ಷಣ ಒಳಗೆ ಸುದ್ದಿ ರವಾನೆಯಾಗುತ್ತದೆ. ಗಗನ ಸಖಿಯಂತಿರುವ ಚೆಲುವೆಯೊಬ್ಬಳು ಅವನ ಸಹಾಯಕ್ಕೆ ಬರುತ್ತಾಳೆ. ಇವನಿಗೆ ಅಲ್ಲಿಯೂ ರಾಘವಾಂಕನ ನೆನಪು-ರೋಗ ರುಜೆಯಡಸಿಕೊಂಬಲ್ಲಿ ರಂಭೆ ದೊರಕೊಂಡಲ್ಲಿ ಫಲವೇನು?. ಏನಿದ್ದರೂ ಒಂದು ಮಹಾರೋಗದ ನಡುವೆಯೇ ಅವನು ಸ್ವಲ್ಪ ಮಜ ತಗೊಂಡದ್ದು ಮಾತ್ರ ನಿಜವಂತೆ. ಅವನ ಊರಾದ ಪಂಜದ ಸರಕಾರೀ ಆಸ್ಪತ್ರೆಯೆಲ್ಲಿ? ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯೆಲ್ಲಿ? ಒಂದೇ ದೇಶದಲ್ಲಿ ಎಷ್ಟೊಂದು ತಾರತಮ್ಯ?
ಆಸ್ಪತ್ರೆಗೆ ಸೇರುವ ಹಿಂದಿನ ದಿನ ನಿನಗೆ ಭಯವಾಗಿದ್ದಿರಲಿಲ್ಲವೇ ಎಂದು ಪ್ರಶ್ನಿಸಿದರೆ ಅವನ ಉತ್ತರ ನಂಬುವಂತಿತ್ತು. ಅವನು ಅದಾಗಲೇ ಅಂತರ್ಜಾಲವನ್ನು ಪೂರ್ತಿ ಜಾಲಾಡಿಸಿ ಸಾಕಷ್ಟು ಮಾಹಿತಿ ಸಂಗ್ರಹಿಸಿ ಗೆಳೆಯರಿಗೆ, ಕುಟುಂಬದವರಿಗೆ ವಿವರಿಸಿದ್ದ.ಅವನು ಮೊದಲು ತಿಳಿದುಕೊಂಡದ್ದು ಅವನ ಎರಡು ಕಿಡ್ನಿಗಳಲ್ಲಿ ಒಂದನ್ನು ತೆಗೆದು, ಹೊಸದನ್ನು ಅದಕ್ಕೆ ಜೋಡಿಸುವುದು ಅಂತ.
ಆದರೆ ಅದು ಹಾಗಲ್ಲ.
ಕಿಡ್ನಿ ಕಸಿ ಆದ ನಂತರವೂ ಕಸಿ ಮಾಡಿಸಿಕೊಂಡವನ ಎರಡೂ ಕಿಡ್ನಿಗಳು ಹಾಗೆಯೇ ಇರುತ್ತವೆ. ಈ ಕಿಡ್ನಿಗಳಿಂದ ಮೂತ್ರವನ್ನು ಮೂತ್ರ ಕೋಶಕ್ಕೆ ಒಯ್ಯುವ ಎರಡು ನಾಳಗಳಲ್ಲಿ ಒಂದಕ್ಕೆ ಹೊಸ ಕಿಡ್ನಿಯನ್ನು ಜೋಡಿಸುವುದು ತಂತ್ರ.ಅಂದರೆ ಕಸಿಯ ಬಳಿಕ ಒಟ್ಟು ಮೂರು ಕಿಡ್ನಿಗಳು ದೇಹದಲ್ಲಿರುತ್ತವೆ.
ಈ ಬಗ್ಗೆ ಇವನು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಏನಿದ್ದರೂ ಈ ಕೆಲಸ ಮಾಡುವವರು ವೈದ್ಯರು, ದೇಹವನ್ನು ಅವರಿಗೆ ಒಪ್ಪಿಸಿದರೆ ಆಯಿತು.ಹಾಗೆಂದುಕೊಂಡುಇವನು ನಿಶ್ಚಿಂತನಾಗಿದ್ದ; ಆಸ್ಪತ್ರೆಗೆ ಸೇರುವ ಹಿಂದಿನ ದಿನವೂ ಕಛೇರಿಯಲ್ಲಿ ತಡರಾತ್ರಿವರೆಗೂ ಕೆಲಸ ಮಾಡಿದ್ದ.
ಆಸ್ಪತ್ರೆಯ ಡಾಕ್ಟರರುಗಳು ಎಲ್ಲವನ್ನೂ ಸಾವಧಾನದಿಂದ ಮೊದಲೇ ವಿವರಿಸಿದ್ದರು. ವೈದ್ಯರಾದ ಡಾ.ಮೋಹಿತ್ ಕಿರ್ಬಾತ್ ಅತ್ಯಂತ ತಾಳ್ಮೆಯಿಂದ ಬಿಡಿ ಬಿಡಿಯಾಗಿ ಎಲ್ಲವನ್ನೂ ವಿವರಿಸಿ ಒಟ್ಟು ಸುಮಾರು ಆರೂವರೆ ಲಕ್ಷ ರೂಪಾಯಿಗಳ ಖರ್ಚಿನ ಬಗ್ಗೆ ಮಾಹಿತಿಯನ್ನೂ ನೀಡಿದರು.ಅದರಲ್ಲಿ ಸರ್ಜರಿಗೆ ಮುನ್ನ ಮತ್ತು ಸರ್ಜರಿಯ ಆನಂತರ ಕೊಡಬಹುದಾದ ಎರಡು ಇಂಜಕ್ಷನ್ಗಳ ಬೆಲೆಯೇ ಒಂದು ಲಕ್ಷದ ನಲುವತ್ತು ಸಾವಿರರೂಪಾಯಿಗಳಾಗಿತ್ತು. ಈ ಇಂಜಕ್ಷನ್ಗಳು ಹಳೆ ದೇಹವು ಹೊಸ ಕಿಡ್ನಿಯನ್ನು ತಿರಸ್ಕರಿಸಬಹುದಾದ ಸಾಧ್ಯತೆಗಳನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.ಹೇಗೋ ಹಣ ಜೋಡಿಸಿಕೊಂಡ. ಗೆಳೆಯರು ಚಾಚಿದ ಸಹಾಯ ಹಸ್ತವನ್ನು ಮುಕ್ತವಾಗಿರಿಸಿಕೊಂಡ.
ದೇವರೇ ಮಾಡಿದ ಜೋಡಿಯಿದು
ಕಿಡ್ನಿ ಕಸಿಯ ಬಗ್ಗೆ ಇವನು ಅಂತಿಮ ನಿರ್ಧಾರ ತೆಗೆದುಕೊಂಡದ್ದು ೨೦೧೨ರ ಎಪ್ರಿಲ್ ಮೊದಲ ವಾರದಲ್ಲಿ. ಆನಂತರ ದಂಪತಿಗಳಿಗೆ ಬಗೆಬಗೆಯ ಪರೀಕ್ಷೆಗಳು. ಮೇ ೧೫ರ ಹೊತ್ತಿಗೆ ಸುಮಾರು ೬೦ ಬಗೆಯ ಪರೀಕ್ಷೆಗಳನ್ನು ಮುಗಿಸಿದ್ದರು. ಅದರಲ್ಲಿ ಮುಖ್ಯವಾಗಿ ಇಬ್ಬರ ರಕ್ತದ ಗ್ರೂಪ್ ಒಂದೇ ಆಗಿರಬೇಕು. ಇಬ್ಬರ ರಕ್ತವನ್ನು ಮಿಶ್ರ ಮಾಡಿ ಪರೀಕ್ಷಿಸಿದಾಗ, ಅದು ನಿರೀಕ್ಷಿತ ಪರಿಣಾಮವನ್ನು ಬೀರಬೇಕು. ಜೊತೆಗೆ ಹೃದಯ, ಕಿಡ್ನಿಗಳು ಕೆಲಸ ಮಾಡುವ ಬಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಕಿಡ್ನಿಯನ್ನು ದೇಹದ ಇತರ ಭಾಗಗಳಿಗೆ ಜೋಡಿಸಿದ ರಕ್ತನಾಳಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಯಾವ ನಾಳವನ್ನು ಕತ್ತರಿಸಬಹುದು ಎಂಬ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಹೀಗೇ ಹತ್ತು ಹಲವು ಸಂಗತಿಗಳು. ಆ ೬೦ ಪರೀಕ್ಷೆಗಳಲ್ಲೂಅವರಿಬ್ಬರೂ ಯಾವ ತೊದರೆಯಿಲ್ಲದೆ ಪ್ಫಸ್ಟ್ ಕ್ಲಾಸಿನಲ್ಲಿ ಪಾಸಾದರು.
ಡಾ. ಮೋಹಿತ್ ಹೇಳಿದ್ದರು-ದೇವರೇ ಮಾಡಿದ ಜೋಡಿಯಿದು.
ಹೀಗೇ ಬಗೆ ಬಗೆಯ ಪರೀಕ್ಷೆಗಳಿಗೆ ಒಳಪಡುತ್ತಲೇ ಕಾನೂನಿನ ಅಗತ್ಯಗಳನ್ನೂ ಪೂರೈಸಿಕೊಳ್ಳಬೇಕಾಗುತ್ತಿತ್ತು.ಮುಖ್ಯವಾಗಿ ಯಾವ ಒತ್ತಡವೂ ಇಲ್ಲದೆ ಸ್ವ ಇಚ್ಛಯಿಂದ ಕಿಡ್ನಿಯನ್ನು ಕೊಡುತ್ತಿದ್ದೇನೆ ಅಂತ ದಾನಿ ಅಫಿದವಿತ್ ಮಾಡಬೇಕು. ಅದಕ್ಕೆ ನೋಟರಿಯ ಸಹಿ ಬೇಕು. ದಾನಿಯ ಹತ್ತಿರದ ಸಂಬಂಧಿಯ (ಇಲ್ಲಿ ಇವರಿಬ್ಬರ ಮಗ ಅನನ್ಯ) ಒಪ್ಪಿಗೆ ಬೇಕು. ಮನಶ್ಯಾಸ್ತ್ರಜ್ಞರ ಟಿಪ್ಪಣಿ ಬೇಕು. ಸ್ತ್ರೀ ರೋಗ ತಜ್ಞೆ, ಹೃದಯ ರೋಗ ತಜ್ಞರ ಒಪ್ಪಿಗೆ ಬೇಕು, ಎಲ್ಲಕ್ಕಿಂತ ಮಿಗಿಲಾಗಿ ಆಸ್ಪತ್ರೆಯಲ್ಲಿ ಕಿಡ್ನಿ ಪ್ಯಾನಲ್ ಮುಂದೆ ಹಾಜರಾಗಿ ನಿರ್ಣಯಗಳನ್ನು ಸಮರ್ಥಿಸಿಕೊಳ್ಳಬೇಕು.ಇವಕ್ಕೆಲ್ಲ ಸುಮಾರು ಒಂದು ಲಕ್ಷ ರೂಪಾಯಿಗಳ ಖರ್ಚು ತಗಲುತ್ತದೆ. ಇಂಥ ಕಠಿಣ ನಿಯಮಗಳ ಮೂಲಕ ಕಿಡ್ನಿ ಅಪಹರಣದಂಥ ಅತ್ಯಂತ ಹೇಯವಾದ ಪ್ರಕ್ರಿಯೆಗಳನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಇಂದು ಆರೋಗ್ಯವಂತ ಕಿಡ್ನಿಯೊಂದರ ಬೆಲೆ ಸುಮಾರು ೫೦ ಲಕ್ಷ ರೂಪಾಯಿಗಳು. ಬಡವರಿಗೆ ೧೦ ಸಾವಿರ ರೂಪಾಯಿಗಳನ್ನು ಕೊಟ್ಟು ಲಕ್ಷಾಂತರ ರೂಪಾಯಿಗಳಿಗೆ ಕಿಡ್ನಿಗಳನ್ನು ಮಾರಾಟ ಮಾಡುವ ನೀಚರು ಇಂದಿಗೂ ಇದ್ದಾರೆ. ಜೊತೆಗೆ ಮಕ್ಕಳ ಅಪಹರಣದ ಹಿಂದೆಯೂ ಕಿಡ್ನಿ ವಂಚಕರ ಜಾಲ ಇರುವುದನ್ನು ಪತ್ತೆ ಹಚ್ಚಲಾಗಿದೆ.
ಒಂದು ವರದಿಯ ಪ್ರಕಾರ, ಹೆಂಗಸರ ಒಂದು ಕಿಡ್ನಿ ನಿಧಾನವಾಗಿ ಕಾರಣಾಂತರದಿಂದ ಬಾಡಿ, ಸುರುಟಿ ಹೋಗುವ ಪರಿಸ್ಥಿತಿಯು ದೇಹದಲ್ಲಿ ತಾನೇ ತಾನಾಗಿ ನಿರ್ಮಾಣಗೊಳ್ಳುತ್ತದಂತೆ. ಆಗ ಅದನ್ನು ಬೇರೆ ದೇಹಕ್ಕೆ ಜೋಡಿಸಿದಾಗ ಮತ್ತೊಮ್ಮೆ ಅದು ಸಕ್ರಿಯವಾಗುವುದಂತೆ.ಆಸ್ಪತ್ರೆಯಲ್ಲಿ ನಡೆಸಿದ ಒಂದು ಅತ್ಯಾಧುನಿಕವಾದ ಪರೀಕ್ಷೆಯಲ್ಲಿ ( ಆ ಪರಿಕ್ಷೆಗೆ ೧೩ ಸಾವಿರ ರೂಪಾಯಿಗಳ ಖರ್ಚು ತಗುಲಿತ್ತು) ಶೋಭನಾಳ ಎಡದ ಕಿಡ್ನಿಯು ಕ್ಷೀಣವಾಗಿರುವುದನ್ನು ವೈದ್ಯರು ಇವನಿಗೆ ತೋರಿಸಿ, ಅದನ್ನು ತೆಗೆದು ನಿಮಗೆ ಕಸಿ ಮಾಡಲಾಗುವುದು ಎಂದಿದ್ದರು. ಅತ್ಯುತ್ತಮವಾಗಿ ಕೆಲಸ ಮಾಡುವ ಕಿಡ್ನಿಯನ್ನು ಅವರು ತೆಗೆಯುವುದಿಲ್ಲ. ಇದೊಂದು ಸಮಾಧಾನ ಕೊಡುವ ಹೊಸ ವಿಷಯವಾಗಿತ್ತು ಇವನಿಗೆ.
೨೦೧೨ರ ಜೂನ್ ಒಂದನೇ ತಾರೀಕಿನಂದು ಶಸ್ತ್ರ ಚಿಕಿತ್ಸೆಗೆ ದಿನ ನಿಗದಿಯಾಗಿತ್ತು. ಅಂದರೆ ಮೇ ೩೧ರಂದು ಅಪರಾಹ್ನ ಎರಡು ಗಂಟೆಯ ಒಳಗೆ ಆಸ್ಪತ್ರೆಗೆ ಅವರಿಬ್ಬರೂ ಸೇರಬೇಕಾಗಿತ್ತು. ಅದೇ ಪ್ರಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಮಗ ಒಂದು ವಾರಗಳ ಅವಧಿಗೆ ರಜೆ ಹಾಕಿ ಜೊತೆಗಿರಲು ಸಿದ್ಧನಾಗಿದ್ದ. ಬೆಂಗಳೂರಿನಿಂದ ಡಾ. ಯು.ಆರ್. ಅನಂತಮೂರ್ತಿಯವರು ಫೋನ್ ಮಾಡಿ ನಿಮಗೆ ಶುಭವಾಗಲಿ, ಒಂದು ವೇಳೆ ಕಿಡ್ನಿ ಕಸಿ ವಿಫಲವಾದರೂ ಯೋಚನೆ ಬೇಡ, ಡಯಾಲಿಸಿಸ್ ಇದೆಯಲ್ಲ? ಎಂದ್ದಿದ್ದರಂತೆ.
ಅಮೇರಿಕಾದ ಅಯೋವಾ ವಿಶ್ವವಿದ್ಯಾಲಯದಿಂದ ಡಾ.ಫಿಲಿಪ್, ಹಾರ್ವರ್ಡನಿಂದ ಡಾ. ನಸೀಮ್ ಹೈನ್ಸ್, ವಾಷಿಂಗ್ಟನ್ ನಿಂದ ಮೈಕ್ ಹಲವಾಚ್ಸ್, ಟೆಕ್ಸಾಸ್ ನಿಂದ ಮಾರ್ಥಾ ಸೆಲ್ಬಿ, ಇಂಡಿಯಾನದಿಂದ ರೆಬೆಕಾ, ಇಸ್ರೇಲ್ ನಿಂದ ಶುಲ್ಮನ್, ಟೋಕಿಯೋದಿಂದ ಸುಮಿಯೋ ಮೊರಿಜಿರಿ ಮತ್ತು ಮೀಕೋ ಮಿನಕವ, ಹೀಗೆ ಜಗತ್ತಿನಾದ್ಯಂತದಿಂದ ಶುಭ ಹಾರೈಕೆಗಳು ಬಂದು ತಲುಪಿದವು. ಇವರಿಗೆಲ್ಲ ಸುದ್ದಿ ತಿಳಿದದ್ದು ಹೇಗೆ? ಎಂದು ಇವನೇ ಅಚ್ಚರಿಗೊಡಿದ್ದ.
(ಮುಂದುವರೆಯುವುದು..)







Very interesting!, I am delighted to read such an exciting autobiography.
oduttha oduttha mai naduka banthu. innadaru novu kaledu sukh sigali ibbarigu.
Nimma atmakathana odutta nammurinillina kidni transplantation nenapige bantu. Ede reeti patni patige kidni koduttale, ata kuduka atana kuditavannu bidisilikkagi oru bittu ganda ebbaru sanna hennumakkalondige kastapattu jeevana saagisuttiruvaagale gandanige kidniya tondare, ake bandhu mitrara sahakarandinda operation madisi(madisikondu), ega pati patni ebbaru olle reetiya dudimeyinda makkalige higher education kodisi santruptha jeevana nadisuttiddare.